ಕರ್ನಾಟಕ

karnataka

By

Published : Feb 4, 2023, 9:16 AM IST

ETV Bharat / state

ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ತಯಾರಿಕೆಗೆ 4 ಸ್ತರದ ಆಯ್ಕೆ ಪ್ರಕ್ರಿಯೆ: ಬಿಜೆಪಿ ಕೋರ್ ಕಮಿಟಿ ನಿರ್ಧಾರ

ವಿಧಾಸಭೆ ಚುನಾವಣೆಗೆ ಭರ್ಜರಿ ತಾಲೀಮು- ಟಿಕೆಟ್ ಹಂಚಿಕೆ ವಿಚಾರದಲ್ಲಿ ನಾಲ್ಕು ಸ್ತರದ ಆಯ್ಕೆ ಪ್ರಕ್ರಿಯೆಗೆ ರಾಜ್ಯ ಬಿಜೆಪಿ ನಾಯಕರು ಸಜ್ಜು- ಕೋರ್​ ಕಮಿಟಿ ಸಭೆಯಲ್ಲಿ ಮಹತ್ವದ ನಿರ್ಧಾರ

BJP core committee meeting
ಬಿಜೆಪಿ ಕೋರ್ ಕಮಿಟಿ ಸಭೆ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ ಅಖಾಡಕ್ಕೆ ಭರ್ಜರಿ ತಾಲೀಮು ಆರಂಭಿಸಿರುವ ರಾಜ್ಯ ಬಿಜೆಪಿ ನಾಯಕರು ಟಿಕೆಟ್ ಹಂಚಿಕೆ ವಿಚಾರದಲ್ಲಿ ನಾಲ್ಕು ಸ್ತರದ ಆಯ್ಕೆ ಪ್ರಕ್ರಿಯೆಗೆ ಮುಂದಾಗಿದ್ದಾರೆ. ಈ ಕುರಿತು ರಾಜ್ಯದ ಕೋರ್ ಕಮಿಟಿ ಮಹತ್ವದ ನಿರ್ಧಾರ ಕೈಗೊಂಡಿದೆ. ಅಲ್ಲದೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸುವ ನಿರ್ಧಾರ ಕೈಗೊಂಡಿದೆ.

ನಾಲ್ಕು ಸ್ತರದ ಪ್ರಕ್ರಿಯೆ: ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ನಡೆದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ವಿಷಯದ ಮಾನದಂಡದ ಪ್ರಸ್ತಾಪವಾಯಿತು. ಬಿಜೆಪಿ ಅಭ್ಯರ್ಥಿಗಳ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಅಂತಿಮವಾಗಿ ಅಭ್ಯರ್ಥಿಗಳ ಆಯ್ಕೆಗೆ ನಾಲ್ಕು ಸ್ತರದ ಪ್ರಕ್ರಿಯೆ ನಿಗದಿಪಡಿಸಲಾಯಿತು. ತಾಲೂಕು ಘಟಕದಿಂದ ಜಿಲ್ಲಾ ಘಟಕಕ್ಕೆ ಸಂಭಾವ್ಯರ ಹೆಸರು ಕಳುಹಿಸಬೇಕು. ಕನಿಷ್ಠ ಮೂರು ಹೆಸರು ಇರುವಂತೆ ಸಂಭಾವ್ಯರ ಹೆಸರು ಕಳುಹಿಸಬೇಕು. ಶಾಸಕರು ಇರುವ ಕ್ಷೇತ್ರಗಳಲ್ಲಿಯೂ ಕೂಡಾ ಶಾಸಕರ ಹೆಸರು ಸೇರಿದಂತೆ ಸಂಭಾವ್ಯರ ಮೂರು ಹೆಸರನ್ನು ಜಿಲ್ಲಾ ಘಟಕದಿಂದ ರಾಜ್ಯ ಘಟಕಕ್ಕೆ ಕಳುಹಿಸಬೇಕು. ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಈ ಪಟ್ಟಿಗಳನ್ನು ಚರ್ಚಿಸಿ ಪರಿಶೀಲಿಸಿ ಬಳಿಕ ಕೇಂದ್ರೀಯ ಚುನಾವಣಾ ಸಮಿತಿಗೆ ಕಳುಹಿಸಬೇಕು ಎನ್ನುವ ನಿರ್ಧಾರ ಕೈಗೊಳ್ಳಲಾಗಿದೆ.

