ಕರ್ನಾಟಕ

karnataka

ETV Bharat / state

ಅಂದು ಕಾಂಗ್ರೆಸ್ ಜೊತೆ ಹೋಗುವುದಕ್ಕಿಂತ ಬಿಜೆಪಿ ಜೊತೆ ಹೋಗಿದ್ದರೆ ಐದು ವರ್ಷ ಮುಖ್ಯಮಂತ್ರಿಯಾಗಿರುತ್ತಿದ್ದೆ: ಹೆಚ್ ​ಡಿ ಕುಮಾರಸ್ವಾಮಿ

ಕಳೆದ ಬಾರಿ ಅಮಿತ್ ಶಾ ಫೋನ್ ಮಾಡಿ ನೀವೆ ಸಿಎಂ ಆಗಿ ಎಂದಿದ್ದರು. ಅವತ್ತು ನಾನು ಒಪ್ಪಿದ್ದರೆ 5 ವರ್ಷ ಸಿಎಂ ಆಗಿರುತ್ತಿದ್ದೆ. ಆದರೆ ದೇವೇಗೌಡರಿಗೆ ನೋವಾಗುತ್ತದೆ ಎಂದು ಹೋಗಲಿಲ್ಲ ಅಂತಾ ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ಹೇಳಿದರು.

By ETV Bharat Karnataka Team

Published : Sep 27, 2023, 5:51 PM IST

former-c-m-hd-kumaraswamy-reaction-on-cm-post-in-last-election
ಕಾಂಗ್ರೆಸ್ ಜೊತೆ ಹೋಗುವುದಕ್ಕಿಂತ ಬಿಜೆಪಿ ಜೊತೆ ಹೋಗಿದ್ದರೆ ಐದು ವರ್ಷ ಮುಖ್ಯಮಂತ್ರಿಯಾಗಿರುತ್ತಿದ್ದೆ: ಹೆಚ್ ​ಡಿ ಕುಮಾರಸ್ವಾಮಿ

ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ

ಬೆಂಗಳೂರು: ಕಾಂಗ್ರೆಸ್ ಜೊತೆ ಸೇರಿ ಮೈತ್ರಿ ಸರ್ಕಾರ ರಚನೆ ಮಾಡುವ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ದೂರವಾಣಿ ಕರೆ ಮಾಡಿ ಬಿಜೆಪಿ ಜೊತೆ ಸರ್ಕಾರ ಮಾಡುವಂತೆ ಆಹ್ವಾನ ನೀಡಿದ್ದರು. ಆಗ ಹೋಗಿದ್ದರೆ ಐದು ವರ್ಷ ಸರ್ಕಾರ ಇರುತ್ತಿತ್ತು. ಮೈತ್ರಿ ಹೆಸರಿನಲ್ಲಿ ಹೆಚ್ ಡಿ ದೇವೇಗೌಡರ ಹೆಸರಿಗೆ ಕಳಂಕ ತರಲು ಯತ್ನಿಸಲಾಗುತ್ತಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದರು. ಪಕ್ಷದ ಕಚೇರಿ ಜೆಪಿ ಭವನದಲ್ಲಿಂದು ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಬಿಜೆಪಿ ಬಿ ಟೀಂ ಎಂದು ಹೇಳಿದ್ದಾರಲ್ಲ ಮಹಾನ್ ನಾಯಕರು. ಅವತ್ತು ಗುಲಾಂ ನಬಿ ಅಜಾದ್, ಗೆಹ್ಲೋಟ್ ಬಂದು ಹೇಳಿದ್ದರು, ಡಿ ಕೆ ಶಿವಕುಮಾರ್, ಪರಮೇಶ್ವರ್, ಸಿದ್ದರಾಮಯ್ಯ, ವೇಣುಗೋಪಾಲ್ ಮುಂದೆ ಅಶೋಕ್​ ಹೋಟೆಲ್​ನಲ್ಲಿ ನಮ್ಮ ಪಕ್ಷಕ್ಕೆ ಸಿಎಂ ಸ್ಥಾನ ಬೇಡ ಎಂದು. ಕುಮಾರಸ್ವಾಮಿ ಆರೋಗ್ಯ ಸರಿಯಿಲ್ಲ ಎಂದು ದೇವೇಗೌಡರು ಹೇಳಿದ್ದರು. ಆದರೆ ಕಾಂಗ್ರೆಸ್‌ ಹೈಕಮಾಂಡ್ ನೀವೇ ಸಿಎಂ ಆಗಬೇಕೆಂದು ಒತ್ತಾಯ ಮಾಡಿದ್ದರು. ಅವತ್ತು ಮಧ್ಯಾಹ್ನ ಅಮಿತ್ ಶಾ ಫೋನ್ ಮಾಡಿ ನೀವೇ ಸಿಎಂ ಆಗಿ ಎಂದಿದ್ದರು. ಅವತ್ತು ನಾನು ಒಪ್ಪಿದ್ದರೆ 5 ವರ್ಷ ಸಿಎಂ ಆಗಿರುತ್ತಿದ್ದೆ. ಆದರೆ ದೇವೇಗೌಡರಿಗೆ ನೋವಾಗುತ್ತದೆ ಅಂತಾ ಹೋಗಿಲಿಲ್ಲ ಎಂದರು.

