ಕರ್ನಾಟಕ

karnataka

ಅಂಬೇಡ್ಕರ್​ಗೆ ಅವಮಾನ ಆರೋಪ: ಜೈನ್ ವಿವಿ ವಿದ್ಯಾರ್ಥಿಗಳ ವಿರುದ್ಧ ಎಫ್ಐಆರ್, ತನಿಖೆಗೆ ಸಚಿವರ ಸೂಚನೆ

By

Published : Feb 12, 2023, 9:52 PM IST

Updated : Feb 12, 2023, 10:46 PM IST

ಜೈನ್ ವಿವಿ ವಿದ್ಯಾರ್ಥಿಗಳಿಂದ ಮಾಡಲಾಗಿದ್ದ ನಾಟಕದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್​ಗೆ ಅವಮಾನ ಆರೋಪ - ಕಾಲೇಜಿನ ಪ್ರಾಂಶುಪಾಲರು ಮತ್ತು ವಿದ್ಯಾರ್ಥಿಗಳು ಸೇರಿ ಇತರರ ವಿರುದ್ಧ ಎಫ್​ಐಆರ್​ - ಜಾತಿನಿಂದನೆ ಆರೋಪದಿಡಿ ಪ್ರಕರಣ ದಾಖಲು

FIR filed against Jain collage principal and others
ಅಂಬೇಡ್ಕರ್​ಗೆ ಅವಮಾನ ಆರೋಪ: ಜೈನ್ ಪ್ರಾಂಶುಪಾಲ ಸೇರಿ ಇತರರ ವಿರುದ್ಧ ಎಫ್ಐಆರ್ ದಾಖಲು..

ಬೆಂಗಳೂರು: ಜೈನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರದರ್ಶಿಸಿದ ನಾಟಕದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿ​ಗೆ ಅವಮಾನ ಮಾಡಿದ ಆರೋಪ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಧುಸೂದನ್ ನೀಡಿದ ದೂರಿನ‌ ಮೇರೆಗೆ ಕಾಲೇಜಿನ ಪ್ರಾಂಶುಪಾಲರು, ವಿದ್ಯಾರ್ಥಿಗಳು ಮತ್ತಿತರರ ವಿರುದ್ಧ ಜಾತಿನಿಂದನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಫೆಬ್ರವರಿ 8ರಂದು ನಿಮ್ಹಾನ್ಸ್ ಕನ್ ವೆಂಕ್ಷನ್ ಸೆಂಟರ್ ನಲ್ಲಿ ಜೈನ್ ವಿವಿಯಿಂದ ಹಮ್ಮಿಕೊಂಡಿದ್ದ ಫೆಸ್ಟ್ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವಮಾನಿಸುವ ರೀತಿಯಲ್ಲಿ ನಾಟಕ ಪ್ರದರ್ಶನ ಮಾಡಲಾಗಿದೆ ಎಂದು ಆರೋಪ ಕೇಳಿ ಬಂದಿದೆ. ಜೊತೆಗೆ ಇದರ ಸಂಭಾಷಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಈ ಸಂಬಂಧ ಕಾಲೇಜಿನ ವಿರುದ್ಧ ದಲಿತ ಸಂಘಟನೆಗಳಿಂದ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಅಲ್ಲದೇ, ದಲಿತ ಸಂಘಟನೆಗಳ ಮುಖಂಡರು ಪೊಲೀಸರಿಗೆ ದೂರು ನೀಡಿದ್ದರು. ಜೊತೆಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕೂಡ ಪೊಲೀಸರಿಗೆ ದೂರು ಕೊಟ್ಟಿದ್ದರು. ಹೀಗಾಗಿ ಅಧಿಕಾರಿಯ ದೂರಿನ ಮೇರೆಗೆ ಪ್ರಾಂಶುಪಾಲರು, ನಾಟಕ ಪ್ರದರ್ಶಿಸಿದ ವಿದ್ಯಾರ್ಥಿಗಳ ಮತ್ತು ಇತರರ ವಿರುದ್ಧ 20ಕ್ಕೂ ಹೆಚ್ಚು ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖೆಗೆ ಉನ್ನತ ಶಿಕ್ಷಣ ಸಚಿವರ ಸೂಚನೆ:ಮತ್ತೊಂದೆಡೆ, ಅಂಬೇಡ್ಕರ್ ಕುರಿತು ಪ್ರದರ್ಶಿಸಿದ ನಾಟಕದ ಕುರಿತು ಸೂಕ್ತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಉನ್ನತ ಶಿಕ್ಷಣ ಸಚಿವ ಡಾ. ಸಿಎನ್​ ಅಶ್ವತ್ಥನಾರಾಯಣ ಅವರು ತಮ್ಮ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಜೈನ್ ಕಾಲೇಜಿನಲ್ಲಿ ನಡೆದಿದೆ ಎನ್ನಲಾಗುತ್ತಿರುವ ಘಟನೆ ದುರದೃಷ್ಟಕರ. ಬಾಬಾಸಾಹೇಬ್ ಅಂಬೇಡ್ಕರ್ ಅವರು ದೇಶದ ಸಂವಿಧಾನ ಶಿಲ್ಪಿಗಳಾಗಿದ್ದಾರೆ. ಅವರನ್ನು ಇಡೀ ಜಗತ್ತೇ ಗೌರವಿಸುತ್ತಿದೆ. ಅಂಥವರನ್ನು ಅಪಮಾನಿಸಿದ್ದರೆ, ಅದನ್ನು ಒಪ್ಪುವುದು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಘಟನೆಯ ಬಗ್ಗೆ ಮಾಧ್ಯಮಗಳಲ್ಲಿ ಬಂದಿರುವ ವರದಿಗಳನ್ನು ಗಮನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಶನಿವಾರವೇ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚನೆ ಕೊಡಲಾಗಿದೆ. ಅವರು ಸದ್ಯದಲ್ಲೇ ವರದಿ ಕೊಡಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ. ಇತ್ತ, ಈಗಾಗಲೇ ನಾಟಕದಲ್ಲಿ ಅಭಿನಯಿಸಿದ ಎಲ್ಲ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿರುವ ಜೈನ್ ವಿಶ್ವವಿದ್ಯಾಲಯವು ತನಿಖೆಗೆ ಶಿಸ್ತು ಸಮಿತಿ ರಚಿಸಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಜ್ಯುವೆಲ್ಲರಿಯಿಂದ 100 ಕೆಜಿ ಚಿನ್ನ, ಬೆಳ್ಳಿ ಆಭರಣ ಕದ್ದೊಯ್ದ ಕಳ್ಳರು! ಸಿಸಿಟಿವಿಯಲ್ಲಿ ದುಷ್ಕೃತ್ಯ ಸೆರೆ

Last Updated : Feb 12, 2023, 10:46 PM IST

ABOUT THE AUTHOR

...view details