ಕರ್ನಾಟಕ

karnataka

By ETV Bharat Karnataka Team

Published : Dec 16, 2023, 6:09 PM IST

ETV Bharat / state

ಡಿ.23ಕ್ಕೆ ಬೆಂಗಳೂರಿನಲ್ಲಿ ರೈತರ ರಾಷ್ಟ್ರೀಯ ಮಹಾಧಿವೇಶನ: ಕುರುಬೂರು ಶಾಂತಕುಮಾರ್

ರೈತರ ಸಂಪೂರ್ಣ ಸಾಲಮನ್ನಾ ,ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಖಾತರಿ ಕಾನೂನು ಜಾರಿ ಸೇರಿದಂತೆ ವಿವಿಧ ಬೇಡಿಕೆಗೆ ಒತ್ತಾಯಿಸಿ ರೈತರ ರಾಷ್ಟ್ರೀಯ ಮಹಾಧಿವೇಶನ ಹಮ್ಮಿಕೊಳ್ಳಲಾಗಿದೆ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ತಿಳಿಸಿದರು.

leaders released the pamphlet of  farmers conference.
ರೈತರ ರಾಷ್ಟ್ರೀಯ ಮಹಾಧಿವೇಶನ ಪತ್ರಿಕೆಯನ್ನು ಮುಖಂಡರು ಬಿಡುಗಡೆಗೊಳಿಸಿದರು.

ಬೆಂಗಳೂರು:ರಾಜ್ಯದ ರೈತರ ಸಂಪೂರ್ಣ ಸಾಲಮನ್ನಾ ,ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಖಾತರಿ ಕಾನೂನು ಜಾರಿಗಾಗಿ ಒತ್ತಾಯಿಸಿ ಡಿಸೆಂಬರ್ 23ರಂದು ಬೆಂಗಳೂರಿನಲ್ಲಿ ರೈತರ ರಾಷ್ಟ್ರೀಯ ಮಹಾಧಿವೇಶನ ಹಮ್ಮಿಕೊಳ್ಳಲಾಗಿದೆ ಎಂದು ದಕ್ಷಿಣ ಭಾರತ ರಾಜ್ಯಗಳ ಸಂಯುಕ್ತ ಕಿಸಾನ್ ಮೋರ್ಚಾ ಸಂಚಾಲಕ ಕುರುಬೂರು ಶಾಂತಕುಮಾರ್ ಹೇಳಿದರು.

ಬೆಂಗಳೂರಿನ ಪ್ರೆಸ್ ಕ್ಲಬ್​​ದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಅತಿವೃಷ್ಟಿ, ಪ್ರವಾಹ, ಮಳೆಹಾನಿ, ಬರಗಾಲಕ್ಕೆ ತುತ್ತಾಗಿರುವ ರಾಜ್ಯದ ಎಲ್ಲ ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಕೃಷಿ ಸಾಲ ಪಡೆದ ರೈತರು ಬೆಳೆ ಬೆಳೆಯಲು ಹೂಡಿಕೆ ಮಾಡಿದ್ದು, ಬೆಳೆ ನಾಶವಾಗಿದೆ, ಈಗ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದಕ್ಕಾಗಿ ಸಾಲಮನ್ನಾ ಆಗಲೇಬೇಕು ಎಂದು ಒತ್ತಾಯಿಸಿದರು.

ಕೈಗಾರಿಕೆ, ಉದ್ಯಮಿಗಳಿಗೆ ಸಂಕಷ್ಟದ ನೆರವು ಎಂದು 12 ಲಕ್ಷ ಕೋಟಿ ಮನ್ನಾ ಮಾಡಿರುವ ಕೇಂದ್ರ ಸರ್ಕಾರ, ಅದೇ ರೀತಿ ರೈತರ ಸಾಲ ಮನ್ನಾ ಆಗಬೇಕು. ಈ ಬಗ್ಗೆ ರೈತರು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಡಿ.23 ರಂದು ಕೋರಿಕೆ ಪತ್ರ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.

