ಕರ್ನಾಟಕ

karnataka

By

Published : Jul 2, 2023, 6:40 AM IST

ETV Bharat / state

Elephant Task Force: ಕಾಡಾನೆ ದಾಳಿ ತಪ್ಪಿಸಲು ವಿಶೇಷ ಕಾರ್ಯಪಡೆ ರಚನೆ

ದಿನದಿಂದ ದಿನಕ್ಕೆ ಕಾಡಾನೆಗಳ ಹಾವಳಿ ಹೆಚ್ಚುತ್ತಿದ್ದು ರಾಮನಗರ ಮತ್ತು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ವಿಶೇಷ ಆನೆ ಕಾರ್ಯಪಡೆ (ಎಲಿಫೆಂಟ್ ಟಾಸ್ಕ್ ಫೋರ್ಸ್) ರಚಿಸಲಾಗಿದೆ.

elephan

ಬೆಂಗಳೂರು: ಆನೆ ದಾಳಿ ತಪ್ಪಿಸಲು ವಿಶೇಷ ಕಾರ್ಯಪಡೆ (ಎಸ್‌ಟಿಎಫ್‌) ರಚಿಸುವ ಸಂಬಂಧ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ. ಇತ್ತೀಚಿನ ದಿನಗಳಲ್ಲಿ ರಾಮನಗರ ಮತ್ತು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಸಂರಕ್ಷಿತ ಪ್ರದೇಶದ ಆನೆಗಳು ಸುತ್ತಮುತ್ತಲಿನ ಹಳ್ಳಿಗಳಿಗೆ ನುಗ್ಗಿ ಹಾವಳಿ ನಡೆಸಿದ ಪ್ರಕರಣಗಳು ವರದಿಯಾಗಿವೆ. ಬೆಳೆಹಾನಿ ಮಾತ್ರವಲ್ಲದೇ ಪ್ರಾಣಹಾನಿ ಘಟನೆಗಳೂ ನಡೆದಿವೆ. ಈ ಉಪಟಳ ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯಪಡೆ ರಚಿಸಿ ಅಂತಿಮ ಆದೇಶ ಹೊರಡಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಪ್ರಸ್ತಾವನೆಯ ಅಂಶಗಳ ಪ್ರಕಾರ, ರಾಮನಗರ ಮತ್ತು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಬೆಂಗಳೂರು ಜಿಲ್ಲೆಗಳಲ್ಲಿ ಕಾಡಾನೆ ಹಾವಳಿ ಹೆಚ್ಚಿರುವ ಭಾಗಗಳಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಒಳಗೊಂಡ ಜಿಲ್ಲಾ ಆನೆ ಕಾರ್ಯಪಡೆ ರಚಿಸಲು ಸರ್ಕಾರ ಅನುಮತಿ ನೀಡಿದೆ ಎಂದು ರಾಜ್ಯ ಸರ್ಕಾರದ ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಅಧೀನ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.

ಕಾಡಾನೆ ಹಾವಳಿ ನಿರ್ಮೂಲನೆಗೆ ಬೆಂಗಳೂರು ಮತ್ತು ರಾಮನಗರ ಜಿಲ್ಲೆಗೊಂದರಂತೆ ಒಬ್ಬ ವಲಯ ಅರಣ್ಯಾಧಿಕಾರಿ, ಇಬ್ಬರು ಉಪ ವಲಯ ಅರಣ್ಯಾಧಿಕಾರಿ, ಐವರು ಅರಣ್ಯ ರಕ್ಷಕರು ಮತ್ತು 24 ಜನ ಇತರೆ ಹೊರಗುತ್ತಿಗೆ ಸಿಬ್ಬಂದಿ ನೇಮಿಸಿಕೊಳ್ಳಲು ಸರ್ಕಾರ ಅನುಮತಿಸಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ :ಕಾಡಂಚಿನ ಜಮೀನುಗಳಿಗೆ ನುಗ್ಗಿ ಬೆಳೆನಾಶ ಮಾಡುತ್ತಿದ್ದ ಕಾಡಾನೆ ಸೆರೆ- ವಿಡಿಯೋ

