ಕರ್ನಾಟಕ

karnataka

By

Published : Mar 2, 2022, 2:05 PM IST

ETV Bharat / state

ಉಕ್ರೇನ್​ನಲ್ಲಿ ನವೀನ್ ಸಾವು: ನೀಟ್ ನಿರ್ಲಜ್ಜ ಮುಖ ದೇಶಕ್ಕೆ ದರ್ಶನ ಎಂದ ಎಚ್​​ಡಿಕೆ

ನವೀನ್‌ ಸಾವು ನೀಟ್‌ ಸಾಚಾತನವನ್ನೇ ಪ್ರಶ್ನಿಸಿದೆ. ಬಡಮಕ್ಕಳ ರಕ್ತವನ್ನು ಹೀರುವ, ಶ್ರೀಮಂತರಿಗಷ್ಟೇ ಮೀಸಲಾಗಿರುವ ವೈದ್ಯ ಶಿಕ್ಷಣದ 'ವ್ಯಾಪಾರೀಕರಣ' ದೇಶಕ್ಕೆ ಅಪಮಾನಕರ. ವಿಶ್ವಗುರು, ರಾಷ್ಟ್ರೀಯ ಶಿಕ್ಷಣ ನೀತಿ ಎಂದೆಲ್ಲಾ ಬೊಬ್ಬೆ ಹೊಡೆಯುವ ಕೇಂದ್ರವು ಒಮ್ಮೆ ಶುದ್ಧ ಅಂತಃಕರಣದಿಂದ ಆಲೋಚಿಸಲಿ ಎಂದು ಹೇಳಿದ್ದಾರೆ.

Kumaraswamy tweet
Kumaraswamy tweet

ಬೆಂಗಳೂರು:ವೈದ್ಯ ಶಿಕ್ಷಣದ ಕನಸು ಕಾಣುವ ಬಡ, ಮಧ್ಯಮ ವರ್ಗದ ಬದುಕನ್ನು ಛಿದ್ರಗೊಳಿಸುತ್ತಿರುವ ನೀಟ್ (ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ- NEET), ವಿದ್ಯಾರ್ಥಿಗಳು ಮತ್ತು ಪೋಷಕರ ಪಾಲಿಗೆ ಮರಣಶಾಸನವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಉನ್ನತ ಶಿಕ್ಷಣವನ್ನು ಉಳ್ಳವರಿಗೆ ಮೀಸಲಿಟ್ಟು ಉಳಿದವರಿಗೆ ವ್ಯವಸ್ಥಿತವಾಗಿ ನಿರಾಕರಿಸಲಾಗುತ್ತಿದೆ ಎಂದು ಅವರು ಸರಣಿ ಟ್ವೀಟ್​ಗಳನ್ನು ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉಕ್ರೇನ್​​ಗೆ ಮೆಡಿಕಲ್ ಓದಲು ಹೋಗಿ ರಷ್ಯಾ ದಾಳಿಗೆ ತುತ್ತಾದ ವಿದ್ಯಾರ್ಥಿ ನವೀನ್ ದುರಂತ ಸಾವು. ಇದು ನೀಟ್ ವ್ಯವಸ್ಥೆಯ ನಿರ್ಲಜ್ಜ ಮುಖವನ್ನು ಇಡೀ ದೇಶಕ್ಕೆ ದರ್ಶನ ಮಾಡಿಸಿದೆ. ಅರ್ಹತೆ ನೆಪದಲ್ಲಿ ಪ್ರತಿಭಾವಂತ ಆರ್ಥಿಕ ದುರ್ಬಲ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಮಾಡಲಾಗುತ್ತಿರುವ ಅನ್ಯಾಯಕ್ಕೆ ಅಂತ್ಯ ಹಾಡಬೇಕಿದೆ ಎಂದಿದ್ದಾರೆ.

