ಕರ್ನಾಟಕ

karnataka

ETV Bharat / state

ನೆಲಮಂಗಲ - ಯಶವಂತಪುರ ಸಂಪರ್ಕಿಸುವ ರಸ್ತೆಗೆ ಡಾ.ಲೀಲಾವತಿ ಹೆಸರಿಡುವಂತೆ ಒತ್ತಾಯ

ಕನ್ನಡ ಚಿತ್ರರಂಗದ ಹಿರಿಯ ನಟಿ ಡಾ.ಎಂ ಲೀಲಾವತಿಯವರ ಸಿನಿಮಾ ಸೇವೆಯನ್ನು ಪರಿಗಣಿಸಿ ನೆಲಮಂಗಲ - ಯಶವಂತಪುರ ಸಂಪರ್ಕಿಸುವ ರಸ್ತೆಗೆ ಅವರ ಹೆಸರನ್ನು ಇಡುವಂತೆ ಬಿಬಿಎಂಪಿ ನೌಕರರ ಕ್ಷೇಮಾಭಿವೃದ್ಧಿ ಸಂಘದವರು ಬಿಬಿಎಂಪಿ ಆಯುಕ್ತರಿಗೆ ಮನವಿ ಮಾಡಿದ್ದಾರೆ.

By ETV Bharat Karnataka Team

Published : Dec 12, 2023, 10:14 PM IST

fans demand for actress leelavathi name to nelamangala yeshwanthpur road
ನೆಲಮಂಗಲ-ಯಶವಂತಪುರ ಸಂಪರ್ಕಿಸುವ ರಸ್ತೆಗೆ ಡಾ.ಲೀಲಾವತಿ ಹೆಸರಿಡುವಂತೆ ಒತ್ತಾಯ

ನೆಲಮಂಗಲ (ಬೆಂಗಳೂರು ಗ್ರಾಮಾಂತರ): ಚಿತ್ರರಂಗ, ಸಾಹಿತ್ಯ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರ ಹೆಸರನ್ನು ಬೆಂಗಳೂರಿನ ರಸ್ತೆಗಳಿಗೆ ಇಡಲಾಗಿದೆ. ಹಾಗೆಯೇ ಇತ್ತೀಚೆಗೆ ನಿಧನರಾದ 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ, ಕನ್ನಡ ಚಿತ್ರರಂಗದ ಹಿರಿಯ ನಟಿ ಡಾ.ಎಂ ಲೀಲಾವತಿಯವರ ಸಿನಿಮಾ ಮತ್ತು ಸಾಮಾಜಿಕ ಸೇವೆ ಪರಿಗಣಿಸಿ ನೆಲಮಂಗಲ - ಯಶವಂತಪುರ ಸಂಪರ್ಕಿಸುವ ರಸ್ತೆಗೆ ಅವರ ಹೆಸರನ್ನು ಇಡಬೇಕೆಂಬ ಒತ್ತಾಯ ಕೇಳಿ ಬಂದಿದೆ.

ಬೆಂಗಳೂರಿನ ರಸ್ತೆಗಳಿಗೆ ಡಾ.ರಾಜ್​ಕುಮಾರ್, ವಿಷ್ಣುವರ್ಧನ್, ಪುನೀತ್ ರಾಜ್​ಕುಮಾರ್, ಕುವೆಂಪು, ವಾಟಾಳ್ ನಾಗರಾಜ್ ಹೆಸರು ಇಡಲಾಗಿದೆ. ಅಂತೆಯೇ ಡಾ.ಎಂ ಲೀಲಾವತಿ ಅವರ ಹೆಸರನ್ನು ಬೆಂಗಳೂರಿನ ಒಂದು ರಸ್ತೆಗೆ ಇಡುವಂತೆ ಬಿಬಿಎಂಪಿ ನೌಕರರ ಕ್ಷೇಮಾಭಿವೃದ್ಧಿ ಸಂಘದವರು ಬಿಬಿಎಂಪಿ ಆಯುಕ್ತರಿಗೆ ಮನವಿ ಮಾಡಿದ್ದಾರೆ. ಅವರ ಸಾಮಾಜಿಕ ಸೇವೆ ಪರಿಗಣಿಸಿ ನೆಲಮಂಗಲ - ಯಶವಂತಪುರ ಸಂಪರ್ಕಿಸುವ ರಸ್ತೆಗೆ ಲೀಲಾವತಿ ಹೆಸರನ್ನು ಇಡುವಂತೆ ಕೇಳಿಕೊಂಡಿದ್ದಾರೆ.