ಮೈತ್ರಿ ಸರ್ಕಾರ ಪತನವಾಗುವ ಮುನ್ನ ಬಿಜೆಪಿಯ 5 ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದರು. ಒಂದು ವೇಳೆ ಆ 5 ಶಾಸಕರು ರಾಜೀನಾಮೆ ಕೊಟ್ಟರೆ, ನಮ್ಮ ಪಕ್ಷದ ಮತ್ತೆ ಐದು ಶಾಸಕರು ರಾಜೀನಾಮೆ ಕೊಡಲಿದ್ದಾರೆ ಎಂದು ಕಾಂಗ್ರೆಸ್ ನಾಯಕರೊಬ್ಬರು (ಈಗ ಮಂತ್ರಿಯಾಗಿದ್ದಾರೆ) ಹೇಳಿದ್ದರು. ಹೀಗೆ ಕಾಂಗ್ರೆಸ್ ಜಾತ್ಯತೀತ ಶಕ್ತಿಯನ್ನು ಉಳಿಸುವ ಬದಲು ನಾಶ ಮಾಡುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.

ಮೈತ್ರಿ ವಿಚಾರ ಮುಚ್ಚಿಟ್ಟಿಲ್ಲ: ಬಿಜೆಪಿ ಜೊತೆಗಿನ ಮೈತ್ರಿಗೆ ಸಂಬಂಧಿಸಿದ ಯಾವುದೇ ವಿಚಾರವನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಅವರಿಂದ ಮುಚ್ಚಿಟ್ಟಿಲ್ಲ ಎಂದು ಸ್ಪಷ್ಟಪಡಿಸಿದ ಹೆಚ್​ಡಿಕೆ, ಮೈತ್ರಿ ವಿಚಾರದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ಅವರ ಗಮನಕ್ಕೆ ತರಲಾಗಿದೆ ಎಂದು ಹೇಳಿದರು. ಕೇವಲ ಅಲ್ಪಸಂಖ್ಯಾತರಷ್ಟೇ ಅಲ್ಲ, ಸಮಸ್ತ ಕರ್ನಾಟಕದ ರಕ್ಷಣೆ ಮಾಡಲು ನಮ್ಮ ಪಕ್ಷ ಬದ್ಧವಾಗಿದೆ. ಎಲ್ಲ ಸಮುದಾಯದ ರಕ್ಷಣೆ ಮಾಡುತ್ತೇವೆ ಎಂದರು.

2004ರಿಂದಲೂ ಜೆಡಿಎಸ್ ಮುಗಿಸಲು ಕಾಂಗ್ರೆಸ್ ಪ್ರಯತ್ನ ಮಾಡಿದೆ. ಆಗ ಸಿದ್ದರಾಮಯ್ಯ ಅವರು ವೆಂಕಯ್ಯನಾಯ್ಡು ಅವರನ್ನು ಭೇಟಿ ಮಾಡಲು ಹೋಗಿದ್ದವರು. ಇವರೆಲ್ಲ ದೊಡ್ಡ ಜಾತ್ಯತೀತವಾದಿಗಳು?. ಇವರ ಬಗ್ಗೆ ಎಲ್ಲ ಗೊತ್ತಿದೆ. ಕಳೆದ 60 ವರ್ಷದಿಂದ ದೇವೇಗೌಡರು ಜಾತ್ಯತೀತ ಶಕ್ತಿಯನ್ನು ಉಳಿಸಲು ಹೋರಾಟ ಮಾಡುತ್ತಾ ಬಂದರು. ಆದರೆ ಕಾಂಗ್ರೆಸ್​ ನವರು ಮಾಡಿದ್ದೇನು?. ಅಲ್ಪಸಂಖ್ಯಾತರ ಬಗ್ಗೆ ಯಾವತ್ತೂ ಅಗೌರವಯುತವಾಗಿ ನಡೆದುಕೊಂಡಿಲ್ಲ ಎಂದು ಹೆಚ್​ಡಿಕೆ ಸ್ಪಷ್ಟಪಡಿಸಿದರು.

ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಬಲಾಢ್ಯವಾಗಿದ್ದರೆ ಮತ ಹಾಕುತ್ತಿರಲಿಲ್ಲ. ಅಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಹೋರಾಟವಿತ್ತು. 8 ತಿಂಗಳ ಕಾಲ ಪಂಚರತ್ನ ಕಾರ್ಯಕ್ರಮವನ್ನು ಜನರ ಮುಂದಿಟ್ಟು ಮತಯಾಚಿಸಿದರೂ ಜನರು ಮತ ಕೊಡಲಿಲ್ಲ. ಕಾವೇರಿ, ಕೃಷ್ಣ ವಿಚಾರದಲ್ಲಿ ದೇವೇಗೌಡರು ನೀಡಿರುವ ಕೊಡುಗೆಯಷ್ಟು, ಮತ್ತೊಬ್ಬರು ನೀಡಲು ಸಾಧ್ಯವಿಲ್ಲ. ಕಾವೇರಿ ಭಾಗದಲ್ಲಿ ರೈತರು ಉಳಿದಿದ್ದರೆ ಅದು ದೇವೇಗೌಡರಿಂದ ಮತ್ತು ಜೆಡಿಎಸ್ ನಿಂದ ಮಾತ್ರ ಸಾಧ್ಯ ಎಂದರು.

ಕಾಲು ಹಿಡಿಯುವ ದುರ್ಗತಿ ಜೆಡಿಎಸ್​ಗೆ ಬಂದಿಲ್ಲ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಾಲು ಹಿಡಿಯುವ ದುರ್ಗತಿ ಜೆಡಿಎಸ್​ಗೆ ಬಂದಿಲ್ಲ. ನಿಮ್ಮ ರಾಷ್ಟ್ರ ನಾಯಕರು ದೇವೇಗೌಡರ ಕಾಲು ಹಿಡಿಯಲು ಬಂದಿದ್ದರು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ತಿರುಗೇಟು ನೀಡಿದರು. ದೇವೇಗೌಡರು ರಾಜಸಭೆಯಲ್ಲಿ ಕಾವೇರಿ ಬಗ್ಗೆ ಏಕಾಂಗಿಯಾಗಿ ಮಾತನಾಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯಲ್ಲಿ ಏಕೆ ಮಾತನಾಡಲಿಲ್ಲ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಡಿಸಿಎಂ ಡಿ ಕೆ ಶಿವಕುಮಾರ್ ಅವರು ಕಾವೇರಿ ನೀರು ನಿರ್ವಹಣಾ ಸಮಿತಿ ಮಾಡಿರುವ ಶಿಫಾರಸ್ಸು ಸಂತಸ ತಂದಿದೆ ಎಂದು ಹೇಳಿದ್ದಾರೆ. ಮೆಟ್ಟೂರು ಜಲಾಶಯದಲ್ಲಿ 11 ಟಿಎಂಸಿ ಅಡಿ ನೀರಿದೆ. 7,231 ಕ್ಯೂಸೆಕ್​ ಒಳ ಹರಿವಿದ್ದರೆ, ಆರೂವರೆ ಸಾವಿರ ಕ್ಯೂಸೆಕ್​ ಹೊರ ಹರಿವಿದೆ. ಕೆಆರ್​ಎಸ್​ಗೆ ಮಳೆಯಾಗಿದ್ದರಿಂದ 7 ಸಾವಿರ ಕ್ಯೂಸೆಕ್​ ನಷ್ಟು ನೀರು ಬರುತ್ತಿತ್ತು. ಈಗ 5 ಸಾವಿರ ಕ್ಯೂಸೆಕ್​ಗೆ ಇಳಿದಿದೆ. ನಾವು ನೀರು ವಿಚಾರದಲ್ಲಿ ರಾಜಕೀಯ ಮಾಡುತ್ತಿಲ್ಲ. ಕಾಂಗ್ರೆಸ್ ನವರೇ ವಿಷಯಾಂತರ ಮಾಡುತ್ತಿದ್ದಾರೆ. ತಮಿಳುನಾಡಿನಲ್ಲಿ ಬೆಳೆ ಬೆಳೆಯುವ ಪ್ರದೇಶವನ್ನು ಸಾಕಷ್ಟು ವಿಸ್ತರಣೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:ಹೆಚ್​​ಡಿಕೆ-ಬಿಎಸ್ ವೈ ಮೈತ್ರಿ ಪ್ರತಿಭಟನೆಗೆ ಶುಭವಾಗಲಿ .. ಅದೇ ರೀತಿ ಒಗ್ಗಟ್ಟಾಗಿ ಕೇಂದ್ರದ ಮುಂದೆ ಕೇಳಲಿ: ಡಿಸಿಎಂ ಡಿ ಕೆ ಶಿವಕುಮಾರ್​

ABOUT THE AUTHOR

...view details