10ನೇ ತರಗತಿಯಲ್ಲಿ ಶೇ.96, 2ನೇ ಪಿಯುಸಿಯಲ್ಲಿ ಶೇ.97 ಅಂಕ ಗಳಿಸಿದ್ದರೂ ನವೀನ್​ಗೆ ಜಗತ್ತಿನ ಶಿಕ್ಷಣ ಕಾಶಿ ಭಾರತದಲ್ಲಿ ವೈದ್ಯ ಸೀಟು ಸಿಗಲ್ಲ. ಗ್ರಾಮೀಣ ವಿದ್ಯಾರ್ಥಿಯೊಬ್ಬ ಇಷ್ಟು ಉತ್ತಮ ಅಂಕಗಳಿಸುವುದು ಸುಲಭವಲ್ಲ. ಆದರೂ, ಆತನಿಗೆ ನಮ್ಮ ದೇಶದಲ್ಲಿ ವೈದ್ಯ ಶಿಕ್ಷಣವನ್ನು ನಿರಾಕರಿಸಲಾಗಿದೆ. ಭಾರತದಲ್ಲಿ ನಿರಾಕರಿಸಲ್ಪಟ್ಟ ಶಿಕ್ಷಣವನ್ನು ಹುಡುಕಿಕೊಂಡು ವಿದೇಶಕ್ಕೆ ಹೋಗಿ, ಅಲ್ಲಿ ಕಲಿತು ಇನ್ನೊಬ್ಬರ ಜೀವ ಉಳಿಸಲು ನೂರುಕಾಲ ಬಾಳಿ ಬದುಕಬೇಕಿದ್ದ ನವೀನ್ ಇಂದು ಜೀವ ಕಳೆದುಕೊಂಡು 'ವಿಶ್ವಗುರು' ಆಗಬೇಕೆಂದು ಹಾತೊರೆಯುತ್ತಿರುವ 'ಭಾರತದ ಆತ್ಮಸಾಕ್ಷಿ'ಗೆ ಪ್ರಶ್ನೆಯಾಗಿದ್ದಾನೆ. ಇದಕ್ಕೆ ಯಾರು ಹೊಣೆ ಎಂದು ಅವರು ಪ್ರಶ್ನಿಸಿದ್ದಾರೆ.

ನೀಟ್ ಹೆಸರಿನಲ್ಲಿ ದಂಧೆ: ನೀಟ್ ಭಾರತದ ಮಧ್ಯಮ, ಬಡವರ್ಗದ ಮಕ್ಕಳ ಮೆಡಿಕಲ್ ಕನಸನ್ನು ಮರೀಚಿಕೆಯನ್ನಾಗಿಸಿದೆ. ಅದು ವಕ್ಕರಿಸಿದ ಮೇಲೆ 'ಟ್ಯೂಷನ್ ಅಂಗಡಿ'ಗಳು ನಾಯಿಕೊಡೆಗಳಂತೆ ಮೇಲೆದ್ದಿವೆ. ಕೋಟಿ - ಕೋಟಿ ವ್ಯಾಪಾರ ಆಗುತ್ತಿದೆ. ಅವು ವಿದ್ಯಾರ್ಥಿಗಳಿಂದ ಲಕ್ಷ - ಲಕ್ಷ ಪೀಕುತ್ತಿವೆ ಮತ್ತೂ ಶೇ.99ರಷ್ಟು ಕೋಚಿಂಗ್ ಪಡೆದ ವಿದ್ಯಾರ್ಥಿಗಳೇ ನೀಟ್ ಪಾಸ್ ಮಾಡುತ್ತಿದ್ದಾರೆ!. ಸರ್ಕಾರಿ ಶಾಲೆ-ಕಾಲೇಜು ವಿದ್ಯಾರ್ಥಿಗಳಿಗೆ ನೀಟ್ ತೇರ್ಗಡೆ ಕಷ್ಟಸಾಧ್ಯ.

ಈ ದೌರ್ಬಲ್ಯವನ್ನರಿತೇ ಟ್ಯೂಷನ್ ಅಂಗಡಿಗಳು ಮಾರುಕಟ್ಟೆ ವಿಸ್ತರಿಸಿ ನವೀನ್​ರಂತಹ ವಿದ್ಯಾರ್ಥಿಗಳ ಶವಗಳ ಮೇಲೆ ರಣಕೇಕೆ ಹಾಕುತ್ತಿವೆ. ನೀಟ್ ಹೆಸರಿನಲ್ಲಿ ನೀಟಾಗಿ ಉಳ್ಳವರಿಗೆ ವೈದ್ಯ ಶಿಕ್ಷಣವನ್ನು 'ದಾಸೋಹ' ಮಾಡುವ ದಂಧೆ ವಿರುದ್ಧ ಎಲ್ಲರೂ ದನಿ ಎತ್ತಬೇಕಿದೆ ಎಂದು ಕರೆ ನೀಡಿದ್ದಾರೆ.

