ಕರ್ನಾಟಕ

karnataka

ಅತ್ತಿಬೆಲೆ ಪಟಾಕಿ ದುರಂತ: ಮ್ಯಾಜಿಸ್ಟೀರಿಯಲ್ ವಿಚಾರಣೆಗೆ ಸರ್ಕಾರ ಆದೇಶ

By ETV Bharat Karnataka Team

Published : Oct 17, 2023, 9:45 PM IST

ಅತ್ತಿಬೆಲೆ ಪಟಾಕಿ ಅಗ್ನಿ ದುರಂತವನ್ನು ಕೂಲಂಕಷವಾಗಿ ಮ್ಯಾಜಿಸ್ಟೀರಿಯಲ್ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಸರ್ಕಾರ ಸೂಚಿಸಿದೆ.

ಮ್ಯಾಜಿಸ್ಟೀರಿಯಲ್ ವಿಚಾರಣೆಗೆ ವಹಿಸಿ ಸರ್ಕಾರ ಆದೇಶ
ಮ್ಯಾಜಿಸ್ಟೀರಿಯಲ್ ವಿಚಾರಣೆಗೆ ವಹಿಸಿ ಸರ್ಕಾರ ಆದೇಶ

ಬೆಂಗಳೂರು: ಅತ್ತಿಬೆಲೆ ಪಟಾಕಿ ದುರಂತ ಪ್ರಕರಣವನ್ನು ಮ್ಯಾಜಿಸ್ಟೀರಿಯಲ್ ವಿಚಾರಣೆಗೆ ವಹಿಸಿ ಸರ್ಕಾರ ಆದೇಶ ಹೊರಡಿಸಿದೆ. ವಿಚಾರಣಾಧಿಕಾರಿ ಈ ಆದೇಶ ಹೊರಡಿಸಿದ ದಿನಾಂಕದಿಂದ 3 ತಿಂಗಳೊಳಗಾಗಿ ಮ್ಯಾಜಿಸ್ಟೀರಿಯಲ್ ವಿಚಾರಣೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಸೂಚಿಸಲಾಗಿದೆ.

ಅತ್ತಿಬೆಲೆ ಪಟಾಕಿ ಅಗ್ನಿ ಅವಘಡ ಆಕಸ್ಮಿಕವಾಗಿ ಉಂಟಾಗಿದೆಯೇ ಅಥವಾ ನಿರ್ಲಕ್ಷ್ಯದಿಂದ ಉಂಟಾಗಿದೆಯೇ, ಪರವಾನಗಿ ನೀಡಲಾಗಿದೆಯೇ, ಈ ಪರವಾನಗಿ ನೀಡುವಿಕೆಯಲ್ಲಿ ಲೋಪ ಉಂಟಾಗಿದ್ದಲ್ಲಿ, ಉಂಟಾಗಿರಬಹುದಾದ ಲೋಪಗಳ ಕುರಿತು, ಈ ಲೋಪಕ್ಕೆ ಕಾರಣರಾದವರ ಬಗ್ಗೆ, ಅವಘಡದಲ್ಲಿ ಉಂಟಾದ ನಷ್ಟದ ಕುರಿತಾದ ಅಂಶಗಳನ್ನೂ ಒಳಗೊಂಡಂತೆ ಸಮಗ್ರವಾಗಿ ಮ್ಯಾಜಿಸ್ಟಿರಿಯಲ್ ವಿಚಾರಣೆ ನಡೆಸಲು ವಿಚಾರಣಾಧಿಕಾರಿಯನ್ನಾಗಿ ಐಎಎಸ್ ಅಧಿಕಾರಿ ಅಮಲಾನ್ ಆದಿತ್ಯ ಬಿಸ್ವಾಸ್ ಅವರರನ್ನು ನೇಮಿಸಲಾಗಿದೆ.

