ಕರ್ನಾಟಕ

karnataka

ETV Bharat / state

ಲಾಕ್​ಡೌನ್​ ಎಫೆಕ್ಟ್ : ಮಕ್ಕಳಿಗೆ ತಡವಾಗಿ ಸಿಗಲಿದೆ ಶಾಲಾ ಸಮವಸ್ತ್ರ

ಲಾಕ್​ಡೌನ್​ ಜಾರಿಯಲ್ಲಿದ್ದ ಕಾರಣಕ್ಕೆ ಟೆಂಡರ್ ಪ್ರಕ್ರಿಯೆಯೂ ಕೊಂಚ ತಡವಾಗಿ ಆಗುತ್ತಿದೆ. ಆದಷ್ಟು ಬೇಗ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಿಸಲಾಗುವುದು ಅಂದರು. ಪ್ರತಿ ವರ್ಷ ಅಂದಾಜು 45-50 ಲಕ್ಷ ಸರ್ಕಾರಿ ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ ವಿತರಣೆ ಮಾಡಲಾಗುತ್ತೆ..

By

Published : Jul 16, 2021, 3:41 PM IST

government-student-didnt-get-uniform-due-to-covid-reason
ಕಲಿಕೆಯಲ್ಲಿ ನಿರತರಾಗಿರುವ ಮಕ್ಕಳು

ಬೆಂಗಳೂರು :ಸಾಂಕ್ರಾಮಿಕ ಕೊರೊನಾ ಸೋಂಕು ಪ್ರತಿ ಹೆಜ್ಜೆ ಹೆಜ್ಜೆಗೂ ಕಾಡ್ತಿದೆ. ವೈರಾಣು ದೇಹಕ್ಕೆ ಮಾತ್ರ ಹಾನಿ ಮಾಡಿಲ್ಲ. ಬದಲಿಗೆ ಆರ್ಥಿಕವಾಗಿ, ಶೈಕ್ಷಣಿಕ, ಸಾಮಾಜಿಕವಾಗಿಯೂ ಪೆಟ್ಟು ಕೊಡ್ತಿದೆ. ಮೊದಲ ಅಲೆ ಮುಗಿತು ಎನ್ನುವಾಗಲೇ 2ನೇ ಅಲೆಯ ಅಬ್ಬರಕ್ಕೆ ಜನ ಸೋತು ಸುಣ್ಣವಾದರು. ಶೈಕ್ಷಣಿಕ ವರ್ಷವಂತೂ ಹೇಳತೀರಾಗಿದೆ. ಅದರಲ್ಲೂ ಸರ್ಕಾರಿ ಶಾಲೆ ಮಕ್ಕಳಿಗೆ ದೂರದರ್ಶನ, ರೇಡಿಯೋ ಕಾರ್ಯಕ್ರಮಗಳು, ಯೂಟ್ಯೂಬ್ ಲಿಂಕ್‌ಗಳೇ ಪಾಠ ಮಾಡುವ ಸಾಧನವಾಗಿವೆ.

ಸದ್ಯ, 2021-22ರ ಶೈಕ್ಷಣಿಕ ಸಾಲು ಕಳೆದ ಜುಲೈ 1ರಿಂದ ಶುರುವಾಗಿದೆ. ಕೊರೊನಾ ಕಾರಣಕ್ಕೆ ಭೌತಿಕ ತರಗತಿಗೆ ತಂಡ ರಚನೆ ಮಾಡಲಾಗಿದ್ದು, ಸಭೆಗಳು ನಡೆಯುತ್ತಿವೆ. ಈ ಮಧ್ಯೆ ಸರ್ಕಾರಿ ಮಕ್ಕಳನ್ನ ಸೆಳೆಯಲು ಪ್ರೋತ್ಸಾಹಿಸುವ ಹಲವು ಯೋಜನೆಗಳಿಗೆ ಕೊರೊನಾ ಅಡ್ಡಗಾಲು ಹಾಕಿದೆ‌. ಈಗಾಗಲೇ ಈ ಶೈಕ್ಷಣಿಕ ವರ್ಷಕ್ಕೆ ಉಚಿತ ಬೈಸಿಕಲ್ ವಿತರಣೆ ಯೋಜನೆ ಅನುಷ್ಠಾನ ಅನುಮಾನ ಎನ್ನಲಾಗುತ್ತಿದೆ. ಇದರ ಬೆನ್ನಲ್ಲೇ ಇದೀಗ ಲಾಕ್‌ಡೌನ್ ಎಫೆಕ್ಟ್‌ನಿಂದಾಗಿ ಶಾಲಾ ಮಕ್ಕಳಿಗೆ ಶಾಲಾ ಸಮವಸ್ತ್ರವೂ ತಡವಾಗಿ ಬರಲಿದೆ.

