ಕರ್ನಾಟಕ

karnataka

ಪರಿಸರ ಸ್ನೇಹಿ ದೀಪಾವಳಿ ಆಚರಣೆ: ಜಾಗೃತಿ ಮೂಡಿಸಲು ಮುಂದಾದ ರಾಜ್ಯ ಅಗ್ನಿಶಾಮಕ, ತುರ್ತು ಸೇವೆಗಳ ಇಲಾಖೆ

By

Published : Nov 12, 2020, 11:15 PM IST

ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಇಲಾಖೆಯು 2020ನೇ ಸಾಲಿನ ದೀಪಾವಳಿ ಹಬ್ಬದಲ್ಲಿ ಉಂಟಾಗುವ ಅಗ್ನಿ ಅವಘಡಗಳನ್ನು ತಡೆಯುವ ನಿಟ್ಟಿನಲ್ಲಿ ಪಟಾಕಿ ವಿರುದ್ಧ ಸಮರ ಸಾರಿದೆ. ಇದರ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಸಾರ್ವಜನಿಕ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಆಯೋಜಿಸಿದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

ಬೆಂಗಳೂರು: ಕೋವಿಡ್-19 ಸೋಂಕನ್ನು ನಿಯಂತ್ರಿಸಲು ರಾಜ್ಯ ಸರ್ಕಾರವು ಈಗಾಗಲೇ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಸಾರ್ವಜನಿಕರ ಮತ್ತು ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ದೀಪಾವಳಿ ಹಬ್ಬವನ್ನು ಸರಳವಾಗಿ, ಅರ್ಥಗರ್ಭಿತವಾಗಿ ಆಚರಿಸುವುದು ಸೂಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಹಸಿರು ಪಟಾಕಿಯನ್ನು ಮಾತ್ರ ಬಳಸಿ ದೀಪಾವಳಿಯನ್ನು ಸರಳ ಸುಂದರವಾಗಿ ಆಚರಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ.

ಪ್ರಸಕ್ತ ವರ್ಷದಲ್ಲಿ ದೇಶದಾದಂತ್ಯ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಯಶಸ್ವಿಯಾಗಿ ತಡೆಗಟ್ಟುವುದು ನಮ್ಮ-ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿರುತ್ತದೆ. ಹಾಗೆಯೇ ನಮ್ಮ ರಾಜ್ಯದಲ್ಲಿಯೂ ಸಹ ಈಗ ನಾವೆಲ್ಲರೂ ಸೇರಿ, ಈ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟಿ ಸಾರ್ವಜನಿಕರ ಪ್ರಾಣವನ್ನು ರಕ್ಷಿಸುವುದು ನಮ್ಮೆಲ್ಲರ ಪ್ರಮುಖ ಕರ್ತವ್ಯವಾಗಿದೆ. ಅಂತರವನ್ನು ಕಾಪಾಡಿಕೊಳ್ಳುವುದು ಅತೀ ಮುಖ್ಯವಾಗಿದೆ.ಈ ದಿಸೆಯಲ್ಲಿ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಇಲಾಖೆಯು 2020ನೇ ಸಾಲಿನ ದೀಪಾವಳಿ ಹಬ್ಬದಲ್ಲಿ ಉಂಟಾಗುವ ಅಗ್ನಿ ಅವಘಡಗಳನ್ನು ಸೇವೆಗಳ ತಡೆಯುವ ನಿಟ್ಟಿನಲ್ಲಿ ಪಟಾಕಿ ವಿರುದ್ಧ ಸಮರ ಸಾರಿದೆ. ಇದರಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಇವುಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ಈ ಸಾರ್ವಜನಿಕ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಆಯೋಜಿಸಿದೆ.

ಪ್ರತಿ ವರ್ಷ ದೀಪಾವಳಿಯ ಹಬ್ಬದಲ್ಲಿ ಬಹುತೇಕ ಚಿಕ್ಕ ಮಕ್ಕಳು ತಮಗರಿವಿಲ್ಲದಂತೆ ಪಟಾಕಿಗಳನ್ನು ಸಿಡಿಸುತ್ತಿರುವುದರಿಂದ, ತಮ್ಮ ಅಮೂಲ್ಯವಾದ ಕಣ್ಣುಗಳನ್ನು ಕಳೆದುಕೊಳ್ಳುತ್ತಿರುವ ಪ್ರಕರಣಗಳನ್ನು ಹೆಚ್ಚಾಗಿ ಕಾಣುತ್ತಿದ್ದೇವೆ. ದೀಪಾವಳಿ ಸಂದರ್ಭದಲ್ಲಿ ಪಟಾಕಿಗಳನ್ನು ಸಿಡಿಸುವುದರಿಂದ ಅವಗಢಗಳನ್ನು ತಡೆಗಟ್ಟುವ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು, ಸಾಂಪ್ರದಾಯಿಕ ದೀಪಗಳನ್ನು ಬೆಳಗುವ ಮೂಲಕ ಪರಿಸರ ಸ್ನೇಹಿ ಹಸಿರು ಪಟಾಕಿಗಳನ್ನು ಸಿಡಿಸುವ ಮೂಲಕ ಹಬ್ಬವನ್ನು ಆಚರಿಸಬೇಕು.