ಸಾಲ ನವೀಕರಣ:ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿ ದಿಕ್ಕು ತಪ್ಪಿಸಬಾರದು. ರೈತರು ಸಾಲ ಮನ್ನಾ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ರೈತರ ಸಾಲ ಮನ್ನಾ ಆಗದಂತೆ ವಂಚಿಸಲು ಬ್ಯಾಂಕ್​ ಅಧಿಕಾರಿಗಳು ಬಡ್ಡಿ ದುಪ್ಪಟ್ಟು ಆಗುತ್ತದೆ ಎಂದು ಹೆದರಿಸಿ ಖಾಲಿ ಪತ್ರಕ್ಕೆ ಸಹಿ ಪಡೆದು ಸಾಲ ನವೀಕರಣ ಮಾಡುತ್ತಿದ್ದಾರೆ. ಈ ಬಗ್ಗೆ ರೈತರು ಜಾಗೃತರಾಗಿರಬೇಕು ಎಂದು ಎಚ್ಚರಿಸಿದರು.

ಸ್ವಾಮಿನಾಥನ್ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿ:ಪ್ರಕೃತಿ ಮುನಿಸಿನಿಂದ ಭತ್ತ, ಕಬ್ಬು, ತೊಗರಿ, ಜೋಳ ರಾಗಿ ಉತ್ಪಾದನೆ ಶೇಕಡಾ 50ರಷ್ಟು ಕಡಿಮೆ ಆಗಿರುವ ಕಾರಣ ಹೊರದೇಶಕ್ಕೆ ಹೋಗುವ ಆಹಾರ ಧಾನ್ಯಗಳನ್ನು ರಫ್ತು ನಿಷೇಧ ಮಾಡಲಾಗಿದೆ. ಈಗಲಾದರೂ ರೈತರ ಶಕ್ತಿ, ಶ್ರಮದ ಬಗ್ಗೆ ಸರ್ಕಾರಗಳು ವಿಶೇಷ ಕಾಳಜಿ ವಹಿಸಲಿ. ಸರ್ಕಾರ ಎಲ್ಲ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿ ಮಾಡಬೇಕು. ಸ್ವಾಮಿನಾಥನ್ ಆಯೋಗದ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಬೇಕು. ಪ್ರಧಾನಿಯವರು ರೈತರಿಗೆ ಭರವಸೆ ನೀಡಿದಂತೆ ಕೂಡಲೇ ಈ ಕಾನೂನು ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಎಕರೆಗೆ 25, 000 ರೂ ಬರ ಪರಿಹಾರ ನೀಡಬೇಕು :ರೈತರು ಬರಗಾಲದ ಸಂಕಷ್ಟದಿಂದ ನರಳುತ್ತಿದ್ದಾರೆ. ರಾಜ್ಯ ಸರ್ಕಾರ 2000 ರೂ ಭಿಕ್ಷಾ ರೂಪದ ಪರಿಹಾರ ನೀಡುವುದು ಬೇಡ. ರೈತರ ನೆರವಿಗೆ ಬಾರದೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಾಜಕೀಯ ಚೆಲ್ಲಾಟ ಆಡುತ್ತಿದ್ದಾರೆ. ಸಂಪೂರ್ಣ ಬರ ಪರಿಹಾರ ನಷ್ಟ ಎಕರೆಗೆ ಕನಿಷ್ಠ 25,000 ರೂ ಬಿಡುಗಡೆ ಮಾಡಬೇಕು. ಕೇಂದ್ರ ಸರ್ಕಾರ ಸಕ್ಕರೆ ರಪ್ತು ನಿಷೇಧಿಸಿರುವುದು, ಎಥೆನಾಲ್ ಉತ್ಪಾದನೆಗೆ ತಡೆ ನೀಡಿರುವುದು ಕಬ್ಬು ಬೆಳೆಯುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದರಿಂದ ರೈತರಿಗೆ ಆತಂಕ ಸೃಷ್ಟಿಯಾಗುತ್ತಿದೆ ಆದ್ದರಿಂದ ಇವುಗಳ ಕುರಿತು ಕೇಂದ್ರ ಸರ್ಕಾರ ಮರುಪರಿಶೀಲನೆ ನಡೆಸಲಿ ಎಂದು ಮನವಿ ಮಾಡಿದರು.

ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳಿಂದ ಮೋಸ:ಪಂಜಾಬ್ ರಾಜ್ಯದಲ್ಲಿ ಟನ್ ಕಬ್ಬಿಗೆ 4000 ನಿಗದಿ ಮಾಡಿದ್ದಾರೆ. ರಾಜ್ಯದಲ್ಲಿ ಎರಡು ಮೂರು ಸಭೆಗಳಾದರೂ ಸಕ್ಕರೆ ಕಾರ್ಖಾನೆಗಳನ್ನು ಮಣಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ತೂಕದಲ್ಲಿ ಮೋಸ, ಇಳುವರಿಯಲ್ಲಿ ಮೋಸ, ಹಣ ಪಾವತಿಯಲ್ಲಿ ಮೋಸ ಮಾಡುತ್ತಿದ್ದರೂ ಸರ್ಕಾರ ಕಾರ್ಖಾನೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ.

ರಾಜ್ಯ ಸರ್ಕಾರ ಕಬ್ಬು ಬೆಳೆಯುವ ವೆಚ್ಚ ಕಡಿಮೆ ಮಾಡಲು ಕಬ್ಬು ಬೇಸಾಯ ಕೂಲಿ ಕಾರ್ಮಿಕರ ಸಮಸ್ಯೆ ತಪ್ಪಿಸಲು ಎನ್ ಆರ್ ಇ ಜಿ ಯೋಜನೆಯನ್ನು ಲಿಂಕ್ ಮಾಡಬೇಕು. ಬಾಳೆ ಬೇಸಾಯಕ್ಕೆ ನೀಡಿರುವ ರೀತಿ ಎಲ್ಲ ಕೃಷಿ ಬೆಳೆಗಳಿಗೂ ಕಬ್ಬಿನ ಬೆಳೆಗೂ ಕಡ್ಡಾಯವಾಗಿ ಬೆಳೆ ವಿಮೆಯನ್ನು ಜಾರಿಗೊಳಿಸಬೇಕು. ಬೆಳೆ ವಿಮೆ ಸರಳೀಕರಣಗೊಳಿಸಬೇಕು. ಅತಿವೃಷ್ಟಿ ಬರ ನಷ್ಟ ಪರಿಹಾರ ಬೆಳೆ ವಿಮೆ ವ್ಯಾಪ್ತಿಯಲ್ಲಿ ನಷ್ಟ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಮತಾ ದಳ ವೆಂಕಟಸ್ವಾಮಿ, ಕರ್ನಾಟಕ ರಾಜ್ಯ ರೈತ ಸಂಘದ ನಾರಾಯಣ ರೆಡ್ಡಿ, ರಾಜ್ಯ ಕಬ್ಬು ಬೆಳೆಗಾರ ಸಂಘದ ಹತ್ತಳ್ಳಿ ದೇವರಾಜ್ ಸೇರಿದಂತೆ ಹಲವು ರೈತ ಮುಖಂಡರು ಹಾಜರಿದ್ದರು.

ಇದನ್ನೂಓದಿ:ಜನರಿಗೆ ಸುಳ್ಳು ಭರವಸೆ ನೀಡಿ ಸಿದ್ದರಾಮಯ್ಯ ಸರ್ಕಾರ ಮೋಸದಾಟವಾಡುತ್ತಿದೆ: ಕಾರಜೋಳ ಆರೋಪ

ABOUT THE AUTHOR

...view details