ಕರ್ನಾಟಕ

karnataka

ETV Bharat / state

ಬೈಕ್  ಟ್ಯಾಕ್ಸಿ ಸೇವೆ- ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುವ ಹುನ್ನಾರ: ತನ್ವೀರ್ ಪಾಷಾ ಆರೋಪ

ಬೈಕ್ ಟ್ಯಾಕ್ಸಿ ಸೇವೆಗೆ ರಾಜ್ಯ ಮೋಟಾರು ವಾಹನ ಕಾಯ್ದೆಯಲ್ಲಿ ಅವಕಾಶ ಇಲ್ಲದಿದ್ದರೂ ಸರ್ಕಾರ ಹೊಸದಾಗಿ ಆದೇಶ ಮಾಡಿದೆ. ಸರ್ಕಾರ ಯೋಜನೆ ಹಿಂಪಡೆಯದಿದ್ದರೆ ಅತೀ ಶೀಘ್ರದಲ್ಲೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಓಲಾ ಊಬರ್ ಚಾಲಕರು ಮತ್ತು ಮಾಲೀಕರ ಸಂಘದ ಸಂಸ್ಥಾಪಕ ಅಧ್ಯಕ್ಷ ತನ್ವೀರ್ ಪಾಷಾ ಎಚ್ಚರಿಸಿದ್ದಾರೆ.

By

Published : Jul 22, 2021, 7:38 AM IST

tanveer-pasha
ಬೈಕ್-ಟ್ಯಾಕ್ಸಿ ಸೇವೆ

ಬೆಂಗಳೂರು:ಬೈಕ್ ಟ್ಯಾಕ್ಸಿ ಸೇವೆಗೆ ರಾಜ್ಯ ಮೋಟಾರು ವಾಹನ ಕಾಯ್ದೆಯಲ್ಲಿ ಅವಕಾಶ ಇಲ್ಲದಿದ್ದರೂ ಸರ್ಕಾರ ಹೊಸದಾಗಿ ಆದೇಶ ಮಾಡಿ ಬೈಕ್ ಟ್ಯಾಕ್ಸಿ ಸೇವೆಗೆ ಅವಕಾಶ ನೀಡಲು ಮುಂದಾಗಿದೆ. ಇದರಿಂದ ಲಕ್ಷಾಂತರ ಆಟೋ ಮತ್ತು ಟ್ಯಾಕ್ಸಿ ಚಾಲಕರು ಬೀದಿಗೆ ಬೀಳಲಿದ್ದಾರೆ. ಸರ್ಕಾರದ ಈ ನಡೆ ಬೈಕ್ ಹಾಗೂ ಟ್ಯಾಕ್ಸಿ ಸಂಸ್ಥೆಗಳೊಂದಿಗೆ ಲಾಭಿ ನಡೆಸಿ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡಲು ಹೊರಟಿರುವ ಹಾಗೆ ಕಾಣುತ್ತಿದೆ ಎಂದು ಓಲಾ ಊಬರ್ ಚಾಲಕರು ಮತ್ತು ಮಾಲೀಕರ ಸಂಘದ ಸಂಸ್ಥಾಪಕ ಅಧ್ಯಕ್ಷ ತನ್ವೀರ್ ಪಾಷಾ ಆರೋಪಿಸಿದರು.

ಈ ಹಿನ್ನೆಲೆಯಲ್ಲಿ ಜುಲೈ 22ರಂದು ಬೆಳಗ್ಗೆ 11 ಗಂಟೆಗೆ ಕೆಎಚ್ ರಸ್ತೆ (ಡಬಲ್ ರೋಡ್)ಯಲ್ಲಿರುವ ಸಂಘಟನೆಯ ಮುಖ್ಯ ಕಚೇರಿಯಿಂದ ಸಾರಿಗೆ ಆಯುಕ್ತರ ಕಚೇರಿಯವರೆಗೆ 200ಕ್ಕೂ ಅಧಿಕ ಚಾಲಕರು ಹಾಗೂ ಸಂಘದ ಪದಾಧಿಕಾರಿಗಳು ಕಾಲ್ನಡಿಗೆ ಮೂಲಕ ತೆರಳಿ ಯೋಜನೆ ಕೂಡಲೆ ಹಿಂಪಡೆಯುವಂತೆ ಆಯುಕ್ತರಿಗೆ ಮನವಿ ಸಲ್ಲಿಸುತ್ತೇವೆ ಎಂದು ಮಾಹಿತಿ ನೀಡಿದರು.

ಸರ್ಕಾರ ಯೋಜನೆ ಹಿಂಪಡೆಯದಿದ್ದರೆ ಅತೀ ಶೀಘ್ರದಲ್ಲೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ. ಹಲವಾರು ವರ್ಷಗಳಿಂದ ಓಲಾ ಊಬರ್ ಸಂಸ್ಥೆಗಳು ಕಾನೂನು ಉಲ್ಲಂಘನೆ ಮಾಡುತ್ತಿದ್ದರೂ ಕಣ್ಮುಚ್ಚಿ ಕುಳಿತಿದ್ದ ಅಧಿಕಾರಿಗಳು, ಇತ್ತೀಚಿನ ದಿನಗಳಲ್ಲಿ ಓಲಾ ಸಂಸ್ಥೆ ನಿಯಮ ಉಲ್ಲಂಘನೆ ಮಾಡುತ್ತಿದೆ ಎಂದು ಅಮಾಯಕ ಚಾಲಕರ ವಾಹನಗಳನ್ನು ಹಿಡಿದು ಅವರಿಗೆ ತೊಂದರೆ ನೀಡುತ್ತಿದೆ. ಇದನ್ನು ನಿಲ್ಲಿಸಬೇಕೆಂದು ಆಯುಕ್ತರಿಗೆ ಒತ್ತಾಯಿಸಲಾಗುವುದು ಎಂದು ಹೇಳಿದರು.

ಬೇಕಾದರೆ ಓಲಾ ಸಂಸ್ಥೆಯ ಪರವಾನಗಿ ರದ್ದು ಮಾಡಲಿ. ಅದನ್ನು ಬಿಟ್ಟು ಬಡ ಚಾಲಕರ ಮೇಲೆ ನಡೆಸುತ್ತಿರುವ ದಬ್ಬಾಳಿಕೆ ಎಷ್ಟು ಸರಿ?. ಈ ವಿಷಯದಲ್ಲಿ ನಮಗೆ ಮಾಧ್ಯಮ ಸಹಕಾರ ಅತ್ಯಗತ್ಯವಾಗಿದ್ದು, ಬಡ ಚಾಲಕರಿಗೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಸರ್ಕಾರದ ಮತ್ತು ವಿರೋಧ ಪಕ್ಷಗಳ ಗಮನ ಸೆಳೆಯಲು ಸಹಾಯ ಮಾಡಬೇಕೆಂದು ತನ್ವೀರ್ ಪಾಷಾ ವಿನಂತಿಸಿದರು.

ABOUT THE AUTHOR

...view details