ಕರ್ನಾಟಕ

karnataka

ETV Bharat / state

ಇನ್ಮುಂದೆ ಬೆಂಗಳೂರಲ್ಲಿ ಫ್ಲೆಕ್ಸ್, ಹೋರ್ಡಿಂಗ್ಸ್ ಹಾಕಿದ್ರೆ 50 ಸಾವಿರ ರೂಪಾಯಿ ದಂಡ: ಡಿಸಿಎಂ ಡಿ ಕೆ ಶಿವಕುಮಾರ್​ ಎಚ್ಚರಿಕೆ - ಡಿಸಿಎಂ ಡಿಕೆಶಿ

ಅನಧಿಕೃತ ಫ್ಲೆಕ್ಸ್​ ಹಾಕುವವರಿಗೆ 50,000 ರೂ ದಂಡ ಹಾಕಲು ಸೂಚನೆ ನೀಡಿರುವ ಡಿಸಿಎಂ ಡಿ ಕೆ ಶಿವಕುಮಾರ್​

DCM D K Shivakumar
ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್​

By

Published : Aug 8, 2023, 7:28 PM IST

ಬೆಂಗಳೂರು: ಇನ್ನು ‌ಮುಂದೆ ಬೆಂಗಳೂರು ನಗರದಲ್ಲಿ ಯಾರೂ ಕೂಡ ಫ್ಲೆಕ್ಸ್, ಹೋರ್ಡಿಂಗ್ಸ್ ಹಾಕುವ ಹಾಗಿಲ್ಲ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. ಕುಮಾರ ಕೃಪಾ ಅತಿಥಿ ಗೃಹದಲ್ಲಿ ಇಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಇನ್ನು ಬೆಂಗಳೂರಾದ್ಯಂತ ಫ್ಲೆಕ್ಸ್ ಸಂಪೂರ್ಣವಾಗಿ ನಿಷೇಧ ಮಾಡುತ್ತೇವೆ. ಅನಧಿಕೃತ ಫ್ಲೆಕ್ಸ್​ಗಳಿಂದ ನನಗೆ ಅಸಹ್ಯ ಆಗುತ್ತಿದೆ. ಕೋರ್ಟ್​ನಿಂದ ಕೂಡ ನಿರ್ದೇಶನ ಇದೆ. ಎಲ್ಲಾ ಫ್ಲೆಕ್ಸ್, ಹೋರ್ಡಿಂಗ್ ತೆಗೆಯಲು ಸೂಚನೆ ನೀಡಲಾಗಿದೆ. ಬೆಂಗಳೂರಿನಾದ್ಯಂತ ಆ.15ರೊಳಗೆ ಎಲ್ಲಾ ಫ್ಲೆಕ್ಸ್, ಹೋರ್ಡಿಂಗ್ಸ್ ತೆರವು ಮಾಡಬೇಕು ಎಂದು ಹೇಳಿದ್ದಾರೆ.

ಯಾರಾದರು ಫ್ಲೆಕ್ಸ್, ಹೋರ್ಡಿಂಗ್ಸ್ ಹಾಕಿದ್ದು ಕಂಡುಬಂದರೆ ಅಂತವರಿಗೆ ದಂಡ ಹಾಕಬೇಕು. ಯಾರು ಅನಧಿಕೃತವಾಗಿ ಫ್ಲೆಕ್ಸ್ ಹಾಕುತ್ತಾರೋ ಅವರಿಗೆ 50,000 ರೂ. ದಂಡ ಹಾಕಲು ಸೂಚನೆ ನೀಡಲಾಗಿದೆ. ಯಾವ ಪಾರ್ಟಿಯವರೂ ಹಾಕುವುದು ಬೇಡ. ಸಿಎಂ ಅವರ ಫ್ಲೆಕ್ಸ್ ಹಾಕುವ ಹಾಗಿಲ್ಲ. ಡಿಕೆಶಿ ಫ್ಲೆಕ್ಸ್ ಹಾಕುವ ಹಾಗಿಲ್ಲ. ಯಾರ ಶಿಫಾರಸು ನಡೆಯುವುದಿಲ್ಲ ಎಂದು ಡಿಕೆಶಿ ಖಡಕ್​ ಸಂದೇಶ ನೀಡಿದ್ದಾರೆ.