ಈ ಕುರಿತು ದೂರವಾಣಿ ಕರೆ ಮೂಲಕ ಮಾಹಿತಿ ನೀಡಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್, ಶಾಲಾ ಸಮವಸ್ತ್ರಕ್ಕಾಗಿ ಟೆಂಡರ್ ಪ್ರಕ್ರಿಯೆ ಕರೆಯಲಾಗ್ತಿದೆ. ಜೊತೆಗೆ ಪ್ರತಿ ವರ್ಷದಂತೆ ಈ ವರ್ಷವೂ ನೇಕಾರರಿಗೆ ಪ್ರೋತ್ಸಾಹಿಸುವ ದೃಷ್ಟಿಯಿಂದ ನೇರವಾಗಿ ಕೈಮಗ್ಗ ಹಾಗೂ ಹ್ಯಾಂಡ್ ಲೂಮ್ ಅವರಿಗೆ ವರ್ಕ್ ಆರ್ಡರ್‌ನ ಕೊಡಲಾಗಿದೆ. ಇವರಿಂದ ಸಮವಸ್ತ್ರ ಬರಲು ಕನಿಷ್ಠ ಮೂರು ತಿಂಗಳು ಬೇಕಾಗಿದೆ. ಯಾಕೆಂದರೆ, ಕೊರೊನಾ ಕಾರಣಕ್ಕೆ ಕೆಲಸಗಾರರು ಸಿಗದೆ ಇರುವುದರಿಂದ ಸಮಯವನ್ನ ಕೇಳಿದ್ದಾರೆ ಅಂತಾ ವಿವರಿಸಿದರು.

ಲಾಕ್​ಡೌನ್​ ಜಾರಿಯಲ್ಲಿದ್ದ ಕಾರಣಕ್ಕೆ ಟೆಂಡರ್ ಪ್ರಕ್ರಿಯೆಯೂ ಕೊಂಚ ತಡವಾಗಿ ಆಗುತ್ತಿದೆ. ಆದಷ್ಟು ಬೇಗ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಿಸಲಾಗುವುದು ಅಂದರು. ಪ್ರತಿ ವರ್ಷ ಅಂದಾಜು 45-50 ಲಕ್ಷ ಸರ್ಕಾರಿ ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ ವಿತರಣೆ ಮಾಡಲಾಗುತ್ತೆ ಅಂತಾ ತಿಳಿಸಿದರು.

ಶಾಲೆ ತೊರೆಯದಂತೆ ಮಕ್ಕಳನ್ನ ಆಕರ್ಷಿಸಲು ಯೋಜನೆ

ಅಂದಹಾಗೇ, ಪ್ರಾಥಮಿಕ ಹಂತದಲ್ಲಿ ಶಾಲೆಗಳಲ್ಲಿ ಮಕ್ಕಳು ದಾಖಲಾಗದಿರಲು ಬಡತನ ಹಾಗೂ ಆರ್ಥಿಕ ಸಂಕಷ್ಟ ಕಾರಣ. ಹೀಗಾಗಿ, ಇಂತಹ ಸಮಸ್ಯೆಗಳಲ್ಲಿ ಸರ್ಕಾರ ವಿಶೇಷವಾಗಿ ಮಧ್ಯಸ್ಥಿಕೆವಹಿಸಿ, ಮಕ್ಕಳು ಶಾಲೆಯನ್ನು ತೊರೆಯದಂತೆ ಅವರನ್ನ ಆಕರ್ಷಿಸಲು ಹಲವು ಯೋಜನೆಗಳನ್ನ ರೂಪಿಸಲಾಗಿದೆ. ಮಧ್ಯಾಹ್ನದ ಬಿಸಿಯೂಟ, ಉಚಿತ ಸಮವಸ್ತ್ರ, ಉಚಿತ ಪಠ್ಯ ಪುಸ್ತಕ ಹಾಗೂ ಉಚಿತ ಶಾಲಾಬ್ಯಾಗ್, ಉಚಿತ ಸೈಕಲ್ (8ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ) ವಿತರಣೆ ಮಾಡಲಾಗುತ್ತೆ. ಆದರೆ, ಸದ್ಯ ಕೊರೊನಾ ಕಾಲಘಟ್ಟದಲ್ಲಿ ಈ ಎಲ್ಲ ಯೋಜನೆಗಳು ಸರಾಗವಾಗಿ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಕಷ್ಟವಾಗ್ತಿದೆ.

