ಕರ್ನಾಟಕ

karnataka

By

Published : Jun 13, 2021, 10:53 PM IST

ETV Bharat / state

ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿಯ ಬ್ಯಾಡ್ಜ್ ಮತ್ತು ಬಾವುಟ ಕೊಡಿ : ವೇದಿಕೆಯಲ್ಲೇ ಡಿಕೆಶಿ ಕಿಡಿ

ಸರ್ಕಾರದ ಫುಡ್ ಕಿಟ್, ಔಷಧದ ಪ್ಯಾಕೇಟ್ ಮೇಲೆ ತಮ್ಮ ಹಾಗೂ ಪ್ರಧಾನಿ ಮೋದಿ ಅವರ ಫೋಟೋ ಹಾಕಿಕೊಂಡು ಲಿಂಬಾವಳಿಯವರು ಹಂಚಿದ್ದರು. ಈಗ ನಮ್ಮ ನಾಯಕರು ತಮ್ಮ ಹಣದಲ್ಲಿ 1 ಸಾವಿರ ಮೌಲ್ಯದ ಆಹಾರ ಸಾಮಗ್ರಿಯನ್ನು 15 ಸಾವಿರ ಜನರಿಗೆ ನೀಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು ತಮ್ಮ ಹಣದಲ್ಲಿ ಜನರಿಗೆ ಸಹಾಯ ಮಾಡಲು ಹೋದರೆ ಪೊಲೀಸ್ ಅಧಿಕಾರಿಗಳು ಈ ಬೋರ್ಡ್​​ಗಳನ್ನು ಕಿತ್ತು ಹಾಕಿಸಿದ್ದಾರೆ..

DK Shivakumar
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಬೆಂಗಳೂರು :ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿಯ ಬ್ಯಾಡ್ಜ್ ಮತ್ತು ಬಾವುಟ ಕೊಡಿ. ಅವರು ತಮ್ಮ ಸ್ಟಾರ್ ತೆಗೆದು ಬಿಜೆಪಿ ಬ್ಯಾಡ್ಜ್ ಹಾಕಿಕೊಳ್ಳಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಕ್ರೋಶ ಹೊರ ಹಾಕಿದ್ದಾರೆ. ಲಾಕ್​ಡೌನ್ ಹಿನ್ನೆಲೆ ಮಹದೇವಪುರ ಹಾಗೂ ಕೆ ಆರ್ ಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ 15 ಸಾವಿರ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದ ಮುನ್ನೇಕೊಳ್ಳಾಲ, ವರ್ತೂರು ಹಾಗೂ ವೈಟ್ ಫೀಲ್ಡ್ ಇನ್ನರ್ ಸರ್ಕಲ್​ನಲ್ಲಿ ಆಶಾ ಕಾರ್ಯಕರ್ತರು, ಪೌರ ಕಾರ್ಮಿಕರು, ಕೂಲಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ 10 ಸಾವಿರಕ್ಕೂ ಹೆಚ್ಚು ದಿನಸಿ ಕಿಟ್​​​ಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ, ಡಿ ಕೆ ಶಿವಕುಮಾರ್, ಕೆಪಿಸಿಸಿ ಕಾರ್ಯಾದ್ಯಕ್ಷ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.

ಪೊಲೀಸ್ ಇಲಾಖೆ ವಿರುದ್ಧ ಕಿಡಿಕಾರಿದ ಡಿ ಕೆ ಶಿವಕುಮಾರ್

ಈ ವೇಳೆ ಕಾರ್ಯಕ್ರಮಕ್ಕೆ ಹಾಕಿದ್ದ ಬ್ಯಾನರ್‌ನ ಪೊಲೀಸರು ತೆರವುಗೊಳಿಸಿದ್ದಾರೆ. ಬ್ಯಾನರ್ ರಾಜಕೀಯ ತೋರಿಸಿದ್ದರಿಂದ ಪೊಲೀಸ್ ಇಲಾಖೆ ಬಿಜೆಪಿ ಸರ್ಕಾರದ ಕೈಗೊಂಬೆಯಾಗಿದೆ ಎಂದು ವೇದಿಕೆಯಲ್ಲೇ ಪೊಲೀಸರ ವಿರುದ್ಧವೇ ಆಕ್ರೋಶ ಹೊರ ಹಾಕಿದರು. ಮತ್ತೊಂದೆಡೆ ಕೆ ಆರ್ ಪುರ ಕ್ಷೇತ್ರದ ರಾಮಮೂರ್ತಿನಗರ ನಗರ ವಾರ್ಡ್​ನ ಕಲ್ಕೆರೆ ಗ್ರಾಮದಲ್ಲಿ 5 ಸಾವಿರ ಕಿಟ್‌ಗಳನ್ನು ವಿತರಿಸಿದರು.

‘ಸ್ವಂತ ಹಣದಲ್ಲಿ ಕಿಟ್ ವಿತರಣೆ’

ಆಟೋಚಾಲಕರಿಗೆ, ಬೀದಿಬದಿ ವ್ಯಾಪಾರಿಗಳಿಗೆ, ಮನೆ ಕೆಲಸ ಮಾಡುವವರಿಗೆ ₹10 ಸಾವಿರ ಪರಿಹಾರ ಕೊಡಿ ಅಂತ ಸಿಎಂ ಯಡಿಯೂರಪ್ಪ ಅವರಿಗೆ ಹಲವಾರು ಬಾರಿ ಕೇಳಿದೆವು. ಅವರು ಕೆಲವರಿಗೆ ₹5 ಸಾವಿರ, ಕೆಲವರಿಗೆ ₹3 ಸಾವಿರ, ಮತ್ತೆ ಕೆಲವರಿಗೆ ₹2 ಸಾವಿರ ಘೋಷಿಸಿದರು. ಸರ್ಕಾರದ ಫುಡ್ ಕಿಟ್, ಔಷಧದ ಪ್ಯಾಕೇಟ್ ಮೇಲೆ ತಮ್ಮ ಹಾಗೂ ಪ್ರಧಾನಿ ಮೋದಿ ಅವರ ಫೋಟೋ ಹಾಕಿಕೊಂಡು ಲಿಂಬಾವಳಿಯವರು ಹಂಚಿದ್ದರು. ಈಗ ನಮ್ಮ ನಾಯಕರು ತಮ್ಮ ಹಣದಲ್ಲಿ 1 ಸಾವಿರ ಮೌಲ್ಯದ ಆಹಾರ ಸಾಮಗ್ರಿಯನ್ನು 15 ಸಾವಿರ ಜನರಿಗೆ ನೀಡುತ್ತಿದ್ದಾರೆ ಎಂದರು.

ಕಾಂಗ್ರೆಸ್ ನಾಯಕರು ತಮ್ಮ ಹಣದಲ್ಲಿ ಜನರಿಗೆ ಸಹಾಯ ಮಾಡಲು ಹೋದರೆ ಪೊಲೀಸ್ ಅಧಿಕಾರಿಗಳು ಈ ಬೋರ್ಡ್​​ಗಳನ್ನು ಕಿತ್ತು ಹಾಕಿಸಿದ್ದಾರೆ. ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿಯ ಬ್ಯಾಡ್ಜ್ ಮತ್ತು ಬಾವುಟ ಕೊಡಿ. ಅವರು ತಮ್ಮ ಸ್ಟಾರ್ ತೆಗೆದು ಬಿಜೆಪಿ ಬ್ಯಾಡ್ಜ್ ಹಾಕಿಕೊಳ್ಳಲಿ ಎಂದು ಕಿಡಿಕಾರಿದರು.

ABOUT THE AUTHOR

...view details