ಅನಿವಾರ್ಯತೆ ಇದ್ದರೆ, ಸರ್ಕಾರದ ಕೆಲ ಯೋಜನೆಗಳ ಬಗ್ಗೆ ಹಾಕುವುದಾದರೆ ಅದಕ್ಕೆ ಸೀಮಿತ ಅವಕಾಶ ನೀಡುವ ಬಗ್ಗೆ ನೀತಿ ತರುತ್ತೇವೆ. ಹೈಕೋರ್ಟ್ ಅನಧಿಕೃತ ಹೋರ್ಡಿಂಗ್ಸ್ ತೆಗೆಯಲು ಮೂರು ವಾರಗಳ ಸಮಯಾವಕಾಶ ನೀಡಿದೆ. ಹಾಗಾಗಿ ಇನ್ನು ಮುಂದೆ ಬೆಂಗಳೂರು ನಗರದಲ್ಲಿ ಫ್ಲೆಕ್ಸ್ ಹಾಕುವ ಹಾಗಿಲ್ಲ. ಹುಟ್ಟುಹಬ್ಬ ಶುಭಾಶಯ, ಧಾರ್ಮಿಕ, ರಾಜಕೀಯ ವಿಚಾರದ ಫ್ಲೆಕ್ಸ್ ಯಾವುದನ್ನೂ ಹಾಕುವ ಹಾಗಿಲ್ಲ. ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ನಿರ್ಧಾರ ಬರಲಾಗಿದೆ. ನಗರದಲ್ಲಿ ಸುಮಾರು 59,400 ಅನಧಿಕೃತ ಫ್ಲೆಕ್ಸ್​ಗಳಿದ್ದು, ಈ ಪೈಕಿ ಸುಮಾರು 58,000 ಫ್ಲೆಕ್ಸ್ ತೆರವು ಮಾಡಲಾಗಿದೆ. ಈವರೆಗೆ ಸುಮಾರು 134 ದೂರುಗಳು ದಾಖಲು ಮತ್ತು 40 ಎಫ್​ಐಆರ್ ದಾಖಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಯಾರ ಹೊಟ್ಟೆ ಮೇಲೂ ಹೊಡೆಯಲ್ಲ:ಗುತ್ತಿಗೆದಾರರ ದೂರು ವಿಚಾರವಾಗಿ ಪ್ರತಿಕ್ರಿಯಿಸಿ, ಗುತ್ತಿಗೆದಾರರು ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾರೆ. ನೋವಾದವರು ದೂರು ಕೊಡವುದು ತಪ್ಪೇನಿಲ್ಲ. ಯಾರ ಹೊಟ್ಟೆ ಮೇಲೂ ಹೊಡೆಯವುದಿಲ್ಲ. ಕೆಲಸ ಮಾಡಿದವರಿಗೆ ಬಿಲ್ ಪಾವತಿ ಮಾಡಲಾಗುತ್ತದೆ ಎಂದು ಡಿಕೆಶಿ ಸ್ಪಷ್ಟಪಡಿಸಿದರು.

ನಕಲಿ ಬಿಲ್, ಕಾಮಗಾರಿ ಸಂಬಂಧ ಅಧಿಕಾರಿಗಳಿಗೆ ಪರಿಶೀಲನೆ ನಡೆಸಲು ತಿಳಿಸಿದ್ದೇನೆ. ಅವರು ವರದಿ ಕೊಟ್ಟ ಮೇಲೆ ಎಲ್ಲವನ್ನೂ ನಿಮ್ಮ ಮುಂದೆ ಇಡುತ್ತೇನೆ. ಕೆಲ ವರದಿ ಬಂದಿದೆ, ನೈಜತೆ ಆಧರಿಸಿ ಕ್ರಮ ವಹಿಸಲಾಗುತ್ತದೆ. ಗುತ್ತಿಗೆದಾರರು ಬ್ಲ್ಯಾಕ್ ‌ಮೇಲ್ ಮಾಡುತ್ತಿಲ್ಲ. ಅವರು ಪ್ರೀತಿ ತೋರಿಸುತ್ತಿದ್ದಾರೆ ಅಷ್ಟೇ. ಅದರ ಹಿಂದೆ ರಾಜಕೀಯ ಇದೆ. ಯಾರು ಮಾಡುತ್ತಿದ್ದಾರೆ ಅನ್ನೋದು ಗೊತ್ತು. ನಾನು ಎಲ್ಲಾ ದಾಖಲಾತಿಗಳ ಜೊತೆಗೆ ವಿವರ ನೀಡುತ್ತೇನೆ ಎಂದು ತಿಳಿಸಿದರು.

