ಕರ್ನಾಟಕ

karnataka

By

Published : Dec 16, 2022, 1:16 PM IST

ETV Bharat / state

ನಾನು ಕುಕ್ಕರ್ ಬಾಂಬ್ ಸ್ಫೋಟ ಘಟನೆಯನ್ನು ಸಮರ್ಥಿಸಿಕೊಂಡಿಲ್ಲ: ಡಿ ಕೆ ಶಿವಕುಮಾರ್

ದೇಶದ ಐಕ್ಯತೆ, ಸಮಗ್ರತೆ, ಶಾಂತಿಗೆ ನಾವು ಸದಾ ಬದ್ಧರಾಗಿದ್ದೇವೆ. ನಾನು ಕುಕ್ಕರ್ ಬಾಂಬ್ ಸ್ಫೋಟ ಘಟನೆಯನ್ನು ಸಮರ್ಥಿಸಿಕೊಂಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.

dk shivakumar
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ಕುಕ್ಕರ್ ಬಾಂಬ್ ಹೇಳಿಕೆ ಕುರಿತು ಡಿಕೆಶಿ ಪ್ರತಿಕ್ರಿಯೆ

ಬೆಂಗಳೂರು: ನಾನು ಕುಕ್ಕರ್ ಬಾಂಬ್ ಸ್ಫೋಟ ಘಟನೆಯನ್ನು ಸಮರ್ಥಿಸಿಕೊಂಡಿಲ್ಲ. ಭ್ರಷ್ಟಾಚಾರ, ಮತದಾರರ ಮಾಹಿತಿ ಕಳವು ವಿಚಾರವನ್ನು ಮುಚ್ಚಿಕೊಳ್ಳಲು ಈ ಪ್ರಕರಣ ಬಳಸಿಕೊಂಡಿದ್ದಾರೆ ಎಂದಷ್ಟೇ ಹೇಳಿದ್ದೇನೆ. ಅದನ್ನು ಬಿಟ್ಟು ಬಾಂಬ್ ಸ್ಫೋಟ ವಿಚಾರದ ತನಿಖೆ ಮಾಡಬೇಡಿ ಎಂದು ಹೇಳಿಲ್ಲ ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪಷ್ಟೀಕರಣ ನೀಡಿದರು.

ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಬಿಜೆಪಿ ಇಂತಹ ಘಟನೆಗಳನ್ನು ಬಳಸಿಕೊಂಡು ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಹಾಗೂ ಜನರ ಗಮನ ಬೇರೆಡೆ ಸೆಳೆಯುತ್ತಿದೆ. ಮಲೆನಾಡು, ಕರಾವಳಿ ಭಾಗದ ಜಿಲ್ಲೆಗಳಲ್ಲಿ ಸೌಹಾರ್ದತೆ ಸ್ಥಾಪನೆ ಆಗಬೇಕಿದೆ. ಹೂಡಿಕೆ ಸಮಾವೇಶದಲ್ಲಿ 10 ಲಕ್ಷ ಕೋಟಿ ರೂ. ಬಂಡವಾಳ ಬಂದಿದೆ ಎಂದು ಹೇಳುತ್ತಾರೆ. ಜಿಲ್ಲೆಗಳಲ್ಲಿ ಯಾವುದಕ್ಕೆ ಎಷ್ಟು ಬಂಡವಾಳ ಹೂಡಿಕೆ ಆಗುತ್ತಿದೆ ಎಂದು ಪಟ್ಟಿ ನೀಡಲಿ. ಉದ್ಯೋಗ ಸೃಷ್ಟಿ ಬಗ್ಗೆ ಯಾವ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಿ. ಮತ ಹಾಕಿರುವ ಜನರಿಗೆ ಈ ರೀತಿ ರಾಜಕಾರಣ ಮಾಡುತ್ತ ದ್ರೋಹ ಬಗೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಕುಕ್ಕರ್ ಬ್ಲಾಸ್ಟ್ ಮೂಲಕ ಬಿಜೆಪಿಯಿಂದ ಮತದಾರರ ಮಾಹಿತಿ ಕಳ್ಳತನ ವಿಷಯ ಡೈವರ್ಟ್: ಡಿಕೆಶಿ

