ಬೆಂಗಳೂರು:ಒಕ್ಕಲುತನದ ಜೊತೆಗೆ ಇತರ ಚಟುವಟಿಕೆ ಜೋಡಿಸಿ ಕೃಷಿಕನ ಆದಾಯ ಹೆಚ್ಚಿಸುವ ಕಾರ್ಯಕ್ಕೆ ಹೊಸ ನಿರ್ದೇಶನಾಲಯ ಆರಂಭಿಸಿ ಅಗತ್ಯ ಹಣಕಾಸು ವ್ಯವಸ್ಥೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ನೈಸರ್ಗಿಕ ಕೃಷಿಗೆ ಹಚ್ಚಿನ ಉತ್ತೇಜನ ಕೊಡುವ ಕೆಲಸ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕಾರ್ಪೊರೇಷನ್ ವೃತ್ತದಲ್ಲಿರುವ ಕೃಷಿ ಭವನದಲ್ಲಿ 2ನೇ ಕೃಷಿಕ ಭವನ ಉದ್ಘಾಟಿಸಿ ಮಾತನಾಡಿದ ಅವರು, 2ನೇ ಕೃಷಿಕ ಭವನದ ಉದ್ಘಾಟನೆಯನ್ನು ಬಹಳ ಸಂತೋಷದಿಂದ ಮಾಡಿದ್ದೇನೆ. ಕೃಷಿಕ ಸಮಾಜ ಬಹಳ ವರ್ಷದಿಂದ ಸರ್ಕಾರದ ಜೊತೆಗೆ ಕೆಲಸ ಮಾಡುತ್ತಾ ಕೃಷಿಕರ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದೆ ಎಂದು ಸಿಎಂ ಹೇಳಿದರು.
ಕೃಷಿಕರನ್ನು ಹತ್ತಿರದಿಂದ ಬಲ್ಲೆ
ನಾನು ಕೃಷಿಕ ಸಮಾಜದ ಸದಸ್ಯರನ್ನು ಬಹಳ ಹತ್ತಿರದಿಂದ ಬಲ್ಲೆ. ನಿಜವಾಗಿಯೂ ಹೊಲದಲ್ಲಿ ಕೆಲಸ ಮಾಡಿ ಅನುಭವ ಇರುವವರೇ ಕೃಷಿಕ ಸಮಾಜದ ಸದಸ್ಯರಾಗಿದ್ದಾರೆ. ಹಲವಾರು ಸಂಘಟನೆಗಳಲ್ಲಿ ಆ ಕ್ಷೇತ್ರಗಳಲ್ಲಿ ಕೆಲಸ ಮಾಡದೇ ನಿರ್ದೇಶಕ ಮಂಡಳಿ ಸದಸ್ಯರಾಗುತ್ತಾರೆ. ಆದರೆ, ಕೃಷಿಕ ಸಮಾಜದಲ್ಲಿ ಮಾತ್ರ ನಿಜವಾಗಿಯೂ ಕೆಲಸ ಮಾಡಿದವರೇ ಅಲ್ಲಿದ್ದಾರೆ. ಹೀಗಾಗಿ, ಸಮಾಜಕ್ಕೆ ಘನತೆ ಗೌರವ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೃಷಿಕ ಸಮಾಜ ಬಹಳಷ್ಟು ಒಳ್ಳೆಯ ಕೆಲಸ ಮಾಡಿದರೂ ಅದಕ್ಕೆ ಸಿಗಬೇಕಾದ ಪ್ರಚಾರ, ಸಹಾಯ, ಸಹಕಾರ ಸಿಗುತ್ತಿಲ್ಲ. ಕೃಷಿಕ ಸಮಾಜ ಕೃಷಿ ಇಲಾಖೆಯ ಕೆಲಸ ಮಾಡುತ್ತಿದೆ. ನೀವು ಕೃಷಿ ಇಲಾಖೆಯ ಜೊತೆ ಜೊತೆಗೆ ಕೆಲಸ ಮಾಡುತ್ತಾ ಬಂದಿದ್ದರೂ ಸ್ವತಂತ್ರವಾಗಿ ಕೃಷಿಗೆ ರೈತರಿಗೆ ಏನು ಒಳ್ಳೆಯದು ಮಾಡಬೇಕು ಎಂದು ಸ್ವತಂತ್ರವಾಗಿ ಚಿಂತನೆ ಮಾಡಬೇಕು. ಕೃಷಿ ಇಲಾಖೆ ಹೊರತುಪಡಿಸಿ ಕೃಷಿಗೆ ಒಳ್ಳೆಯದಾಗುವ ಯೋಜನೆ ರೂಪಿಸಿ ಸರ್ಕಾರಕ್ಕೆ ಕೊಟ್ಟಿದ್ದೇ ಆದಲ್ಲಿ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಲಿದೆ ಎಂದರು.
