ಕರ್ನಾಟಕ

karnataka

By

Published : Jun 25, 2021, 6:45 AM IST

ETV Bharat / state

ಪಶು ಸಂಜೀವಿನಿ ಸೇವೆ ರಾಜ್ಯಾದ್ಯಂತ ವಿಸ್ತರಣೆಗೆ ಸರ್ಕಾರದ ಚಿಂತನೆ

ಜಾನುವಾರುಗಳ ಆರೋಗ್ಯ ರಕ್ಷಣೆಗಾಗಿ ಜಾರಿಗೆ ತಂದ ಪಶು ಸಂಜೀವಿನಿ ಆಂಬುಲೆನ್ಸ್ ಸೇವೆಗೆ ಉತ್ತಮ‌ ಸ್ಪಂದನೆ ಸಿಗುತ್ತಿದೆ. ಸುಸಜ್ಜಿತ ಆಂಬುಲೆನ್ಸ್ ವಾಹನದಲ್ಲಿ ಆಧುನಿಕ ಪಶುವೈದ್ಯಕೀಯ ಸೇವೆಗಳಿವೆ. ರೈತರ ಕರೆಗಳಿಗೆ ತುರ್ತಾಗಿ ಸ್ಪಂದಿಸಿ ಕಾರ್ಯ ನಿರ್ವಹಿಸುವ ಈ ಸೇವೆಗಳನ್ನು ಇಲಾಖೆಯ ಹೆಲ್ಪ್‌ಲೈನ್ ಸೇವೆಗೆ ಲಿಂಕ್ ಮಾಡಲಾಗಿದೆ.

The Government is contemplating the statewide expansion of the Veterinary Ambulance Services
ಪಶು ಸಂಜೀವಿನಿ ಸೇವೆ ರಾಜ್ಯಾದ್ಯಂತ ವಿಸ್ತರಣೆಗೆ ಸರ್ಕಾರದ ಚಿಂತನೆ

ಬೆಂಗಳೂರು:ಜಾನುವಾರುಗಳ ಆರೋಗ್ಯ ರಕ್ಷಣೆಗಾಗಿ ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ಪಶು ಸಂಜೀವಿನಿ ಆಂಬುಲೆನ್ಸ್ ಸೇವೆಯನ್ನು ಜಾರಿಗೆ ತರಲಾಗಿತ್ತು. ಈ ಸೇವೆಗೆ ಉತ್ತಮ‌ ಪ್ರತಿಕ್ರಿಯೆ ಸಿಗುತ್ತಿದ್ದು ರಾಜ್ಯಾದ್ಯಂತ ವಿಸ್ತರಿಸಲು ಪಶುಸಂಗೋಪನಾ ಇಲಾಖೆ ಮುಂದಾಗಿದೆ.

ಈವರೆಗೆ ಎಷ್ಟು ಜಾನುವಾರುಗಳಿಗೆ ಚಿಕಿತ್ಸೆ? ವಿವರ

ಏನಿದು ಪಶು ಸಂಜೀವಿನಿ ಸೇವೆ?:

ಜಾನುವಾರುಗಳ ಚಿಕಿತ್ಸೆಗಾಗಿ ವಿಶೇಷ ಆಂಬುಲೆನ್ಸ್ ‌ಸೇವೆಯನ್ನು ಸರ್ಕಾರ ಕಳೆದ ವರ್ಷ ಆಗಸ್ಟ್​ಗೆ ಜಾರಿಗೆ ತಂದಿತ್ತು. ಇಲ್ಲಿಯವರೆಗೆ 15 ಜಿಲ್ಲೆಗಳಲ್ಲಿ ಈ ಸೇವೆಯನ್ನು ಅನುಷ್ಠಾನಗೊಳಿಸಲಾಗಿದ್ದು, ಒಟ್ಟು 25 ಆಂಬುಲೆನ್ಸ್​ಗಳು ಕಾರ್ಯನಿರ್ವಹಿಸುತ್ತಿವೆ. ಈ ಆಂಬುಲೆನ್ಸ್​ಗಳು ಸುಸಜ್ಜಿತ ಪಶು ಶಸ್ತ್ರಚಿಕಿತ್ಸಾ ವಾಹನವಾಗಿದೆ. ರೈತರ ಕರೆಗಳಿಗೆ ತುರ್ತಾಗಿ ಸ್ಪಂದಿಸಿ ಕಾರ್ಯ ನಿರ್ವಹಿಸುವ ಈ ಸೇವೆಗಳನ್ನು ಇಲಾಖೆಯ ಹೆಲ್ಪ್‌ಲೈನ್ ಸೇವೆಗೆ ಲಿಂಕ್ ಮಾಡಲಾಗಿದೆ.