ಈ ಹಿಂದೆ ಬೆಂಗಳೂರಿನಲ್ಲಿ ತೇಜಸ್ವಿ ಸೂರ್ಯ ಹೇಳಿಕೆ ನೀಡಿದ್ದರು. ಇಡೀ ವಿಶ್ವ ಬೆಂಗಳೂರಿನ ಕಡೆ ನೋಡುತ್ತಿರುವಾಗ ರಾಜ್ಯ ಭಯೋತ್ಪಾದಕರ ಕೇಂದ್ರ ಎನ್ನುವಂತೆ ಮಾತನಾಡಿದರೆ ರಾಜ್ಯದ ಘನತೆ ಹಾಳಾಗುತ್ತದೆ. ಭಯೋತ್ಪಾದನೆಗೆ ನಮ್ಮ ಪಕ್ಷದ ನಾಯಕರು ಬಲಿಯಾಗಿದ್ದಾರೆ. ದೇಶದ ಐಕ್ಯತೆ, ಸಮಗ್ರತೆ, ಶಾಂತಿಗೆ ನಾವು ಸದಾ ಬದ್ಧರಾಗಿದ್ದೇವೆ. ನಾವು ಭಯೋತ್ಪಾದನೆಯನ್ನು ಸಮರ್ಥಿಸಿಕೊಳ್ಳುವುದಿಲ್ಲ ಎಂದರು.

ಕಾಂಗ್ರೆಸ್ ಭಯೋತ್ಪಾದಕರ ಪರವಾಗಿದೆ ಎಂಬ ಸಿಎಂ ಹೇಳಿಕೆ ಕುರಿತು ಮಾತನಾಡಿ, 'ಅವರು ತಮ್ಮ ಹೆಸರು ಮಾರುಕಟ್ಟೆಯಲ್ಲಿ ಓಡಾಡಬೇಕು ಎಂಬ ಕಾರಣಕ್ಕೆ ಈ ರೀತಿ ಹೇಳಿಕೆ ನೀಡುತ್ತಾರೆ. ನಾನು ಅವರ ಭ್ರಷ್ಟಾಚಾರ, ಅಕ್ರಮ ಮುಚ್ಚಿಹಾಕುವ ಯತ್ನ, ರಾಜ್ಯಕ್ಕೆ ಆಗುತ್ತಿರುವ ದ್ರೋಹದ ಬಗ್ಗೆ ಮಾತನಾಡಿದ್ದೇನೆ' ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ:ನಾನು ಯಾರಿಗೂ ಕ್ಷಮೆ ಕೇಳಲ್ಲ, ಕೇಳುವ ಅಗತ್ಯವೂ ಇಲ್ಲ: ಡಿ ಕೆ ಶಿವಕುಮಾರ್​

ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ನಡುವಣ ಬಿಕ್ಕಟ್ಟಿನ ವಿಚಾರ ಮುಚ್ಚಿಕೊಳ್ಳಲು ನಿಮ್ಮ ಹೇಳಿಕೆ ತಿರುಚಿದ್ದಾರಾ ಎಂದು ಕೇಳಿದಾಗ, 'ಹೌದು, ಅವರ ಪಕ್ಷದಲ್ಲಿ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುವುದಿಲ್ಲ. ನಿನ್ನೆ ಯಡಿಯೂರಪ್ಪ ಮಾತಿನಲ್ಲಿ ಅವರ ನೋವು, ದುಗುಡ ಎಲ್ಲವೂ ಅರ್ಥವಾಗುತ್ತಿತ್ತು. ಅವರನ್ನು ಪಕ್ಷದಲ್ಲಿ ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ಈ ಸರ್ಕಾರ ತಳ್ಳಿಕೊಂಡು ಹೋಗುತ್ತಿದ್ದೇವೆ ಎಂದು ಸಚಿವ ಮಾಧುಸ್ವಾಮಿ ಹೇಳಿದಂತೆ ಯಡಿಯೂರಪ್ಪ ಅವರನ್ನೂ ಬಿಜೆಪಿಯವರು ಚುನಾವಣೆವರೆಗೂ ತಳ್ಳಿಕೊಂಡು ಹೋಗುತ್ತಿದ್ದಾರೆ' ಎಂದರು.

