ಬೆಂಗಳೂರು: ಕರ್ನಾಟಕ ರಾಜ್ಯದ ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ (ಇ.ಆರ್.&ಡಿ) ನೀತಿ-2021ನನ್ನು ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ, ವಿಜ್ಞಾನ-ತಂತ್ರಜ್ಞಾನ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಇಂದು ನಗರದ ಖಾಸಗಿ ಹೋಟೆಲ್ನಲ್ಲಿ ಬಿಡುಗಡೆ ಮಾಡಿದರು.
ಜ್ಞಾನ-ತಂತ್ರಜ್ಞಾನ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ಮಾಹಿತಿ ರಾಜ್ಯದ ಪ್ರಗತಿಗೆ ಹೊಸ ದಿಕ್ಕು ತೋರುವ ಈ ನೀತಿಯನ್ನು ಇಡೀ ಭಾರತದಲ್ಲಿಯೇ ಕರ್ನಾಟಕ ರಾಜ್ಯವು ಮೊಟ್ಟ ಮೊದಲ ಬಾರಿಗೆ ರೂಪಿಸಿ ಅಳವಡಿಸಿಕೊಳ್ಳುತ್ತಿದೆ ಎಂದು ನೀತಿಯನ್ನು ಅನಾವರಣಗೊಳಿಸಿದ ನಂತರ ಉಪಮುಖ್ಯಮಂತ್ರಿ ಹೇಳಿದರು.
ನಮ್ಮ ದೇಶದಲ್ಲಿ ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ವಲಯವು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, 2018ರಿಂದ ವಾರ್ಷಿಕವಾಗಿ ಸರಾಸರಿ ಶೇ.12.8ರಷ್ಟು ಬೆಳವಣಿಗೆ ಸಾಧಿಸುತ್ತಿದೆ. ಇದೇ ವೇಳೆ ಈ ವಲಯದ ಮೇಲಿನ ಜಾಗತಿಕ ವೆಚ್ಚವು 2025ರ ಹೊತ್ತಿಗೆ 2 ಟ್ರಿಲಿಯನ್ ಡಾಲರ್ಗಳಷ್ಟಾಗುವ ಅಂದಾಜಿದ್ದು, ಈ ವಹಿವಾಟು ಅವಕಾಶಗಳಿಗೆ ಅನುಗುಣವಾಗಿ ರಾಜ್ಯವನ್ನು ಸಜ್ಜುಗೊಳಿಸುವ ಉದ್ದೇಶವನ್ನು ಈ ಕಾರ್ಯನೀತಿ ಹೊಂದಿದೆ ಎಂದು ಹೇಳಿದರು.
ಓದಿ:ಶೌರ್ಯ ಪ್ರಶಸ್ತಿ ಪುರಸ್ಕೃತ ರಾಜ್ಯದ ವೀರ ಯೋಧರಿಗೆ ಸಿಹಿ ಸುದ್ದಿ ನೀಡಿದ ಸಿಎಂ
ಎಲೆಕ್ಟ್ರಾನಿಕ್ಸ್, ಐಟಿ/ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ತಂತ್ರಜ್ಞಾನ ಮತ್ತು ನಾವೀನ್ಯತಾ ಸಂಸ್ಥೆ (ಕಿಟ್ಸ್), ನ್ಯಾಸ್ಕಾಂನ ಉದ್ಯಮ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ ರೂಪಿಸಿರುವ ಕಾರ್ಯನೀತಿ ಇದಾಗಿದೆ. ಇದರ ವ್ಯಾಪ್ತಿಯಲ್ಲಿ ಅನೇಕ ವಲಯಗಳನ್ನು ಸೇರಿಸಿಕೊಂಡು ಮುನ್ನಡೆಯಲಾಗುವುದು ಎಂದರು.
ಕ್ಷೇತ್ರಗಳು ಯಾವುವು?:
- ವೈಮಾಂತರಿಕ್ಷ ಮತ್ತು ರಕ್ಷಣೆ
- ವಾಹನ-ವಾಹನ ಬಿಡಿಭಾಗಗಳು-ವಿದ್ಯುತ್ ಚಾಲಿತ ವಾಹನಗಳು
- ಜೈವಿಕ ತಂತ್ರಜ್ಞಾನ, ಔಷಧ ಮತ್ತು ವೈದ್ಯಕೀಯ ಉಪಕರಣಗಳು/ಸಾಧನಗಳು
- ಅರೆವಾಹಕಗಳು, ದೂರಸಂಪರ್ಕ, ಎಲೆಕ್ಟ್ರಾನಿಕ್ ವ್ಯವಸ್ಥೆ ಮತ್ತು ಅಭಿವೃದ್ಧಿ ನಿರ್ವಹಣೆ (ಇ.ಎಸ್.ಡಿ.ಎಂ.)