ಆಂಬುಲೆನ್ಸ್ ವಿಶೇಷತೆ ಏನು?:

ಸುಸಜ್ಜಿತ ಆಂಬುಲೆನ್ಸ್ ವಾಹನದಲ್ಲಿ ಆಧುನಿಕ ಪಶುವೈದ್ಯಕೀಯ ಸೇವೆಗಳಿವೆ. ಶಸ್ತ್ರ ಚಿಕಿತ್ಸಾ ಘಟಕವಿದೆ. ವಾಹನದಲ್ಲಿ ಪ್ರಯೋಗಶಾಲೆ, ಸ್ಕ್ಯಾನಿಂಗ್ ಉಪಕರಣ ಅಳವಡಿಕೆ ಮಾಡಲಾಗಿದೆ. 250 ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ಹೊಂದಿದ್ದು, 200 ಕೆ.ಜಿ ತೂಕ ಸಾಮರ್ಥ್ಯದ ಶಸ್ತ್ರಚಿಕಿತ್ಸಾ ಟೇಬಲ್, ಎ/ಸಿ ವ್ಯವಸ್ಥೆ, ಪಶುವೈದ್ಯರು ಮತ್ತು ಸಿಬ್ಬಂದಿ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡಲಾಗಿದೆ.

ವಾಶ್ ಬೇಸಿನ್, 100 ವೋಲ್ಟ್ ಎಲ್ಇಡಿ ಲೈಟ್, ಆಮ್ಲಜನಕ ಸಪೋರ್ಟ್ ಸಿಸ್ಟಮ್, ಆಕಸ್ಮಿಕ ಬೆಂಕಿ ಅನಾಹುತ ತಡೆಗೆ ವ್ಯವಸ್ಥೆ, ಶಸ್ತ್ರಚಿಕಿತ್ಸಾ ಉಪಕರಣಗಳ ಕಿಟ್, ಮರಣೋತ್ತರ ಪರೀಕ್ಷೆ ಉಪಕರಣಗಳ ಕಿಟ್, ಪ್ರಸೂತಿ ಕಿಟ್ ಗಳ ಪೆಟ್ಟಿಗೆಗಳು ಮತ್ತು ಇತರೆ ಉಪಕರಣಗಳನ್ನು ಇಡಲು ಕಪಾಟುಗಳ ವ್ಯವಸ್ಥೆ ಹೊಂದಿದೆ.

ಆಂಬುಲೆನ್ಸ್ ಮೂಲಕ ನೀಡುವ ಚಿಕಿತ್ಸೆ ಏನು?:

ವಿಷಪ್ರಾಸನ, ಪ್ರಸವಕ್ಕೆ ಸಂಬಂಧಿಸಿದ ತೊಂದರೆಗಳು, ಹೊಟ್ಟೆ ಉಬ್ಬರ, ಉಸಿರುಗಟ್ಟುವಿಕೆ, ಅಪಘಾತ, ಮೂಳೆಮುರಿತ, ಬೆಬೇಸಿಯೋಸಿನ್, ಆಂಥ್ರಾಕ್ಸ್, ಚಪ್ಪೆರೋಗ, ಗಳಲೇ ರೋಗ, ಹಾಲುಜ್ವರ, ಕೆಚ್ಚಲು ಬಾವಿಗೆ ಚಿಕಿತ್ಸೆ ನೀಡಲಾಗುತ್ತದೆ.

ವಿವಿಧ ರೋಗೊದ್ರೇಕಗಳು ಹಾಗೂ ಇನ್ನಿತರೆ ಆರೋಗ್ಯ ಸಮಸ್ಯೆಗಳಿರುವ ಜಾನುವರುಗಳನ್ನು ವಾಹನದಲ್ಲಿ ಹಾಕಿಕೊಂಡು ಹೋಗಿ ಚಿಕಿತ್ಸೆ ಪಡೆಯಬಹುದಾಗಿದೆ. ರೈತರ ಮನೆ ಬಾಗಿಲಿಗೆ ತೆರಳಿ ತಜ್ಞ ಪಶುವೈದ್ಯರು ಹಾಗೂ ಸುಸಜ್ಜಿತ ಪಶು ಚಿಕಿತ್ಸಾ ವಾಹನ ದನ, ಎಮ್ಮೆ, ಕುರಿ, ಮೇಕೆ, ಹಾಗೂ ಇನ್ನಿತರೆ ಜಾನುವಾರುಗಳಿಗೆ ಚಿಕಿತ್ಸೆ ನೀಡಿ ಪ್ರಾಣ ಹಾನಿ ಆಗುವುದನ್ನು ತಡೆಗಟ್ಟಿ ರೈತರಿಗೆ ಎದುರಾಗುವ ಆರ್ಥಿಕ ಸಂಕಷ್ಟವನ್ನು ತಪ್ಪಿಸುವ ಗುರಿ ಹೊಂದಿದೆ.

