ಕರ್ನಾಟಕ

karnataka

By

Published : Apr 14, 2023, 10:08 PM IST

ETV Bharat / state

ಪ್ರತಿಷ್ಟಿತ ಬ್ರ್ಯಾಂಡ್‌ ಹೆಸರಲ್ಲಿ 10 ವರ್ಷದಿಂದ ನಕಲಿ ಪೇಂಟ್ ಮಾರಾಟ; ಆರೋಪಿ ಬಂಧನ

ಒಂದೆಡೆ, ಜ್ಯೋತಿಷ್ಯ ಹೇಳುವ ನೆಪದಲ್ಲಿ ಬಂಗಾಲಿ ಬಾಬಾಗಳೆಂದು ನಂಬಿಸಿ ಆತನ ಬಳಿಯಿದ್ದ 73 ಗ್ರಾಂ ತೂಕದ ಚಿನ್ನದಗಟ್ಟಿ ದೋಚಿ ಪರಾರಿಯಾದರೆ, ಹತ್ತು ವರ್ಷದಿಂದ ಏಷ್ಯನ್ ಪೇಂಟ್ ಹೆಸರಲ್ಲಿ ನಕಲಿ ಪೈಂಟ್ ತಯಾರಿಸಿ ಮಾರಾಟ ಮಾಡುತ್ತಿದ್ದ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

selling fake paint was arrested
ನಕಲಿ ಪೇಂಟ್ ತಯಾರಿಸಿ ಮಾರುತ್ತಿದ್ದ ಆರೋಪಿ ಬಂಧನ

ಬೆಂಗಳೂರು: ಪ್ರತಿಷ್ಠಿತ ಏಷ್ಯನ್ ಪೇಂಟ್ ಬ್ರ್ಯಾಂಡ್ ರೀತಿಯಲ್ಲೇ ನಕಲಿ ಪೇಂಟ್ ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ವಿ.ವಿ.ಪುರಂ ಠಾಣೆಯ ಪೊಲೀಸರು ಬಯಲಿಗೆಳೆದಿದ್ದಾರೆ. ಏಷ್ಯನ್ ಪೇಂಟ್ಸ್ ಕಂಪನಿಯಂತೆ ಪೇಂಟ್ ನಕಲಿಗೊಳಿಸಿ ಮಾರಾಟ ಮಾಡುತ್ತಿದ್ದ ಲಾಲ್ ಬಂಧಿತ ಆರೋಪಿ.

10 ವರ್ಷದಿಂದ ವಂಚನೆ:ಆರೋಪಿ ಲಾಲ್​ ಕಳೆದ ಹತ್ತು ವರ್ಷದಿಂದ ನಕಲಿ ಪೇಂಟ್ ತಯಾರಿಸಿ ಮಾರಾಟ ಮಾಡುತ್ತಿದ್ದ. ತನ್ನದೇ ಆದ ಪೇಂಟ್ ಶೋ ರೂಂ ಹೊಂದಿದ್ದ. ಬಹುತೇಕ ಎಲ್ಲ ಪೇಂಟ್ಸ್ ಬಗ್ಗೆ ಅರಿತಿದ್ದು ಏಷ್ಯನ್ ಪೇಂಟ್ ಕಂಪನಿ ಹೆಸರು ಬಳಸಿ ಮೋಸ ಮಾಡುತಿದ್ದನು. ಹೀಗೆ ಹಲವು ವರ್ಷಗಳಿಂದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಪೇಂಟ್‌ಗಳನ್ನು ನಕಲುಗೊಳಿಸಿ, ನಕಲಿ ಪೇಂಟ್ ಗೆ ಏಷ್ಯನ್ ಪೇಂಟ್ ಸ್ಟಿಕ್ಕರ್ ಸೇರಿದಂತೆ ಇತರೆ ವಸ್ತುಗಳನ್ನೂ ನಕಲಿಸಿ ಮಾರಾಟ ಮಾಡುತ್ತಿದ್ದನು. ಈ ನಕಲಿ ಆಟದ ಬಗ್ಗೆ ತಿಳಿದ ಏಷ್ಯನ್ಸ್ ಪೇಂಟ್ಸ್‌ನ ಅಸಲಿ ಮಾರಾಟಗಾರರು ವಿವಿ ಪುರಂ ಪೊಲೀಸರಿಗೆ ದೂರು ನೀಡಿದ್ದರು. ಸ್ಯಾಂಪಲ್‌ಗಾಗಿ ಒಂದು ಪೇಂಟ್‌ ಖರೀದಿಸಿ ಪರೀಕ್ಷೆ ಮಾಡಲಾಗಿತ್ತು. ಪರೀಕ್ಷೆಯಲ್ಲಿ ನಕಲಿ ಪೇಂಟ್ ಎಂಬುದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ‌.

