ಕರ್ನಾಟಕ

karnataka

By

Published : May 4, 2023, 7:42 PM IST

ETV Bharat / state

ಗೋವಿಂದರಾಜನಗರ ಕ್ಷೇತ್ರದಲ್ಲಿ ಸಾಂಪ್ರದಾಯಿಕ ಎದುರಾಳಿಗಳ ನೇರ ಪೈಪೋಟಿ: ಯಾರ ಅದೃಷ್ಟ ಏನಿದೆಯೋ ಎಂದ ಮತದಾರರು..

ಗೋವಿಂದರಾಜನಗರ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಯುತ್ತಿದೆ. ಬಿಜೆಪಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೂರೂ ಪಕ್ಷಗಳ ಜೊತೆ ಪಕ್ಷೇತರರೂ ಕೂಡ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ರೋಡ್ ಶೋಗಳು, ಪ್ರಚಾರ ಸಭೆಗಳು, ಮನೆ ಮನೆ ಪ್ರಚಾರ ಹೀಗೆ ಪ್ರತಿನಿತ್ಯವೂ ಕ್ಷೇತ್ರ ವ್ಯಾಪ್ತಿಯಲ್ಲಿ ಅಭ್ಯರ್ಥಿಗಳು ಭರಾಟೆಯ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ.

Govindarajanagar Constituency
ಗೋವಿಂದರಾಜನಗರ ಕ್ಷೇತ್ರ

ಗೋವಿಂದರಾಜನಗರ ಕ್ಷೇತ್ರದಲ್ಲಿ ಸಾಂಪ್ರದಾಯಿಕ ಎದುರಾಳಿಗಳ ನೇರ ಪೈಪೋಟಿ

ಬೆಂಗಳೂರು:ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದ್ದು, ಬೆಂಗಳೂರಿನ ಜಿದ್ದಾಜಿದ್ದಿನ ಕ್ಷೇತ್ರವಾಗಿರುವ ಗೋವಿಂದರಾಜನಗರ ಕ್ಷೇತ್ರದಲ್ಲಿ ಸಾಂಪ್ರದಾಯಿಕ ಎದುರಾಳಿಗಳ ನೇರ ಪೈಪೋಟಿ ಕಂಡು ಬಂದಿದೆ. ಸೋಮಣ್ಣ ಬದಲು ಸೋಮಣ್ಣರ ಆಪ್ತ ಬಿಜೆಪಿಯಿಂದ ಕಣಕ್ಕಿಳಿದಿದ್ದು, ಪ್ರತಿಪಕ್ಷ ಕಾಂಗ್ರೆಸ್​ನಿಂದ ಮಾಜಿ ಸಚಿವ ಕೃಷ್ಣಪ್ಪ ಪುತ್ರ ಪ್ರಿಯಾಕೃಷ್ಣ ಅಖಾಡದಲ್ಲಿದ್ದಾರೆ. ಸೋಮಣ್ಣ ಕೆಲಸ, ಪ್ರಿಯಾಕೃಷ್ಣ ವರ್ಚಸ್ಸಿನ ನಡುವೆ ಯಾರ ಅದೃಷ್ಟ ಹೇಗಿದೆಯೋ ಎನ್ನುತ್ತಿದ್ದಾರೆ ಕ್ಷೇತ್ರದ ಮತದಾರರು.

