ಕರ್ನಾಟಕ

karnataka

ETV Bharat / state

ಚೀನಿ ಆ್ಯಪ್​ಗಳಿಗೆ ಸಹಕಾರ‌ ನೀಡುತ್ತಿದ್ದ 7 ಕಂಪನಿಗಳ ವಿರುದ್ಧ ಪ್ರಾಸಿಕ್ಯೂಷನ್ ದಾಖಲಿಸಿದ ಇ‌ಡಿ ಅಧಿಕಾರಿಗಳು - ಅಕ್ರಮ ಹಣ ವರ್ಗಾವಣೆ ತಡೆ ವಿಶೇಷ ನ್ಯಾಯಾಲಯ

ಕಂಪನಿಗಳು ಮಾತ್ರವಲ್ಲದೇ ಐವರು ಕಂಪನಿ ನಿರ್ದೇಶಕರ ಮೇಲೆಯೂ ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್​ ದಾಖಲಾಗಿದೆ.

Enforcement Directorate
ಜಾರಿ ನಿರ್ದೇಶನಾಲಯ

By

Published : Mar 17, 2023, 8:17 PM IST

ಬೆಂಗಳೂರು: ಚೀನಾ ಮೂಲದ ಕಂಪನಿಗಳಿಗೆ ಸಹಕಾರ ನೀಡಿ ಅಕ್ರಮಕ್ಕೆ‌ ಕಾರಣರಾದ ಸ್ಥಳೀಯ ಏಳು ಕಂಪನಿಗಳು ಹಾಗೂ‌ ಐವರು ನಿರ್ದೇಶಕರ ಮೇಲೆ ಜಾರಿ ನಿರ್ದೇಶಾನಾಲಯವು (ಇ.ಡಿ) ಬೆಂಗಳೂರಿನ ಅಕ್ರಮ ಹಣ ವರ್ಗಾವಣೆ ತಡೆ ವಿಶೇಷ ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್ ದಾಖಲಿಸಿದೆ‌‌‌.

ಚೀನಾ ಮೂಲದ ಲೋನ್ ಆ್ಯಪ್ ಕಂಪನಿಗಳಿಗೆ ಅಕ್ರಮ ಎಸಗಲು ನೆರವು ನೀಡುತ್ತಿದ್ದ ಮ್ಯಾಡ್ ಎಲಿಫೆಂಟ್ ನೆಟ್‌ವರ್ಕ್ ಟೆಕ್ನಾಲಜಿ ಪ್ರೈವೆಟ್ ಲಿಮಿಟೆಡ್, ಬ್ಯಾರಿಯೊನಿಕ್ಸ್ ಟೆಕ್ನಾಲಜಿ ಪ್ರೈವೆಟ್ ಲಿಮಿಟೆಡ್, ಕ್ಲೌಡ್ ಅಟ್ಲಾಸ್ ಫ್ಯೂಚರ್ ಟೆಕ್ನಾಲಜಿ ಪ್ರೈವೆಟ್ ಲಿಮಿಟೆಡ್ ಜಮ್ನಾದಾಸ್ ಮೊರಾರ್ಜಿ ಫೈನಾನ್ಸ್ ಪ್ರೈವೆಟ್ ಲಿಮಿಟೆಡ್ ಗೇಟ್‌ವೇ ಹಾಗೂ ರೇಜರ್‌ಪೇ ಸಾಫ್ಟ್‌ವೇರ್ ಪ್ರೈವೆಟ್ ಲಿಮಿಟೆಡ್ ಕಂಪನಿಗಳು ಹಾಗೂ ಐವರು ಕಂಪನಿ ನಿರ್ದೇಶಕರ ಮೇಲೆ ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್ ದಾಖಲಾಗಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆಗಳಿಂದ ಗ್ರಾಹಕರನ್ನು ಸೆಳೆದು ಡಿಜಿಟಲ್ ಅಪ್ಲಿಕೇಶನ್ ಮುಖಾಂತರ ಲೋನ್ ಕಂಪನಿಗಳು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತಿದ್ದವು. ಬಳಿಕ ಸಾಲ ವಸೂಲಿ ಸೋಗಿನಲ್ಲಿ ಗ್ರಾಹಕರಿಗೆ ಕಿರುಕುಳ ನೀಡುತ್ತಿದ್ದವು‌‌‌. ಈ ಸಂಬಂಧ ಸಿಐಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಅಕ್ರಮವಾಗಿ 77 ಕೋಟಿ ರೂಪಾಯಿ ವಸೂಲಿ‌ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿತ್ತು. ಅಕ್ರಮವಾಗಿ ಕೋಟ್ಯಂತರ ಹಣ ವರ್ಗಾವಣೆ ಮಾಡಿರುವ ಸಂಬಂಧ ‌ಇ ಡಿ ಪ್ರತ್ಯೇಕವಾಗಿ ಪ್ರಕರಣ ದಾಖಲಿಸಿಕೊಂಡಿತ್ತು. ತನಿಖೆಯಲ್ಲಿ ಅಕ್ರಮವಾಗಿ ಹಣ ವರ್ಗಾವಣೆ ಕಂಡು ಬಂದಿದ್ದರಿಂದ ವಿಶೇಷ ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್ ದಾಖಲಿಸಿದೆ.

