ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಯಾರೇ ರಾಜ್ಯದಿಂದ ಸ್ಪರ್ಧೆ ಮಾಡಿದರೂ ಸೋಲು ನಿಶ್ಚಿತ. ಕರ್ನಾಟಕದಲ್ಲಿ ಮೊದಲು ಸ್ಪರ್ಧೆ ಮಾಡಲಿ. ನಂತರ ಅವರ ವಿರುದ್ಧ ಯಾರನ್ನು ಕಣಕ್ಕೆ ಇಳಿಸಬೇಕು ಎಂಬುದನ್ನು ಯೋಚನೆ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಬಿಜೆಪಿ ಹಿರಿಯ ನಾಯಕ ಮಾಜಿ ಸಿಎಂ ಎಸ್.ಎಂ.ಕೃಷ್ಣ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಭೇಟಿ ನೀಡಿದರು. ಬಾಗಿಲಿನಲ್ಲೇ ನಿಂತು ಹೂಗುಚ್ಚ ನೀಡಿ ಯಡಿಯೂರಪ್ಪ ಅವರನ್ನು ಕೃಷ್ಣ ಬರಮಾಡಿಕೊಂಡರು. ನಂತರ ಉಭಯ ನಾಯಕರು ಕೆಲಕಾಲ ಮಂಡ್ಯ ರಾಜಕೀಯ, ಲೋಕಸಭಾ ಚುನಾವಣೆ ಸಿದ್ಧತೆ, ಚುನಾವಣಾ ಪ್ರಚಾರ ಸೇರಿದಂತೆ ಮಹತ್ವದ ವಿಷಯಗಳ ಕುರಿತು ಮಾತುಕತೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಎಸ್.ಎಂ.ಕೃಷ್ಣ ಅವರೊಂದಿಗೆ ಪ್ರಚಲಿತ ರಾಜಕೀಯ ವಿದ್ಯಮಾನಗಳ ಬಗ್ಗೆ ಹಾಗೂ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚಿಸಿದ್ದೇವೆ. ಮಂಡ್ಯ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಸೇರಿ ದಕ್ಷಿಣ ಕರ್ನಾಟಕದ ಏಳೆಂಟು ಜಿಲ್ಲೆಗಳಲ್ಲಿ ಪ್ರಚಾರಕ್ಕೆ ಬರಲು ಅವರು ಒಪ್ಪಿದ್ದಾರೆ. ಇದರಿಂದ ನಮಗೆ ಆನೆ ಬಲ ಬಂದಂತಾಗಿದೆ. ದೇಶದಲ್ಲಿ ಇರುವಂತೆ ರಾಜ್ಯದಲ್ಲಿ ಮೋದಿ ಅಲೆ ಇದೆ. ಅದರ ಜೊತೆ ಕೃಷ್ಣ ಅವರು ಪ್ರಚಾರಕ್ಕೆ ಬಂದರೆ ಅದರ ಪರಿಣಾಮ ಬೇರೆಯದ್ದೇ ಆಗಲಿದೆ ಎಂದರು.
ಮಂಡ್ಯ ರಾಜಕೀಯ ಸಂಬಂಧ ಚರ್ಚೆ ನಡೆಸಿದ್ದೇವೆ. ಕೃಷ್ಣ ಅವರು ಅವರ ಸಲಹೆ ಕೊಟ್ಟಿದ್ದಾರೆ. ಸುಮಲತಾ ಅಂಬರೀಶ್ ಸ್ಪರ್ಧೆ ಬಗ್ಗೆಯೂ ಚರ್ಚಿಸಿದ್ದೇವೆ. ಸುಮಲತಾ ಅವರು ಮೊದಲು ತಮ್ಮ ನಿರ್ಧಾರ ಪ್ರಕಟಿಸಿದ ನಂತರ ನಾವು ಮತ್ತೊಮ್ಮೆ ಹಿರಿಯ ನಾಯಕರೆಲ್ಲಾ ಸೇರಿ ಚರ್ಚಿಸಿ ನಮ್ಮ ನಿರ್ಧಾರ ಪ್ರಕಟಿಸುತ್ತೇವೆ ಎಂದರು.
ರಾಹುಲ್ ಗಾಂಧಿ ಸೇರಿದಂತೆ ಯಾರು ಬೇಕಾದರೂ ಕರ್ನಾಟಕದಲ್ಲಿ ಸ್ಪರ್ಧಿಸಬಹುದು. ರಾಷ್ಟ್ರಾದ್ಯಂತ ಮೋದಿ ಗಾಳಿ ಬೀಸುತ್ತಿದೆ. ಯಾರೇ ಸ್ಪರ್ಧೆ ಮಾಡಿದರೂ ಸೋಲುತ್ತಾರೆ. ನಿಶ್ಚಿಯವಾಗಿ ನಾವು 22 ಸ್ಥಾನ ಗೆಲ್ಲುತ್ತೇವೆ. ಬಿಜೆಪಿ ಪರ ವಾತಾವರಣ ಇದೆ. ರಾಹುಲ್ ಗಾಂಧಿ ಕರ್ನಾಟಕದಲ್ಲಿ ಮೊದಲು ಸ್ಪರ್ಧೆ ಮಾಡಲಿ. ನಂತರ ಅವರ ವಿರುದ್ಧ ಯಾರನ್ನು ಕಣಕ್ಕೆ ಇಳಿಸಬೇಕು ಎಂಬುದನ್ನು ಯೋಚನೆ ಮಾಡುತ್ತೇವೆ. ಎಸ್.ಎಂ.ಕೃಷ್ಣ ಅವರು ಸ್ಪರ್ಧೆ ಮಾಡಿದರೆ ಸಂತೋಷ ಎಂದರು.