- ಸಾಫ್ಟ್ವೇರ್ ಉತ್ಪನ್ನಗಳು
ಈ ಕಾರ್ಯನೀತಿಯ ಐದು ಆದ್ಯತಾ ವಲಯಗಳಾಗಿವೆ. ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ ಅನುಷ್ಟಾನದ ನಂತರ ಮೇಲಿನ ಎಲ್ಲ ಕ್ಷೇತ್ರಗಳಲ್ಲಿ ಅಚ್ಚರಿಯ ಫಲಿತಾಂಶಗಳನ್ನು ಹಾಗೂ ಮುನ್ನಡೆಯನ್ನು ಕಾಣಬಹುದು.
ಜ್ಞಾನಕಾಶಿಯಾಗಿಸಲು ಸಹಕಾರಿ:
400ಕ್ಕೂ ಹೆಚ್ಚು ಆರ್ ಆ್ಯಂಡ್ ಡಿ ಕೇಂದ್ರಗಳು/ಜಿಸಿಸಿಗಳು ರಾಜ್ಯದಲ್ಲಿದ್ದು, ದೇಶದ ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ಉದ್ಯಮದಲ್ಲಿ ಅತ್ಯಂತ ಹೆಚ್ಚಿನ ಕೊಡುಗೆ ನೀಡುತ್ತಿದೆ. ಈ ಅಗ್ರ ಶ್ರೇಯಾಂಕವನ್ನು ಕಾಯ್ದುಕೊಳ್ಳುವ ಗುರಿ ನಮಗಿದ್ದು, ಬೌದ್ಧಿಕ ಸ್ವತ್ತುಗಳ ಸೃಷ್ಟಿ ಹಾಗೂ ರಾಜ್ಯವನ್ನು ಕೌಶಲಯುಕ್ತ ಜ್ಞಾನಕಾಶಿಯಾಗಿಸಲು ಇದು ಸಹಕಾರಿ ಆಗುತ್ತದೆ ಎಂದು ಡಿಸಿಎಂ ವಿವರಿಸಿದರು.
ಅತ್ಯಂತ ಪರಿಣಾಮಕಾರಿ ಒಳನೋಟದಿಂದ ಕೂಡಿದ ನೀತಿ ಇದಾಗಿದೆ. ಉದ್ಯಮ ಪ್ರಚಲಿತ ಸ್ಥಿತಿಗತಿಗಳನ್ನು ಅವಲೋಕನ ಮಾಡಿ, ಅದಕ್ಕೆ ತಕ್ಕಂತೆ ಇದನ್ನು ರೂಪಿಸಲಾಗಿದೆ. ರಾಜ್ಯವು ಬಹುರಾಷ್ಟ್ರೀಯ ಕಂಪನಿಗಳ ಪ್ರಶಸ್ತ ಆದ್ಯತೆಯ ತಾಣವನ್ನಾಗಿಸಲು ಈ ನೀತಿ ಅನುವು ಮಾಡಿಕೊಡಲಿದೆ. ಜಾಗತಿಕ ಮುಂಚೂಣಿ ಇ.ಆರ್.&ಡಿ ಕಂಪನಿಗಳು, ಜಾಗತಿಕ ಸಾಮರ್ಥ್ಯ ಕೇಂದ್ರಗಳು (ಜಿಸಿಸಿ), ಎಂಜಿನಿಯರಿಂಗ್ ಸೇವಾದಾತರು ರಾಜ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಹೂಡಿಕೆ ಮಾಡುವಂತೆ ಮಾಡುವುದು ಹಾಗೂ ಹಾಗೆ ಬರುವ ಘಟಕಗಳಿಗೆ ರಾಜ್ಯದಲ್ಲಿ ಸೂಕ್ತ ವಾತಾವರಣ ನಿರ್ಮಿಸಬೇಕು.
ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ (ಇ.ಆರ್.&ಡಿ) ನೀತಿ-2021: ಏನು?
ನೀತಿಯ ಉದ್ದೇಶ:
- ಉದ್ಯಮ ಹಾಗೂ ಶೈಕ್ಷಣಿಕ ವಲಯದ ನಡುವೆ ಸಂಪರ್ಕಗಳನ್ನು ಸೃಷ್ಟಿಸುವುದು.