ಸಾರ್ವಜನಿಕರು ಪಟಾಕಿಗಳನ್ನು ಬೇಜವಾಬ್ದಾರಿತನದಿಂದ ಸಿಡಿಸುತ್ತಿರುವುದರಿಂದ, ರಾಜ್ಯದಲ್ಲಿ ಪ್ರತೀ ವರ್ಷ ಸುಮಾರು 100 ರಿಂದ 150 ರವರೆಗೆ ಅಗ್ನಿ ಅವಘಡಗಳು ಸಂಭಸಿ, ಸಾರ್ವಜನಿಕರ ಆಸ್ತಿ-ಪಾಸ್ತಿ ನಷ್ಟವಾಗುತ್ತಿರುವ ಪ್ರಯುಕ್ತ ಈ ಅಗ್ನಿ ಅವಘಡಗಳನ್ನು ಯಶಸ್ವಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು (24X7) ಗಂಟೆಗಳ ಕಾಲವು ಸ್ಪಂದಿಸಿ ಸಾರ್ವಜನಿಕರ ಆಸ್ತಿ-ಪಾಸ್ತಿ ರಕ್ಷಿಸುವಲ್ಲಿ ಸದಾ ಸನ್ನದವಾಗಿರುತ್ತದೆ.

ಹಸಿರು ಪಟಾಕಿ ಮಾದರಿ: ವಿಜ್ಞಾನಿಗಳ ಪ್ರಕಾರ, ಸಾಂಪ್ರದಾಯಿಕ ಪಟಾಕಿಗಳಿಗೆ ಹೋಲಿಸಿದರೆ ಹಸಿರು ಪಟಾಕಿಗಳು ಸಣ್ಣ ಶೆಲ್‌ ಗಾತ್ರವನ್ನು ಹೊಂದಿರುತ್ತದೆ. ಇವು ಕಡಿಮೆ ಹಾನಿಕಾರಕ ಕಚ್ಚಾ ವಸ್ತುಗಳನ್ನು ಬಳಸಿ, ಉತ್ಪಾದಿಸಲ್ಪಡುತ್ತವೆ. ಹೊರಸೂಸುವಿಕೆಯನ್ನು ನಿಗ್ರಹಿಸುವ ಸೇರ್ಪಡೆಗಳನ್ನು ಹೊಂದಿವೆ.

ಹಸಿರು ಪಟಾಕಿಗಳಲ್ಲಿ ಲಿಥಿಯಂ, ಆರ್ಸೆನಿಕ್, ಬೇರಿಯಂ, ಸೀಸ ಮುಂತಾದ ನಿಷೇಧಿತ ರಾಸಾಯನಿಕಗಳು ಇರುವುದಿಲ್ಲ. ಹಸಿರು ಪಟಾಕಿಗಳು ಸುರಕ್ಷಿತ ನೀರನ್ನು ಬಿಡುಗಡೆ ಮಾಡುತ್ತವೆ. ಸುರಕ್ಷಿತ ಧರ್ಮೈಟ್ ಪಟಾಕಿಗಳು ಮತ್ತು ಸುರಕ್ಷಿತ ಕನಿಷ್ಠ ಅಲ್ಯೂಮಿಯಂ ಪಟಾಕಿಗಳೆಂದು ಕರೆಯಲಾಗುತ್ತೆ. ಇವುಗಳು ನೀರಿನ ಆವಿ ಬಿಡುಗಡೆ ಮಾಡಿ ಧೂಳಿನ ಕಣಗಳು ಏರಲು ಬಿಡುವುದಿಲ್ಲ. ಈ ಪಟಾಕಿಗಳನ್ನು ಶೇ. 30 ಕಣಗಳ ಮಾಲಿನ್ಯವನ್ನು ಕಡಿಮೆ ಮಾಡುವಂತೆ ವಿನ್ಯಾಸಗೊಳಿಸಲಾಗಿದೆ. ಕಳೆದ ವರ್ಷ ದೀಪಾವಳಿಯ ಸಂದರ್ಭದಲ್ಲಿ 10 ವರ್ಷಕ್ಕಿಂತ ಚಿಕ್ಕ ವಯಸ್ಸಿನ ಸುಮಾರು 20 ಮಕ್ಕಳ ಕಣ್ಣುಗಳಿಗೆ ಹಾನಿ ಉಂಟಾಗಿದ್ದು, ಮತ್ತು ದೇಶಾದ್ಯಂತ 7 ಜನರು ಪ್ರಾಣ ಕಳೆದುಕೊಂಡಿದ್ದರು.

