ಕರ್ನಾಟಕ

karnataka

ETV Bharat / state

ಇದೊಂದು ಕಣ್ಣಾಮುಚ್ಚಾಲೆ , ಬೋಗಸ್ ಬಜೆಟ್: ಡಿಕೆಶಿ - DK Shivakumar

ಈ ನಿಗಮಗಳಿಂದಲೇ ಆಯಾ ಸಮುದಾಯದ ಏಳಿಗೆಯಾಗುವುದಾದರೆ, ನಿಗಮಗಳೇ ಇಲ್ಲದ‌ ಬೇರೆ ಸಮುದಾಯಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿಲ್ಲ ಎಂದು ಅರ್ಥವೇ? ಈ ನಿಗಮಗಳ ಹೆಸರಲ್ಲೂ ಸರ್ಕಾರ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಡಿಕೆಶಿ ಕಿಡಿಕಾರಿದ್ದಾರೆ.

dk-shivakumar-reaction-on-budget
ಇದೊಂದು ಕಣ್ಣಾಮುಚ್ಚಾಲೆ ಬಜೆಟ್, ಬೋಗಸ್ ಬಜೆಟ್: ಡಿಕೆಶಿ

By

Published : Mar 9, 2021, 12:21 AM IST

ಬೆಂಗಳೂರು: ಜನರನ್ನು ಹೇಗೆಲ್ಲಾ ದಾರಿ ತಪ್ಪಿಸಬಹುದು ಎಂಬುದರ ಬಗ್ಗೆ ಪಿಎಚ್​ಡಿ ಮಾಡಿ ಈ ಬಜೆಟ್ ರೂಪಿಸಿದಂತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಲೇವಡಿ ಮಾಡಿದ್ದಾರೆ.

ರಾಜ್ಯ ಸರ್ಕಾರ ಮಂಡಿಸಿದ ಹಣಕಾಸು ಬಜೆಟ್ ಕುರಿತು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ, ಕೇಂದ್ರದ ನೆರವೂ ಸಿಕ್ಕಿಲ್ಲ. ಜಿಎಸ್​ಟಿ ಸಾಲ ಅನಿವಾರ್ಯವಾಗಿದೆ ಎಂಬುದನ್ನು ಸಿ.ಎಂ ಯಡಿಯೂರಪ್ಪ ಅವರು ಭಾಷಣದ ಆರಂಭದಲ್ಲೇ ವಿವರಿಸಿದ್ದಾರೆ. ಕಳೆದ ವರ್ಷ ಮಾಡಿಕೊಂಡಿರುವ ಸಾಲವನ್ನೇ ತೀರಿಸಲು ಆಗಿಲ್ಲ. ಈಗ ಹೊಸದಾಗಿ 70 ಸಾವಿರ ಕೋಟಿ ರೂ. ಸಾಲದ ಹೊರೆ ರಾಜ್ಯದ ಜನರ ತಲೆ ಮೇಲೆ ಬೀಳಲಿದೆ. "ಸಾಲ ಮಾಡಿ ತುಪ್ಪ ತಿನ್ನು" ಎಂದು ಸಾಲಗಾರರನ್ನು ಅಣಕಿಸುವ ಮಾತಿದೆ. ಆದರೆ ಈ ಸರ್ಕಾರ ಸಾಲ ಮಾಡಿ ಜನರಿಗೆ ಮಣ್ಣು ತಿನ್ನಿಸಲು ಹೊರಟಿದೆ ಎಂದು ಕಿಡಿಕಾರಿದ್ದಾರೆ.

ಗುಂಪಲ್ಲಿ ಗೋವಿಂದಾ...