4 ರೀತಿಯ ಸರ್ವೇ ರಿಪೋರ್ಟ್ ಬಗ್ಗೆ ಚರ್ಚೆ:ಕ್ಷೇತ್ರವಾರು ಬಿಜೆಪಿ ಸಾಮರ್ಥ್ಯದ ಆಧಾರದಲ್ಲಿ, ಎ, ಬಿ, ಸಿ ಮತ್ತು ಡಿ ಎಂದು ವಿಂಗಡಿಸಿ ಚರ್ಚೆ ನಡೆಸಲಾಯಿತು. ಎ-ಕ್ಷೇತ್ರಗಳು ಖಚಿತ ಗೆಲುವು ಪಡೆಯುವ ಕ್ಷೇತ್ರಗಳಾಗಿದ್ದು, ಇದರಲ್ಲಿ 60-62 ಕ್ಷೇತ್ರಗಳು ಬರಲಿವೆ. ಬಿ-ಕ್ಷೇತ್ರಗಳು ಗೆಲುವಿನ ಸಾಧ್ಯತೆ ಇರುವ ಕ್ಷೇತ್ರಗಳಾಗಿದ್ದು, ಇದರಲ್ಲಿ 20-25 ಕ್ಷೇತ್ರಗಳು ಬರಲಿವೆ. ಸಿ ಮತ್ತು ಡಿ ಕ್ಷೇತ್ರಗಳು ಕಾಂಗ್ರೆಸ್ ಮತ್ತು ಜೆಡಿಎಸ್ ಗೆಲ್ಲಬಹುದಾದ ಕ್ಷೇತ್ರಗಳಾಗಿದ್ದು, ಈ ಕ್ಷೇತ್ರಗಳ ಕಡೆ ಹೆಚ್ಚಿನ ಗಮನ ಕೇಂದ್ರೀಕರಿಸಲು ಕೋರ್ ಕಮಿಟಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಸಿ ಮತ್ತು ಡಿ ಕ್ಷೇತ್ರಗಳಲ್ಲಿ ಟಾರ್ಗೆಟ್ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ಕೇಸರಿ ಮಹಾ ಸಂಗಮ ಸಮಾವೇಶ:ದಾವಣಗೆರೆಯಲ್ಲಿ ನಡೆದಿದ್ದ ಸಿದ್ದರಾಮೋತ್ಸವಕ್ಕೆ ಕೌಂಟರ್ ನೀಡಲು ಬಿಜೆಪಿ ನಿರ್ಧರಿಸಿದೆ. ದಾವಣಗೆರೆಯಲ್ಲಿಯೇ ಕೇಸರಿ ಮಹಾ ಸಂಗಮ ಸಮಾವೇಶಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ. ಮಾರ್ಚ್ ಮೂರನೇ ವಾರದಲ್ಲಿ ದಾವಣಗೆರೆಯಲ್ಲಿ ಸಮಾವೇಶ ನಡೆಯಲಿದೆ. ರಾಜ್ಯದ ನಾಲ್ಕು ಭಾಗಗಳಿಂದ ಬಂದು ದಾವಣಗೆರೆಯಲ್ಲಿ ಕೊನೆಯಾಗಲಿರುವ ರಥಯಾತ್ರೆಯಲ್ಲಿ ಹೈಕಮಾಂಡ್ ನಾಯಕರು ಪಾಲ್ಗೊಳ್ಳಲಿದ್ದಾರೆ.

ಜವಾಬ್ದಾರಿ ಹಂಚಿಕೆ: ಎಲ್ಲಾ ರಾಜ್ಯ ನಾಯಕರಿಗೂ ಜವಾಬ್ದಾರಿ ಹಂಚಿಕೆಯಾಗಬೇಕು. ಕಾಂಗ್ರೆಸ್ ವೇಗಕ್ಕೆ ನಮ್ಮ‌ ವೇಗ ತೂಗುತ್ತಿಲ್ಲ. ಇನ್ನಷ್ಟು ಗಂಭೀರವಾಗಿ ತೆಗೆದುಕೊಳ್ಳಬೇಕಾದ ಅವಶ್ಯಕತೆ ಇದೆ. ಪಕ್ಷ ಯಾರಿಗೂ ಕಾಯಬೇಕಿಲ್ಲ. ತನ್ನ ಕೆಲಸ ಮುಂದುವರಿಸಬೇಕು ಎಂದು ಕೋರ್ ಕಮಿಟಿ ಸಭೆಯಲ್ಲಿ ಪಕ್ಷದ ಸಂಘಟನಾ ಜವಾಬ್ದಾರಿ ಹೊತ್ತ ನಾಯಕರು ಪ್ರಸ್ತಾಪ ಮಾಡಿದ್ದಾರೆ. ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಇಂದಿನ ವಿಶೇಷ ಕಾರ್ಯಕಾರಣಿಯಲ್ಲಿ ಸೂಚನೆ ನೀಡಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಯುಪಿ, ಗುಜರಾತ್ ಪ್ರಯೋಗವನ್ನೇ ರಾಜ್ಯದಲ್ಲಿ ಮಾಡಲು ಕೋರ್ ಕಮಿಟಿಯಲ್ಲಿ ನಿರ್ಧಾರ: ಸಿ ಟಿ ರವಿ

ABOUT THE AUTHOR

...view details