ಕಾಂಗ್ರೆಸ್​ನ ಭದ್ರಕೋಟೆಯಾಗಿದ್ದ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ 2008, 2009, 2013ರಲ್ಲಿ ಸತತವಾಗಿ ಕೈ ವಶದಲ್ಲಿತ್ತು. ಆದರೆ, 2018ರಲ್ಲಿ ಮೊದಲ ಬಾರಿ ಇಲ್ಲಿ ಕಮಲ ಅರಳಿದೆ. ಆಪರೇಷನ್ ಕಮಲದ ಮೂಲಕ ಗೋವಿಂದರಾಜನಗರ ಕ್ಷೇತ್ರ ವಶಕ್ಕೆ ಮುಂದಾಗಿದ್ದ ಬಿಜೆಪಿಗೆ ಮೊದಲ ಚುಂಬನಂ ದಂತಭಗ್ನಂ ಎನ್ನುವಂತೆ ಉಪ ಚುನಾವಣೆಯಲ್ಲಿ ಸೋಲಾಗಿತ್ತು. ಅದಾಗಿ 9 ವರ್ಷದ ನಂತರ ಕಡೆಗೂ ಕ್ಷೇತ್ರವನ್ನು ದಕ್ಕಿಸಿಕೊಂಡಿದ್ದ ಬಿಜೆಪಿಗೆ ಈಗ ಕ್ಷೇತ್ರವನ್ನು ಉಳಿಸಿಕೊಳ್ಳಲು ಪ್ರಯಾಸ ಪಡುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಹಾಲಿ ಶಾಸಕ ವಿ.ಸೋಮಣ್ಣ ಕ್ಷೇತ್ರ ಬದಲಾವಣೆ. ಇದು ಸ್ವತಃ ಸೋಮಣ್ಣ ನಿರ್ಧಾರವಲ್ಲ. ಹೈಕಮಾಂಡ್ ನಿರ್ದೇಶನದಂತೆ ಗೋವಿಂದರಾಜನಗರ ಕ್ಷೇತ್ರ ತ್ಯಾಗ ಮಾಡಿ ಚಾಮರಾಜನಗರ ಮತ್ತು ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಸ್ಪರ್ಧೆ ಮಾಡಿದ್ದಾರೆ. ತಾವು ಪ್ರತಿನಿಧಿಸಿದ್ದ ಗೋವಿಂದರಾಜನಗರ ಕ್ಷೇತ್ರವನ್ನು ತಮ್ಮ ಆಪ್ತ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಉಮೇಶ್ ಶೆಟ್ಟಿಗೆ ಬಿಟ್ಟುಕೊಟ್ಟಿದ್ದಾರೆ.

ಕ್ಷೇತ್ರದಲ್ಲಿ ಸೋಮಣ್ಣ ಹೆಸರು ಹೆಚ್ಚು ಚಾಲ್ತಿಯಲ್ಲಿದೆ. ಎಲ್ಲ ಕಡೆ ಒಳ್ಳೆಯ ಹೆಸರು ಸಂಪಾದಿಸಿಕೊಂಡಿದ್ದಾರೆ. ಉತ್ತಮ ರಸ್ತೆ, ಸುಸಜ್ಜಿತ ಮೂಲಸೌಕರ್ಯ, ಕ್ರೀಡಾಂಗಣ, ಗ್ರಂಥಾಲಯ, ಪಾರ್ಕ್​ಗಳ ನಿರ್ವಹಣೆ, ಆಸ್ಪತ್ರೆ ಸ್ಥಾಪನೆ, ಕುಡಿಯುವ ನೀರು ಪೂರೈಕೆ ಹೀಗೆ ಕ್ಷೇತ್ರಕ್ಕೆ ಏನೇನು ಬೇಕೋ ಎಲ್ಲವನ್ನೂ ಮಾಡಿದ್ದಾರೆ. ಇದು ಬಿಜೆಪಿ ಅಭ್ಯರ್ಥಿಯ ಪಾಲಿಗೆ ವರದಾನವಾಗಿದೆ ಎನ್ನಬಹುದು.