ಚೀನಾ ಮೂಲದ ಕಂಪನಿಗಳ ಕಚೇರಿಗೆ ದಾಳಿ ಮಾಡಿದ್ದ ಇಡಿ: ಕಳೆದ ವರ್ಷ ಒಕ್ಟೋಬರ್​ನಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ನಿರುದ್ಯೋಗಿಗಳಿಗೆ ಪಾರ್ಟ್​ಟೈಮ್​ ಕೆಲಸ ಕೊಡಿಸುತ್ತೇವೆ ಎಂದು ಭರವಸೆ ನೀಡಿ, ತಮ್ಮತ್ತ ಸೆಳೆದುಕೊಂಡು ಹಣ ಹೂಡಿಕೆ ಮಾಡಿಸಿ ವಂಚಿಸುತ್ತಿದ್ದ ಚೀನಾ ಮೂಲದ ಕಂಪನಿಗಳ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ಮಾಡಿತ್ತು. ಸುಮಾರು 12 ಕಡೆಗಳಲ್ಲಿ ದಾಳಿ ಮಾಡಿದ್ದ ಇಡಿ 5.85 ಕೋಟಿ ರೂ ಹಣವನ್ನೂ ಜಪ್ತಿ ಮಾಡಿತ್ತು.

ಬೆಟ್ಟಿಂಗ್​, ಲೋನ್​ ಆ್ಯಪ್​ಗಳ ನಿಷೇಧಕ್ಕೆ ಕೇಂದ್ರ ಸರ್ಕಾರ ಕ್ರಮ:ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಗೆ ಹಾನಿ ಮಾಡುವಂತಹ ಸುಮಾರು 138 ಬೆಟ್ಟಿಂಗ್​ ಹಾಗೂ 94 ಲೋನ್​ ಆ್ಯಪ್​ಗಳನ್ನು ನಿಷೇಧ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿರುವ ಸುದ್ದಿ ಫೆಬ್ರವರಿಯಲ್ಲಿ ಪ್ರಕಟವಾಗಿತ್ತು. ಈ ಬಗ್ಗೆ ತುರ್ತಾಗಿ ಕ್ರಮ ಕೈಗೊಳ್ಳುವಂತೆ ಗೃಹ ವ್ಯವಹಾರಗಳ ಸಚಿವಾಲಯವು ಎಲೆಕ್ಟ್ರಾನಿಕ್ಸ್​ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಶಿಫಾರಸು ಕೂಡ ಮಾಡಿದೆ ಎಂದು ಹೇಳಲಾಗಿತ್ತು. ಮೊಬೈಲ್​ ಅಪ್ಲಿಕೇಶನ್​ಗಳ ಮೂಲಕ ಸಣ್ಣ ಪ್ರಮಾಣದ ಸಾಲವನ್ನು ಪಡೆದು ಅಪಾಯಕ್ಕೆ ಸಿಲುಕಿದ್ದವರ ಸುಲಿಗೆ ಮತ್ತು ಕಿರುಕುಳದ ಹಲವಾರು ದೂರುಗಳನ್ನು ಆಧರಿಸಿ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿತ್ತು.

ಇದನ್ನೂ ಓದಿ:ಅಕ್ರಮ ಹಣ ವರ್ಗಾವಣೆ ಕೇಸ್ : ಐಎಎಸ್​ ಅಧಿಕಾರಿ ಪೂಜಾ ಸಿಂಘಾಲ್​ಗೆ ಇಡಿ ಡ್ರಿಲ್​

ABOUT THE AUTHOR

...view details