- ಕೌಶಲಯುಕ್ತ ಎಂಜಿನಿಯರಿಂಗ್ ಮಾನವ ಸಂಪನ್ಮೂಲ ಸೃಷ್ಟಿಸುವುದು.
- ಪರೀಕ್ಷೆ, ಪ್ರಾಯೋಗಿಕ ಮಾದರಿ ಹಾಗೂ ಇತರ ನಾವೀನ್ಯತಾ ಮೂಲಸೌಕರ್ಯಗಳ ಸೃಷ್ಟಿ.
- ಬೆಂಗಳೂರು ವ್ಯಾಪ್ತಿಯಾಚೆ ಎಂಜಿನಿಯರಿಂಗ್ ಆರ್&ಡಿ ಉದ್ಯಮ ಬೆಳೆಸುವುದು.
ನೀತಿಯ ಉಪಯೋಗ:
ದೇಶದ ಎಂಜಿನಿಯರಿಂಗ್ ಮತ್ತು ಅಭಿವೃದ್ಧಿ ವಹಿವಾಟನಲ್ಲಿ ಕರ್ನಾಟಕದ ಶೇ.45ರಷ್ಟು ಕೊಡುಗೆಗೆ ಅನುವು ಮಾಡಿಕೊಡುವುದು.
50,000 ಕೌಶಲಯುಕ್ತ ಉದ್ಯೋಗಗಳನ್ನು (ಪ್ರತ್ಯಕ್ಷ ಹಾಗೂ ಪರೋಕ್ಷ) ಸೃಷ್ಟಿಸುವುದು.
ಎಂಜಿನಿಯರಿಂಗ್ ಸಂಶೋಧನೆ ಹಾಗೂ ಅಭಿವೃದ್ಧಿ ಕ್ಷೇತ್ರಕ್ಕೆ ಹೆಚ್ಚು ಹೂಡಿಕೆ ಆಕರ್ಷಿಸುವುದು.
ಎಂಜಿನಿಯರಿಂಗ್/ಸಂಶೋಧನಾ ಪ್ರತಿಭಾ ಸಂಪನ್ಮೂಲ ಹಾಗೂ ಉದ್ಯಮದ ಅಗತ್ಯಗಳ ಅಂತರ ತುಂಬುವುದು.
ಪ್ರೋತ್ಸಾಹಕ ಕ್ರಮ:
- ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಾಚೆಗೆ ಸ್ಥಾಪನೆ/ವಿಸ್ತರಣೆ ಮಾಡಿದರೆ ಬಾಡಿಗೆ ಮರುಪಾವತಿ
- ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಾಚೆಗೆ ಸ್ಥಾಪನೆ/ವಿಸ್ತರಣೆ ಮಾಡಿದರೆ ನೇಮಕಾತಿಗೆ ನೆರವು
- ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಾಚೆಗೆ ಸ್ಥಾಪನೆ/ವಿಸ್ತರಣೆ ಮಾಡಿದರೆ ಹೂಡಿಕೆಗೆ ಸಬ್ಸಿಡಿ
- ನಾವೀನ್ಯತಾ ಪ್ರಯೋಗಾಲಯಗಳ ಸ್ಥಾಪನೆಗೆ ಹಣಕಾಸು ನೆರವು.
- ಡಿಜಿಟಲ್ ನಾವೀನ್ಯತಾ ಕಾರ್ಯಯೋಜನೆಗಳಿಗೆ ರೂ.3 ಕೋಟಿಯವರೆಗೆ ನೆರವು
- ಶೈಕ್ಷಣಿಕ ವಲಯದ ಸಂಶೋಧನೆಗಳನ್ನು ಔದ್ಯಮಿಕ ಆನ್ವಯಿಕತೆಯಾಗಿ ಪರಿವರ್ತಿಸಲು ಅನುದಾನ
- ಭವಿಷ್ಯದ ಇ.ಆರ್. ಮತ್ತು ಡಿ ಕೋರ್ಸುಗಳನ್ನು ರೂಪಿಸಲು ನೆರವು
- ಶೈಕ್ಷಣಿಕ ಕೌಶಲಗಳು ಹಾಗೂ ಉದ್ಯಮಗಳ ನಡುವಿನ ಅಂತರ ತುಂಬಲು ಇಂಟರ್ನಶಿಪ್ ಉತ್ತೇಜಿಸಲು ಸ್ಟೈಪೆಂಡ್ ನೀಡುವುದು ಇತ್ಯಾದಿ.
