ಕರ್ನಾಟಕ

karnataka

By

Published : Jun 15, 2023, 7:42 PM IST

Updated : Jun 15, 2023, 8:59 PM IST

ETV Bharat / state

Textbook Revision : ಪಠ್ಯ ಪರಿಷ್ಕರಣೆ ಬಗ್ಗೆ ಬೊಮ್ಮಾಯಿ, ಸುನೀಲ್ ಕುಮಾರ್, ತೇಜಸ್ವಿ ಸೂರ್ಯ ಕಿಡಿ

ರಾಜ್ಯ ಸರ್ಕಾರವು ಪಠ್ಯ ಪರಿಷ್ಕರಣೆ ಮಾಡಿರುವ ಬಗ್ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ವಿ ಸುನಿಲ್ ಕುಮಾರ್ ಹಾಗೂ ಸಂಸದ ತೇಜಸ್ವಿ ಸೂರ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Sunil Kumar
ಮಾಜಿ ಸಚಿವ ವಿ. ಸುನಿಲ್ ಕುಮಾರ್

ಬೆಂಗಳೂರು: ''ರಾಜ್ಯದಲ್ಲಿ ‌ಮುಂಗಾರು ವೈಫಲ್ಯವಾಗಿ ಹಲವಾರು ಗ್ರಾಮದಲ್ಲಿ ಕುಡಿಯುವ ನಿರಿನ ಹಾಹಾಕಾರ ಉಂಟಾಗಿದೆ, ಅಂತರ್ಜಲ ಕುಸಿದಿದೆ. ರೈತರ ಪಾಲಿಗೆ ಮುಂಗಾರು ವೈಫಲ್ಯ ಬಹಳ ದೊಡ್ಡ ಹೊಡೆತ ಕೊಟ್ಟಿದೆ. ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುವ ಬದಲು, ದ್ವೇಷದ ತೀರ್ಮಾನಗಳನ್ನು ತೆಗೆದುಕೊಂಡು ಸಂಕಷ್ಟದಲ್ಲಿರುವ ಕರ್ನಾಟಕದ ಜನರಿಗೆ ಈ ಸರ್ಕಾರ ಶಾಪವಾಗಿದೆ'' ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.

ಈ ಕುರಿತು ಟ್ಚೀಟ್ ಮಾಡಿರುವ ಅವರು, ''ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದ್ವೇಷದ ಹಾಗೂ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ. ಹಿಂದಿನ ಸರ್ಕಾರದ ತೀರ್ಮಾನಗಳನ್ನು ರದ್ದು ಮಾಡುವುದನ್ನೇ ತನ್ನ ಸಾಧನೆ ಎನ್ನುವಂತೆ ನಡೆದುಕೊಳ್ಳುತ್ತಿದೆ. ಸಮಾಜಕ್ಕೆ ಮಾರಕವಾಗಿದ್ದ ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಮಾಡುವ ತೀರ್ಮಾನ ತೆಗೆದುಕೊಂಡು ಯಾರ ಓಲೈಕೆ ಮಾಡುತ್ತಿದೆ. ಹೈಕಮಾಂಡ್ ಹಂಗಿನಲ್ಲಿ ಅಧಿಕಾರ ನಡೆಸುತ್ತಿರುವ ಸಿದ್ದರಾಮಯ್ಯ ರಾಜ್ಯದ ಜನರ ಹಿತಾಸಕ್ತಿಗಿಂತ ಹೈಕಮಾಂಡ್ ಓಲೈಕೆಗೆ ಆದ್ಯತೆ ನೀಡುತ್ತಿರುವಂತಿದೆ'' ಎಂದು ಆರೋಪಿಸಿದ್ದಾರೆ.

''ಪಠ್ಯ ಪುಸ್ತಕವನ್ನೂ ಪರಿಷ್ಕರಣೆಯ ಹೆಸರಲ್ಲಿ ರಾಷ್ಟ್ರ ಭಕ್ತ ಸಂಘಟನೆ ಸ್ಥಾಪಿಸಿ, ಎಲ್ಲರಲ್ಲೂ ದೇಶಭಕ್ತಿ ಬೆಳೆಯಲು ಕಾರಣವಾಗುವಂತಹ ಆರ್​ಎಸ್​ಎಸ್ ಸಂಘಟನೆ ಸ್ಥಾಪಿಸಿರುವ ಡಾ. ಕೇಶವ ಬಲರಾಮ್ ಹೆಡ್ಗೇವಾರ್​ ಹಾಗೂ ಸಾವರ್ಕರ್ ಅವರ ಕುರಿತ ಪಠ್ಯವನ್ನು ತೆಗೆದು ಹಾಕಲು ತೀರ್ಮಾನ ತೆಗೆದುಕೊಂಡಿರುವುದು ದೇಶದ್ರೋಹಕ್ಕೆ ಸಮಾನ'' ಎಂದು ಹೇಳಿದ್ದಾರೆ.