ರಾಜ್ಯಗಳ ಜಿಎಸ್​ಟಿ ಪಾಲು ಹಂಚುವಾಗ ಗುಜರಾತ್, ಅಸ್ಸೋಂ ಮತ್ತಿತರ ರಾಜ್ಯಗಳ ಕಣ್ಣಿಗೆ ಬೆಣ್ಣೆ ಹಚ್ಚಿದ ಕೇಂದ್ರ ಸರ್ಕಾರ ರಾಜ್ಯದ ಕಣ್ಣಿಗೆ ಸುಣ್ಣ ಸುರಿದಿದೆ. ಅದನ್ನು ರಾಜ್ಯ ಸರ್ಕಾರವಾಗಲಿ ರಾಜ್ಯದಿಂದ ಕೇಂದ್ರ ಪ್ರತಿನಿಧಿಸುತ್ತಿರುವ ಎರಡು ಡಜನ್ ಸಂಸದರು ಪ್ರಶ್ನಿಸುವ ಗೋಜಿಗೆ ಹೋಗಲಿಲ್ಲ. ಅದರ ಫಲವೇ ಈಗ ರಾಜ್ಯದ ಜನರ ತಲೆ ಮೇಲೆ ಬೀಳುತ್ತಿರುವ ಸಾಲದ ಹೊರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅವೈಜ್ಞಾನಿಕ ಲಾಕ್ ಡೌನ್ ರಾಜ್ಯದ ಆರ್ಥಿಕ ಸ್ಥಿತಿ ಹದಗೆಡಿಸಿದೆ ಎಂಬುದನ್ನು ಮುಖ್ಯಮಂತ್ರಿಗಳೇ ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ ಎಂದು ವಿವರಿಸಿದ್ದಾರೆ. ಆದರೂ ಜನರ ಕಣ್ಣಿಗೆ ಮಣ್ಣೆರೆಚುವ ರೀತಿಯಲ್ಲಿ ಘೋಷಣೆಗಳ ಮೇಲೆ ಘೋಷಣೆಗಳನ್ನು ಸಿಎಂ ಪ್ರಕಟಿಸಿದ್ದಾರೆ. ಆದರೆ, ಇದಕ್ಕೆ ಸಂಪನ್ಮೂಲ ಕ್ರೋಡೀಕರಣ ಹೇಗೆ? ಎಲ್ಲಿಂದ‌ ದುಡ್ಡು ತರುತ್ತಾರೆ ಎಂಬುದನ್ನೇ ಹೇಳಿಲ್ಲ. ಹೀಗಾಗಿ ಈ ಘೋಷಣೆಗಳೆಲ್ಲ ಘೋಷಣೆಯಾಗಿಯೇ ಉಳಿದುಕೊಳ್ಳುವ ಅಪಾಯವಿದೆ. ಪ್ರತಿ ಬಾರಿ ಬಜೆಟ್ ಮಂಡಿಸುವಾಗ ಇಲಾಖೆವಾರು ಅನುದಾನ ಹಂಚಿಕೆ ಮಾಡಲಾಗುತ್ತದೆ. ಆಗ ಯಾವ ಇಲಾಖೆಗೆ ಏನು, ಎಷ್ಟು? ಎಂಬುದು ತಿಳಿಯುತ್ತದೆ. ಆದರೆ ಈಗ ಸರ್ಕಾರ ವಲಯವಾರು ಘೋಷಣೆ ಮಾಡಿ "ಗುಂಪಲ್ಲಿ ಗೋವಿಂದಾ" ಎನ್ನುವಂತೆ ಜನರ ಕಣ್ಣಿಗೆ ಮಣ್ಣೆರಚಿದೆ ಎಂದು ಆರೋಪಿಸಿದ್ದಾರೆ.

ಸಿಎಂ ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ:

