ಕರ್ನಾಟಕ

karnataka

By

Published : Feb 25, 2023, 1:58 PM IST

Updated : Feb 25, 2023, 2:26 PM IST

ETV Bharat / state

ಗಂಡ ಹೆಂಡತಿ ಮಧ್ಯೆ ಜಗಳ: ಅತ್ತೆಯನ್ನೇ ಹತ್ಯೆ ಮಾಡಿದ ಅಳಿಯ

ಗಂಡ ಹೆಂಡತಿ ಜಗಳದ ಮಧ್ಯದಲ್ಲಿ ಅತ್ತೆ ಪ್ರಾಣ ಕಳೆದುಕೊಂಡಿರುವ ಘಟನೆ ಕೆಂಗೇರಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Son in law and Mother in law
ಅಳಿಯ ಹಾಗೂ ಹತ್ಯೆಯಾದ ಅತ್ತೆ

ಡಿಸಿಪಿ ಲಕ್ಷ್ಮಣ್​ ನಿಂಬರಗಿ

ಬೆಂಗಳೂರು: ಚಾಕುವಿನಿಂದ ಇರಿದು ಅಳಿಯನೇ ತನ್ನ ಅತ್ತೆಯನ್ನು ಕೊಲೆ ಮಾಡಿರುವ ಘಟನೆ ನಿನ್ನೆ ರಾತ್ರಿ ಕೆಂಗೇರಿ ಠಾಣಾ ವ್ಯಾಪ್ತಿಯ ನಾಗದೇವನಹಳ್ಳಿಯ ಬೃಂದಾವನ ಲೇಔಟ್​ನಲ್ಲಿ ನಡೆದಿದೆ. ಏಳರಸಿ (48) ತನ್ನ ಅಳಿಯ ದಿವಾಕರ್ (38) ನಿಂದ ಕೊಲೆಯಾದ ಮಹಿಳೆಯಾಗಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಡಿಸಿಪಿ ಲಕ್ಷ್ಮಣ್​ ನಿಂಬರಗಿ, ಮೃತ ಏಳರಸಿಯ ಮೊದಲನೇ ಮಗಳು ತಮಿಳರಸಿಯ ಜೊತೆಗೆ ದಿವಾಕರ್ ವಿವಾಹವಾಗಿದ್ದು, ಕೆಜಿಎಫ್ ಬಳಿ ವಾಸವಿದ್ದನು. ಮದುವೆಯಾಗಿ 12 ವರ್ಷಗಳಾಗಿದ್ದು, ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಕೂಡ ಇದ್ದಾರೆ. ಈ ಹಿಂದೆಯೂ ಸಾಕಷ್ಟು ಬಾರಿ ಹಲವು ಕಾರಣಗಳಿಗೆ ಇಬ್ಬರ ಮಧ್ಯೆ ಗಲಾಟೆಗಳಾಗಿ, ಕೋರ್ಟ್​ವರೆಗೂ ಹೋಗಿತ್ತು. ನಂತರ ಕಾಂಪ್ರಮೈಸ್​ ಆಗಿ ಇಬ್ಬರು ಜೊತೆಯಾಗಿಯೇ ಜೀವನ ನಡೆಸುತ್ತಿದ್ದರು ಎಂದು ತಿಳಿಸಿದ್ದಾರೆ.