ಆದರೆ, ಇಲ್ಲಿ ಪ್ರಬಲ ಪ್ರತಿಸ್ಪರ್ಧಿ ಕಾಂಗ್ರೆಸ್​ನ ಪ್ರಿಯಾಕೃಷ್ಣ, ಮಾಜಿ ಸಚಿವ ಕೃಷ್ಣಪ್ಪ ಪುತ್ರರಾದ ಪ್ರಿಯಾ ಕೃಷ್ಣ, ಈಗಾಗಲೇ 2009ರ ಉಪ ಚುನಾವಣೆ ಮತ್ತು 2013ರ ಸಾರ್ವತ್ರಿಕ ಚುನಾವಣೆಯಲ್ಲಿ ಒಟ್ಟು ಎರಡು ಬಾರಿ ಗೆದ್ದಿರುವ ಪ್ರಿಯಾಕೃಷ್ಣ ಕಳೆದ ಬಾರಿ ಸೋಮಣ್ಣ ವಿರುದ್ಧ 12 ಸಾವಿರ ಮತಗಳಷ್ಟು ಅಂತರದಲ್ಲಿ ಪರಾಜಿತಗೊಂಡಿದ್ದರು. ಆದರೆ, ಈ ಬಾರಿ ಪ್ರಬಲ ಪ್ರತಿಸ್ಪರ್ಧಿಯಾಗಿದ್ದ ಸೋಮಣ್ಣ ಇಲ್ಲ. ಬದಲಾಗಿ ಅವರ ಆಪ್ತ ಮಾಜಿ ಕಾರ್ಪೊರೇಟರ್ ಕಣದಲ್ಲಿದ್ದಾರೆ ಹೀಗಾಗಿ ಗೆಲ್ಲುವ ಲೆಕ್ಕಾಚಾರ ಹಾಕಿಕೊಂಡಿದ್ದಾರೆ ಪ್ರಿಯಾಕೃಷ್ಣ.

ಕ್ಷೇತ್ರದ ಬಗ್ಗೆ ಮತದಾರ ಹೇಳಿದ್ದೇನು?: ಈ ಕುರಿತು ಈಟಿವಿ ಭಾರತ್ ಜೊತೆ ಮಾತನಾಡಿದ ಸ್ಥಳೀಯ ವ್ಯಾಪಾರಿ ಶಿವಣ್ಣ, ''ಬಿಜೆಪಿ ಪ್ರಚಾರ ಸ್ವಲ್ಪ ಜೋರಾಗಿದೆ. ಸೋಮಣ್ಣ ಕೆಲಸ ಚೆನ್ನಾಗಿ ಮಾಡಿದ್ದಾರೆ. ಅವರ ಕಾರ್ಯಗಳೇ ಇಲ್ಲಿ ನಡೆಯೋದು, ಅವರು ನಿಂತಿಲ್ಲ. ಆದರೂ ಉಮೇಶ್ ಶೆಟ್ಟಿ ಕೂಡ ಕೆಲಸ ಮಾಡಿದ್ದಾರೆ. ಆಸ್ಪತ್ರೆ ಇತರೆ ವ್ಯವಸ್ಥೆ ಉತ್ತಮವಾಗಿ ಮಾಡಿದ್ದಾರೆ. ಅವರುಇನ್ನು ಇದೇ ಕ್ಷೇತ್ರದಲ್ಲೇ ಇದ್ದಿದ್ದರೆ ಇನ್ನೂ ಚೆನ್ನಾಗಿ ಅಭಿವೃದ್ಧಿ ಮಾಡುತ್ತಿದ್ದರು, ಮುಂದೆ ಯಾರು ಬರುತ್ತಾರೋ ಏನು ಅಭಿವೃದ್ಧಿ ಮಾಡುತ್ತಾರೋ ನೋಡೋಣ'' ಎಂದರು.

''ಕಾಂಗ್ರೆಸ್​ನ ಪ್ರಿಯಾಕೃಷ್ಣ ಕೂಡ ಒಳ್ಳೆಯವರೆ ಅವರೂ ಹೆಚ್ಚಿನ ಪ್ರಚಾರ ನಡೆಸುತ್ತಿದ್ದಾರೆ. ಯಾರದ್ದು ಏನು ಹಣಬರಹ ಏನಿದೆ ಅಂತಾ ಯಾರಿಗೂ ಗೊತ್ತಿಲ್ಲ. ಅವರವರ ನಸೀಬು ಯಾರು ಬರುತ್ತಾರೋ ಗೊತ್ತಿಲ್ಲ. ಉಮೇಶ್ ಶೆಟ್ಟಿ ಕೂಡ ತುಂಬಾ ಓಡಾಡುತ್ತಿದ್ದಾರೆ. ಮತದಾನದ ದಿನ ಯಾರಿಗಾದರೂ ಒಬ್ಬರಿಗೆ ಮತ ಹಾಕುತ್ತೇನೆ'' ಎಂದರು.

