ಬೆಂಗಳೂರು:ಮಂಡ್ಯದ ಬಡಾವಣೆ ನಿರ್ಮಾಣದಲ್ಲಿ ಆದ ಅಕ್ರಮದ ವಿಚಾರಣೆ ನ್ಯಾಯಾಲಯದ ಹಂತದಲ್ಲಿದ್ದು, ಅಲ್ಲಿಂದ ವರದಿ ಲಭಿಸುತ್ತಿದ್ದಂತೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ತಿಳಿಸಿದ್ದಾರೆ.
ಕೆ.ಟಿ.ಶ್ರೀಕಂಠೇಗೌಡ ಪ್ರಶ್ನೋತ್ತರ ಅವಧಿಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮಂಡ್ಯದ ಬಡಾವಣೆಯ ಅಕ್ರಮದ ವಿಚಾರಣೆ ಸಿಬಿಐಗೆ ವಹಿಸಲಾಗಿದೆ. ಅವರು ಕೋರ್ಟ್ಗೆ ಮಾಹಿತಿ ಒದಗಿಸಬೇಕು. ಆದರೆ ಆ ಸಂದರ್ಭ ನಾವು ಏನೂ ಮಾಡುವಂತಿಲ್ಲ. ಆದಾಗ್ಯೂ 16 ಕೋಟಿ ರೂ. ಬಜೆಟ್ ನೀಡಿದ್ದೇವೆ. ನ್ಯಾಯಾಲಯದ ವರದಿ ಬರುತ್ತಿದ್ದಂತೆಯೇ ಅಕ್ರಮ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಇದರಲ್ಲಿ ಸಂಶಯ ಬೇಡ ಎಂದರು.
ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, 700-800 ಎಕರೆ ವಿಸ್ತಾರವಾದ ಕೆರೆಯನ್ನು ಬಡಾವಣೆ ಮಾಡಿದ್ದರು. ಆದರೆ ಜನ ನಿವೇಶನ ಕೊಳ್ಳಲಿಲ್ಲ. ಶೇ. 50ರಷ್ಟು ನಿವೇಶನ ಖಾಲಿ ಆಗಲಿಲ್ಲ. ಈ ಬಡಾವಣೆಯನ್ನು ನಗರಸಭೆಗೆ ವಹಿಸಿಲ್ಲ. ಇನ್ನೊಂದು ಬಡಾವಣೆ ಕೂಡ ಆಗಿದೆ. ಹೌಸಿಂಗ್ ಬೋರ್ಡ್ ವ್ಯಾಪ್ತಿಗೆ ಒಳಪಟ್ಟಿದೆ. ಸಮಸ್ಯೆ ಹೆಚ್ಚಾಗಿದೆ. ಮೂಲಭೂತ ಸೌಕರ್ಯ ಇಲ್ಲ. ಜನ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಆದಷ್ಟು ಬೇಗ ಪರಿಹಾರ ನೀಡಬೇಕೆಂದು ಸಲಹೆ ನೀಡಿದರು.
ಹಣ್ಣು-ತರಕಾರಿ ವ್ಯಾಪಾರ ಮುಕ್ತ
ರೈತರು ತಾವು ಬೆಳೆದ ಹಣ್ಣುತರಕಾರಿ ಮಾರಾಟಕ್ಕೆ ಮುಕ್ತ ಅವಕಾಶ ಕಲ್ಪಸಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಕಾಂಗ್ರೆಸ್ ಸದಸ್ಯ ಪಿ.ಆರ್.ರಮೇಶ್ ಮಾತನಾಡಿ, ಹಣ್ಣು, ತರಕಾರಿಯನ್ನು ಎಪಿಎಂಸಿಯಲ್ಲೇ ಮಾರಬೇಕು ಎಂದಿತ್ತು. ಈಗ ಸರ್ಕಾರ ಎಲ್ಲಿ ಬೇಕಾದರೂ ಮಾರಬಹುದು ಎಂದಿದೆ. ಹಾಪ್ ಕಾಮ್ಸ್ ಚಿಲ್ಲರೆ ಮಾರಾಟ ಮಾಡಿದರೆ, ಎಪಿಎಂಸಿ ಸಗಟು ಮಾರಾಟ ಮಾಡುತ್ತದೆ. ಯಾವ ಹಣ್ಣು, ತರಕಾರಿ ಮಾರಾಟಕ್ಕೂ ಎಲ್ಲಿಯೂ ನಿರ್ಬಂಧ ಇಲ್ಲ. ಅನುಕೂಲ, ಅವಕಾಶ ಇರುವ ಯಾವುದೇ ಸ್ಥಳದಲ್ಲಿ ವ್ಯಾಪಾರ ಮಾಡಬಹುದು. 1600 ಅಪಾರ್ಟ್ಮೆಂಟ್ ಇದ್ದು, 28 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮುಕ್ತವಾಗಿ ಹಣ್ಣು, ತರಕಾರಿ ಮಾರುವ ಅವಕಾಶ ಇಲ್ಲವಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಹಕಾರ ಸಚಿವರು, ಹೊಸ ಕಾನೂನು ಬಂದಿದ್ದು, ನಿರ್ಬಂಧ ವಿಧಿಸುವ ಅಂಶವನ್ನು ತೆಗೆದುಹಾಕಿದ್ದೇವೆ. ಲಾಕ್ಡೌನ್ ಸಂದರ್ಭ ಎದುರಾದ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಂಡಿದ್ದೇವೆ ಎಂದು ವಿವರಿಸಿದರು.
ಮತ್ತೆ ಪಿ.ಆರ್.ರಮೇಶ್ ಮಾತನಾಡಿ, 62 ಕಡೆ ನೀವು ಖಾಸಗಿಯವರಿಗೆ ಅವಕಾಶ ನೀಡಿ ಮುಕ್ತ ಜಾಗತೀಕರಣಕ್ಕೆ ಅವಕಾಶ ಮಾಡಿಕೊಟ್ಟಿದ್ದೀರಿ. ಸರ್ಕಾರ ಜನ ಹಾಗೂ ತರಕಾರಿ ಬೆಳೆಗಾರರ ನಡುವಿನ ಅಂತರ ಕಡಿಮೆ ಮಾಡುವ ಕಾರ್ಯ ಮಾಡಿಲ್ಲ. ಎಪಿಎಂಸಿ ಕಾಯ್ದೆ ತಿದ್ದುಪಡಿ ವಿಧೇಯಕ ಚರ್ಚೆಗೆ ಬಂದಿಲ್ಲ. ಆದರೆ ಈಗಲೇ ಮಳಿಗೆ ತೆರೆಯಲು ಪರವಾನಗಿ ನೀಡಿದ್ದೀರಿ. ಖಾಸಗಿಯವರ ನಿಯಂತ್ರಣಕ್ಕೆ ಯಾವ ಕ್ರಮ ಕೈಗೊಂಡಿದ್ದೀರಿ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸೋಮಶೇಖರ್, ಇದುವರೆಗೂ ಎಪಿಎಂಸಿಯಲ್ಲಿ ಯಾವುದೇ ದೂರು ಬರದ ರೀತಿ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದರು.
ಅರ್ಹರದ್ದು ಮಾತ್ರ ಸಾಲ ಮನ್ನಾ