ಆದರೆ, ಇತ್ತೀಚಿಗೆ ಶಿವರಾತ್ರಿ ಹಬ್ಬಕ್ಕೆಂದು ತವರಿಗೆ ತೆರಳಿದ್ದ ಪತ್ನಿ ಮನೆಗೆ ಬರುವುದು ವಿಳಂಬವಾಯಿತು ಎಂಬ ಕಾರಣಕ್ಕೆ ಆತ ಹಾಗೂ ಆತನ ಪತ್ನಿ ಮಧ್ಯೆ ಜಗಳವಾಗಿದೆ. ಪತ್ನಿಯ ಮೇಲೆ ಕೋಪಗೊಂಡಿದ್ದ ದಿವಾಕರ್ ಒಬ್ಬಳು ಮಗಳನ್ನು ಬೆಂಗಳೂರಿನ ಬೃಂದಾವನ ಲೇಔಟ್​ನಲ್ಲಿರುವ ತನ್ನ ಸಹೋದರಿಯ ಮನೆಗೆ ಕರೆದುಕೊಂಡು ಬಂದಿದ್ದ‌ನು. ಹಾಗಾಗಿ ಅತ್ತೆ ಹಾಗೂ ಆತನ ಹೆಂಡತಿ ಬೆಂಗಳೂರಿಗೆ ಬಂದಿದ್ದು, ಎಕ್ಸಾಂ ಇದೆ, ಆದ್ದರಿಂದ ಮಗಳನ್ನು ತನ್ನೊಂದಿಗೆ ಕಳುಹಿಸಿಕೊಡುವಂತೆ ಕೇಳಿದ್ದಾರೆ. ಆದರೆ, ಆತ ಕಳುಹಿಸಿಕೊಟ್ಟಿಲ್ಲ.

ಆ ನಿಟ್ಟಿನಲ್ಲಿ ನಿನ್ನೆ ದಿವಾಕರ್​ ಅವರ ಅತ್ತೆ ಹಾಗೂ ಅವರ ಇನ್ನಿಬ್ಬರು ಮಕ್ಕಳು ಸೇರಿ, ಕೆಂಗೇರಿ ವ್ಯಾಪ್ತಿಯಲ್ಲಿರುವ ದಿವಾಕರ್​ನ ತಂಗಿ ಮನೆಗೆ ಬಂದಿದ್ದರು. ಆಗಲೂ ಮಗಳನ್ನು ತಮ್ಮೊಂದಿಗೆ ಕಳುಹಿಸಿಕೊಡುವಂತೆ ಕೇಳಿಕೊಂಡಿದ್ದಾರೆ. ದಿವಾಕರ ಒಪ್ಪದ ಕಾರಣ ಅಲ್ಲಿದ್ದವರ ನಡುವೆ ಮಾತಿಗೆ ಮಾತು ಬೆಳೆದು ದಿವಾಕರ್, ಏಳರಸಿಯ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ತಡೆಯಲು ಬಂದಿದ್ದ ಆಕೆಯ ಮಗಳ ಕೈಗೆ ಕೂಡ ಗಾಯವಾಗಿತ್ತು. ತಕ್ಷಣ ಏಳರಸಿಯನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು.

ಅತೀ ಸೂಕ್ಷ್ಮ ಜಾಗಕ್ಕೆ ಚಾಕುವಿನಿಂದ ಇರಿದ ಕಾರಣ ಹೆಚ್ಚು ರಕ್ತಸ್ರಾವವಾಗಿ ಆಸ್ಪತ್ರೆಗೆ ತಲುಪುವ ಮುನ್ನವೇ ಆಕೆ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾಳೆ. ಘಟನೆ ನಂತರ ಆರೋಪಿ ತಲೆಮರೆಸಿಕೋಂಡಿದ್ದಾನೆ. ಆ ಹಿನ್ನೆಲೆಯಲ್ಲಿ ಕೆಂಗೇರಿ ಪೊಲೀಸ್​ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಕೆಂಗೇರಿ ಠಾಣಾ ಪೊಲೀಸರು ಆರೋಪಿ ಪತ್ತೆಗಾಗಿ ಹುಡುಕಾಟ ಮುಂದುವರೆಸಿದ್ದಾರೆ ಎಂದು ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.

ಇದನ್ನೂ ಓದಿ:ನಿಂದಿಸಿದರೆಂದು ರುಬ್ಬುವ ಕಲ್ಲಿನಿಂದ ತಂದೆಯನ್ನೇ ಹೊಡೆದು ಕೊಂದ ಮಗ!

Last Updated : Feb 25, 2023, 2:26 PM IST

ABOUT THE AUTHOR

...view details