ಕರ್ನಾಟಕ

karnataka

ETV Bharat / state

ವೈಯಕ್ತಿಕ ರಕ್ಷಣೆ ಹಕ್ಕು ಚಲಾವಣೆ ಅಪರಾಧವಾಗುವುದಿಲ್ಲ: ಹೈಕೋರ್ಟ್ ತೀರ್ಪು - ಹೈಕೋರ್ಟ್

ಆತ್ಮ ರಕ್ಷಣೆಯಿಂದ ಪ್ರ ತಿದಾಳಿ ನಡೆಸಿರುವುದು ಸಾಕ್ಷ್ಯಧಾರಗಳ ಸಮೇತ ಸಾಬೀತಾದರೆ, ಅದನ್ನು ಪರಿಗಣಿಸಲು ನ್ಯಾಯಾಲಯಕ್ಕೆ ಮುಕ್ತ ಅವಕಾಶವಿರುತ್ತದೆ. ವೈಯಕ್ತಿಕ ರಕ್ಷಣೆ ಹಕ್ಕು ಚಲಾವಣೆ ಯಾವುದೇ ಅಪರಾಧವಾಗುವುದಿಲ್ಲ-ಹೈಕೋರ್ಟ್.

High Court
ಹೈಕೋರ್ಟ್

By

Published : Nov 12, 2022, 6:37 AM IST

ಬೆಂಗಳೂರು:ವೈಯಕ್ತಿಕ ರಕ್ಷಣೆ ಹಕ್ಕು ಚಲಾವಣೆಯು ಯಾವುದೇ ಅಪರಾಧವಾಗುವುದಿಲ್ಲ ಎಂದು ಸ್ಪಷ್ಟ‌ಪಡಿಸಿರುವ ಹೈಕೋರ್ಟ್, ಜಮೀನು ವ್ಯಾಜ್ಯವೊಂದರ ಸಂಬಂಧದ ಗಲಾಟೆಯಲ್ಲಿ ಆತ್ಮ ರಕ್ಷಣೆಗಾಗಿ ಸೋದರ ಸಂಬಂಧಿಕರ ಮೇಲೆ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ ಆರೋಪದಿಂದ ಮೂವರನ್ನು ಖುಲಾಸೆಗೊಳಿಸಿದೆ.

ವಿಚಾರಣಾ ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾಗಿದ್ದ ರಾಮನಗರ ತಾಲೂಕಿನ ಬಿಲುಗುಂಬಹಳ್ಳಿಯ ನಾಗೇಶ್, ರಾಮಕೃಷ್ಣ ಮತ್ತು ಜಯರಾಮ ಎಂಬುವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ರಾಚಯ್ಯ ಅವರಿದ್ದ ನ್ಯಾಯಪೀಠ ಈ ಆದೇಶ ಮಾಡಿದೆ.

ಆತ್ಮ ರಕ್ಷಣೆಯಿಂದ ಪ್ರತಿದಾಳಿ ನಡೆಸಿರುವುದು ಸಾಕ್ಷ್ಯಾಧಾರಗಳ ಸಮೇತ ಸಾಬೀತಾದರೆ, ಅದನ್ನು ಪರಿಗಣಿಸಲು ನ್ಯಾಯಾಲಯಕ್ಕೆ ಮುಕ್ತ ಅವಕಾಶವಿರುತ್ತದೆ. ವೈಯಕ್ತಿಕ ರಕ್ಷಣೆ ಹಕ್ಕು ಚಲಾವಣೆಯು ಯಾವುದೇ ಅಪರಾಧವಾಗುವುದಿಲ್ಲ ಎಂಬುದಾಗಿ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 99 ಸ್ಪಷ್ಟವಾಗಿ ಹೇಳುತ್ತದೆ. ಪ್ರಕರಣದಲ್ಲಿ ಅರ್ಜಿದಾರರ ವೈಯಕ್ತಿಕ ರಕ್ಷಣೆ ಹಕ್ಕನ್ನು ಪರಿಗಣಿಸಲು ಅಧೀನ ನ್ಯಾಯಾಲಯಗಳು ವಿಫಲವಾಗಿವೆ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ: ರಾಮನಗರದ ನಾಗೇಶ್, ರಾಮಕೃಷ್ಣ ಮತ್ತು ಜಯರಾಮ್ ಮತ್ತು ಅವರ ಸಹೋದರ ಸಂಬಂಧಿಕರ ನಡುವೆ ಜಮೀನೊಂದರ ಸಂಬಂಧ ಸಿವಿಲ್ ವ್ಯಾಜ್ಯವಿತ್ತು. ಅದೇ ವಿಚಾರವಾಗಿ 2008ರ ಆಗಸ್ಟ್‌ನಲ್ಲಿ ನಡೆದ ಗಲಾಟೆಯಲ್ಲಿ ಆರೋಪಿಗಳು, ತಮ್ಮ ಸೋದರ ಸಂಬಂಧಿಕರ ಮೇಲೆ ಮುಚ್ಚಿನಿಂದ ಹಲ್ಲೆ ಮಾಡಿ ಗಂಭೀರವಾಗಿ ಗಾಯಗೊಳಿಸಿದ್ದರು ಎಂಬ ಆರೋಪವಿತ್ತು.

ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 447 (ಅತಿಕ್ರಮ ಪ್ರವೇಶ), 326-324 (ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಗಾಯಗೊಳಿಸಿದ), 506 (ಜೀವ ಬೆದರಿಕೆ) ಆರೋಪ ಸಂಬಂಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಆರೋಪಿಗಳಿಗೆ ಶಿಕ್ಷೆ ವಿಧಿಸಿ 2010ರ ಜು.22ರಂದು ರಾಮನಗರ ಪ್ರಧಾನ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿತ್ತು. ಅದನ್ನು 2013ರ ಜೂ.28ರಂದು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಖಾಯಂಗೊಳಿಸಿತ್ತು. ಅಧೀನ ನ್ಯಾಯಾಲಯಗಳ ತೀರ್ಪು ರದ್ದು ಕೋರಿ ಆರೋಪಿಗಳು ಹೈಕೋರ್ಟ್‌ಗೆ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಆರೋಪಿಗಳು ಜಮೀನಿನ ಅತಿಕ್ರಮ ಪ್ರವೇಶ ಮಾಡಿಲ್ಲ ಎಂಬುದಾಗಿ ಅಧೀನ ನ್ಯಾಯಾಲಯ ತಿಳಿಸಿದೆ. ಆ ಅಪರಾಧ ಕೃತ್ಯದಿಂದ ಆರೋಪಿಗಳನ್ನು ಖುಲಾಸೆ ಸಹ ಮಾಡಿದೆ. ಅತಿಕ್ರಮ ಪ್ರವೇಶ ಮಾಡಿಲ್ಲ ಎಂದಾದರೆ ಗಲಾಟೆಗೆ ಉದ್ಭವಿಸಲು ಕಾರಣ ಇಲ್ಲದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ಅಲ್ಲದೇ, ಜಮೀನು ವ್ಯಾಜ್ಯದ ವಿಚಾರಣೆ ನಡೆಸಿದ್ದ ಸಿವಿಲ್ ನ್ಯಾಯಾಲಯ, ಆರೋಪಿಗಳೇ ವಿವಾದಿತ ಜಮೀನಿನ ಮಾಲೀಕರಾಗಿದ್ದಾರೆ ಎಂಬುದಾಗಿ ತೀರ್ಪು ನೀಡಿದ್ದಾರೆ. ಗಾಯಗೊಂಡಿದ್ದ ಸಹೋದರ ಸಂಬಂಧಿಕರು ಆರೋಪಿಗಳ ಜಮೀನಿನಲ್ಲಿ ಉಳಿಮೆ ಮಾಡುತ್ತಿದ್ದರು. ಜಮೀನು ಬಳಿ ಆರೋಪಿಗಳು ತೆರಳಿದಾಗ ಗಲಾಟೆ ನಡೆದಿದೆ. ಆರೋಪಿಗಳು ಮಾರಾಕಾಸ್ತ್ರ ಹೊಂದಿದ್ದನ್ನು ಯಾವ ಸಾಕ್ಷಿಯೂ ದೃಢಪಡಿಸಿಲ್ಲ. ನಿಶಸ್ತ್ರರಾಗಿದ್ದ ಆರೋಪಿಗಳು ಆತ್ಮರಕ್ಷಣೆಗಾಗಿ ನಡೆಸಿದ ಪ್ರತಿದಾಳಿಯಿಂದ ಸೋದರ ಸಂಬಂಧಿಕರು ಗಾಯಗೊಂಡಿದ್ದಾರೆ. ಆದ್ದರಿಂದ ಅವರನ್ನು ಅಪರಾಧಿಗಳು ಎಂದು ತೀರ್ಮಾನಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿರುವ ಹೈಕೋರ್ಟ್, ಅಧೀನ ನ್ಯಾಯಾಲಯದ ಆದೇಶ ರದ್ದುಪಡಿಸಿ ಆದೇಶಿಸಿದೆ.

ಇದನ್ನೂ ಓದಿ:ಆರ್​ಟಿಐ ಕಾರ್ಯಕರ್ತನ ಹತ್ಯೆ ಕೇಸ್: ಬಿಬಿಎಂಪಿ ಮಾಜಿ ಸದಸ್ಯೆ ಸೇರಿ 10 ಆರೋಪಿಗಳು ಖುಲಾಸೆ

ABOUT THE AUTHOR

...view details