ವಿ ಸುನಿಲ್ ಕುಮಾರ್ ಕಿಡಿ: ''ಸಾರ್ವರ್ಕರ್ ಹಾಗೂ ಹೆಡ್ಗೇವಾರ್ ಅವರ ಪಾಠಗಳನ್ನು ಪಠ್ಯ ಪುಸ್ತಕದಿಂದ ಕೈ ಬಿಟ್ಟಿರುವ ಕಾಂಗ್ರೆಸ್ ಸರ್ಕಾರ ಲೋಕಸಭೆ ಸ್ಥಾನದಿಂದ ಅನರ್ಹಗೊಂಡಿರುವ ವಿಫಲ ನಾಯಕನ ಹೆಸರಿನಲ್ಲಿ‌ ಮಕ್ಕಳಿಗೆ ಪಠ್ಯ ರೂಪಿಸುತ್ತದೆಯೇ? ಪ್ರಣಾಳಿಕೆಯ ಭರವಸೆ ಜಾರಿಗೆ ದಿನಾಂಕ ಗ್ಯಾರಂಟಿಯಾಗದ ಕಾರಣಕ್ಕೆ ಮತಾಂತರ ನಿಷೇಧ ಕಾಯ್ದೆ ರದ್ದುಪಡಿಸಿ ಸಾರ್ವಜನಿಕರ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿದ್ದೀರಾ?'' ಎಂದು ಮಾಜಿ ಸಚಿವ ವಿ ಸುನಿಲ್ ಕುಮಾರ್ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಸಂಪುಟದಲ್ಲಿ ತೆಗೆದುಕೊಂಡ ಈ ಎರಡು ನಿರ್ಣಯದ ವಿರುದ್ಧ ಪತ್ರಿಕಾ ಹೇಳಿಕೆ ಮೂಲಕ ಕಿಡಿಕಾರಿರುವ ಅವರು, ''ದೇಶಭಕ್ತ ಸ್ವಾತಂತ್ರ್ಯ ಹೋರಾಟಗಾರರ ಪಠ್ಯ ತೆಗೆಯಿರಿ ಎಂದು ನಕಲಿ ಗಾಂಧಿ ಪಾರಿವಾರ ನೀಡಿದ ಆದೇಶವನ್ನು ಪಾಲನೆ ಮಾಡುತ್ತಿದ್ದೀರಾ?'' ಎಂದು ಪ್ರಶ್ನಿಸಿದ್ದಾರೆ.

''ಮಂಗಳೂರು ಕುಕ್ಕರ್ ಸ್ಫೋಟದ ಆರೋಪಿಗೂ ದೇಶಭಕ್ತರ ಪಠ್ಯದ ಸಾಲಿನಲ್ಲಿ ಅವಕಾಶ ನೀಡಬಹುದು. ವಿದ್ಯಾರ್ಥಿಗಳು ಹಾಗೂ ಸಮಾಜದ ಹಿತದೃಷ್ಟಿಯಿಂದ ಕಾಂಗ್ರೆಸ್ ಸರ್ಕಾರದ ಈ‌ ನೀತಿಯ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ'' ಎಂದು ಎಚ್ಚರಿಕೆ ನೀಡಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತಾಂತರ ನಿಷೇಧ ಕಾಯ್ದೆ ವಾಪಸ್ ತೆಗದುಕೊಳ್ಳುತ್ತದೆ ಎಂದು ನಾವು ಮೊದಲೇ ಎಚ್ಚರಿಸಿದ್ದೆವು. ಈಗ ಅದನ್ನು ನಿಜ‌ ಮಾಡುತ್ತಿದೆ. ಸಮವಸ್ತ್ರ ಸಂಹಿತೆಯನ್ನು ಬದಿಗಿಟ್ಟಿದೆ. ಇಡೀ ರಾಜ್ಯಕ್ಕೆ ಹಿಜಾಬ್ ತೊಡಿಸುವ ಹುನ್ನಾರ ನಡೆಸಿದೆ'' ಎಂದು ಆರೋಪಿಸಿದ್ದಾರೆ.

