ಬೆಂಗಳೂರು: ಕೆಂಗೇರಿ ಮೆಟ್ರೋ ನಿಲ್ದಾಣ ಉದ್ಘಾಟನಾ ಸಮಾರಂಭದಲ್ಲಿ ಕನ್ನಡವನ್ನು ಕಡೆಗಣಿಸಿರುವುದು ಅಕ್ಷಮ್ಯ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟೀಕಿಸಿ ಟ್ವೀಟ್ ಮಾಡಿದ್ದಾರೆ.
ಕೆಂಗೇರಿ ನೇರಳೆ ಮಾರ್ಗದ ನಮ್ಮ ಮೆಟ್ರೋ ಉದ್ಘಾಟನೆ ಕಾರ್ಯಕ್ರಮದಲ್ಲಿ ಕನ್ನಡವನ್ನು ಕಡೆಗಣಿಸಿರುವುದು ಕರ್ನಾಟಕಕ್ಕೆ ಮಾಡಿದ ಅವಮಾನ. ಸರ್ಕಾರಿ ಕಾರ್ಯಕ್ರಮದಲ್ಲೇ ಕನ್ನಡ ಕಡೆಗಣಿಸಿರುವ ಉದ್ದಟತನ ಸಹಿಸಲು ಸಾಧ್ಯವಿಲ್ಲ. ನಮ್ಮ ಮೆಟ್ರೋ ಯೋಜನೆ ಕೇಂದ್ರ ಹಾಗೂ ರಾಜ್ಯದ ಸಹಭಾಗಿತ್ವದ ಯೋಜನೆ. ಹೀಗಿರುವಾಗ ಕನ್ನಡಕ್ಕೂ ಆದ್ಯತೆ ಇರಬೇಕಲ್ಲವೆ.? ಎಂದಿದ್ದಾರೆ.
ಬಿಎಂಆರ್ಸಿಎಲ್ ಮೊದಲಿನಿಂದಲೂ ಕನ್ನಡಕ್ಕೆ ಅಪಮಾನ ಮಾಡುವ ಕೆಲಸ ಮಾಡುತ್ತಿದೆ. ದುರುದ್ದೇಶದಿಂದಲೇ ಇಂದಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣಿಸಲಾಗಿದೆ. ದುರಂತವೆಂದರೆ, ಸಿಎಂ ಬಸವರಾಜ ಬೊಮ್ಮಾಯಿಯವರಾದರೂ ಕನ್ನಡದ ಭಾಷಾಭಿಮಾನ ತೋರಬೇಕಿತ್ತು. ಆದರೆ ಕೇಂದ್ರದವರನ್ನು ಮೆಚ್ಚಿಸಲು ಕಾರ್ಯಕ್ರಮವನ್ನು ಇಂಗ್ಲೀಷ್ಮಯ ಮಾಡಲು ಅವಕಾಶ ಕೊಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಏಕ ಭಾಷೆ-ಏಕ ರಾಷ್ಟ್ರ ಪರಿಕಲ್ಪನೆಯಲ್ಲಿ ಪ್ರಾದೇಶಿಕ ಭಾಷೆಗಳನ್ನು ದಮನ ಮಾಡುತ್ತಿದೆ. ಇಂದಿನ ಮೆಟ್ರೋ ಉದ್ಘಾಟನೆಯಲ್ಲಿ ಕನ್ನಡಕ್ಕೆ ಅಪಮಾನ ಮಾಡಿದ್ದೇ ಈ ಅಜೆಂಡಾದಿಂದ. ಆದರೆ ಕನ್ನಡವನ್ನು ಕೊಲೆ ಮಾಡುವ ಪ್ರಯತ್ನವನ್ನು ಕನ್ನಡಿಗರು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಕನ್ನಡ ಕೇವಲ ಭಾಷೆಯಲ್ಲ, ಅದು ಕನ್ನಡಿಗರ ಆತ್ಮ ದಿನೇಶ್ ಗುಂಡೂರಾವ್ ಟ್ವೀಟ್ ಎಂದಿದ್ದಾರೆ.
ಇದನ್ನೂ ಓದಿ: 'ನಮ್ಮ ಮೆಟ್ರೋ' ಯೋಜನೆ ಸ್ಥಿತಿಗತಿ ಹೇಗಿದೆ? ಯಾವ್ಯಾವ ಕಾಮಗಾರಿ ಎಷ್ಟು ಪೂರ್ಣ? ಸಂಪೂರ್ಣ ವರದಿ..