ಕರ್ನಾಟಕ

karnataka

By

Published : Feb 15, 2020, 5:47 PM IST

ETV Bharat / state

ಕೆಪಿಸಿಸಿ ಗಾದಿಗೆ ಡಿ.ಕೆ. ಶಿವಕುಮಾರ್ ಪಕ್ಕಾ: ಮುಂದಿನ ವಾರವೇ ಘೋಷಣೆ ಸಾಧ್ಯತೆ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ (ಕೆಪಿಸಿಸಿ) ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರ ನೇಮಕ ಖಚಿತವಾಗಿದ್ದು, ಹೈಕಮಾಂಡ್ ಘೋಷಣೆಯೊಂದೇ ಬಾಕಿ ಇದೆ. ಉನ್ನತ ಮೂಲಗಳ ಪ್ರಕಾರ, ಮುಂದಿನ ವಾರ ಅವರ ನೇಮಕ ಆದೇಶ ಹೊರ ಬೀಳಲಿದೆ.

D.K. Shivakumar
ಮಾಜಿ ಸಚಿವ ಡಿ.ಕೆ. ಶಿವಕುಮಾರ್

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ (ಕೆಪಿಸಿಸಿ) ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರ ನೇಮಕ ಖಚಿತವಾಗಿದ್ದು, ಹೈಕಮಾಂಡ್ ಘೋಷಣೆಯೊಂದೇ ಬಾಕಿ ಇದೆ.

ಉನ್ನತ ಮೂಲಗಳ ಪ್ರಕಾರ, ಮುಂದಿನ ವಾರ ಅವರ ನೇಮಕ ಆದೇಶ ಹೊರ ಬೀಳಲಿದೆ. ಅದೇ ರೀತಿ ಪಕ್ಷದ ಕಾರ್ಯಾಧ್ಯಕ್ಷರಾಗಿ ಲಿಂಗಾಯತ ನಾಯಕ, ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರನ್ನು ನೇಮಕ ಮಾಡಲು ಹೈಕಮಾಂಡ್ ನಿರ್ಧರಿಸಿದೆ. ಒಕ್ಕಲಿಗ, ಲಿಂಗಾಯತ ಹಾಗೂ ಅ.ಹಿಂ.ದ ಸಮುದಾಯಗಳನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಹೈಕಮಾಂಡ್ ರೂಪಿಸಿರುವ ಸೂತ್ರದ ಅನುಸಾರ ಈ ನೇಮಕ ಕಾರ್ಯ ಪೂರ್ಣಗೊಳ್ಳಲಿದೆ. ಅಹಿಂದ ಸಮುದಾಯಗಳ ನಾಯಕ ಸಿದ್ದರಾಮಯ್ಯ ಅವರು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಮುಂದುವರಿಯಲಿದ್ದು, ಶಾಸಕಾಂಗ ಪಕ್ಷದ ನಾಯಕರಾಗಿಯೂ ಮುಂದುವರಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯ ಕಾಂಗ್ರೆಸ್​ನ ಪ್ರಮುಖ ನಾಯಕ ಎನ್ನಿಸಿಕೊಂಡಿರುವ ಸಿದ್ದರಾಮಯ್ಯ ಅವರ ಅಧಿಕಾರವನ್ನು ಮೊಟಕು ಮಾಡುವುದು, ಶಾಸಕಾಂಗ ಪಕ್ಷದ ನಾಯಕ ಸ್ಥಾನವನ್ನು ಅವರಿಂದ ಕಸಿದುಕೊಳ್ಳುವುದು ಪಕ್ಷಕ್ಕೆ ಡ್ಯಾಮೇಜ್ ಮಾಡುವುದು ನಿಶ್ಚಿತ. ಹೀಗಾಗಿ ಪಕ್ಷವನ್ನು ಮೇಲ್ಮಟ್ಟದಲ್ಲಿ ಯಾವ ರೀತಿ ಪುನರ್‌ ರಚನೆ ಮಾಡುವುದಿದ್ದರೂ ಸಿದ್ದರಾಮಯ್ಯ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಮುಂದುವರಿಯಬೇಕು ಎಂಬ ಹಲವು ನಾಯಕರ ಮಾತಿಗೆ ಕಾಂಗ್ರೆಸ್ ಹೈಕಮಾಂಡ್ ಮಾತನಾಡದೆ ಸಮ್ಮತಿಸಿದೆ ಎನ್ನಲಾಗಿದೆ.

ಬಿಜೆಪಿಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರನ್ನು ಅಸ್ಥಿರಗೊಳಿಸಲು ನಡೆಯುತ್ತಿರುವ ಪ್ರಯತ್ನ ಮುಂದಿನ ದಿನಗಳಲ್ಲಿ ಸ್ಪಷ್ಟತೆ ಪಡೆಯಲಿದ್ದು, ಹೇಗೆ ಲಿಂಗಾಯತ ನಾಯಕರೊಬ್ಬರು ಪಕ್ಷದ ಆಯಕಟ್ಟಿನ ಜಾಗದಲ್ಲಿರಬೇಕು?, ಹಾಗೆಯೇ ಪ್ರಬಲ ಸಮುದಾಯಗಳ ಜತೆ ಅಹಿಂದ ವರ್ಗಗಳು ನಿಲ್ಲದೆ ಹೋದರೆ ಪಕ್ಷಕ್ಕೆ ಲಾಭವೇನಿಲ್ಲ ಎಂಬ ಅವರ ಮಾತಿಗೆ ಹೈಕಮಾಂಡ್ ಸಹಮತ ವ್ಯಕ್ತಪಡಿಸಿದೆ.

ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರ್, ಲಿಂಗಾಯತ ಸಮುದಾಯದ ಎಂ.ಬಿ.ಪಾಟೀಲ್ ಹಾಗೂ ಅಹಿಂದ ವರ್ಗಗಳ ನಾಯಕ ಸಿದ್ದರಾಮಯ್ಯ ಅವರ ಕಾಂಬಿನೇಶನ್ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ದೊಡ್ಡ ಮಟ್ಟದ ಲಾಭ ತಂದುಕೊಡಲಿದೆ ಎಂಬುದು ಈ ನಾಯಕರ ವಾದ. ಈ ವಾದವನ್ನು ಆಲಿಸಿರುವ ಕಾಂಗ್ರೆಸ್ ಹೈಕಮಾಂಡ್, ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದು, ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂದು ಮೂಲಗಳು ಹೇಳಿವೆ.

ಇದೇ ರೀತಿ ಮುಂದಿನ ದಿನಗಳಲ್ಲಿ ಲಿಂಗಾಯತ ನಾಯಕರೊಬ್ಬರು ಕಾಂಗ್ರೆಸ್ ಪಕ್ಷಕ್ಕೆ ವರಪ್ರದವಾಗಿ ಪರಿಣಮಿಸುವ ಸನ್ನಿವೇಶ ನಿರ್ಮಾಣವಾಗಲಿದ್ದು, ಎಂ.ಬಿ.ಪಾಟೀಲ್ ಅವರನ್ನು ಇದೇ ಕಾರಣಕ್ಕಾಗಿ ಕಾರ್ಯಾಧ್ಯಕ್ಷ ಹುದ್ದೆಗೆ ನೇಮಕ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವರಾದ ಡಿಕೆ. ಶಿವಕುಮಾರ್ ಹಾಗೂ ಎಂ.ಬಿ.ಪಾಟೀಲ್ ಅವರು ಅನುಕ್ರಮವಾಗಿ ವಿರೋಧ ಪಕ್ಷದ ನಾಯಕ, ಕೆಪಿಸಿಸಿ ಅಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷ ಹುದ್ದೆಯಲ್ಲಿದ್ದರೆ ಅದು ಡೆಡ್ಲಿ ಕಾಂಬಿನೇಶನ್ ಎಂಬ ಅಭಿಪ್ರಾಯಕ್ಕೆ ಹೈಕಮಾಂಡ್ ಸಹಮತ ವ್ಯಕ್ತಪಡಿಸಿದ್ದು, ಮುಂದಿನ ವಾರ ಈ ಕುರಿತು ಅಧಿಕೃತ ಘೋಷಣೆ ಹೊರ ಬೀಳಲಿದೆ.

ಪ್ರಸ್ತುತ ಕಾರ್ಯಾಧ್ಯಕ್ಷ ಸ್ಥಾನದಲ್ಲಿ ಈಶ್ವರ್ ಖಂಡ್ರೆ ಇದ್ದು, ಅವರನ್ನು ಬದಲಿಸಿ ಅವರ ಜಾಗಕ್ಕೆ ಎಂ.ಬಿ.ಪಾಟೀಲ್ ಅವರನ್ನು ತರಲಾಗುತ್ತಿದ್ದು, ಮಧ್ಯಪ್ರದೇಶದ ರಾಜಕೀಯ ವಿದ್ಯಮಾನಗಳು ತಹಬಂದಿಗೆ ಬಂದ ತಕ್ಷಣ ಡಿ.ಕೆ. ಶಿವಕುಮಾರ್ ಹಾಗೂ ಎಂ.ಬಿ.ಪಾಟೀಲ್ ಅವರು ಹೊಸ ಜವಾಬ್ದಾರಿ ಹೊರಲು ಸಜ್ಜಾಗಲಿದ್ದಾರೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಭಿನ್ನಮತದ ಜ್ವಾಲೆಗೆ ಸಿಲುಕಿದ್ದು, ಅದನ್ನು ಶಮನಗೊಳಿಸಲು ಹೈಕಮಾಂಡ್ ಆ ಕಡೆ ಗಮನಹರಿಸಿದೆ. ಅದು ಮುಗಿದ ಕೂಡಲೇ ಕರ್ನಾಟಕದ ವಿಷಯವನ್ನು ಕೈಗೆತ್ತಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ABOUT THE AUTHOR

...view details