ಡಾ. ಲೀಲಾವತಿ ಬಗ್ಗೆ.. ಕನ್ನಡ ಚಲನಚಿತ್ರ ರಂಗದ ಅಭಿಜಾತ ಕಲಾವಿದೆ ಲೀಲಾವತಿ ಅವರು 2023ರ ಡಿಸೆಂಬರ್ 8 ರಂದು ವಯೋಸಹಜ ಕಾಯಿಲೆಯಿಂದ ನಿಧನರಾದರು. 1938ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಜನಿಸಿದ್ದರು. ಸುಬ್ಬಯ್ಯ ನಾಯ್ಡು ಕಂಪನಿಯಲ್ಲಿ ಕಲಾವಿದೆಯಾಗಿ ಪಾತ್ರಗಳನ್ನು ನಿರ್ವಹಿಸಿ ರಂಗಭೂಮಿ ಕಲಾವಿದೆಯಾಗಿ ಪರಿಪಕ್ವಗೊಂಡ ಇವರು, 1949ರಲ್ಲಿ ನಾಗಕನ್ನಿಕೆ ಚಿತ್ರದ ಸಖಿ ಪಾತ್ರದ ಮೂಲಕ ಕನ್ನಡ ಚಲನಚಿತ್ರ ರಂಗಕ್ಕೆ ಪ್ರವೇಶಿಸಿದರು. ಮಾಂಗಲ್ಯ ಯೋಗ ಚಿತ್ರದ ಮೂಲಕ ನಾಯಕಿ ನಟಿಯಾಗಿ ಬೆಳ್ಳಿ ಪರದೆ ಮೇಲೆ ರಾರಾಜಿಸಿದ್ದರು. ಕಡು ಬಡತನದಲ್ಲೇ ಬೆಳೆದು ಸಾಧನೆ ಮಾಡಿದ ಸಾಧಕಿ ಇವರು.

600ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ ಲೀಲಾವತಿ 400ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡ, ತೆಲುಗು, ಮಲಯಾಳಂ, ತುಳು ಭಾಷೆಯ ಸಿನಿಮಾಗಳಲ್ಲಿ ಅಭಿನಯಿಸಿರುವ ಇವರು ಬಹುಭಾಷಾ ಕಲಾವಿದೆಯಾಗಿ ಬೆಳ್ಳಿಪರದೆಯಲ್ಲಿ ಮಿನುಗಿದ ನಕ್ಷತ್ರವಾಗಿದ್ದರು. ನಾಲ್ಕೂವರೆ ದಶಕಗಳ ಸುದೀರ್ಘ ಬಣ್ಣದ ಲೋಕದಲ್ಲಿ ಅಪ್ರತಿಮ ಕಲಾವಿದೆಯಾಗಿ ಮೆರೆದ ಮೇರು ಪರ್ವತವಾಗಿದ್ದರು. ಚಿತ್ರರಂಗದ ಸೂಪರ್‌ಸ್ಟಾರ್‌ಗಳಾದ ಡಾ. ರಾಜ್​ಕುಮಾರ್, ಎನ್‌ಟಿಆರ್, ಎಎನ್‌ಆರ್, ತಮಿಳಿನ ಶಿವಾಜಿ ಗಣೇಶನ್, ಎಂಜಿಆರ್ ಅವರುಗಳ ಜೊತೆ ನಾಯಕಿ ನಟಿಯಾಗಿ ಅಭಿನಯಿಸಿದ ಇವರು ಮಾಡದ ಪಾತ್ರಗಳಿಲ್ಲ. 60ರ ದಶಕದಲ್ಲಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದರು.

ಮದುವೆ ಮಾಡಿ ನೋಡು, ಸಂತ ತುಕರಾಂ ಚಿತ್ರಗಳಲ್ಲಿನ ನಟನೆಗೆ ಅವರಿಗೆ ರಾಷ್ಟ್ರ ಪ್ರಶಸ್ತಿ, ತುಂಬಿದಕೊಡ, ಮಹಾತ್ಯಾಗ, ಭಕ್ತಕುಂಬಾರ, ಸಿಪಾಯಿ ರಾಮು, ಗೆಜ್ಜೆಪೂಜೆ ಸಿನಿಮಾದ ನಟನೆಗಾಗಿ ರಾಜ್ಯ ಪ್ರಶಸ್ತಿ, ಡಾ.ರಾಜ್​ಕುಮಾರ್​ ಜೀವಮಾನ ಸಾಧನೆ ಪ್ರಶಸ್ತಿ, ಪೋಷಕ ನಟನೆಗಾಗಿ ಮೂರು ಬಾರಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ, 2008ರಲ್ಲಿ ತುಮಕೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ಹೀಗೆ ಹತ್ತು ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಇವರ ನಿಧನದಿಂದಾಗಿ ಕನ್ನಡ ಚಲನಚಿತ್ರ ರಂಗ ಬೆಳ್ಳಿಪರದೆಯ ಧ್ರುವತಾರೆಯೊಂದನ್ನು ಕಳೆದುಕೊಂಡಂತಾಗಿದೆ.

ಇದನ್ನೂ ಓದಿ:ಸದ್ದಿಲ್ಲದೇ ಸಮಾಜಮುಖಿ ಕೆಲಸದಲ್ಲಿ ತೊಡಗಿದ್ದ ಲೀಲಾವತಿ: ಕಲಾವಿದರಿಗೆ ತಪ್ಪದೇ ಮಾಸಾಶನ ನೀಡುತ್ತಿದ್ದ ನಟಿ

ABOUT THE AUTHOR

...view details