ಬೆಂಗಳೂರು: ಓಬಿಸಿಯನ್ನು ಮೀಸಲಾತಿಯೊಳಗೆ ಸೇರಿಸಿಯೇ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಯಾವಾಗ ನಡೆಸುತ್ತೀರಾ? ಎನ್ನುವ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವ ಈಶ್ವರಪ್ಪ, ಸೀಮಾ ನಿರ್ಣಯಕ್ಕೆ ಸಮಿತಿ ಮಾಡಿದ್ದೇವೆ. ಈ ಸಮಿತಿಯು ವರದಿ ನೀಡುವವರೆಗೂ ಕಾಯಬೇಕಾಗುತ್ತದೆ. ಕಾಲಮಿತಿಯಲ್ಲಿ ವರದಿ ನೀಡಿ ಎಂದು ಸೂಚಿಸಲು ಸಾಧ್ಯವಿಲ್ಲ. ಆದರೆ ಆದಷ್ಟು ಬೇಗ ವರದಿ ನೀಡಬೇಕೆಂದು ಮನವಿ ಮಾಡಿದ್ದೇವೆ.
ಸುಪ್ರೀಂಕೋರ್ಟ್ ಓಬಿಸಿಗೆ ಮೀಸಲಾತಿ ಕೊಡಲು ಆಗುವುದಿಲ್ಲ ಎಂದು ಹೇಳಿದೆ. ಈ ಬಗ್ಗೆ ನಮ್ಮ ಮುಖ್ಯಮಂತ್ರಿಗಳು ಕಾನೂನು ತಜ್ಞರ ಜೊತೆ ಚರ್ಚೆ ಮಾಡುತ್ತಿದ್ದಾರೆ. ಆದರೂ ಒಂದಂತೂ ಸತ್ಯ. ನಾವು ಓಬಿಸಿಯವರಿಗೆ ಮೀಸಲಾತಿ ನೀಡಿಯೇ ಚುನಾವಣೆ ನಡೆಸುತ್ತೇವೆ ಎಂದು ತಿಳಿಸಿದರು.