ಕಾಂಗ್ರೆಸ್ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, 'ಬಿಜೆಪಿಯವರು ಈ ವಿಚಾರದಲ್ಲಿ ತಡ ಮಾಡುವುದು ಬೇಡ. ಗಾಳಿಯಲ್ಲಿ ಗುಂಡು ಹೊಡೆಯುವುದು ಬೇಡ. ಆಪರೇಷನ್ ಕಮಲದಲ್ಲಿ ಅವರು ಡಾಕ್ಟರೇಟ್ ಪಡೆದಿರುವ ಪಂಡಿತರು. ಆದಷ್ಟು ಬೇಗ ಪಕ್ಷಕ್ಕೆ ಸೇರಿಸಿಕೊಳ್ಳಲ್ಲಿ ಎಂದು ಹೇಳಿದರು.

ಇದನ್ನೂ ಓದಿ:ಕುಕ್ಕರ್ ಸ್ಫೋಟ ಸಂಬಂಧ ಡಿಕೆಶಿ ಹೇಳಿಕೆ ಖಂಡನೀಯ: ಆರಗ ಜ್ಞಾನೇಂದ್ರ ಗರಂ

ಕಾಂಗ್ರೆಸ್ ಒಕ್ಕಲಿಗ ನಾಯಕರ ಸಭೆ ಬಗ್ಗೆ, ನಮ್ಮ ಸಮಾಜದ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಯಾವ ಕಾರಣಕ್ಕೆ ಮತ ನೀಡಬೇಕು ಎಂದು ಚರ್ಚೆ ಮಾಡಿದ್ದೇವೆ. ಮೀಸಲಾತಿ ವಿಚಾರದಲ್ಲಿ ಸ್ವಾಮೀಜಿಗಳು, ನಾನಾ ಸಂಘಟನೆಗಳ ಮುಖಂಡರು ತಮ್ಮ ನೋವು ಹೇಳಿಕೊಂಡಿದ್ದಾರೆ. ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಬೇಕು ಎಂದು ಕೇವಲ ನಮ್ಮ ಸಮಾಜ ಮಾತ್ರವಲ್ಲ ಎಲ್ಲಾ ಸಮಾಜದವರು ಬೇಡಿಕೆ ಇಡುತ್ತಿದ್ದಾರೆ. ಭವಿಷ್ಯದ ಉದ್ದೇಶದಿಂದ ನಮ್ಮ ಸಮಾಜದವರು ಕೇಳುತ್ತಿದ್ದಾರೆ. ನಮ್ಮ ಮಠದ ಸ್ವಾಮೀಜಿಗಳು ಗಡುವು ನೀಡಿದ್ದಾರೆ.

ಮಂತ್ರಿಗಳು ಭರವಸೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಪಾತ್ರ ಏನು ಎಂದು ಚರ್ಚೆ ಮಾಡಲಾಗಿದೆ. ನಮ್ಮ ಸಮಾಜದ ಹಕ್ಕು ಕೇಳಲು, ನಮ್ಮ ನಾಯಕರು ಸ್ವಾಮೀಜಿಗಳನ್ನು ಭೇಟಿ ಮಾಡಲಿದ್ದಾರೆ. ಈ ಬಗ್ಗೆ ಅಧ್ಯಯನಕ್ಕೆ ತಜ್ಞರ ಸಮಿತಿ ರಚನೆ ಮಾಡಲಾಗುವುದು. ಬೇರೆಯವರು ತಮ್ಮ ಹಕ್ಕು ಕೇಳಿದಂತೆ ನಾವು ನಮ್ಮ ಹಕ್ಕು ಕೇಳುತ್ತಿದ್ದೇವೆ. ಅದರಲ್ಲಿ ತಪ್ಪಿಲ್ಲ. ನಾನು ಪಕ್ಷದ ಅಧ್ಯಕ್ಷ ಆದರೂ ನಾನು ಒಕ್ಕಲಿಗ ಸಮುದಾಯದಿಂದ ಗುರುತಿಸಿಕೊಂಡಿದ್ದೇನೆ. ಎಲ್ಲೆಲ್ಲಿ ಅನ್ಯಾಯ ಆಗಿದೆಯೋ ಅಲ್ಲೆಲ್ಲ ಸರಿಪಡಿಸಲು ಪ್ರಯತ್ನ ಮಾಡಲಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ:ಮೀಸಲಾತಿ ಹೆಚ್ಚಳಕ್ಕೆ ಒಕ್ಕಲಿಗರ ಸಭೆ: ಸಿಎಂ ಪಟ್ಟಕ್ಕೆ ಪರೋಕ್ಷವಾಗಿ ಸಮುದಾಯದ ಆಶೀರ್ವಾದ ಕೇಳಿದ ಡಿಕೆಶಿ

ABOUT THE AUTHOR

...view details