ಸರ್ಕಾರದ ಕಾರ್ಯಕ್ರಮಗಳನ್ನ ಅನುಷ್ಠಾನ ಮಾಡಲೆಂದೇ ಇಲಾಖೆಗಳಿರೋದು
ಸರ್ಕಾರದ ಕಾರ್ಯಕ್ರಮ ಅನುಷ್ಠಾನ ಮಾಡಲು ಇಲಾಖೆ ಇದೆ. ಆದರೆ, ಕೃಷಿಕ ಇವತ್ತಿನ ಆಧುನಿಕ ಸವಾಲು, ಒಕ್ಕಲುತನ, ಬೀಜ, ಗೊಬ್ಬರ, ಮಾರುಕಟ್ಟೆ, ಗೋಡೌನ್ ಇತ್ಯಾದಿಗಳಲ್ಲಿ ನಿಮ್ಮದೇ ಆದ ಯೋಜನೆಗಳನ್ನು ರೂಪಿಸಬೇಕು. ಸುಗ್ಗಿಗೂ ಮೊದಲೇ ಕೃಷಿ ಚಟುವಟಿಕೆ ಮತ್ತು ಸುಗ್ಗಿ ನಂತರದ ಕೃಷಿ ಚಟುವಟಿಕೆ ಎರಡು ರೀತಿ ಇದೆ. ಸುಗ್ಗಿವರೆಗೂ ದುಡಿದ ರೈತ ಬೆಳೆಯನ್ನು ಕಣಕ್ಕೆ ತಂದರೆ ಅವನ ಕರ್ತವ್ಯ ಮುಗಿಯಿತು ಎನ್ನುವ ಭಾವನೆ ಇರಿಸಿಕೊಂಡಿದ್ದಾರೆ.
ಆದರೆ, ಈಗ ಅದನ್ನು ಒಳ್ಳೆಯ ದರಕ್ಕೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುವವರೆಗೂ ಕೃಷಿ ಚಟುವಟಿಕೆ ಇದೆ ಎನ್ನುವ ಮನೋಭಾವ ಬೆಳೆಸಿಕೊಳ್ಳಬೇಕು. ಇದರಲ್ಲಿ ಕೃಷಿಕ ಸಮಾಜದ ಪಾತ್ರ ಬಹಳ ಮುಖ್ಯ. ಗೋದಾಮುಗಳ ನಿರ್ಮಾಣ, ಶೈತ್ಯಾಗಾರಗಳ ನಿರ್ಮಾಣ, ಮಾರುಕಟ್ಟೆ, ಆನ್ಲೈನ್ ಮಾರುಕಟ್ಟೆ ವ್ಯವಸ್ಥೆ, ಈ ಎಲ್ಲದರಲ್ಲಿಯೂ ಕೃಷಿಕ ಸಮಾಜ ಪ್ರಮುಖ ಪಾತ್ರ ವಹಿಸಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಕರೆ ನೀಡಿದರು.