ಬೆಂಗಳೂರು:ಕೋವಿಡ್ ವಿಚಾರದಲ್ಲಿ ಕೇವಲ ಸರ್ಕಾರದ ಘೋಷಣೆಗಳು ಮಾತ್ರ ಕಾಣುತ್ತಿವೆ. ನಿಜವಾದ ಕಾಳಜಿ ಕಾಣಿಸುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಜೂನ್ 14ರಂದು ನಿಗದಿಯಾಗಿರುವ ತಮ್ಮ ಪದಗ್ರಹಣ ನಿಮಿತ್ತ ಪ್ರತಿಜ್ಞಾ ವಿಧಿ ಕಾರ್ಯಕ್ರಮದ ಪೂರ್ವ ತಯಾರಿ ಅಂಗವಾಗಿ ಭಾನುವಾರ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಬ್ಲಾಕ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಜೊತೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ರೈತರಿಗೆ, ಕಾರ್ಮಿಕರಿಗೆ, ಅಸಂಘಟಿತ ವಲಯ ಕಾರ್ಮಿಕರು, ವೃತ್ತಿಪರ ಕಾರ್ಮಿಕರಿಗೆ ಸೂಕ್ತ ಸೌಕರ್ಯ ಕಲ್ಪಿಸುವ ಕಾರ್ಯ ಸರ್ಕಾರದಿಂದ ಆಗಿಲ್ಲ. ಆದ್ದರಿಂದ ನಮ್ಮ ಪಕ್ಷದ ಕಾರ್ಯಕರ್ತರಿಗೆ ಜನರಿಗೆ ಶಕ್ತ್ಯಾನುಸಾರ ಸಹಾಯ ಮಾಡಲು ಸೂಚಿಸಿದ್ದೇನೆ ಎಂದರು.
150ಕ್ಕೂ ಕಡಿಮೆ ಜನರೊಂದಿಗೆ ಪದಗ್ರಹಣ ಸಮಾರಂಭ ನಡೆಸಲು ಸಾಧ್ಯವಿಲ್ಲ. ಇದರಿಂದ ಪರವಾನಗಿ ಕೇಳಿದ್ದೇವೆ. ಅದಕ್ಕೆ ಪರವಾನಗಿ ಸಿಗುವ ನಿರೀಕ್ಷೆ ಇದೆ. ಇದಲ್ಲದೇ ಪ್ರತಿ ವಾರ್ಡ್ನಲ್ಲಿ ಸಮಾರಂಭ ನಡೆಯಲಿದೆ. 6 ಸಾವಿರ ಗ್ರಾಮ ಪಂಚಾಯಿತಿ, ಎಲ್ಲಾ 198 ಪಾಲಿಕೆ ವಾರ್ಡ್, ನಾಲ್ಕು ಕಡೆ ಮುನ್ಸಿಪಾಲಿಟಿಗಳಲ್ಲಿ, 6 ಕಡೆ ನಗರಸಭೆಯಲ್ಲಿ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ ಮಾಡಿಕೊಡುತ್ತೇವೆ ಎಂದು ವಿವರಿಸಿದರು.
ಎಲ್ಲರೂ ಸಹಕಾರ ನೀಡಿ:
ನನ್ನ ಪದಗ್ರಹಣ ಸಮಾರಂಭಕ್ಕೆ ಎಲ್ಲರ ಸಹಕಾರ ನೀಡಬೇಕೆಂದು ತಿಳಿಸಿದ್ದೇನೆ. ಇಂದು ವೀಡಿಯೋ ಕಾನ್ಫರೆನ್ಸ್ ನಡೆಸಿದ್ದೇನೆ. ಕೋವಿಡ್ ಸಮಸ್ಯೆ ಹಾಗೂ ನನ್ನ ಪದಗ್ರಹಣದ ಸಿದ್ಧತೆಯ ಮಾಹಿತಿ ಕಲೆ ಹಾಕಿದ್ದೇನೆ. 7-8 ಸಾವಿರ ಸಂಪರ್ಕವಿದೆ. ಎಲ್ಲರಿಗೂ ಸರಣಿ ರೂಪದಲ್ಲಿ ಬರಲು ತಿಳಿಸಿದ್ದೆ. 1 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳೇ ಇದ್ದಾರೆ. ನೀವು ಎಲ್ಲೆಲ್ಲಿ ಇರುತ್ತೀರಿ, ಅಲ್ಲಿಯೇ ಇದ್ದು ನಾನು ಮಾತನಾಡುವುದನ್ನು ವೀಕ್ಷಿಸಬೇಕು. ಬೆಂಗಳೂರಿಗೆ ಬರದಂತೆ ಸೂಚಿಸಿದ್ದೇನೆ. ಜನರ ಸಹಕಾರ ನೀಡುವಂತೆ ಸಂದೇಶ ನೀಡಿದ್ದೇನೆ ಎಂದರು.