ಟಾರ್ಸ್‌ ಫೋರ್ಸ್ ಕಾರ್ಯ ನಿರ್ವಹಣೆ ಹೇಗೆ?: ಈ ಟಾಸ್ಕ್ ಫೋರ್ಸ್​ಗಳು ಆಯಾ ಅರಣ್ಯ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರ ನಿರ್ದೇಶನದಡಿ ಕಾರ್ಯ ನಿರ್ವಹಿಸುತ್ತವೆ. ತಂಡಗಳು ಕಾಡಾನೆ ಹಾವಳಿ ಇರುವ ಪುದೇಶಗಳಲ್ಲಿ ಗಸ್ತು ತಿರುಗಲಿವೆ. ಜನವಸತಿ, ಕೃಷಿ ಪ್ರದೇಶಗಳಲ್ಲಿ ಹಾಗೂ ಕಾಫಿ ಎಸ್ಟೇಟ್‌ಗಳಲ್ಲಿ ಆನೆಗಳ ಚಲನವಲನಗಳನ್ನು ಗುರುತಿಸಿ, ಕೂಡಲೇ ಸ್ಥಳಕ್ಕೆ ಧಾವಿಸಿ ಅವುಗಳನ್ನು ಅರಣ್ಯ ಪ್ರದೇಶಕ್ಕೆ ಹಿಮ್ಮೆಟ್ಟಿಸಲಿವೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಟಾಸ್ಕ್ ಫೋರ್ಸ್​ಗಳು ಕಾಡಾನೆ ಹಾವಳಿ ಕಂಡು ಬರುವ ಪ್ರದೇಶಗಳ ಹಳ್ಳಿಗಳಲ್ಲಿನ ಸಾರ್ವಜನಿಕರಿಗೆ ಆನೆಗಳ ಚಲನವಲನದ ಕುರಿತು ಮತ್ತು ಅರಣ್ಯ ಪ್ರದೇಶದೊಳಗೆ ಸಂಚರಿಸಿದಂತೆ ಮಾಹಿತಿ ನೀಡಲಿವೆ. ಪ್ರತಿ ಟಾಸ್ಕ್ ಫೋರ್ಸ್​ನ ಕೇಂದ್ರಸ್ಥಾನದಲ್ಲಿ ನಿಯಂತ್ರಣ ಕೊಠಡಿ ಕಾರ್ಯನಿರ್ವಹಿಸಲಿದ್ದು, ಸಾರ್ವಜನಿಕರಿಗೆ ಅವುಗಳ ದೂರವಾಣಿ ಸಂಖ್ಯೆಯನ್ನು ನೀಡಲಾಗುವುದು. ಕಾಡಾನೆ ದಾಳಿ ಹಿಮ್ಮೆಟ್ಟಿಸುವ ಸಂದರ್ಭಗಳಲ್ಲಿ ಸ್ಥಳೀಯ ಪೊಲೀಸ್‌ ಇಲಾಖೆಯ ಸಹಾಯ ಪಡೆಯಲಾಗುವುದು ಎಂದಿದ್ದಾರೆ.

ಇದನ್ನೂ ಓದಿ :ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಆನೆ ದಾಳಿ ಪ್ರಕರಣ; ತೆವಳುತ್ತ ಸಾಗುತ್ತಿದೆ ರೈಲ್ವೆ ಬ್ಯಾರಿಕೇಡ್ ಅಳವಡಿಕೆ ಕಾಮಗಾರಿ

ಆನೆಗಳನ್ನು ಹಿಮ್ಮೆಟ್ಟಿಸಲು ಬೇಕಿರುವ ವಾಕಿಟಾಕಿ, ಬಂದೂಕು, ಪಟಾಕಿ ಹಾಗೂ ಸಾರ್ವಜನಿಕ ಜಾಗೃತಿ ಮೂಡಿಸುವ ಸಲುವಾಗಿ ಉಪಯೋಗಿಸುವ ಸಲಕರಣೆಗಳು ಹಾಗೂ ಇನ್ನಿತರೆ ಅವಶ್ಯಕ ಸಲಕರಣೆ, ಸೌಲಭ್ಯಗಳನ್ನು ಮತ್ತು ಟಾಸ್ಕ್ ಫೋರ್ಸ್​ಗಳು ಆನೆ ಹಾವಳಿ ಪ್ರದೇಶಗಳಿಗೆ ಶೀಘ್ರವಾಗಿ ತಲುಪುವಂತಾಗಲು 3 ಬೊಲೆರೋ ಜೀಪ್‌ಗಳನ್ನು, 2 ಕ್ಯಾಂಟರ್ ವಾಹನಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಒದಗಿಸಲಿದ್ದಾರೆ.

ABOUT THE AUTHOR

...view details