ಕೃಷಿಗೆ 31,028 ಕೋಟಿ ಘೋಷಿಸಿ, ಇದು ರೈತರಿಗೆ ಬಂಪರ್ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ ವಾಸ್ತವದಲ್ಲಿ ಇದು ಕೇವಲ ಕೃಷಿ ಕ್ಷೇತ್ರಕ್ಕೆ ಮಾತ್ರವಲ್ಲ.‌ ಅದಕ್ಕೆ‌ ಪೂರಕವಾಗಿರುವ ನೀರಾವರಿ ಯೋಜನೆಗಳು, ತೋಟಗಾರಿಕೆ, ಕೃಷಿ ಮಾರುಕಟ್ಟೆ ಹೀಗೆ ಎಲ್ಲವನ್ನೂ ಒಳಗೊಂಡಿದೆ. ಸರ್ಕಾರದ ಕಣ್ ಕಟ್ ಆಟಕ್ಕೆ ಇದೊಂದು ಸ್ಯಾಂಪಲ್‌ ಅಷ್ಟೇ. ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿಗೆ 61 ಸಾವಿರ ಕೋಟಿ ರುಪಾಯಿ ಎಂದು ಬಿಂಬಿಸುತ್ತಿರುವ ಸರ್ಕಾರ, ಇದರಲ್ಲಿ ಆರೋಗ್ಯ, ಶಿಕ್ಷಣ, ಸಮಾಜ ಕಲ್ಯಾಣ, ವಸತಿ, ಕಾರ್ಮಿಕ, ಮಾನವ ಸಂಪನ್ಮೂಲ, ಗ್ರಾಮೀಣಭಿವೃದ್ಧಿ ಇಲಾಖೆಯನ್ನೂ ಸೇರಿಸಿದೆ. ಇನ್ನು ಒಂದು ರೂಪಾಯಿ ಹೊರೆ ಹಾಕದ ಬಜೆಟ್ ಎಂದು ಸಿಎಂ ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ. ಆದರೆ ಈಗಾಗಲೇ ರಾಜ್ಯ ಸರಕಾರ ಪೆಟ್ರೋಲ್ ಮೇಲೆ 33 ರೂ., ಡೀಸೆಲ್ ಮೇಲೆ 20 ರೂ. ಸುಂಕ ವಸೂಲಿ ಮಾಡುತ್ತಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಈ ನಿಗಮಗಳಿಂದಲೇ ಆಯಾ ಸಮುದಾಯದ ಏಳಿಗೆಯಾಗುವುದಾದರೆ, ನಿಗಮಗಳೇ ಇಲ್ಲದ‌ ಬೇರೆ ಸಮುದಾಯಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿಲ್ಲ ಎಂದು ಅರ್ಥವೇ? ಈ ನಿಗಮಗಳ ಹೆಸರಲ್ಲೂ ಸರ್ಕಾರ ಜನರನ್ನು ದಾರಿ ತಪ್ಪಿಸುತ್ತಿದೆ. ಹಿಂದುಳಿದ ವರ್ಗಕ್ಕೆ ಸೇರಿದ ಅಂಬೇಡ್ಕರ್, ವಾಲ್ಮೀಕಿ, ಆದಿಜಾಂಬವ, ಭೋವಿ, ತಾಂಡ, ಸಫಾಯಿ ಕರ್ಮಚಾರಿ, ಬಾಬು ಜಗಜೀವನ್ ರಾಮ್, ಮಡಿವಾಳ ಮಾಚಿದೇವ, ಉಪ್ಪಾರ, ಆರ್ಯಶೈವ, ವಿಶ್ವಕರ್ಮ, ಕಾಡುಗೊಲ್ಲ, ಅಂಬಿಗರ ಚೌಡಯ್ಯ, ಸವಿತಾ ಸಮಾಜ - ಹೀಗೆ ಎಲ್ಲ ನಿಗಮಗಳಿಗೂ ಒಟ್ಟಾರೆ ಸರ್ಕಾರ ಕೊಟ್ಟಿರೋದು ಕೇವಲ 500 ಕೋಟಿ ರು. ಅನುದಾನ ಯಾರಿಗೆ ಎಷ್ಟು, ಇದಕ್ಕೆ ಮಾನದಂಡವೇನು ಎಂಬುದನ್ನೂ ವಿವರಿಸಿಲ್ಲ. ಇದು ಜನರಿಗೆ ಟೋಪಿ ಹಾಕುವ ಹುನ್ನಾರವಲ್ಲದೇ ಮತ್ತೇನು? ಎಂದು ಕೇಳಿದ್ದಾರೆ.

ಒಟ್ಟಿನಲ್ಲಿ ಈ ಬಜೆಟ್ ನಲ್ಲಿ ರಾಜ್ಯದ ಜನರ ಪರವಾಗಿ ಯಾವುದೇ ಯೋಜನೆ ರೂಪಿಸಿಲ್ಲ. ಇದು ಜನರಿಗೆ ಗಾಳಿ ಗೋಪುರ ತೋರಿಸಿ ದಾರಿ ತಪ್ಪಿಸುವ ಬಜೆಟ್ ಆಗಿದೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details