ಬೆಂಗಳೂರು:ಪುತ್ತೂರಿನಲ್ಲಿಕೇಂದ್ರ ಗೃಹ ಸಚಿವ ಅವರ ರೋಡ್ ಶೋ ರದ್ದುಗೊಂಡಿದೆ. ಕರಾವಳಿ ಭಾಗದಲ್ಲಿ ಕಾನೂನು ಸುವ್ಯವಸ್ಥೆ ತೊಡಕು ಎದುರಾದರೆ ಇನ್ನು ಸಾಮಾನ್ಯರ ಕಥೆ ಏನು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಂಗಳೂರು ಭಾಗದಲ್ಲಿ ಅಮಿತ್ ಶಾ ಪ್ರಚಾರ ಮಾಡಬೇಕಿತ್ತು. ರೋಡ್ ಶೋ ಮೂಲಕ ಅವರು ಕಾರ್ಯಕ್ರಮ ಕೈಗೊಳ್ಳಬೇಕಿತ್ತು. ಪುತ್ತೂರು ರೋಡ್ ಶೋ ಕ್ಯಾನ್ಸಲ್ ಮಾಡಿಕೊಂಡಿದ್ದಾರೆ. ಅಮಿತ್ ಶಾಗೆ ಕಾನೂನು ಸುವ್ಯವಸ್ಥೆಯ ಸಮಸ್ಯೆ ಎದುರಾಗಿದೆ ಅಂತಾದರೆ, ಸಾಮಾನ್ಯ ಜನರ ಪರಿಸ್ಥಿತಿ ಏನಿರಬಹುದು? ಇದಕ್ಕಿಂತ ಅವಮಾನ ರಾಜ್ಯಕ್ಕೆ ಏನು ಬೇಕು? ಇದಕ್ಕೆ ಉತ್ತರ ಕೊಡಲಿ ಮೊದಲು ಎಂದರು.
ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಾರಿಗೆ ಕಾರ್ಯಕರ್ತರು ಮುತ್ತಿಗೆ ಹಾಕಿದ್ದರು. ಈ ಕುರಿತು ಮಾತನಾಡಿದ ಅವರು, ಅಲ್ಲಿನ ಕಾರ್ಯಕರ್ತರು ಅಧ್ಯಕ್ಷರ ಗಾಡಿಯನ್ನೇ ಎತ್ತಿ ಬಿಸಾಡಿದ್ರು. ಬಡವರ ಮಕ್ಕಳನ್ನು ಇಂತಹ ಕೃತ್ಯಗಳಿಗೆ ಇಳಿಸಿ ಬಲಿ ತೆಗೆದುಕೊಳ್ತಿದ್ದಾರೆ. ಆಯನೂರು ಮಂಜುನಾಥ್ ಮೋದಿ ಫೋಟೋ ಹಾಕಿಕೊಂಡಿದ್ದಾರೆ. ನೆಮ್ಮದಿ ಶಾಂತಿಯುತ ಶಿವಮೊಗ್ಗಕ್ಕಾಗಿ ಬೆಂಬಲಿಸಿ ಅಂತ ಆಯನೂರು ಬೋರ್ಡ್ ಹಾಕಿಕೊಂಡಿದ್ದಾರೆ. ಒಬ್ಬ ಎಂಎಲ್ಸಿಗೆ ನಾವು ಹೇಳುತ್ತಿದ್ದ ಸತ್ಯ ಅರ್ಥವಾಗಿದೆ. ಕೇಂದ್ರ ಸಚಿವರಿಗೆ ಕಾನೂನು ರಕ್ಷಣೆ ಕೊಡಲು ಆಗುತ್ತಿಲ್ಲ ಅಂದ್ರೆ ಇದಕ್ಕಿಂತ ಇನ್ನೇನು ಸಾಕ್ಷಿ ಬೇಕು. ರಾಜ್ಯದಲ್ಲಿ ಕಾನೂನು ಭದ್ರತೆ ಇಲ್ಲದ ಸರ್ಕಾರ ಇಲ್ಲಿಗೇ ಕೊನೆಯಾಗಬೇಕು ಎಂದು ಆಗ್ರಹಿಸಿದರು.
ಶಿವಮೊಗ್ಗದಲ್ಲಿ ಶಾಂತಿ ಬಯಸಿರುವುದರಲ್ಲಿ ಏನಿದೆ ಎಂಬ ಈಶ್ವರಪ್ಪ ಹೇಳಿಕೆ ವಿಚಾರ ಕುರಿತು ಮಾತನಾಡಿ, ಇಡೀ ಸರ್ಕಾರಕ್ಕೆ ಕಪ್ಪುಚುಕ್ಕೆ ಇಟ್ಟು ಹೋಗಿದ್ದಾರೆ. ಅವರ ಬಗ್ಗೆ ನಾವು ಮಾತನಾಡುವುದಿಲ್ಲ. 144 ಸೆಕ್ಷನ್ ಇದ್ರು ಬಾವುಟ ಹಿಡಿದುಕೊಂಡು ಬಂದಿದ್ದರು. ಬೇರೆಯವರು ಮೃತಪಟ್ಟಾಗ ಒಂದು ರೂಪಾಯಿ ಕೊಡಲಿಲ್ಲ. ಹಿಂದೂ ಸಂಘಟನೆ ಹುಡುಗ ಸಾವನ್ನಪ್ಪಿದಾಗ 15 ಲಕ್ಷ ರೂಪಾಯಿ ಘೋಷಣೆ ಮಾಡುತ್ತಾರೆ. ಬೇರೆಯವರು ಮೊನ್ನೆ ಆಸ್ಪತ್ರೆಯಲ್ಲಿ ಮೃತಪಟ್ಟಾಗ ದುಡ್ಡು ಕೊಡಲಿಲ್ಲ. ಈಗ ಆಯನೂರು ಮಂಜುನಾಥ್ ಸತ್ಯ ನುಡಿದಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಡಿಕೆಶಿ ಹೇಳಿದರು.