ಕರ್ನಾಟಕ

karnataka

By ETV Bharat Karnataka Team

Published : Sep 1, 2023, 6:46 AM IST

ETV Bharat / state

ಸಿಎಂ, ಡಿಸಿಎಂ ವಿರುದ್ಧ ಅವಹೇಳನಕಾರಿ ಪೋಸ್ಟ್​​: ವ್ಯಕ್ತಿ ವಿರುದ್ಧ ಐಟಿ ಕಾಯ್ದೆಯಡಿ ಪ್ರಕರಣ ದಾಖಲು

ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಸಿಎಂ, ಡಿಸಿಎಂ ಸೇರಿದಂತೆ ಕಾಂಗ್ರೆಸ್​ ನಾಯಕರ ವಿರುದ್ಧ ಅವಹೇಳನಕಾರಿ ಪೋಸ್ಟ್​ ಮಾಡಿದ್ದು ಆತನ ವಿರುದ್ಧ ಪ್ರಕರಣ ದಾಖಲಾಗಿದೆ.

ಅವಹೇಳನಕಾರಿ ಪೋಸ್ಟ್​​
ಅವಹೇಳನಕಾರಿ ಪೋಸ್ಟ್​​

ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದ ವ್ಯಕ್ತಿ ವಿರುದ್ಧ ವೈಟ್ ಫೀಲ್ಡ್ ಸೆನ್ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ‌.

ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿರುವ ಪೊಲೀಸರು‌ ಈಶ್ವರಪ್ಪ - ಮುನಿಯಪ್ಪ ಎಂಬಾತನ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿರುವ x ಖಾತೆಯಲ್ಲಿ ಖರ್ಗೆ, ಸಿದ್ದರಾಮಯ್ಯ, ಡಿಕೆಶಿ,‌ ಪರಮೇಶ್ ಸೇರಿದಂತೆ ಸಾಲು - ಸಾಲು ಕಾಂಗ್ರೆಸ್ ನಾಯಕರ ವಿರುದ್ಧ ಅವಹೇಳಕನಕಾರಿ ಪೋಸ್ಟ್ ಮಾಡಿರುವುದು ಕಂಡುಬಂದಿತ್ತು. ಕೆಟ್ಟದಾಗಿ ನಾಯಕರ ಅಧಿಕೃತ ಎಕ್ಸ್ ಖಾತೆಗೆ ಈಶ್ವರಪ್ಪ ಟ್ಯಾಗ್ ಮಾಡಿದ್ದಾನೆ. ಈ ಸಂಬಂಧ ವೈಟ್ ಫೀಲ್ಡ್ ಠಾಣೆಯಲ್ಲಿ ಸಾಮಾಜಿಕ ಮಾಧ್ಯಮ ವಿಭಾಗ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಗಮನಿಸಿದ್ದ ಖಾತೆದಾರನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕುಳುವ ಸಮುದಾಯವನ್ನು ಪರಿಶಿಷ್ಟ ಜಾತಿಯ ಪಟ್ಟಿಯಿಂದ ತೆಗೆಯಲು ಸಾಧ್ಯವಿಲ್ಲ:-ಸಿಎಂ: "ಕುಳುವ ಸಮಾಜದ ಹಲವರಲ್ಲಿ ತಮ್ಮನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಹೊರಗೆ ಇಡಬಹುದು ಎನ್ನುವ ಆತಂಕವಿದೆ. ಆದರೆ, ನಾನು ಹೇಳ್ತಾ ಇದ್ದೇನೆ. ಆ ಆತಂಕ ಬೇಡ, ಯಾವುದೇ ಕಾರಣಕ್ಕೂ ಕುಳುವ ಸಮುದಾಯವನ್ನು ಪರಿಶಿಷ್ಟ ಜಾತಿಯ ಪಟ್ಟಿಯಿಂದ ತೆಗೆಯಲು ಸಾಧ್ಯವೇ ಇಲ್ಲ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆಯ ಮಾತುಗಳನ್ನಾಡಿದ್ದಾರೆ.

ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ನುಲಿಯ ಚಂದಯ್ಯ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. 'ಶಿಕ್ಷಣ ಹೆಚ್ಚಾದಷ್ಟೂ ಜಾತಿ ವ್ಯವಸ್ಥೆ ನಶಿಸಬೇಕಿತ್ತು. ಆದರೆ ಹಾಗೇ ಉಳಿದುಕೊಂಡಿದೆ. ಬಸವಾದಿ ಶರಣರು 12 ನೇ ಶತಮಾನದಲ್ಲೇ ಜಾತಿ ವ್ಯವಸ್ಥೆ ಮತ್ತು ತಾರತಮ್ಯದ ವಿರುದ್ಧ ಕ್ರಾಂತಿ ಮಾಡಿದ್ದರು. ನುಲಿಯ ಚಂದಯ್ಯ ಬಸವಾದಿ ಶರಣರಲ್ಲಿ ಪ್ರಮುಖರು. ಶರಣರಲ್ಲೇ ಅಗ್ರಗಣ್ಯರು. ಹೀಗಾಗಿ ಬಸವಣ್ಣನವರಿಗೆ ನುಲಿಯ ಚಂದಯ್ಯರ ಬಗ್ಗೆ ಬಹಳ ಅಭಿಮಾನ ಪ್ರೀತಿ ಇತ್ತು' ಎಂದು ಮುಖ್ಯಮಂತ್ರಿಗಳು ವಿವರಿಸಿದರು.

