ಬೆಂಗಳೂರು: ದೇಶದಲ್ಲಿ ಹಳೆ ನೋಟು ನಿಷೇಧಗೊಂಡು ಹಲವು ವರ್ಷ ಕಳೆದರೂ ಅಮಾನೀಕರಣಗೊಂಡ ನೋಟಿನ ಹೆಸರಿನಲ್ಲಿ ಕಮಿಷನ್ ಆಸೆಗಾಗಿ ನಕಲಿ ನೋಟುಗಳನ್ನು ಮಾಡಿ ದಂಧೆ ನಡೆಸುತ್ತಿದ್ದ ಏಳು ಮಂದಿ ಆರೋಪಿಗಳನ್ನು ಗೋವಿಂದಪುರ ಪೊಲೀಸರು ಬಂಧಿಸಿದ್ದಾರೆ.
ಬಟ್ಟೆ ವ್ಯಾಪಾರಿಗಳಾದ ಸುರೇಶ್ ಕುಮಾರ್, ರಾಮಕೃಷ್ಣ, ಬಿಬಿಎಂಪಿ ಉಪ ಗುತ್ತಿಗೆದಾರ ವೆಂಕಟೇಶ್, ರೈತರಾದ ಮಂಜುನಾಥ್ ದಯಾನಂದ್, ಶಿವ ಮತ್ತು ಪಳನಿಸ್ವಾಮಿ ಬಂಧಿತ ಅರೋಪಿಗಳು. ಬಂಧಿತರಿಂದ ಅಮಾನ್ಯಗೊಂಡ ₹1000 ಹಾಗೂ ₹500 ರೂಪಾಯಿ ಮುಖಬೆಲೆಯ ₹80 ಲಕ್ಷ ಹಳೆಯ ನೋಟುಗಳು ಹಾಗೂ ₹5 ಕೋಟಿಯಷ್ಟು ಜೆರಾಕ್ಸ್ ಮಾಡಿರುವ ನಕಲಿ ನೋಟುಗಳನ್ನು ಜಪ್ತಿ ಮಾಡಲಾಗಿದೆ.
ಶರಣಪ್ಪ, ಬೆಂಗಳೂರು ನಗರ ಪೂರ್ವ ವಿಭಾಗದ ಡಿಸಿಪಿ ಗೋವಿಂದಪುರ ಠಾಣಾ ವ್ಯಾಪ್ತಿಯ ಎಚ್ಬಿಆರ್ ಲೇಔಟ್ನ ಪೆಟ್ರೋಲ್ ಬಂಕ್ ಬಳಿ ಮೂವರು ಅಪರಿಚಿತರು ಬ್ಯಾನ್ ಆದ ನೋಟುಗಳನ್ನು ಮಾರಾಟ ಮಾಡಲು ಪ್ರಯತ್ನಿಸಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಈ ಮಾಹಿತಿ ಆಧರಿಸಿ ಕಾರ್ಯಾಚರಣೆ ಕೈಗೊಂಡು, ದಾಳಿ ಮಾಡಿದ್ದರು. ಈ ವೇಳೆ, ಮೂವರನ್ನು ಬಂಧಿಸಿ ₹1000 ಹಾಗೂ ₹500 ಮುಖಬೆಲೆಯ ₹45 ಲಕ್ಷ ಹಣ ಜಪ್ತಿ ಮಾಡಿಕೊಂಡಿದ್ದರು.
ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ದಂಧೆಯಲ್ಲಿ ತೊಡಗಿದ್ದ ಐವರನ್ನು ಬಂಧಿಸಿ ಮತ್ತೆ ₹35 ಲಕ್ಷ ನಕಲಿ ನೋಟುಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದರು. ತನಿಖೆ ವೇಳೆ ಅಂತಾರಾಜ್ಯದಿಂದ ಕೋಟ್ಯಂತರ ರೂಪಾಯಿ ಮೌಲ್ಯದ ನೋಟುಗಳ ಸರಬರಾಜು ಮಾಡಲಾಗುತ್ತಿದೆ ಎಂಬ ಮಾಹಿತಿ ಬಂದಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಇನ್ಸ್ಪೆಕ್ಟರ್ ಪ್ರಕಾಶ್ ನೇತೃತ್ವದ ತಂಡ ಕೇರಳದ ಕಾಸರಗೋಡಿನ ಗೋದಾಮಿನ ಮೇಲೆ ದಾಳಿ ಮಾಡಿದಾಗ ₹5 ಕೋಟಿ ಮೌಲ್ಯದ ಕಲರ್ ಜೆರಾಕ್ಸ್ ನೋಟುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಹಳೆ ನೋಟು ಬ್ಯಾನ್ ಆಗಿ ಹಲವು ವರ್ಷ ಕಳೆದರೂ ಆರೋಪಿಗಳು ಹಳೆ ನೋಟು ನೀಡಿದರೆ ಹೊಸ ನೋಟುಗಳನ್ನು ನೀಡುವುದಾಗಿ ಹೇಳುತ್ತಿದ್ದರು. ಶೇ.20 ರಷ್ಟು ಕಮಿಷನ್ ನೀಡುವುದಾಗಿ ಆಮಿಷವೊಡ್ಡುತ್ತಿದ್ದರು. ಆರೋಪಿಗಳು ಸಂಗ್ರಹಿಸಿದ ಹಳೆಯ ನೋಟುಗಳನ್ನು ಒಂದೆಡೆ ಶೇಖರಿಸುತ್ತಿದ್ದರು. ವ್ಯವಸ್ಥಿತವಾಗಿ ಹೊಸ ನೋಟು ಪರಿವರ್ತಿಸುವ ಕಾಯಕದಲ್ಲಿ ಮುಂದಾಗಿದ್ದರು.
ದಾಳಿ ವೇಳೆ ಪೊಲೀಸರು ಒಟ್ಟು 12 ಥರ್ಮಾಕೋಲ್ ಹಾಗೂ ಹಣ ತುಂಬಿಸಿದ್ದ 24 ಮೂಟೆಗಳಲ್ಲಿ ₹5 ಕೋಟಿ ಮೌಲ್ಯದ ನಕಲಿ ಹಣ ವಶಕ್ಕೆ ಪಡೆದಿದ್ದಾರೆ.
ಓದಿ:ಸೂರ್ಯನಗರ ಬಡಾವಣೆಯ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷನಿಂದ ಹಲ್ಲೆ ಆರೋಪ