- ಇ.ಆರ್. ಆ್ಯಂಡ್ ಡಿ ವಲಯದಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಉತ್ತೇಜನ
- ಪಿಎಚ್.ಡಿ. ಮಾಡುವವರಿಗೆ ಮುಖ್ಯಮಂತ್ರಿಯವರ ಸಂಶೋಧನಾ ಅನುದಾನ
- ರಾಜ್ಯದ 150 ಐಟಿಐಗಳ ಅಭಿವೃದ್ಧಿಗೆ 5,000 ಕೋಟಿ ರೂ. ವೆಚ್ಚ
ಕೈಗಾರಿಕೆ ತರಬೇತಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಉದ್ದೇಶದಿಂದ ರಾಜ್ಯದಲ್ಲಿನ 150 ಐಟಿಐ ಶಿಕ್ಷಣ ಸಂಸ್ಥೆಗಳನ್ನು ಅಭಿವೃದ್ಧಿಪಡಿಸಲು 5,000 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ವೆಚ್ಚ ಮಾಡುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
"ಕೇವಲ ಅಕೆಡಿಮಿಕ್ ಶಿಕ್ಷಣಕ್ಕೆ ಒತ್ತು ಕೊಡುವುದಲ್ಲ, ಕೈಗಾರಿಕೆ ಹಾಗೂ ಪ್ರಗತಿಗೆ ಪೂರಕವಾದ ಕೈಗಾರಿಕಾ ತರಬೇತಿ ಶಿಕ್ಷಣಕ್ಕೆ ಸರ್ಕಾರ ಮಹತ್ವ ಕೊಡುತ್ತಿದೆ. ಆ ಮೂಲಕ ಕೈಗಾರಿಕೆಗಳಿಗೆ ಕುಶಲತೆಯುಳ್ಳ ಮಾನವ ಸಂಪನ್ಮೂಲವನ್ನು ಸ್ಥಳೀಯವಾಗಿಯೇ ಒದಗಿಸುವುದು ಗುರಿಯಾಗಿದೆ. ಜ್ಞಾನ ಮತ್ತು ಕುಶಲತೆಯಷ್ಟೇ ನಮ್ಮ ಭವಿಷ್ಯವಾಗಿದೆ. ಈ ಅಂಶವನ್ನು ದೃಷ್ಟಿಯಲ್ಲಿಟ್ಟುಕೊಂಡು ಇಷ್ಟು ಮೊತ್ತದಷ್ಟು ಹಣವನ್ನು ಐಟಿಐ ಸಂಸ್ಥೆಗಳಿಗಾಗಿ ವೆಚ್ಚ ಮಾಡಲಾಗುತ್ತಿದೆ"
ಒಂದೆಡೆ ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ-2021ನ್ನು ರೂಪಿಸಿರುವ ಬೆನ್ನಲ್ಲೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯೂ ಜಾರಿಗೆ ಬರುತ್ತಿದೆ. ಈ ಮೂಲಕ ಇಡೀ ಶಿಕ್ಷಣ ವ್ವವಸ್ಥೆಯೇ ಆಮೂಲಾಗ್ರವಾಗಿ ಬದಲಾವಣೆ ಆಗಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ಶೈಕ್ಷಣಿಕ ಸಂಸ್ಥೆಗಳಾಗಿಯೇ ಉಳಿದರೆ ಉಪಯೋಗವಿಲ್ಲ:
ಹೊಸ ಐಟಿಐ ಸಂಸ್ಥೆಗಳ ಸ್ಥಾಪನೆಯೂ ಸೇರಿದಂತೆ ಈಗಾಗಲೇ ಇರುವ ಎಲ್ಲ ಐಟಿಐಗಳನ್ನು ಜಾಗತಿಕ ಗುಣಮಟ್ಟಕ್ಕೆ ಮೇಲ್ದರ್ಜೆಗೇರಿಸಲಾಗುವುದು. ಗುಣಮಟ್ಟದ ಬೋಧನೆ-ಕಲಿಕೆಯ ಉದ್ದೇಶವಿಟ್ಟುಕೊಂಡು ಈ ಪ್ರಯತ್ನ ಕೈಗೊಳ್ಳಲಾಗಿದೆ. ಭಾರತೀಯ ಕುಶಲತೆ ಮಾನದಂಡಕ್ಕೆ ತಕ್ಕಂತೆ ಇವೆಲ್ಲ ಮರುರೂಪ ಪಡೆಯಲಿವೆ. ಕೇವಲ ಶೈಕ್ಷಣಿಕ ಸಂಸ್ಥೆಗಳಾಗಿಯೇ ಇವು ಉಳಿದರೆ ಉದ್ಯಮ ಕ್ಷೇತ್ರಕ್ಕೆ ಯಾವುದೇ ಪ್ರಯೋಜನ ಆಗುವುದಿಲ್ಲ.