ಎಕ್ಸ್‌ಪ್ರೆಸ್‌ ಆಫ್ ಇಂಟ್ರೆಸ್ಟ್ ಸಲ್ಲಿಕೆ ಅವಧಿ ವಿಸ್ತರಣೆ:ಬೆಂಗಳೂರು ಮೂಲಸೌಕರ್ಯ ವಿಚಾರವಾಗಿ ಬೆಂಗಳೂರು ನಗರ ರಸ್ತೆ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಟ್ರಾಪಿಕ್ ಸುಗಮಗೊಳಿಸುವ ಬಗ್ಗೆ ಅನೇಕ ಚರ್ಚೆ ಮಾಡಿದ್ದೇವೆ. 70,000ಕ್ಕೂ ಅಧಿಕ ಸಲಹೆ ಬಂದಿದೆ. ಇನ್ನೂ ಹಲವರಿಂದ ಸಲಹೆ ಪಡೆಯುತ್ತೇವೆ ಎಂದು ತಿಳಿಸಿದರು. ದಿಲ್ಲಿಯಲ್ಲಿ ಕೇಂದ್ರ ಭೂ ಸಾರಿಗೆ ಸಚಿವ ಗಡ್ಕರಿಯವರನ್ನು ಭೇಟಿ ಮಾಡಿದ್ದೇವೆ. ನೆಲಮಂಗಲದಿಂದ ಬರುವ ರಾಷ್ಟ್ರೀಯ ಹೆದ್ದಾರಿ, ಕೋಲಾರ, ಮೈಸೂರು, ಹೊಸೂರು ಎನ್ ಹೆಚ್ ನಿಂದ ಬೆಂಗಳೂರಲ್ಲಿ ವಾಹನ ದಟ್ಟಣೆ ಆಗುತ್ತಿದೆ. ಬೆಂಗಳೂರು ವೈಜ್ಞಾನಿಕ ನಗರ ಅಲ್ಲ. ಅದಕ್ಕೆ ವಿಸ್ತೃತ ಯೋಜನೆ ರೂಪಿಸುವಂತೆ ಗಡ್ಕರಿ ಅವರು ಸಲಹೆ ನೀಡಿದ್ದಾರೆ. ಕನಿಷ್ಠ 150 ಕಿ.ಮೀ. ಟ್ರಾಫಿಕ್ ಡಿಕಂಜೆಸ್ಟ್ ಮಾಡಲು ಕೆಲ ಸಲಹೆ ನೀಡಿದ್ದಾರೆ. ಇದರಲ್ಲಿ ಟನೆಲ್, ಮೇಲುಸೇತುವೆ ಒಳಗೊಂಡಿದೆ ಎಂದರು.

ಒಂದು ವಾರ ಕಾಲ ಎಕ್ಸ್​ಪ್ರೆಸ್ ಆಫ್ ಇಂಟ್ರೆಸ್ಟ್ ಸಲ್ಲಿಕೆಗೆ ಅವಧಿ ವಿಸ್ತರಣೆ ಮಾಡಿದ್ದೇವೆ. ಆ.17 ವರೆಗೆ ಸಲ್ಲಿಕೆ ಮಾಡಲು ಅವಧಿ ವಿಸ್ತರಣೆಗೆ ನಿರ್ಧಾರ ಮಾಡಿದ್ದೇವೆ. ಈ ಸಂಬಂಧ ಜಾಗತಿಕ ಟೆಂಡರ್ ಕರೆಯುತ್ತೇವೆ ಎಂದರು.

ಡಿಕೆಶಿಯವರೇ ಬ್ಲ್ಯಾಕ್ ಮೇಲ್ ಮಾಡುತ್ತಾರೆ ಎಂಬ ಸಿ ಟಿ ರವಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ನಮ್ಮ‌ ಫ್ರೆಂಡ್ ಸಿ ಟಿ ರವಿ ಈಗ ರಾಜ್ಯ ರಾಜಕಾರಣಕ್ಕೆ ಬರುತ್ತಿದ್ದಾರೆ. ನಾವು ಅವರ ಜೊತೆ ಮಾತನಾಡುತ್ತೇನೆ ಎಂದು ಸೂಚ್ಯವಾಗಿ ತಿಳಿಸಿದರು.

ಇದನ್ನೂ ಓದಿ:ನಗರದಲ್ಲಿ ರಾರಾಜಿಸುತ್ತಿವೆ ರಾಜಕಾರಣಿಗಳ ಹುಟ್ಟುಹಬ್ಬಕ್ಕೆ ಶುಭ ಕೋರುವ ಫ್ಲೆಕ್ಸ್ ಬ್ಯಾನರ್..

ABOUT THE AUTHOR

...view details