ಕರ್ನಾಟಕ

karnataka

ETV Bharat / state

ಮಾದಕ ವಸ್ತು ಸಾಗಣೆ ಪ್ರಕರಣ: ಆರೋಪಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್ - Drugs will have a bad effect

ಮಾದಕ ವಸ್ತುಗಳ ರವಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಜಾಮೀನು ನೀಡಲು ಹೈಕೋರ್ಟ್​ ನಿರಾಕರಿಸಿದೆ.

high court
ಹೈಕೋರ್ಟ್

By

Published : Nov 15, 2022, 2:11 PM IST

Updated : Nov 15, 2022, 2:48 PM IST

ಬೆಂಗಳೂರು: ಮಾದಕ ವಸ್ತುಗಳು ಯುವ ಜನತೆಯನ್ನು ಗುರಿಯಾಗಿಸುವುದಲ್ಲದೆ, ಇಡೀ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ. ದೇಶದ ಆರ್ಥಿಕ ಸ್ಥಿತಿಗತಿಯ ಮೇಲೆ ಪ್ರಭಾವ ಬೀರಲಿವೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಮಾದಕ ವಸ್ತುಗಳನ್ನು ಅಕ್ರಮವಾಗಿ ವಿದೇಶಕ್ಕೆ ರವಾನೆ ಮಾಡುತ್ತಿದ್ದ ಕೇರಳ ಮೂಲದ ಆರೋಪಿಗೆ ಜಾಮೀನು ನಿರಾಕರಿಸಿದೆ.

ಮಾದಕ ವಸ್ತುಗಳ ಸಾಗಣೆಗೆ ಅಕ್ರಮವಾಗಿ ಹಣ ಹೂಡಿಕೆ ಮಾಡಲಾಗುತ್ತಿದ್ದು, ಇದು ಕಾನೂನು ಬಾಹಿರವಾಗಿ ಹಣ ಮಾಡುವ ದಂದೆಯಾಗಿದೆ. ಈ ಚಟುವಟುಕೆಯನ್ನು ಹಗುರವಾಗಿ ಪರಿಗಣಿಸಲಾಗದು ಎಂದು ನ್ಯಾ.ರಾಜೇಂದ್ರ ಬಾದಾಮಿಕರ್ ಅವರಿದ್ದ ನ್ಯಾಯಪೀಠ ತಿಳಿಸಿದ್ದು, ಕೇರಳದ ಮಲ್ಲಪುರಂ ನ ಥಾಹಾ ಉಮ್ಮರ್ ಎಂಬುವರಿಗೆ ಜಾಮೀನು ನಿರಾಕರಿಸಿದೆ. ಮಾದಕ ದ್ರವ್ಯ ಸಾಗಣೆ ಪ್ರಕರಣದಲ್ಲಿ ನಿರ್ದಿಷ್ಟ ಪಡಿಸಿದ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಾದಕ ವಸ್ತುವಿನ ಪರೀಕ್ಷೆ ಸಂಗ್ರಹ ಮಾಡಿದ ಕಾರಣ ಜಾಮೀನು ಪಡೆಯಲು ಅರ್ಹನಾಗುತ್ತಾನೆ ಎಂಬ ವಾದವನ್ನು ಹೈಕೋರ್ಟ್ ತಳ್ಳಿಹಾಕಿದೆ.

ನ್ಯಾಯಾಲಯದ ಆದೇಶವೇನು?ಅರ್ಜಿದಾರ ಮೆಡಿಕಲ್ ಶಾಪ್ ಮಾಲೀಕ. ಅಲ್ಲಿ ಕೆಲಸ ಮಾಡುವ ಉದ್ಯೋಗಿಯ ಆಧಾರ್ ಕಾರ್ಡ್ ದುರ್ಬಳಕೆ ಮಾಡಿಕೊಂಡು, ನಕಲಿ ರೋಗಿಗಳ ಹೆಸರಿನಲ್ಲಿ ವಿಳಾಸ ಮತ್ತು ವೈದ್ಯರ ಚೀಟಿ ಸೃಷ್ಟಿಸಿ ಅಂಚೆ ಮೂಲಕ ವಿದೇಶಗಳಿಗೆ ಮಾದಕ ದ್ರವ್ಯ ಸರಬರಾಜು ಮಾಡುತ್ತಿದ್ದ. ಇದು ಗಂಭೀರ ಆರೋಪವಾಗಿದ್ದು, ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ತಿಳಿಸಿ ಹೈಕೋರ್ಟ್​ ಜಾಮೀನು ನಿರಾಕರಿಸಿದೆ. ಪರೀಕ್ಷೆಗಾಗಿ 5 ಗ್ರಾಂ ಮಾದಕ ವಸ್ತು ಮಾದರಿ ಸಂಗ್ರಹಿಸುವುದು ಕಡ್ಡಾಯ. ಉಮ್ಮರ್ ಭಾಗಿಯಾಗಿರುವ ಈ ಪ್ರಕರಣದಲ್ಲಿ 4.2 ಗ್ರಾಂ ಮಾದರಿ ಸಂಗ್ರಹಿಸಲಾಗಿದೆ. ಆದರೆ, ಈ ಪ್ರಮಾಣದಿಂದ ಪರೀಕ್ಷೆ ನಡೆಸಲು ಸಾಧ್ಯವಿಲ್ಲ ಅಥವಾ ಸಂಗ್ರಹಿಸಿದ ಮಾದರಿ ಕಡಿಮೆ ಪ್ರಮಾಣದಲ್ಲಿದೆ ಎಂದು ರಾಸಾಯನಿಕ ಪರೀಕ್ಷಕರು ತಿಳಿಸಿಲ್ಲ. ಪರೀಕ್ಷೆ ನಡೆಸಲು ನಿರಾಕರಿಸಿಯೂ ಇಲ್ಲ. ಹಾಗಾಗಿ, ಈ ವಾದವನ್ನು ಪರಿಗಣಿಸಿ ಆರೋಪಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