ಬೆಂಗಳೂರು ನಗರ ಜಿಲ್ಲೆ ಅತ್ತಿಬೆಲೆ ಗಡಿಯಲ್ಲಿ ಬಾಲಾಜಿ ಟ್ರೇಡರ್ಸ್ ಪಟಾಕಿ ದಾಸ್ತಾನಿನಲ್ಲಿ 7-10-2023ರಂದು ನಡೆದ ಅಗ್ನಿ ಅವಘಡದಲ್ಲಿ ಮೃತಪಟ್ಟವರ ಸಾವಿಗೆ ಕಾರಣಗಳು, ಘಟನಾವಳಿಗಳ ಸರಣಿ ಹಾಗೂ ಸನ್ನಿವೇಶಗಳ ಬಗ್ಗೆ ಮತ್ತು ಬಾಲಾಜಿ ಟ್ರೇಡರ್ಸ್, ಪಟಾಕಿ ದಾಸ್ತಾನು ಮಳಿಗೆಗೆ ಸ್ಫೋಟಕ ಕಾಯ್ದೆ-1884ರ ಸೆಕ್ಷನ್ 6ಬಿ ರನ್ವಯ ಸ್ಥಳ ತನಿಖೆ ನಡೆಸಿ, ಸೂಕ್ತ ದಾಖಲಾತಿಗಳನ್ನು ಪಡೆದು ನಿಯಮಾನುಸಾರ ಪರಿಶೀಲಿಸುವಂತೆ ಸೂಚಿಸಿದೆ.

ಇದನ್ನೂ ಓದಿ:ಅತ್ತಿಬೆಲೆ ಪಟಾಕಿ ದುರಂತ ಸ್ಥಳಕ್ಕೆ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಭೇಟಿ, ಪರಿಶೀಲನೆ

ಪ್ರಕರಣದ ಕುರಿತು ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ 417/2023, ಕಲಂ 285, 286, 337, 338, 427, 304 ಐಪಿಸಿ ಜತೆಗೆ ಸ್ಪೋಟಕ ಕಾಯ್ದೆ 1884, ಕಲಂ 9ಬಿಯಡಿ ಪ್ರಕರಣ ದಾಖಲಿಸಿ, ಆರೋಪಿಗಳಾದ ಬಾಲಾಜಿ ಟ್ರೇಡರ್ಸ್‌ ಮಾಲೀಕ ವಿ.ರಾಮಸ್ವಾಮಿರೆಡ್ಡಿ, ಅನಿಲ್ ಕುಮಾರ್ನ ನ್ನು ಬಂಧಿಸಲಾಗಿತ್ತು. ಮೊತ್ತೊಬ್ಬ ಆರೋಪಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾನೆ. ಘಟನೆಯಲ್ಲಿ 16 ಮಂದಿ ಸಾವನ್ನಪ್ಪಿದ್ದಾರೆ.

ಅತ್ತಿಬೆಲೆ ದುರಂತದ ಸಿಐಡಿ ತನಿಖೆಗೆ:ಈ ಹಿಂದೆ ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿತ್ತು. ಸಿಐಡಿ ಐಜಿ ಪ್ರವೀಣ್ ಮಧುಕರ್ ಪವಾರ್, ಸಿಐಡಿ ಎಸ್ಪಿ ವೆಂಕಟೇಶ್, ಡಿವೈಎಸ್ಪಿ ಶ್ರೀನಿವಾಸ್, ಮೂವರು ಇನ್​ಸ್ಪೆಕ್ಟರ್​​ ಅತ್ತಿಬೆಲೆ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದರು. ಪಟಾಕಿ ಅಂಗಡಿ ಪರವಾನಗಿ ಹೊಂದಿದ ರಾಮಸ್ವಾಮಿರೆಡ್ಡಿ ಅವರಿಂದ ಮಾಹಿತಿ ಕಲೆ ಹಾಕಿದ್ದರು.

ಇದನ್ನೂ ಓದಿ:ಅತ್ತಿಬೆಲೆ ಪಟಾಕಿ ದುರಂತದಲ್ಲಿ ಮತ್ತೋರ್ವ ಸಾವು: ಹಿಂದಿನ ತಹಶೀಲ್ದಾರ್ ಸೇರಿ ನಾಲ್ವರು ಅಧಿಕಾರಿಗಳು ಅಮಾನತು

ABOUT THE AUTHOR

...view details