ಬೆಂಗಳೂರು:ನಮ್ಮನ್ನಾಳುವ ಸರ್ಕಾರಗಳಿಗೆ ಕಾರ್ಮಿಕರ ಬಗ್ಗೆ ಕಾಳಜಿಯಾಗಲಿ, ಭಯವಾಗಲಿ ಇಲ್ಲ. ಈ ಹಿನ್ನೆಲೆ ಕಾರ್ಮಿಕರ ಕಾನೂನುಗಳು ಬಲಹೀನಗೊಳ್ಳುತ್ತಿವೆ ಎಂದು ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಚಾಟಿ ಬೀಸಿದ್ದಾರೆ.
ಸರ್ಕಾರಗಳಿಗೆ ಕಾರ್ಮಿಕರ ಬಗ್ಗೆ ಕಾಳಜಿ ಇಲ್ಲ: ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಕರ್ನಾಟಕ ಲೇಬರ್ ರೆಪ್ರಸೆಂಟೆಟೀವ್ಸ್-ಫೋರಂ ರೀಸರ್ಚ್ ಆ್ಯಂಡ್ ಆ್ಯಕ್ಷನ್ ಸಂಸ್ಥೆಯು ಗಾಂಧಿಭವನದಲ್ಲಿ ಏರ್ಪಡಿಸಿದ್ದ ಕೇಂದ್ರ ಸರ್ಕಾರದ ನೂತನ ಕಾರ್ಮಿಕ ಕಾಯ್ದೆ-2019ರ ಕುರಿತ ವಿಚಾರ ಸಂಕಿರಣದಲ್ಲಿ ಭಾನುವಾರ ಅವರು ಮಾತನಾಡಿದರು.
ಕಾರ್ಮಿಕರು ಇಂದು ಕಷ್ಟದ ಪರಿಸ್ಥಿತಿಯಲ್ಲಿದ್ದು, ಕಾರ್ಮಿಕ ಶಕ್ತಿಗೆ ಬಲ ನೀಡುವ ಕೆಲಸ ಮಾಡಬೇಕು. ನಮ್ಮನ್ನಾಳುವ ಸರ್ಕಾರಗಳು ಬಂಡವಾಳಶಾಹಿಗಳ ಕೈಗೊಂಬೆಯಾಗಿರುವ ಹಿನ್ನೆಲೆಯಲ್ಲಿ ಕಾರ್ಮಿಕ ಕಾಯ್ದೆಗಳನ್ನು ಅಂತವರ ಅನುಕೂಲಕ್ಕೆ ತಕ್ಕಂತೆ ಮಾರ್ಪಾಡು ಮಾಡಲಾಗುತ್ತಿದೆ. ಇದು ಭವಿಷ್ಯತ್ತಿನ ದೃಷ್ಟಿಯಿಂದ ಅಪಾಯಕಾರಿ ನಡೆ ಎಂದು ಆತಂಕ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ. ಹೊಸ ಕಾಯ್ದೆಯಲ್ಲೂ ಹಲವು ನ್ಯೂನ್ಯತೆಗಳಿವೆ. ಇದರ ವಿರುದ್ಧ ಹೋರಾಟ ಸಂಘಟಿಸದೇ ಇದ್ದರೆ, ಕಾರ್ಮಿಕರು ಭವಿಷ್ಯದಲ್ಲಿ ಮತ್ತಷ್ಟು ಸಂಕಷ್ಟಗಳಿಗೆ ಒಳಗಾಗಬೇಕಾಗುತ್ತದೆ. ಹೀಗಾಗಿ ಕಾರ್ಮಿಕ ಸಂಘಟನೆಗಳು ಸಂಘಟಿತರಾಗಿ ಹೋರಾಟ ನಡೆಸಬೇಕು ಎಂದು ನ್ಯಾ. ಗೋಪಾಲಗೌಡ ಹೇಳಿದ್ರು.
ಹಿರಿಯ ವಕೀಲೆ ರಾಮ ಪ್ರಿಯಾ ಮಾತನಾಡಿ, ಕೇಂದ್ರ ಸರ್ಕಾರದ ನೂತನ ಕಾರ್ಮಿಕ ಕಾಯ್ದೆಯಲ್ಲಿ ಹಲವು ನ್ಯೂನ್ಯತೆಗಳಿವೆ. ಕೃಷಿ ಕಾರ್ಮಿಕರನ್ನು ಕಾರ್ಮಿಕರೆಂದು ಪರಿಗಣಿಸಿಲ್ಲ. ಕಾರ್ಮಿಕರ ಕೆಲಸದ ವೇಳೆಯನ್ನು ಕೂಡ ಸರಿಯಾಗಿ ವ್ಯಾಖ್ಯಾನ ಮಾಡಿಲ್ಲ ಎಂದು ದೂರಿದರು.
2019ರ ಕಾರ್ಮಿಕ ಕಾಯ್ದೆಯಲ್ಲಿ ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಿಲ್ಲ. ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ನಿಯಮವನ್ನೂ ಸಹ ತೆಗೆದು ಹಾಕುವ ಕೆಲಸ ನಡೆಯುತ್ತಿದೆ. ಬಂಡವಾಳ ಶಾಹಿಗಳ ಪರವಾದ ಕಾನೂನು ರೂಪಿಸಲಾಗಿದೆ ಎಂದು ಹೇಳಿದರು.