ಕರ್ನಾಟಕ

karnataka

ETV Bharat / state

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ: ಮಾಜಿ ಕಾರ್ಪೊರೇಟರ್ ಸೋದರರಿಗೆ ಜಾಮೀನು ನಿರಾಕರಿಸಿದ ಕೋರ್ಟ್ - Court denies bail

ಆರೋಪಿಗಳ ವಿರುದ್ಧ ದಾಖಲಿಸಿರುವ ದೂರು ಗುರುತರವಾದದ್ದು, ಶಾಸಕರ ಮನೆಗೆ ಬೆಂಕಿ ಹಚ್ಚುವಲ್ಲಿ ಇವರ ಪಾತ್ರವಿದ್ದು, ತನಿಖೆ ನಡೆಯುತ್ತಿದೆ. ಮುಖ್ಯವಾಗಿ ಎಸ್ಸಿ,​ಎಸ್​ಟಿ ಕಾಯ್ದೆಯ ಸೆಕ್ಷನ್ 15(ಎ) ಪ್ರಕಾರ ದೂರುದಾರನಿಗೆ ನೋಟಿಸ್ ನೀಡದೇ ಯಾವುದೇ ಕ್ರಮ ಜರುಗಿಸುವಂತಿಲ್ಲ. ಅಂತೆಯೇ ಕಾಯ್ದೆಯ 18(ಎ) ಪ್ರಕಾರ ಆರೋಪಿತರಿಗೆ ನಿರೀಕ್ಷಣಾ ಜಾಮೀನು ನೀಡಲು ಸಾಧ್ಯವಿಲ್ಲ. ಹಾಗಾಗಿ ಕೋರ್ಟ್ ನಿರೀಕ್ಷಣಾ​​ ಜಾಮೀನನ್ನು ನೀಡಲು ನಿರಾಕರಿಸಿದೆ.

Court
ಕೋರ್ಟ್

By

Published : Oct 28, 2020, 8:28 PM IST

ಬೆಂಗಳೂರು : ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಶಾಸಕ ಅಖಂಡ ಶ್ರೀನಿವಾಸ್ ಮನೆ ಮೇಲೆ ದಾಳಿ ನಡೆಯಲು ಕುಮ್ಮಕ್ಕು ನೀಡಿದ ಆರೋಪದಡಿ ಬಂಧನ ಭೀತಿ ಎದುರಿಸುತ್ತಿರುವ ಮಾಜಿ ಕಾರ್ಪೊರೇಟರ್ ಅಬ್ದುಲ್ ರಕೀಬ್ ಜಾಕಿರ್ ಹಾಗೂ ಸೋದರ ಯಾಸಿರ್ ಮೊಹಮ್ಮದ್ ಹಮೀದ್​ಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದೆ.

ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಬಿಬಿಎಂಪಿ ಮಾಜಿ ಸದಸ್ಯ ಅಬ್ದುಲ್ ರಕೀಬ್ ಜಾಕಿರ್ ಮತ್ತವರ ತಮ್ಮ ಯಾಸಿರ್ ಮೊಹಮ್ಮದ್ ಹಮೀದ್ ಸಲ್ಲಿಸಿದ್ದ ಅರ್ಜಿಯನ್ನು ನಗರದ 71ನೇ ಸಿಸಿಎಚ್ ನ್ಯಾಯಾಧೀಶ ಸುಭಾಷ್ ಸಂಕದ್ ಅವರು ವಿಚಾರಣೆ ನಡೆಸಿದರು.

ಈ ವೇಳೆ, ಆರೋಪಿತರ ಪರ ಹಿರಿಯ ವಕೀಲ ಹಸ್ಮತ್ ಪಾಷಾ ವಾದ ಮಂಡಿಸಿ, ಅರ್ಜಿದಾರರ ವಿರುದ್ಧದ ಆರೋಪಗಳು ನಿರಾಧಾರವಾದಂತವು. ಹಾಗಾಗಿ ಪೊಲೀಸರ ತನಿಖೆಗೆ ಸಹಕಾರ ನೀಡುತ್ತಿದ್ದಾರೆ. ಅವರು ತಲೆ ಮರೆಸಿಕೊಳ್ಳಲು ಪ್ರಯತ್ನಿಸುವುದಿಲ್ಲ. ಹೀಗಾಗಿ ಅರ್ಜಿದಾರರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಸರ್ಕಾರಿ ವಿಶೇಷ ಅಭಿಯೋಜಕ ಪಿ. ಪ್ರಸನ್ನ ಕುಮಾರ್ ಅವರು ಪ್ರತಿವಾದ ಮಂಡಿಸಿ, ಆರೋಪಿತರ ವಿರುದ್ಧ ದಾಖಲಿಸಿರುವಂತಹ ದೂರು ಗುರುತರವಾದದ್ದು, ಆರೋಪಿತರು ಪೊಲೀಸರ ತನಿಖೆಗೆ ಸೂಕ್ತ ಸಹಕಾರ ನೀಡಿಲ್ಲ. ಶಾಸಕರ ಮನೆಗೆ ಬೆಂಕಿ ಹಚ್ಚುವಲ್ಲಿ ಇವರ ಪಾತ್ರವಿದ್ದು ತನಿಖೆ ನಡೆಯುತ್ತಿದೆ. ಮುಖ್ಯವಾಗಿ ಎಸ್​​​ಸಿ, ​ಎಸ್​ಟಿ ಕಾಯ್ದೆಯ ಸೆಕ್ಷನ್ 15(ಎ) ಪ್ರಕಾರ ದೂರುದಾರನಿಗೆ ನೋಟಿಸ್ ನೀಡದೇ ಯಾವುದೇ ಕ್ರಮ ಜರುಗಿಸುವಂತಿಲ್ಲ. ಅಂತೆಯೇ ಕಾಯ್ದೆಯ 18(ಎ) ಪ್ರಕಾರ ಆರೋಪಿತರಿಗೆ ನಿರೀಕ್ಷಣಾ ಜಾಮೀನು ನೀಡಲು ಸಾಧ್ಯವಿಲ್ಲ. ಆದ್ದರಿಂದ ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ಕೋರಿದರು.
ಸರ್ಕಾರಿ ವಿಶೇಷ ಅಭಿಯೋಜಕರ ವಾದ ಪುರಸ್ಕರಿಸಿದ ನ್ಯಾಯಾಧೀಶರು ಆರೋಪಿಗಳ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಆದೇಶಿತು. ಹಾಗೆಯೇ ಪ್ರಕರಣದ ವಿಚಾರಣೆಯನ್ನು ನವೆಂಬರ್ 4ಕ್ಕೆ ಮುಂದೂಡಿತು.

ABOUT THE AUTHOR

...view details