ಅಕ್ಕಿ ಖರೀದಿಸಿ ವಿತರಿಸಿ ಎಂದು ಟ್ವೀಟ್ ಮಾಡಿದ ತೇಜಸ್ವಿ ಸೂರ್ಯ:''ಯುಪಿಯಲ್ಲಿನ ಬಿಜೆಪಿ ಸರ್ಕಾರದಂತೆ ಕರ್ನಾಟಕದ ಕಾಂಗ್ರೆಸ್ ಸರ್ಕಾರವು, ಮುಕ್ತ ಮಾರುಕಟ್ಟೆಯಿಂದ ಆಹಾರ ಧಾನ್ಯಗಳನ್ನು ಖರೀದಿಸಬೇಕು ಮತ್ತು ಜನರಿಗೆ ನೀಡಿದ ಭರವಸೆಯನ್ನು ಈಡೇರಿಸಬೇಕು'' ಎಂದು ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ತೇಜಸ್ವಿ ಸೂರ್ಯ, ''ಕಾಂಗ್ರೆಸ್ ಸುಳ್ಳುಗಳನ್ನು ಹೇಳುವುದನ್ನು ನಿಲ್ಲಿಸಬೇಕು. ಮೋದಿ ಸರ್ಕಾರವು ಈಗಾಗಲೇ ಎನ್ಎಫ್ಎಸ್ಎ ಅಡಿಯಲ್ಲಿ ಎಲ್ಲಾ ರಾಜ್ಯಗಳ ಜನರಿಗೆ 'ಉಚಿತ' 5 ಕೆಜಿ ಗೋಧಿ/ ಅಕ್ಕಿಯನ್ನು ನೀಡುತ್ತಿದೆ. ಕರ್ನಾಟಕದ ಜನರು ಈ ಉಚಿತ 5 ಕೆಜಿ ಅಕ್ಕಿಯನ್ನು ಕೇಂದ್ರದಿಂದ ಪಡೆಯುವುದನ್ನು ಮುಂದುವರಿಸುತ್ತಾರೆ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಸಿದ್ದರಾಮಯ್ಯ ಭರವಸೆ ನೀಡಿದ ಹಿನ್ನೆಲೆ, ಹೆಚ್ಚುವರಿ 5 ಕೆಜಿ ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಿಂದ ಖರೀದಿಸಿ, ನಿಮ್ಮನ್ನು ಯಾರೂ ಕೂಡ ತಡೆಯುತ್ತಿಲ್ಲ'' ಎಂದು ಸ್ಪಷ್ಟಪಡಿಸಿದ್ದಾರೆ.

ರಾಜ್ಯಗಳಿಗೆ ಒಎಂಎಸ್ಎಸ್ ಅನ್ನು ಸ್ಥಗಿತಗೊಳಿಸುವುದಕ್ಕೆ ಸಂಬಂಧಿಸಿದಂತೆ, ಈ ಕ್ರಮವು ಬಿಜೆಪಿ ಆಡಳಿತವಿರುವ ರಾಜ್ಯಗಳು ಸೇರಿದಂತೆ ಎಲ್ಲಾ ರಾಜ್ಯಗಳಿಗೆ ಸಮಾನವಾಗಿ ಅನ್ವಯಿಸುತ್ತದೆ. ತಮ್ಮದೇ ಆದ ಆಹಾರ ಧಾನ್ಯ ಜಿಲ್ಲೆ ಯೋಜನೆಯನ್ನು ಹೊಂದಿರುವ ಯುಪಿ ಸೇರಿದಂತೆ ಹಲವು ಬಿಜೆಪಿ ರಾಜ್ಯಗಳು ಮುಕ್ತ ಮಾರುಕಟ್ಟೆಯಿಂದ ಖರೀದಿಸಬೇಕಾಗುತ್ತದೆ. ಇದು ಕರ್ನಾಟಕವನ್ನು ಒಕ್ಕಲೆಬ್ಬಿಸುವ ಮತ್ತು ತಾರತಮ್ಯ ಮಾಡುವ ಪ್ರಕರಣ ಖಂಡಿತ ಅಲ್ಲ. ಕೇಂದ್ರದ ಸಬ್ಸಿಡಿ ಅಕ್ಕಿಯನ್ನು ವಿತರಿಸಿ ತಮ್ಮದು ಎಂದು ಹೇಳಿಕೊಳ್ಳಲಾಗದೆ ಸಿದ್ದರಾಮಯ್ಯ ಈಗ ಅಸಮಾಧಾನಗೊಂಡಿದ್ದಾರೆ ಎಂದು ಟೀಕಿಸಿದರು.

ಇದನ್ನೂ ಓದಿ:ಸಂಪುಟ ಸಭೆಯ ಎಲ್ಲ ನಿರ್ಧಾರಗಳೂ ಜನ ವಿರೋಧಿ, ಜನರಿಂದಲೇ ತಕ್ಕ ಪಾಠ: ಅಶ್ವತ್ಥನಾರಾಯಣ ಗರಂ

Last Updated : Jun 15, 2023, 8:59 PM IST

ABOUT THE AUTHOR

...view details