ಎಂಜಿನಿಯರಿಂಗ್ ಇಂಟರ್ಶಿಪ್ ಅವಧಿ ಹೆಚ್ಚಳ:
ಉಳಿದಂತೆ ದಿಪ್ಲೊಮೋ ತರಗತಿಗಳ ಪಠ್ಯವನ್ನು ಆಮೂಲಾಗ್ರವಾಗಿ ಪರಿಷ್ಕರಣೆ ಮಾಡಲಾಗಿದೆ. ಈಗಾಗಲೇ ಮೊದಲ ವರ್ಷದ ವಿದ್ಯಾರ್ಥಿಗಳು ಪರಿಷ್ಕೃತ ಪಠ್ಯದಲ್ಲೇ ಕಲಿಯುತ್ತಿದ್ದಾರೆ. ಇನ್ನು ಎಂಜಿನಿಯರಿಂಗ್ ವಿದ್ಯಾರ್ಥಿಗಳ ಇಂಟರ್ಶಿಪ್ ಅವಧಿ 9 ತಿಂಗಳಿನಿಂದ 1 ವರ್ಷಕ್ಕೆ ವಿಸ್ತರಿಸಿ, ಅದನ್ನು ಕೈಗಾರಿಕೆಗಳಲ್ಲಿಯೇ ಮುಗಿಸುವ ಯೋಜನೆ ರೂಪಿಸಲಾಗಿದೆ. ಇದು ಕಡ್ಡಾಯವೂ ಹೌದು. ವಿದ್ಯಾರ್ಥಿಗಳ ಇಂಟರ್ನ್ಶಿಪ್ಗೆ ಉದ್ಯಮಿಗಳು ಮುಕ್ತವಾಗಿ ಅವಕಾಶ ನೀಡಬೇಕು.
ಕಾರ್ಯಕ್ರಮದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ, ಅನೇಕ ಕ್ಷೇತ್ರಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ಮೊದಲ ಸ್ಥಾನದಲ್ಲೂ ಇದೆ. ಈ ಹಿನ್ನೆಲೆಯಲ್ಲಿ ʼಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ-2021ʼ ಯನ್ನು ರೂಪಿಸಿ ಲೋಕಾರ್ಪಣೆ ಮಾಡಲಾಗಿದೆ.
ರಾಜ್ಯದ್ದು ಶೇ.40ರಷ್ಟು ಪಾಲು:
ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ರಾಜ್ಯದ ಪಾಲು ಶೇ.40ರಷ್ಟು ಅಂದರೆ, ದೇಶದಲ್ಲಿ ವಾರ್ಷಿಕ 30 ಶತಕೋಟಿ ಡಾಲರ್ ವಹಿವಾಟು ನಡೆಯುತ್ತಿದೆ. ಅದನ್ನು 100 ಶತಕೋಟಿ ಡಾಲರ್ಗೆ ಹೆಚ್ಚಿಸುವ ಹೆಗ್ಗುರಿಯೂ ಸರ್ಕಾರಕ್ಕಿದೆ ಎಂದ ಡಿಸಿಎಂ, ವೈಮಾಂತರಿಕ್ಷ ಮತ್ತು ರಕ್ಷಣೆ, ವಾಹನ-ವಾಹನ ಬಿಡಿಭಾಗಗಳು-ವಿದ್ಯುತ್ ಚಾಲಿತ ವಾಹನ, ಜೈವಿಕ ತಂತ್ರಜ್ಞಾನ, ಔಷಧ ಮತ್ತು ವೈದ್ಯಕೀಯ ಉಪಕರಣ-ಸಾಧನಗಳು, ಅರೆ ವಾಹಕಗಳು, ದೂರಸಂಪರ್ಕ, ಎಲೆಕ್ಟ್ರಾನಿಕ್ ವ್ಯವಸ್ಥೆ ಮತ್ತು ಅಭಿವೃದ್ಧಿ ನಿರ್ವಹಣೆ (ಇ.ಎಸ್.ಡಿ.ಎಂ.) ಹಾಗೂ ಸಾಫ್ಟ್ವೇರ್ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ. ಇದಕ್ಕೆ ಪೂರಕವಾಗಿ ಹೊಸ ನೀತಿಯನ್ನು ಜಾರಿಗೆ ತರಲಾಗುತ್ತಿದೆ ಎಂದರು.