ಕರ್ನಾಟಕ

karnataka

By ETV Bharat Karnataka Team

Published : Jan 7, 2024, 6:43 PM IST

ETV Bharat / state

ಈಗಿನ ಕಾಂಗ್ರೆಸ್ ಈಸ್ಟ್ ಇಂಡಿಯಾ ಕಂಪನಿ ತರ ದರೋಡೆ ಮುಂದುವರಿಸುತ್ತಿದೆ: ಹೆಚ್​ ಡಿ ಕುಮಾರಸ್ವಾಮಿ

ನಾನಂತೂ ಕೇಂದ್ರ ಸಚಿವನಾಗುವ ಬಗ್ಗೆ ಯೋಚನೆ ಮಾಡಿಲ್ಲ ಎಂದು ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ಹೇಳಿದ್ದಾರೆ.

Etv Bharat
Etv Bharat

ಬೆಂಗಳೂರು: "ಈಸ್ಟ್ ಇಂಡಿಯಾ ಕಂಪನಿ ತರ ದರೋಡೆಯನ್ನು ಈಗಿನ ಕಾಂಗ್ರೆಸ್ ಮುಂದುವರಿಸಿದೆ" ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಪದ್ಮನಾಭನಗರದಲ್ಲಿ ಮಾತನಾಡಿದ ಅವರು, "ಹಿಂದಿನ ಕಾಂಗ್ರೆಸ್ ರಾಜಕಾರಣಿಗಳು ಆಸ್ತಿ ಮಾರಿ ಪಕ್ಷ, ದೇಶ ಕಟ್ಟಿದ್ದರು. ಆದರೆ ಈಗಿನವರು ಈಸ್ಟ್​ ಇಂಡಿಯಾ ಕಂಪನಿ ಲೂಟಿ ಮಾಡಿದ ಹಾಗೆ ಲೂಟಿ ಮುಂದುವರಿಸಿದ್ದಾರೆ" ಎಂದು ಆರೋಪಿಸಿದ್ದಾರೆ.

ಕೇಂದ್ರ ಸಚಿವ ಸ್ಥಾನದ ಬಗ್ಗೆ ಪ್ರತಿಕ್ರಿಯಿಸಿದ ಅವರು, "ನಾನು ಕೇಂದ್ರ ಸಚಿವ ಸ್ಥಾನದ ಬಗ್ಗೆ ಚಿಂತೆ ಮಾಡಿಲ್ಲ. ರಾಜ್ಯದಲ್ಲಿ 28ಕ್ಕೆ 28 ಸ್ಥಾನವನ್ನು ಮೈತ್ರಿ ಹಿನ್ನೆಲೆಯಲ್ಲಿ ಗೆಲ್ಲಬೇಕು ಎಂಬುದಷ್ಟೇ ನಮ್ಮ ಯೋಚನೆ. ಈಗ ಕೇಂದ್ರದಲ್ಲಿ ಮಂತ್ರಿ ಆಗಿ ಏನು ಮಾಡ್ತೀರಿ?. ಮಾಧ್ಯಮಗಳಲ್ಲೇ ದೊಡ್ಡ ಸುದ್ದಿಯಾಗಿದೆ. ಕೋಡ್ ಆಫ್ ಕಂಡಕ್ಟ್ ಬಂದರೆ ಕೆಲಸ ಮಾಡುವುದಕ್ಕಾಗುತ್ತದಾ?. ಈಗ ಕೇಂದ್ರದ ಮಂತ್ರಿ ಆಗಿ ಏನು ಮಾಡುವುದು?. ನಾನಂತೂ ಆ ಬಗ್ಗೆ ಯೋಚನೆ ಮಾಡಿಲ್ಲ, ಮಾಹಿತಿಯೂ ಇಲ್ಲ. ಕಾಂಗ್ರೆಸ್ ನಾಯಕರ ದುರಹಂಕಾರ ತಡೆಯಬೇಕಷ್ಟೇ ನಮಗೆ" ಎಂದರು.

"ಪಾಪ ಜೆಡಿಎಸ್ ಮುಗಿಸುವುದಷ್ಟೇ ಇಬ್ಬರು ನಾಯಕರ ಉದ್ದೇಶ ತಾನೇ?. ವಿರೋಧಿಗಳಿಗೂ ಸಹ ದೇವೇಗೌಡರು ಎಂದೂ ಶಾಪ ಕೊಟ್ಟವರಲ್ಲ. ನಾಡಿನ ಜನತೆ ಅವರ ನಡವಳಿಕೆ ಸಮಾಪ್ತಿ ಮಾಡ್ತಾರೆ ಅಷ್ಟೇ ಎಂದು ದೇವೇಗೌಡರು ಹೇಳಿದ್ದಾರೆ. ಈಗಿನ ಕಾಂಗ್ರೆಸ್ ಅಧ್ಯಕ್ಷರು ಕಾಂಗ್ರೆಸ್ 135 ವರ್ಷಗಳ ಇತಿಹಾಸದ ಪಕ್ಷ ಅಂದಿದ್ದಾರಲ್ಲ. ಇವರ ಈಗಿನ ಇತಿಹಾಸ ಏನು?. ಗಾಂಧಿ ಕಟ್ಟಿದ ಕಾಂಗ್ರೆಸ್​ನ ಆಗಿನ ಇತಿಹಾಸ ಬೇರೆ" ಎಂದು ಟೀಕಿಸಿದರು.