ರಾಜ್ಯಾದ್ಯಂತ ಸೇವೆ ವಿಸ್ತರಣೆಗೆ ಚಿಂತನೆ:

ಸದ್ಯ ರಾಯಚೂರು, ಕಲಬುರಗಿ, ಧಾರವಾಡ, ಬಿಜಾಪುರ, ಬೆಳಗಾವಿ, ಮಂಗಳೂರು, ಹಾಸನ, ಮಂಡ್ಯ, ಮೈಸೂರು, ಶಿವಮೊಗ್ಗ, ಚಿತ್ರದುರ್ಗ, ಯಾದಗಿರಿ, ಬೀದರ್, ಚಿಕ್ಕಬಳ್ಳಾಪುರ, ತುಮಕೂರು ಸೇರಿದಂತೆ 15 ಜಿಲ್ಲೆಗಳ ಪಶುವೈದ್ಯಕೀಯ ಆಂಬುಲೆನ್ಸ್ ನೀಡಲಾಗುತ್ತಿದೆ. ಇದನ್ನು ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಲು ಸರ್ಕಾರ ಮುಂದಾಗಿದೆ.

ಒಟ್ಟು 41 ಪಶು ಸಂಜೀವಿನಿ ಆಂಬುಲೆನ್ಸ್ ನೀಡಲು ನಿರ್ಧರಿಸಲಾಗಿದೆ. ಇನ್ನೂ 25 ಪಶುಸಂಜೀವಿನಿ ಆಂಬುಲೆನ್ಸ್ ರಸ್ತೆಗಿಳಿಯಲಿದ್ದು, ಈ ಪೈಕಿ 10 ಆಂಬುಲೆನ್ಸ್ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚೌವ್ಹಾಣ್ ತಿಳಿಸಿದ್ದಾರೆ.

ಈವರೆಗೆ ಎಷ್ಟು ಜಾನುವಾರುಗಳಿಗೆ ಚಿಕಿತ್ಸೆ:

ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಜಾರಿಯಾದ ಈ ಸೇವೆಗೆ ಉತ್ತಮ ಜನಸ್ಪಂದನೆ ಸಿಗುತ್ತಿದೆ. ಅನಾರೋಗ್ಯದಿಂದ ಬಳಲುತ್ತಿರುವ ಜಾನುವಾರುಗಳಿಗೆ ಚಿಕಿತ್ಸೆ ನೀಡಲು ಈ ಸುಸಜ್ಜಿತ ಆಂಬುಲೆನ್ಸ್ ರೈತರಿಗೆ ಅನುಕೂಲಕರವಾಗಿ ಪರಿಣಮಿಸಿದೆ.

ಇಲಾಖೆ ನೀಡಿದ ಅಂಕಿಅಂಶದ ಪ್ರಕಾರ, ಮಾರ್ಚ್ ಅಂತ್ಯದವರೆಗೆ ಪಶುಸಂಜೀವಿನಿ ಆಂಬುಲೆನ್ಸ್ ಮೂಲಕ 1006 ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗಿದೆ. ಇದರಲ್ಲಿ ದ.ಕನ್ನಡ ಜಿಲ್ಲೆಯಲ್ಲಿ 326 ಜಾನುವಾರು, ಹಾಸನ 180, ತುಮಕೂರು 68, ಶಿವಮೊಗ್ಗ 58, ಧಾರವಾಡ, ಚಿತ್ರದುರ್ಗ, ವಿಜಯಪುರದಲ್ಲಿ ತಲಾ 56 ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗಿದೆ. ಒಟ್ಟು 457 ಗ್ರಾಮಗಳಿಗೆ ತೆರಳಿ ಪಶು ಆಂಬುಲೆನ್ಸ್ ಮೂಲಕ ಚಿಕಿತ್ಸೆ ನೀಡಲಾಗಿದೆ. ಆಂಬುಲೆನ್ಸ್ ಗಳು ಒಟ್ಟು 30,255 ಕಿ.ಮೀ ಕ್ರಮಿಸಿದೆ.

ಮೇ ತಿಂಗಳಲ್ಲಿ 42 ಜಾನುವಾರುಗಳಿಗೆ ಶಸ್ತ್ರಚಿಕಿತ್ಸೆ ನೀಡಲಾಗಿದೆ. 75 ಗ್ರಾಮಗಳಿಗೆ ತೆರಳಿ ಶಸ್ತ್ರಚಿಕಿತ್ಸೆ ನೀಡಲಾಗಿದೆ.

For All Latest Updates

ABOUT THE AUTHOR

...view details