ಬೆಂಗಳೂರು: ಎರಡು ವಿಧಾನಸಭೆಗಳಿಗೆ ನಡೆಯುವ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಪಕ್ಷ ಇಂದು ಬಿಫಾರಂ ವಿತರಿಸಿದೆ. ನಿರೀಕ್ಷೆಯಂತೆ ಹಾನಗಲ್ ವಿಧಾನಸಭೆ ಕ್ಷೇತ್ರಕ್ಕೆ ಕಳೆದ ಸಾರಿಯ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಅವರೇ ಆಯ್ಕೆಯಾಗಿದ್ದಾರೆ.
ಇನ್ನೊಂದೆಡೆ ಸಿಂದಗಿ ಕ್ಷೇತ್ರದಿಂದ ಅಶೋಕ್ ಮನಗೂಳಿ ಅವರಿಗೆ ಬಹು ಸಮಯದ ಹಿಂದೆಯೇ ಟಿಕೆಟ್ ಘೋಷಣೆಯಾಗಿತ್ತು. ಬಿಜೆಪಿ ಶಾಸಕರಾಗಿದ್ದ ಮಾಜಿ ಸಚಿವ ಸಿಎಂ ಉದಾಸಿ ನಿಧನದಿಂದ ಹಾನಗಲ್ ಹಾಗೂ ಶಾಸಕ ಹಾಗೂ ಮಾಜಿ ಸಚಿವ ಎಂ.ಸಿ. ಮನಗೂಳಿ ನಿಧನದಿಂದ ಸಿಂದಗಿ ಕ್ಷೇತ್ರ ತೆರವಾಗಿತ್ತು. ಸಿಂದಗಿಯಿಂದ ಮನಗೂಳಿ ಪುತ್ರನಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.
ಹಾನಗಲ್ ನಲ್ಲಿ ಮಾಜಿ ಸಚಿವ ಮನೋಹರ್ ತಹಶೀಲ್ದಾರ್ ಹಾಗೂ ಕಳೆದ ಸಾರಿಯ ಅಭ್ಯರ್ಥಿ ಶ್ರೀನಿವಾಸ್ ಮಾನೆ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಹೈಕಮಾಂಡ್ ಅಧಿಕೃತ ಆದೇಶ ಬಂದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಇಂದು ಹಾನಗಲ್ ಹಾಗೂ ಸಿಂದಗಿ ಅಭ್ಯರ್ಥಿಗಳಿಗೆ ಬಿಫಾರಂ ವಿತರಿಸಿದ್ದಾರೆ.