ಕರ್ನಾಟಕ

karnataka

ETV Bharat / state

ಒಳಚರಂಡಿ ನೀರನ್ನು ಮಳೆ ನೀರು ಕಾಲುವೆಗೆ ಹರಿಸಿದ್ದಕ್ಕೆ ಸಮಗ್ರ ತನಿಖೆಗೆ ಆದೇಶಿಸಿದ ಹೈಕೋರ್ಟ್​

ಬೆಂಗಳೂರಿನ ಆನೇಕಲ್ ನಗರದ ವಿನಾಯಕ ಬಡಾವಣೆಯಲ್ಲಿನ ಒಳಚರಂಡಿ ನೀರನ್ನು ಮಳೆ ನೀರು ಕಾಲುವೆಗೆ ಬಿಡಲು ಅನುಮತಿ ನೀಡಿರುವುದಕ್ಕೆ ಸಮಗ್ರ ತನಿಖೆ ನಡೆಸಲು ಹೈಕೋರ್ಟ್ ಪೊಲೀಸ್​ ಇಲಾಖೆಗೆ ಸೂಚನೆ ನೀಡಿದೆ.

By

Published : Oct 6, 2022, 9:41 PM IST

draining-of-sewage-water-into-the-rain-water-canal
ಒಳಚರಂಡಿ ನೀರನ್ನು ಮಳೆ ನೀರು ಕಾಲುವೆಗೆ ಹರಿಸಿದ್ದಕ್ಕೆ ಸಮಗ್ರ ತನಿಖೆಗೆ ಆದೇಶಿಸಿದ ಹೈಕೋರ್ಟ್​

ಬೆಂಗಳೂರು :ಆನೇಕಲ್ ನಗರದ ವಿನಾಯಕ ಬಡಾವಣೆಯಲ್ಲಿ ವಸತಿ ಪ್ರದೇಶದ ಒಳಚರಂಡಿ ನೀರನ್ನು ಮಳೆ ನೀರು ಕಾಲುವೆಗೆ ಬಿಡಲು ಅನುಮತಿ ನೀಡಿರುವುದಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಲು ಹೈಕೋರ್ಟ್ ಪೊಲೀಸ್​ ಇಲಾಖೆಗೆ ಸೂಚನೆ ನೀಡಿದೆ.

ಆರೋಪಕ್ಕೆ ಸಂಬಂಧಿಸಿದಂತೆ ಆನೇಕಲ್​ ತಹಶೀಲ್ದಾರ್​ ದಾಖಲಿಸಿದ್ದ ಕ್ರಿಮಿನಲ್​ ಮೊಕದ್ದಮೆ ಪ್ರಶ್ನಿಸಿ ಶಾಂತಿಪುರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕ ಸದಸ್ಯಪೀಠ ಈ ಸೂಚನೆ ನೀಡಿದೆ.

ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ನಲ್ಲಿ ವಸತಿ ಬಡಾವಣೆಯ ಒಳಚರಂಡಿ ವ್ಯವಸ್ಥೆಯನ್ನು ರಾಜಕಾಲುವೆಗೆ ಜೋಡಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಇತರ ಸರ್ಕಾರಿ ಅಧಿಕಾರಿಗಳು ಹೇಗೆ ಅನುಮತಿ ನೀಡಿದರೆಂಬುದನ್ನು ಪತ್ತೆ ಹಚ್ಚಬೇಕಾಗಿದೆ. ಹಾಗಾಗಿ ಪ್ರಸ್ತುತ ದಾಖಲಿಸಿರುವ ಕ್ರಿಮಿನಲ್ ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಸಬೇಕಾಗಿದ್ದು, ಉಪ ಪೊಲೀಸ್ ಆಯುಕ್ತರ ಶ್ರೇಣಿಗಿಂತ ಕಡಿಮೆಯಿಲ್ಲದ ಅಧಿಕಾರಿಯಿಂದ ಹೆಚ್ಚಿನ ತನಿಖೆ ನಡೆಸಬೇಕು ಎಂದು ನ್ಯಾಯಾಲಯ ಪೊಲೀಸ್ ಮಹಾನಿರ್ದೇಶಕರಿಗೆ ಆದೇಶಿಸಿದೆ.