ಅರ್ಜಿದಾರರ ವಾದವೇನು?ವಿಚಾರಣೆ ವೇಳೆ ಅರ್ಜಿದಾರ ಪರ ವಕೀಲರು, ಉಮ್ಮರ್ ಅಮಾಯಕನಾಗಿದ್ದಾನೆ. ವೈದ್ಯಕೀಯ ಸಾಮಗ್ರಿಗಳ ಪೂರೈಕೆದಾರನಾಗಿ ಉದ್ಯೋಗ ಮಾಡುತ್ತಿದ್ದು, ಆತ ರಫ್ತುದಾರನಲ್ಲ. ಎನ್‌ಡಿಪಿಎಸ್ ಕಾಯ್ದೆಯ ಸ್ಥಾಯಿ ಆದೇಶ (ಸ್ಟ್ಯಾಂಡರ್ಡ್ ಆರ್ಡರ್) ಪ್ರಕಾರ ಮಾದಕ ದ್ರವ್ಯ ಪರೀಕ್ಷೆಗೆ 5 ಗ್ರಾಂನಷ್ಟು ಮಾದರಿ ಸಂಗ್ರಹಿಸಬೇಕು. ಪ್ರಕರಣದಲ್ಲಿ ಕೇವಲ 4.2 ಗ್ರಾಂ ಮಾದರಿ ಸಂಗ್ರಹಿಸಲಾಗಿದೆ. ಹಾಗಾಗಿ ಸೂಚಿಸಿದ ಸರಿಯಾದ ಕಾರ್ಯವಿಧಾನ ಅನುಸರಿಸದಿದ್ದಲ್ಲಿ ಆರೋಪಿ ಜಾಮೀನು ಪಡೆಯಲು ಅರ್ಹರಾಗಿರುತ್ತಾರೆ ಎಂದು ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: ಅಜ್ಮಲ್ ನಾನತ್ ವಾಲಿಯತ್ ಅವರ ಹೆಸರಿನಲ್ಲಿ, ಸೌದಿ ಅರೇಬಿ ನಿವಾಸಿ ಜೈನಲ್ ಅಬಿದ ಮನ್ನ್ ಪರಂಬನ್ ಅವರ ವಿಳಾಸಕ್ಕೆ ಕೊರಿಯರ್ ಮೂಲಕ ಎನ್‌ಡಿಪಿಎಸ್ ಕಾಯ್ದೆಯಡಿಯ ನಿಷೇಧಿತ ಪದಾರ್ಥವಾದ ಕ್ಲೋನಜೆಂಪಮ್ ಟ್ಯಾಬ್ಲೆಟ್ ಅನ್ನು ಅರ್ಜಿದಾರ ಥಾಹಾ ಉಮ್ಮರ್ ರವಾನಿಸುತ್ತಿದ್ದ. ಇದನ್ನು ಪತ್ತೆ ಹಚ್ಚಿದ್ದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಾದಕ ವಸ್ತುಗಳ ನಿಯಂತ್ರಣಾ ಬ್ಯೂರೋ(ಎನ್‌ಸಿಬಿ) ಅಧಿಕಾರಿಗಳು ದಾಳಿ ನಡೆಸಿ, ಅಕ್ರಮವಾಗಿ ರವಾನಿಸುತ್ತಿದ್ದ 357 ಗ್ರಾಂ ನಷ್ಟಿದ್ದ ಮಾದಕ ಟ್ಯಾಬ್ಲೆಟ್‌ಗಳನ್ನು ಅಧಿಕಾರಿಗಳು ಜಪ್ತಿ ಮಾಡಿ 2022 ರ ಆ.25ರಂದು ಉಮ್ಮರ್​ನನ್ನು ಬಂಧಿಸಲಾಗಿತ್ತು. ಅಧೀನ ನ್ಯಾಯಾಲಯ ಜಾಮೀನು ನಿರಾಕರಿಸಿದ್ದರಿಂದ ಆರೋಪಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ.

ಇದನ್ನೂ ಓದಿ:ರಸ್ತೆ ಅಪಘಾತದಲ್ಲಿ ಅಂಗವೈಕಲ್ಯಕ್ಕೆ ಒಳಗಾಗಿದ್ದ ಇಂಜಿನಿಯರ್​​ಗೆ 44 ಲಕ್ಷ ಪರಿಹಾರ ಕೊಡಿಸಿದ ಹೈಕೋರ್ಟ್

Last Updated : Nov 15, 2022, 2:48 PM IST

For All Latest Updates

ABOUT THE AUTHOR

...view details