ಇದನ್ನೂ ಓದಿ: ಉಕ್ರೇನ್‌ನಲ್ಲಿ ಬಲಿಯಾದ ಹಾವೇರಿಯ ನವೀನ್‌ SSLCಯಲ್ಲಿ ಟಾಪರ್‌, ಪಿಯುನಲ್ಲಿ ಶೇ.97ರಷ್ಟು ಅಂಕ..!

ಜೋಶಿ ಹೇಳಿಕೆಗೆ ಆಕ್ರೋಶ:ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಹೇಳಿಕೆ ನನಗೆ ಅಚ್ಚರಿ ತಂದಿದೆ. 'ವಿದೇಶದಲ್ಲಿ ವೈದ್ಯಪದವಿ ಪಡೆಯುವ ಶೇ.90 ವಿದ್ಯಾರ್ಥಿಗಳು ಭಾರತದಲ್ಲಿ ಅಗತ್ಯ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದಿಲ್ಲ. ವಿದೇಶ ಮತ್ತು ಭಾರತದಲ್ಲಿ ವೈದ್ಯ ಶಿಕ್ಷಣಕ್ಕೆ ಆಗುವ ವೆಚ್ಚದ ಬಗ್ಗೆ ಚರ್ಚೆ ಬೇಡ. ಆ ಚರ್ಚೆಗೆ ಇದು ಸಮಯವೂ ಅಲ್ಲ ಎಂದಿದ್ದಾರೆ. ಕೇಂದ್ರದ ಕಾನೂನು ಹಾಗೂ ಸಂಸದೀಯ ವ್ಯವಹಾರ ಖಾತೆ ಮಂತ್ರಿಗಳೇ, ವೆಚ್ಚದ ಹೋಲಿಕೆ ಮಾಡಲು ನಾನು ಬಯಸುವುದಿಲ್ಲ. ಯಾವುದೇ ವಿವಾದ ಅಥವಾ ಚರ್ಚೆಗೆ ನಾನೀಗ ಕಾರಣನಾಗುವುದಿಲ್ಲ ಎಂದು ಹೇಳುವುದರ ಹಿಂದಿನ ಮರ್ಮವೇನು? ಅವರ ಹೇಳಿಕೆ ಅನೇಕ ಗುಮಾನಿಗಳಿಗೆ ಕಾರಣವಾಗಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

'ಟ್ಯೂಷನ್ ಅಂಗಡಿ'ಗಳ ಹಿಂದೆ ಯಾರಿದ್ದಾರೆ?. ಯಾರಿಗೂ ಕಾಣದಂತೆ ಕೇಂದ್ರ ಸರ್ಕಾರವೇ ಅವಿತು ಕೂತಿದೆಯಾ?. ನೀಟ್‌ ಸೃಷ್ಟಿಸಿದ 'ಶೈಕ್ಷಣಿಕ ಅರಾಜಕತೆ'ಗೆ ಇನ್ನೆಷ್ಟು ವಿದ್ಯಾರ್ಥಿಗಳು ಬಲಿಯಾಗಬೇಕು?. ನವೀನ್‌ ಸಾವು ನೀಟ್‌ ಸಾಚಾತನವನ್ನೇ ಪ್ರಶ್ನಿಸಿದೆ. ಬಡಮಕ್ಕಳ ರಕ್ತವನ್ನು ಹೀರುವ, ಶ್ರೀಮಂತರಿಗಷ್ಟೇ ಮೀಸಲಾಗಿರುವ ವೈದ್ಯಶಿಕ್ಷಣದ 'ವ್ಯಾಪಾರೀಕರಣ' ದೇಶಕ್ಕೆ ಅಪಮಾನಕರ. ವಿಶ್ವಗುರು, ರಾಷ್ಟ್ರೀಯ ಶಿಕ್ಷಣ ನೀತಿ ಎಂದೆಲ್ಲ ಬೊಬ್ಬೆ ಹೊಡೆಯುವ ಕೇಂದ್ರವು ಒಮ್ಮೆ ಶುದ್ಧ ಅಂತಃಕರಣದಿಂದ ಆಲೋಚಿಸಲಿ ಎಂದು ಹೇಳಿದ್ದಾರೆ.

ABOUT THE AUTHOR

...view details