ಅಲ್ಲದೆ, ಕಂದಾಯ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕೆರೆ ಅಭಿವೃದ್ಧಿ ಪ್ರಾಧಿಕಾರ, ಬಿಬಿಎಂಪಿ ಮತ್ತಿತರ ಸಂಸ್ಥೆಗಳು ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಸೂಚನೆ ನೀಡಿದೆ.

ಗ್ರಾಮೀಣಾಭಿವೃದ್ಧಿ ಇಲಾಖೆ ಯುಜಿಡಿ ವ್ಯವಸ್ಥೆಯನ್ನು ಮಳೆನೀರು ಕಾಲುವೆಗೆ ಸಂಪರ್ಕಿಸಲು ಮಂಜೂರಾತಿ ನೀಡಿದೆ ಮತ್ತು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ(ನರೇಗಾ) ಯೋಜನೆಯಡಿ ಅನುದಾನ ನೀಡಲಾಗಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ. ಅದು ಹೇಗೆ ಸಾಧ್ಯವಾಗಿದೆ ಎಂಬುದು ಅಚ್ಚರಿಯ ವಿಚಾರ. ಹಾಗಾಗಿ ಹೆಚ್ಚಿನ ತನಿಖೆ ನಡೆಸುವುದು ಅಗತ್ಯ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.

ಅಲ್ಲದೇ, ಈ ಕಾರ್ಯಕ್ಕೆ ಸಂಬಂಧಿಸಿದಂತೆ ಸಂಪೂರ್ಣ ವಿವರವನ್ನು ನ್ಯಾಯಪೀಠಕ್ಕೆ ಸಲ್ಲಿಕೆ ಮಾಡಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ. ಈ ರೀತಿಯ ಘಟನೆಗಳು ದೀರ್ಘಾವಧಿಯಲ್ಲಿ ಸಾಕಷ್ಟು ಪರಿಣಾಮ ಬೀರುತ್ತವೆ ಮತ್ತು ಅದು ಸಾರ್ವಜನಿಕ ಪ್ರಾಮುಖ್ಯತೆ ಹೊಂದಿರುವುದರಿಂದ ಸ್ವಯಂ ಪ್ರೇರಿತ ಪಿಐಎಲ್ ದಾಖಲಿಸಿಕೊಳ್ಳುವುದು ಅಗತ್ಯ ಎಂದು ಅಭಿಪ್ರಾಯ ಪಟ್ಟಿರುವ ನ್ಯಾಯಪೀಠ, ಈ ಕುರಿತು ಮುಂದಿನ ಕ್ರಮಕ್ಕಾಗಿ ಕಡತವನ್ನು ಮುಖ್ಯ ನ್ಯಾಯಮೂರ್ತಿಗಳ ಮುಂದೆ ಮಂಡಿಸಲು ರಿಜಿಸ್ಟ್ರಾರ್‌ ಜನರಲ್‌ಗೆ ನಿರ್ದೇಶನ ನೀಡಿದೆ.

ಪ್ರಕರಣ: ಆನೇಕಲ್​ ತಾಲೂಕಿನ ವಿನಾಯಕ ಬಡಾವಣೆಯ ಒಳಚರಂಡಿ ಮಾರ್ಗಗಳನ್ನು ಕೆರೆಗೆ ಹರಿಯುವ ರಾಜಕಾಲುವೆಗೆ ಜೋಡಿಸಿದ್ದರು. ಈ ಕ್ರಮದ ವಿರುದ್ದ ಆನೇಕಲ್ ತಾಲೂಕಿನ ತಹಶೀಲ್ದಾರ್‌ 2016ರಲ್ಲಿ ಶಾಂತಿಪುರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. ಈ ಮೊಕದ್ದಮೆ ಸಿಂಧುತ್ವ ಪ್ರಶ್ನಿಸಿ ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಿದ್ದರು.

ಇದನ್ನೂ ಓದಿ :ಒತ್ತುವರಿ ಸರ್ವೇ ಕಾರ್ಯ ಮತ್ತಷ್ಟು ಚುರುಕು: ತುಷಾರ್ ಗಿರಿನಾಥ್

ABOUT THE AUTHOR

...view details