ಸಮವಸ್ತ್ರ ಸರಬರಾಜು ಹೇಗೆ ಆಗುತ್ತೆ?

ರಾಜ್ಯದಲ್ಲಿ ಸರ್ಕಾರದ ಯೋಜನೆಯಾದ ವಿದ್ಯಾವಿಕಾಸ ಯೋಜನೆಯಡಿ ಉಚಿತ ಸಮವಸ್ತ್ರ ವಿತರಣೆ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ. 1961ರಿಂದ ಜಾರಿಯಲ್ಲಿರುವ ಈ ಯೋಜನೆ, ಎಲ್ಲಾ ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಿಸಲಾಗುತ್ತೆ. ಹೀಗೆ ವಿತರಿಸುವ ಸಮವಸ್ತ್ರ ಪ್ರತಿ ತರಗತಿವಾರು ವಿವಿಧ ಅಳತೆಯಲ್ಲಿ ಸರಬರಾಜು ಮಾಡಲಾಗುತ್ತೆ.‌

ಬಟ್ಟೆ ಅಳತೆಯನ್ನ 5 ರೀತಿಯಲ್ಲಿ ಸರಬರಾಜು ಮಾಡಲಿದ್ದು, 1 ಮತ್ತು 2ನೇ ತರಗತಿಯ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಒಂದು ಅಳತೆ ಹಾಗೂ 3 ಮತ್ತು 4ನೇ ತರಗತಿಗೆ ಒಂದು ಅಳತೆಯಾದರೆ, 5,6,7ನೇ ತರಗತಿಗೊಂದು ಅಳತೆ, 8 ರಿಂದ 10ನೇ ತರಗತಿಯ ಗಂಡು ಮಕ್ಕಳಿಗೊಂದು ಅಳತೆ ಮತ್ತು 8ನೇ ತರಗತಿಯ ಹೆಣ್ಣು ಮಕ್ಕಳಿಗೆ ಒಂದು ಅಳತೆಯ ಸಮವಸ್ತ್ರ ನೀಡಲಾಗುತ್ತೆ.

9 ಮತ್ತು 10ನೇ ತರಗತಿಯ ಹೆಣ್ಣುಮಕ್ಕಳಿಗೆ ಹೊಂದುವಂತೆ ಇನ್ನೊಂದು ಅಳತೆಯಲ್ಲಿ ಸಿದ್ಧಪಡಿಸಲಾಗುತ್ತೆ. ಈ ರೀತಿಯಾಗಿ 5 ಅಳತೆಯಲ್ಲಿ ಸಮವಸ್ತ್ರ ವಿತರಣೆ ಮಾಡಲಾಗುತ್ತೆ. ಕೊರೊನಾ ಕಾರಣಕ್ಕೆ ಸರ್ಕಾರಿ ಮಕ್ಕಳ ಉಚಿತ ಸಮವಸ್ತ್ರ ತಯಾರಿಗೂ ಅಡ್ಡಗಾಲು ಹಾಕಿದೆ. ಸದ್ಯ ಭೌತಿಕ ತರಗತಿ ಆರಂಭಕ್ಕೆ ದಿನಾಂಕ ನಿಗದಿಯಾಗಿಲ್ಲ. ತರಗತಿ ಶುರುವಾಗುವ ವೇಳೆಗೆ ಮಕ್ಕಳಿಗೆ ಸಮವಸ್ತ್ರ ಸಿಕ್ಕರೆ ಉತ್ತಮ.

ಓದಿ:ಇಂದ್ರಜಿತ್​ ಲಂಕೇಶ್​ ಭೇಟಿ ವಿಚಾರ.. ಅದು ಹಳೆ ಫೋಟೋ, ನನ್ನನ್ಯಾಕೆ ತಳಕು ಹಾಕೊಂಡಿದ್ದೀರಾ ಎಂದ ಹೆಚ್​ಡಿಕೆ

ABOUT THE AUTHOR

...view details