ಸನಾದಿ ಅಪ್ಪಣ್ಣ ಸಿನಿಮಾ ಹಲವು ಬಾರಿ ನೋಡಿದ್ದೆ:ಸನಾದಿ ಅಪ್ಪಣ್ಣ ಕೂಡ ಕುಳುವ ಸಮಾಜದವರು. ಡಾ.ರಾಜ್ ಕುಮಾರ್ ಅವರ ಅಭಿನಯದ ಸನಾದಿ ಅಪ್ಪಣ್ಣ ಸಿನಿಮಾವನ್ನು ನಾನು ಹಲವು ಬಾರಿ ನೋಡಿದ್ದೇನೆ. ನನಗೆ ರಾಜ್ ಕುಮಾರ್ ಅವರ ಸಿನಿಮಾವನ್ನು ಬರಿ ಒಂದು ಸಾರಿ ನೋಡಿದರೆ ಸಮಾಧಾನ ಆಗುತ್ತಿರಲಿಲ್ಲ. ಅದಕ್ಕೇ ಪದೇ ಪದೆ ನೋಡುತ್ತಿದ್ದೆ ಎಂದು ಅಭಿಮಾನ ವ್ಯಕ್ತಪಡಿಸಿದರು. ಸಮಾಜದಲ್ಲಿ ಸ್ವಾರ್ಥಿಗಳಿಂದ ಜಾತಿ ವ್ಯವಸ್ಥೆ ರೂಪುಗೊಂಡಿತು. ಯಾವ್ಯಾವ ಕಸುಬನ್ನು ಯಾರು ಮಾಡುತ್ತಿದ್ದಾರೋ ಅದದೇ ಕಸುಬನ್ನೇ ಮಾಡಿಕೊಂಡಿರಲಿ. ಅವರ್ಯಾರೂ ಪ್ರಗತಿ ಕಾಣಬಾರದು ಎನ್ನುವ ಸ್ವಾರ್ಥ ಜಾತಿ ವ್ಯವಸ್ಥೆಗೆ ಕಾರಣ ಎಂದರು.

ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮ

ಧರ್ಮವನ್ನು ಅರ್ಥ ಮಾಡಿಕೊಳ್ಳಲು ದೊಡ್ಡ ಗ್ರಂಥಗಳನ್ನು ಓದುವ ಅಗತ್ಯವಿಲ್ಲ. ಮನುಷ್ಯ ಮನುಷ್ಯನನ್ನು ಪ್ರೀತಿಸುವುದೇ ಧರ್ಮ. ಜಾತಿ-ಧರ್ಮದ ಹೆಸರಲ್ಲಿ ಮನುಷ್ಯರನ್ನು ದ್ವೇಷಿಸುವುದೇ ಅಧರ್ಮ. ಧರ್ಮದ ಬಗ್ಗೆ ಭಾಷಣ ಮಾಡುವುದು ಸುಲಭ. ಆದರೆ, ಧರ್ಮವಂತರಾಗಿ ಬದುಕುವುದು ಕಷ್ಟ. ಧರ್ಮದ ಬಗ್ಗೆ ಭಾಷಣ ಮಾಡುವವರು ಧರ್ಮವಂತರಾಗಿ ಬದುಕುತ್ತಿದ್ದಾರಾ ಎಂದು ಸಿಎಂ ಪ್ರಶ್ನಿಸಿದರು.

ನುಲಿಯ ಚಂದಯ್ಯ ಭವನಕ್ಕೆ ನಿವೇಶನ ಮತ್ತು ಅನುದಾನ:ನುಲಿಯ ಚಂದಯ್ಯ ಭವನ ನಿರ್ಮಾಣಕ್ಕೆ ಅಗತ್ಯ ನಿವೇಶನ ಮತ್ತು ಅನುದಾನ ನೀಡಬೇಕು ಎನ್ನುವ ಸಮುದಾಯದ ಬೇಡಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಪ್ಪಿದರು. ಬೇಡಿಕೆ ಈಡೇರಿಕೆ ಭರವಸೆಯನ್ನು ವೇದಿಕೆಯಲ್ಲೇ ನೀಡಿದರು.

ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮ

ಸಾಣೇಹಳ್ಳಿ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರು ವಹಿಸಿದ್ದರು. ಕೊರಮ ಕೊರಚ ಕೊರವ ಸಮುದಾಯಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಶಿವಾನಂದ ಎಂ ಭಜಂತ್ರಿ, ಸಮುದಾಯದ ಮುಖಂಡರುಗಳಾದ AKMS ನ ಪಲ್ಲವಿ, ಬಿ.ಎಸ್.ಆನಂದಕುಮಾರ್ ಏಕಲವ್ಯ, ಆದರ್ಶ್ ಯಲ್ಲಪ್ಪ, ಎಂ.ವೆಂಕಟೇಶ್, ಜಿ.ಚಂದ್ರಣ್ಣ ಸೇರಿ ಹಲವು ಪ್ರಮುಖರು ವೇದಿಕೆಯಲ್ಲಿದ್ದರು.

ಇದನ್ನೂ ಓದಿ:ನಾರಾಯಣಗುರುಗಳು ಜಾತಿ ಧರ್ಮಕ್ಕೆ ಸಿಕ್ಕಿಕೊಳ್ಳದೆ ವಿಶ್ವ ಮಾನವರಾದರು: ಸಿಎಂ ಸಿದ್ದರಾಮಯ್ಯ

ABOUT THE AUTHOR

...view details