ಜ್ಯೋತಿಷ್ಯ ಹೇಳುವ ನೆಪದಲ್ಲಿ ಚಿನ್ನದ ಗಟ್ಟಿ ದೋಚಿ ಪರಾರಿ: ಚಿನ್ನದ ಅಂಗಡಿ ಕೆಲಸಗಾರನನ್ನು ಜ್ಯೋತಿಷ್ಯ ಹೇಳುವ ನೆಪದಲ್ಲಿ ಮರುಳು ಮಾಡಿ ಚಿನ್ನದ ಗಟ್ಟಿ ದೋಚಿ ಪರಾರಿಯಾಗಿರುವ ಘಟನೆ ಮಾರ್ಚ್ 27ರಂದು ಮಧ್ಯಾಹ್ನ ಹಲಸೂರು ಗೇಟ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಂಗಾಲಿ ಬಾಬಾಗಳೆಂದು ಸುಮನ್ ಸರ್ಕಾರ್​​ನನ್ನು ನಂಬಿಸಿದ ಇಬ್ಬರು ಅಪರಿಚಿತರು, ಆತನ ಬಳಿಯಿದ್ದ 73 ಗ್ರಾಂ ತೂಕದ ಚಿನ್ನದ ಗಟ್ಟಿ ಪಡೆದು ಪರಾರಿಯಾಗಿದ್ದರು.

ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸುಮನ್ ಸರ್ಕಾರ್ ಮಾರ್ಚ್ 27ರ ಮಧ್ಯಾಹ್ನ ಮಾಲೀಕನ ನಿರ್ದೇಶನದಂತೆ ಚಿನ್ನದ ಗಟ್ಟಿ ಪರಿಶೀಲನೆ ಮಾಡಿಸಿಕೊಂಡು ವಾಪಸ್ ಬರುತ್ತಿದ್ದರು. ಈ ಸಂದರ್ಭದಲ್ಲಿ ಹಲಸೂರು ಗೇಟ್ ವ್ಯಾಪ್ತಿ ಗಾಣಿಗರ ಲೇನ್ ರಸ್ತೆಯಲ್ಲಿ‌ ಎದುರಾದ ಇಬ್ಬರು ಬಂಗಾಳಿ ಭಾಷೆಯಲ್ಲಿ ಮಾತನಾಡಿ, ತಾವು ಬಾಬಾಗಳೆಂದು ಪರಿಚಯಿಸಿಕೊಂಡ ಬಳಿಕ ಕೈ ರೇಖೆ ನೋಡಿ ಭವಿಷ್ಯ ಹೇಳುತ್ತೇವೆ. ಮಂತ್ರಿಸಿದ ದಾರ ಕೊಡುತ್ತೇವೆ ಎಂದು ಸುಮನ್ ಸರ್ಕಾರ್​​ನನ್ನು ಧರ್ಮರಾಯನ ಸ್ವಾಮಿ ದೇವಸ್ಥಾನದ ಬಳಿ ಕರೆದೊಯ್ದಿದ್ದಾರೆ. ನಂತರ ಕುಡಿಯಲು ತೀರ್ಥದ ನೀರನ್ನು ನೀಡಿದ್ದಾರೆ‌. ಆರೋಪಿಗಳು‌ ಕೊಟ್ಟ ನೀರು ಕುಡಿಯುತ್ತಿದ್ದಂತೆ ಸಮ್ಮೋಹನಗೊಂಡ ಸುಮನ್ ಸರ್ಕಾರ್, ಅವರು ಸೂಚಿಸಿದಂತೆ ಜೇಬಿನಲ್ಲಿದ್ದ 73 ಗ್ರಾಂ ಚಿನ್ನದ ಗಟ್ಟಿಯನ್ನು ನೀಡಿದ್ದಾನೆ.

ಆರೋಪಿಗಳು ಸುಮನ್ ಬಳಿ ನೂರು ಹಜ್ಜೆ ಮುಂದೆ ಹೋಗಿ ವಾಪಾಸ್ ಬಾ ಎಂದಿದ್ದಾರೆ. ಅದರಂತೆ ನೂರು ಹೆಜ್ಜೆ ಹೋಗಿ ವಾಪಸ್ ಬರುವಷ್ಟರಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ‌ ಉಲ್ಲೇಖಿಸಲಾಗಿದೆ. ಮಾಲೀಕನಿಗೆ ವಿಷಯ ತಿಳಿಸಿದ ಸುಮನ್ ಸರ್ಕಾರ್, ಆತನ ಅನುಮತಿ‌ ಪಡೆದು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂಓದಿ:ಅಂಬೇಡ್ಕರ್ ಜಯಂತಿ​ ಮೆರವಣಿಗೆ ವೇಳೆ ವಿದ್ಯುತ್​ ತಗುಲಿ ಇಬ್ಬರು ಸಾವು

ABOUT THE AUTHOR

...view details