ಕುಮಾರಸ್ವಾಮಿ ಅವರನ್ನು ಭೇಟಿಯಾದ ಸಿ ಟಿ ರವಿ

ಎಲ್ಲಿ ಸ್ಪರ್ಧೆ ಅಂತ ಆಲೋಚನೆ ಮಾಡಿಲ್ಲ: "ಮೈತ್ರಿ ಹಿನ್ನೆಲೆಯಲ್ಲಿ ಹಲವಾರು ನಾಯಕರು ಭೇಟಿ ಆಗ್ತಿದ್ದಾರೆ. ಸಿ ಟಿ ರವಿ ಸೇರಿ ಹಲವರು ಸೌಹಾರ್ದತೆಯಿಂದ ಕೆಲಸ ಮಾಡಬೇಕು ಅಂತ ಭೇಟಿ ಆಗಿದ್ದಾರೆ. ಅಗತ್ಯ ಬಿದ್ದರೆ, ಬಿಜೆಪಿಯಲ್ಲಿ ಮುಂದುವರಿದರೆ ಸುಮಲತಾ ಅವರನ್ನೂ ಭೇಟಿ ಆಗ್ತೇನೆ. ಎಲ್ಲಿ ಸ್ಪರ್ಧೆ ಮಾಡಬೇಕು ಎಂಬ ಬಗ್ಗೆ ನಾನು ಆಲೋಚನೆ ಮಾಡಿಲ್ಲ. ಕೆಲವರು ತುಮಕೂರು ಅಂತಿದ್ದೀರಿ, ಮಂಡ್ಯ ಅಂತೀರಾ. ಬೆಂಗಳೂರು ಗ್ರಾಮಾಂತರದಲ್ಲಿ ನಾನು ಸ್ಪರ್ಧೆ ಮಾಡಬಹುದು ಅಂತ ಪಾಪ ಕೆಲವರು ನಿದ್ದೆಯೇ ಮಾಡ್ತಿಲ್ಲ" ಎಂದು ಹೆಚ್​ಡಿಕೆ ವ್ಯಂಗ್ಯವಾಡಿದರು.

ದೇವೇಗೌಡರನ್ನು ಭೇಟಿಯಾದ ಕೇಂದ್ರ ಸಚಿವ ಅರ್ಜುನ್ ಮುಂಡಾ:ಕೇಂದ್ರ ಕೃಷಿ ಮತ್ತು ಬುಡಕಟ್ಟು ವ್ಯವಹಾರಗಳ ಖಾತೆ ಸಚಿವ ಅರ್ಜುನ್ ಮುಂಡಾ ಅವರು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರನ್ನು ಪದ್ಮನಾಭನಗರದ ನಿವಾಸದಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಉಪಸ್ಥಿತರಿದ್ದರು.

ದೇವೇಗೌಡರನ್ನು ಭೇಟಿಯಾದ ಕೇಂದ್ರ ಸಚಿವ ಅರ್ಜುನ್ ಮುಂಡ

ಕೃಷಿ ಇಲಾಖೆ ಕಾರ್ಯಕ್ರಮಕ್ಕೆ ಬಂದವರು ನಮ್ಮ ಮನೆಗೆ ಬಂದಿದ್ದಾರೆ. ಇದೊಂದು ಸೌಹಾರ್ದತೆಯ ಭೇಟಿಯಾಗಿದೆ.‌ ಕೊಬ್ಬರಿಗೆ ರಾಜ್ಯದಲ್ಲಿ ಇರುವ ಸಮಸ್ಯೆಗಳಿಂದ ರೈತರು ನಿರಾಸೆಯಲ್ಲಿದ್ದಾರೆ. ಪ್ರಧಾನಿ ಭೇಟಿ ಮಾಡಿದ ಸಂದರ್ಭದಲ್ಲಿ 250 ರೂ. ಜಾಸ್ತಿ ಮಾಡುವಂತೆ ಮನವಿ ಮಾಡಿದ್ದೆವು. ಹಲವು ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಕಾಡುಗೊಲ್ಲ ಸಮಾಜದ ಬೇಡಿಕೆ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಕುಮಾರಸ್ವಾಮಿ ತಿಳಿಸಿದರು.

ಹೆಚ್​ಡಿಕೆ - ಸಿ ಟಿ ರವಿ ಭೇಟಿ:ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹಾಗೂ ಮಾಜಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಪರಸ್ಪರ ಭೇಟಿಯಾದರು. ಬಿಡದಿಯ ಕೆರತುಗಾನಹಳ್ಳಿಯಲ್ಲಿರುವ ತೋಟದ ಮನೆಯಲ್ಲಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ ಸಿ ಟಿ ರವಿ, ಪ್ರಸ್ತುತ ರಾಜ್ಯ ರಾಜಕಾರಣದ ಸ್ಥಿತಿ, ಮುಂಬರುವ ಲೋಕಸಭಾ ಚುನಾವಣಾ ತಯಾರಿ ಕುರಿತು ಚರ್ಚೆ ನಡೆಸಿದ್ದಾರೆ.

ಸದ್ಯದಲ್ಲೇ ಸೀಟು ಹಂಚಿಕೆ‌ ಸಂಬಂಧ ಬಿಜೆಪಿ ಹೈಕಮಾಂಡ್ ಜೊತೆ ಚರ್ಚೆ ನಡೆಸಲು ಮಾಜಿ ಸಿಎಂ ಕುಮಾರಸ್ವಾಮಿ ದೆಹಲಿಗೆ ತೆರಳಲಿದ್ದು, ಈ ಹಿನ್ನೆಲೆ ಉಭಯ ನಾಯಕರ ಭೇಟಿ ಮಹತ್ವ ಪಡೆದಿದೆ. ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳ ಲೋಕಸಭೆಯ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಇದನ್ನೂ ಓದಿ:ಸಿದ್ದರಾಮಯ್ಯ ತಾಲಿಬಾನ್ ರೀತಿ ಸರ್ಕಾರ ಮಾಡಲು ನಿರ್ಧರಿಸಿದಂತಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ABOUT THE AUTHOR

...view details