ಕರ್ನಾಟಕ

karnataka

By ETV Bharat Karnataka Team

Published : Aug 24, 2023, 6:38 PM IST

ETV Bharat / state

ಕೆರೆ ತುಂಬಿಸುವ, ಬ್ಯಾರೇಜ್ ನಿರ್ಮಿಸುವ ಕಾರ್ಯಗಳಿಗೆ ಒತ್ತು ನೀಡಿ: ಅಧಿಕಾರಿಗಳಿಗೆ ಸಚಿವ ಬೋಸರಾಜು ಸೂಚನೆ

ಕೆರೆ ತುಂಬಿಸುವ ಹಾಗೂ ಬ್ಯಾರೇಜ್​ ನಿರ್ಮಾಣ ಕಾರ್ಯಗಳಿಗೆ ಒತ್ತು ನೀಡುವಂತೆ ಸಚಿವ ಎನ್​.ಎಸ್. ಬೋಸರಾಜು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ
ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ

ಬೆಂಗಳೂರು : ಸಾರ್ವಜನಿಕರಿಗೆ ಹಾಗೂ ರೈತರಿಗೆ ಅನುಕೂಲ ಮಾಡಿಕೊಡುವ ಕೆರೆಗಳನ್ನು ತುಂಬಿಸುವ ಹಾಗೂ ಬ್ಯಾರೇಜ್ ನಿರ್ಮಾಣದಂತಹ ಕಾಮಗಾರಿಗಳಿಗೆ ಆದ್ಯತೆ ನೀಡುವಂತೆ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ವಿಕಾಸಸೌಧದಲ್ಲಿಂದು ಆಯೋಜಿಸಿದ್ದ ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರು, ರಾಜ್ಯದಲ್ಲಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳ ಪ್ರಗತಿಯ ಮಾಹಿತಿ ಪಡೆದುಕೊಂಡರು.

ಈ ವೇಳೆ ಕಾಮಗಾರಿಗಳನ್ನು ನೀಡಿರುವ ಕಾಲಮಿತಿಯಲ್ಲಿ ಮುಗಿಸಲು ಅಧಿಕಾರಿಗಳು ಆದ್ಯತೆ ನೀಡಬೇಕು. ಕಾಮಗಾರಿಗಳಿಗಿರುವ ಅಡೆತಡೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಕಾಲಕಾಲಕ್ಕೆ ಯೋಜನೆಗಳ ಕಾಮಗಾರಿಗಳನ್ನು ಪರಿಶೀಲಿಸುವುದರಿಂದ ಕಾಲಮಿತಿಯಲ್ಲಿ ಯೋಜನೆ ಪೂರ್ಣಗೊಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ಅಧಿಕಾರಿಗಳು ಆದ್ಯತೆ ನೀಡಬೇಕು ಎಂದು ಹೇಳಿದರು.

ನಮ್ಮ ಇಲಾಖೆಯಿಂದ ಕೈಗೊಳ್ಳುವ ಬಹುತೇಕ ಕಾಮಗಾರಿಗಳು ಏತ ನೀರಾವರಿ ಯೋಜನೆಯ ಅಡಿಯಲ್ಲಿ ಕೆರೆಗಳನ್ನು ತುಂಬಿಸುವಂತಹವುಗಳಾಗಿವೆ. ಕೆರೆ ತುಂಬಿಸುವ ಹಾಗೂ ಬ್ಯಾರೇಜ್ ನಿರ್ಮಾಣದಂತಹ ಕಾಮಗಾರಿಗಳು ರೈತರಿಗೆ ಅನುಕೂಲ ಮಾಡಿಕೊಡುತ್ತವೆ. ಕೆರೆಗಳ ನಿರ್ಮಾಣ, ಕೆರೆಗಳಿಗೆ ನೀರು ತುಂಬಿಸುವುದು ಹಾಗೂ ಬ್ಯಾರೇಜ್ ನಿರ್ಮಾಣ ಕಾರ್ಯಕ್ಕೆ ಮಹತ್ವ ನೀಡಬೇಕು. ಈ ಕಾರ್ಯಗಳಿಂದ ಅಂತರ್ಜಲ ಹೆಚ್ಚಾಗುವುದಲ್ಲದೆ, ಮಳೆಯ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಮುಗಿಸುವ ನಿಟ್ಟಿನಲ್ಲಿ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಪ್ರತಿ ತಿಂಗಳು ಕಾರ್ಯದರ್ಶಿಗಳಿಗೆ ಪ್ರಗತಿ ವರದಿ ನೀಡಿ: ಮುಖ್ಯ ಇಂಜಿನಿಯರ್​ಗಳೂ ತಮ್ಮ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳು ಹಾಗೂ ಯೋಜನೆಗಳ ಬಗ್ಗೆ ಕೆಳಮಟ್ಟದ ಅಧಿಕಾರಿಗಳೊಂದಿಗೆ ನಿಯಮಿತವಾಗಿ ಸಭೆ ನಡೆಸಬೇಕು. ಅಲ್ಲದೇ, ಆಯಾ ಕಾಲಕ್ಕೆ ಕಾಮಗಾರಿಗಳು ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಈ ಪರಿಶೀಲನೆಯ ವರದಿಯನ್ನು ಪ್ರತಿ ತಿಂಗಳೂ ಇಲಾಖೆಯ ಕಾರ್ಯದರ್ಶಿಗಳಿಗೆ ಸಲ್ಲಿಸಬೇಕು ಎಂದು ನಿರ್ದೇಶನ ಕೊಟ್ಟರು.

ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಯತೀಶ್ ಚಂದ್ರ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆಯ ದಕ್ಷಿಣ ವಲಯ, ಉತ್ತರ ವಲಯದ ಮುಖ್ಯ ಅಭಿಯಂತರರು, ಅಂತರ್ಜಲ ನಿರ್ದೇಶನಾಲಯ ಹಾಗೂ ಅಟಲ್ ಭೂಜಲ ಯೋಜನೆಯ ನಿರ್ದೇಶಕರು, ಇಲಾಖೆಯ ಅಧೀಕ್ಷಕ ಅಭಿಯಂತರರು ಮತ್ತು ಕಾರ್ಯಪಾಲಕ ಇಂಜಿನಿಯರ್​ಗಳು ಇದ್ದರು.

ಜಲ ಮೂಲಗಳಾದ ನದಿ, ಕೆರೆ ಮತ್ತು ನಾಲೆಗಳ ಸಂರಕ್ಷಣೆಗೆ ಸ್ವಯಂ ಸೇವಕರು ಹಾಗೂ ಗ್ರಾಮೀಣ ಸಮುದಾಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆ ಚಿಂತನೆ ನಡೆಸಿದೆ ಎಂದು ಎನ್.ಎಸ್.ಬೋಸರಾಜು (ಆಗಸ್ಟ್​ 6-2023) ಹೇಳಿದ್ದರು.

ವಿಕಾಸಸೌಧದಲ್ಲಿ ಶನಿವಾರ ಸಚಿವರನ್ನು ಭೇಟಿ ಮಾಡಿದ್ದ ಆರ್ಟ್ ಆಫ್ ಲಿವಿಂಗ್ ರಿವರ್ ರಿಜ್ಯೂವಿನೇಷನ್ ಸಂಸ್ಥೆಯ ರಾಷ್ಟ್ರೀಯ ನಿರ್ದೇಶಕ ಡಾ. ಲಿಂಗರಾಜು ಯಾಲೆ ನೇತೃತ್ವದ ತಂಡದೊಂದಿಗೆ ರಾಜ್ಯದ ಕೆರೆಗಳ ಅಧ್ಯಯನ ಹಾಗೂ ಜಲ ಮೂಲಗಳ ಪುನರುಜ್ಜೀವನದ ಬಗ್ಗೆ ವಿಸ್ತೃತ ಚರ್ಚೆ ನಡೆಸಿದ್ದರು.

ಇದನ್ನೂ ಓದಿ:ಜಲ ಮೂಲ ಸಂರಕ್ಷಣೆಗೆ ಸ್ವಯಂ ಸೇವಕರು, ಗ್ರಾಮೀಣ ಸಮುದಾಯದ ಪರಿಣಾಮಕಾರಿಯಾಗಿ ಬಳಕೆಗೆ ಚಿಂತನೆ: ಸಚಿವ ಎನ್.ಎಸ್. ಬೋಸರಾಜು

ABOUT THE AUTHOR

...view details