ಕರ್ನಾಟಕ

karnataka

ಶಾಸಕ ನಾರಾಯಣ ರಾವ್ ನಿಧನಕ್ಕೆ ಹೆಚ್​ಡಿಡಿ, ಅಶ್ವತ್ಥನಾರಾಯಣ್, ಸವದಿ ಸಂತಾಪ

By

Published : Sep 24, 2020, 7:11 PM IST

ಕೊರೊನಾದಿಂದ ಇಂದು ಮೃತಪಟ್ಟ ಶಾಸಕ ನಾರಾಯಣ ರಾವ್ ನಿಧನಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹಾಗೂ ಡಿಸಿಎಂಗಳಾದ ಅಶ್ವತ್ಥನಾರಾಯಣ್, ಲಕ್ಷ್ಮಣ ಸವದಿ ಸಂತಾಪ ಸೂಚಿಸಿದ್ದಾರೆ.

HD Devegowda
ಹೆಚ್​.ಡಿ ದೇವೇಗೌಡ

ಬೆಂಗಳೂರು:ಶಾಸಕ ನಾರಾಯಣ ರಾವ್ ನಿಧನಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹಾಗೂ ಡಿಸಿಎಂಗಳಾದ ಅಶ್ವತ್ಥನಾರಾಯಣ್, ಲಕ್ಷ್ಮಣ ಸವದಿ ಸಂತಾಪ ಸೂಚಿಸಿದ್ದಾರೆ.

ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ನಾರಾಯಣ ರಾವ್ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ತೀವ್ರ ನೋವಾಗಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ, ಹೆಚ್.ಡಿ. ದೇವೇಗೌಡರು ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬದವರಿಗೆ ಈ ದುಃಖ ಭರಿಸುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.

ಈ ಸಾವುಗಳ ಸರಮಾಲೆ ನನ್ನನ್ನು ತೀವ್ರ ದುಃಖಕ್ಕೆ ದೂಡಿದೆ. ಅಶೋಕ್‌ ಗಸ್ತಿ, ನಿನ್ನೆ ಸುರೇಶ್‌ ಅಂಗಡಿ ಅವರ ಅಗಲಿಕೆಯ ನೋವಿನಲ್ಲಿ ಇರುವಂತೆಯೇ ಬಸವಕಲ್ಯಾಣ ಶಾಸಕ ಬಿ. ನಾರಾಯಣ ರಾವ್‌ ನಿಧನ ನನಗೆ ತೀವ್ರ ದಿಗ್ಭ್ರಮೆ ಉಂಟು ಮಾಡಿದೆ. ಹೀಗೆ ಆಪ್ತರೆಲ್ಲರೂ ಬಿಟ್ಟು ಹೋಗುತ್ತಿರುವುದು ನನಗೆ ಸಹಿಸಲಾರದಷ್ಟು ದುಃಖ ಉಂಟು ಮಾಡಿದೆ ಎಂದು ಡಿಸಿಎಂ ಅಶ್ವತ್ಥನಾರಾಯಣ್ ಸಂತಾಪ ಸಂದೇಶದ ಮೂಲಕ ತಿಳಿಸಿದ್ದಾರೆ.

ಬಸವ ಕಲ್ಯಾಣದ ಶಾಸಕರಾಗಿದ್ದ ನಾರಾಯಣ ರಾವ್ ಅವರು ಉತ್ತಮ ಶಾಸಕರಾಗಿದ್ದರು. ಕ್ಷೇತ್ರದ ಅಭಿವೃದ್ಧಿಗೆ ಅವರ ಕೊಡುಗೆ ದೊಡ್ಡದು. ಓರ್ವ ಮಾದರಿ, ಸರಳ ಸಜ್ಜನ ರಾಜಕಾರಣಿಯಾಗಿದ್ದ ನಾರಾಯಣ್ ರಾವ್ ಅವರು ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದರು. ಅವರು ಬಸವ ತತ್ವಗಳನ್ನು ಅಳವಡಿಸಿಕೊಂಡು ಬಸವ ತತ್ವಯಡಿಯಲ್ಲಿ ಬಾಳಿ ಬದುಕಿದವರು. ಬಡವರು, ದೀನ ದಲಿತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದವರು. ಅವರ ಆತ್ಮಕ್ಕೆ ಚಿರಶಾಂತಿ‌ ದೊರಕಲಿ‌ ಮತ್ತು ಅವರ ಕುಟುಂಬದ ಸದಸ್ಯರಿಗೆ ಅಗಲಿಕೆಯ ನೋವನ್ನು ಸಹಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಓಂ ಶಾಂತಿಃ ಎಂದು ಸಂತಾಪ ಸೂಚಿಸಿದ್ದಾರೆ.

ಡಿಸಿಎಂ ಸವದಿ ಶೋಕ:ಒಂದರ ಮೇಲೊಂದು ಆಘಾತಕಾರಿ ಸುದ್ದಿ ಕೇಳಿಬರುತ್ತಿರುವುದು ದುರ್ದೈವದ ಸಂಗತಿ. ಇಂದು ಬಸವಕಲ್ಯಾಣ ಕ್ಷೇತ್ರದ ಶಾಸಕ ಮಿತ್ರರಾದ ನಾರಾಯಣರಾವ್ ಅವರ ನಿಧನದ ವಾರ್ತೆ ನಮ್ಮನ್ನು ದಿಗ್ಭ್ರಮೆಗೊಳಿಸಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಅತ್ಯಂತ ಸರಳ ಮತ್ತು ಸಜ್ಜನ ವ್ಯಕ್ತಿತ್ವದವರಾಗಿದ್ದ ನಾರಾಯಣರಾವ್ ಅವರು ಸದನದಲ್ಲಿ ಬಡವರ ಪರವಾಗಿ ಧ್ವನಿ ಎತ್ತುತ್ತಿದ್ದರು. ಅವರ ನಡೆನುಡಿಗಳಲ್ಲಿ ಪ್ರಾಮಾಣಿಕತೆ, ಸೇವಾ ಮನೋಭಾವಗಳು ವ್ಯಕ್ತವಾಗುತ್ತಿದ್ದವು. ಮೃತರ ಆತ್ಮಕ್ಕೆ ಭಗವಂತನು ಚಿರಶಾಂತಿ ಕರುಣಿಸಲಿ ಮತ್ತು ಅವರ ಕುಟುಂಬದವರಿಗೆ ಈ ದುಃಖವನ್ನು ತಡೆದುಕೊಳ್ಳುವಂತಹ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸಂದೇಶದ ಮೂಲಕ ತಿಳಿಸಿದ್ದಾರೆ.

ABOUT THE AUTHOR

...view details