ಅಗ್ನಿಶಾಮಕ ಸನ್ನದ್ದ:ಪಟಾಕಿಗಳ ಬಳಕೆಯಿಂದ ಉಂಟಾಗುವ ಅಗ್ನಿ ಅವಘಡಗಳನ್ನು ಯಶಸ್ವಿಯಾಗಿ ತಡೆಗಟ್ಟು ನಿಟ್ಟಿನಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು 24 ಗಂಟೆಗಳ ಕಾಲವು ಸದಾ ಸನ್ನದ್ದವಾಗಿರುತ್ತದೆ. ಯಾವುದೇ ಶಬ್ದವನ್ನು ಉಂಟು ಮಾಡುವುದಿಲ್ಲ ಎಂದು ಪರಿಗಣಿಸುವ ಸಣ್ಣ ಪಟಾಕಿಗಳು, ಹೂವಿನ ಕುಂಡಗಳು ಸಹ ದಟ್ಟವಾದ ಹೊಗೆಯನ್ನು ಉಂಟು ಮಾಡುತ್ತವೆ. ಪಟಾಕಿಗಳಲ್ಲಿ ವಿಷಕಾರಕ ಅಂಶ ಇರುವುದರಿಂದಾಗಿ ಚಿಕ್ಕ ಮಕ್ಕಳ ಹಾಗೂ ವಯೋವೃದ್ದರ ಉಸಿರಾಟದ ಮೇಲೆ ಪರಿಣಾಮ ಬೀರುತ್ತದೆ. ಪಟಾಕಿಗಳಲ್ಲಿ ಹೊರಸೂಸುವ ನೈಟ್ರಸ್ ಆಕ್ಸೈಡ್ ಹಾಗೂ ಸಲಫರ್ ಡೈ ಆನ್ಲೈಡ್‌ನಿಂದಾಗಿ ವಾತಾವರಣದಲ್ಲಿ ಮಾಲಿನ್ಯದ ಮಟ್ಟ ಹೆಚ್ಚಳವಾಗಲಿದೆ. ಕಣ್ಣು ಕಿವಿಗೆ ಹಾನಿಯಾಗುವ ಸಾಧ್ಯತೆ ಇದೆ.

ಪಟಾಕಿ ಬಳಕೆಯಿಂದ ಉಸಿರಾಟದ ಸಮಸ್ಯೆ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಮತ್ತು ನರಗಳಿಗೆ ಸಂಬಂಧಿಸಿದ ತೊಂದರೆಯಿಂದ ಬಳಲುತ್ತಿರುವವರ ಮೇಲೆ ಗಂಭೀರವಾದ ಪರಿಣಾಮ ಬೀರುತ್ತದೆ. ಪಟಾಕಿಗಳು ಹೊರಸೂಸುವ ವಿಷಕಾರಿ ಅನಿಲವನ್ನು ಗರ್ಭಿಣಿಯರು ಸೇವಿಸಿದರೆ ತಾಯಿ ಹಾಗೂ ಹುಟ್ಟುವ ಮಗುವಿಗೂ ತೊಂದರೆಯಾಗುತ್ತದೆ. ಹುಟ್ಟುತ್ತಲೇ ಮಗುವಿಗೆ ಉಸಿರಾಟದ ತೊಂದರೆ ಉಂಟಾಗಬಹುದು.ಆದ್ದರಿಂದ ಸಾರ್ವಜನಿಕರು ಈ ವರ್ಷದ ದೀಪಾಳಿಯಂದು ಪರಿಸರ ಸ್ನೇಹಿ ಹಸಿರು ಪಟಾಕಿಗಳನ್ನು ಮಾತ್ರ ಬಳಸಿ, ಹಬ್ಬವನ್ನು ಆಚರಿಸಬೇಕೆಂದು ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಈ ಜಾಥಾದ ಮುಖಾಂತರ ಮನವಿ ಮಾಡಿದೆ.

ABOUT THE AUTHOR

...view details