ಎಲ್ಲಾ ಅಭ್ಯರ್ಥಿಗಳಿಂದಲೂ ಅಬ್ಬರದ ಪ್ರಚಾರ:ಇನ್ನು ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಯುತ್ತಿದೆ. ಬಿಜೆಪಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೂರೂ ಪಕ್ಷಗಳ ಜೊತೆ ಪಕ್ಷೇತರರೂ ಕೂಡ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ರೋಡ್ ಶೋಗಳು, ಚಿಕ್ಕ ಚಿಕ್ಕ ಪ್ರಚಾರ ಸಭೆಗಳು, ಮನೆ ಮನೆ ಪ್ರಚಾರ ಹೀಗೆ ನಿತ್ಯವೂ ಕ್ಷೇತ್ರ ವ್ಯಾಪ್ತಿಯಲ್ಲಿ ಅಭ್ಯರ್ಥಿಗಳು ಭರಾಟೆಯ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಮೇಲ್ನೋಟಕ್ಕೆ ಜೆಡಿಎಸ್​ನಿಂದ ಸ್ಪರ್ಧೆ ಮಾಡಿರುವ ಬೆಂಗಳೂರು ಮಹಾನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ಪ್ರಬಲ ಪೈಪೋಟಿ ನೀಡುವಂತಿದ್ದರೂ ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಪೈಪೋಟಿ ಇದೆ ಎನ್ನುವುದು ಸ್ಪಷ್ಟವಾಗಿದೆ.

ಗೋವಿಂದರಾಜನಗರ ಕ್ಷೇತ್ರದಲ್ಲಿ ಒಟ್ಟು 14 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಕಾಂಗ್ರೆಸ್ ನಿಂದ ಮಾಜಿ ಶಾಸಕ ಪ್ರಿಯಾಕೃಷ್ಣ, ಬಿಜೆಪಿಯಿಂದ ಉಮೇಶ್ ಶೆಟ್ಟಿ, ಜೆಡಿಎಸ್ ನಿಂದ ಆರ್. ಪ್ರಕಾಶ್ ಕಣದಲ್ಲಿರುವ ಪ್ರಮುಖರಾಗಿದ್ದರೆ ಆಮ್ ಆದ್ಮಿ ಪಕ್ಷ ಸೇರಿದಂತೆ ಕೆಲ ಸಣ್ಣಪುಟ್ಟ ಪಕ್ಷಗಳು ಮತ್ತು ಪಕ್ಷೇತರರು ಅಖಾಡದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಜಾತಿವಾರು ಮತದಾರರ ವಿವರ:ಒಕ್ಕಲಿಗರ ಪ್ರಾಬಲ್ಯ ಇರುವ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ 2,81,098 ಮತದಾರರಿದ್ದು, 1,45,574 ಪುರುಷ ಮತದಾರರು, 1,35,483 ಮಹಿಳಾ ಮತದಾರರು, 41 ತೃತೀಯ ಲಿಂಗಿಗಳಿದ್ದಾರೆ. 56 ಸಾವಿರ ಒಕ್ಕಲಿಗರು, 18 ಸಾವಿರ ಲಿಂಗಾಯತರು, 13 ಸಾವಿರ ಬ್ರಾಹ್ಮಣ, 58 ಸಾವಿರ ಒಬಿಸಿ, 46 ಸಾವಿರ ಎಸ್ಸಿಎಸ್ಟಿ, 24 ಸಾವಿರ ಮುಸ್ಲಿಂ, 15 ಸಾವಿರ ಇತರ ಸಮುದಾಯದ ಮತದಾರರಿದ್ದಾರೆ. ಒಕ್ಕಲಿಗ ಪ್ರಾಬಲ್ಯವಿದ್ದರೂ ಒಬಿಸಿ ಮತದಾರರು, ಎಸ್ಸಿ, ಎಸ್ಟಿ ಸಮುದಾಯದ ಮತದಾರರುನಿರ್ಣಾಯಕ ಪಾತ್ರ ವಹಿಸಲಿದ್ದಾರೆ.

ಗೌಣವಾದ ಸಮಸ್ಯೆಗಳು:ಡಾ.ರಾಜ್ ಕುಮಾರ್ ಹೆಸರು ವಾರ್ಡ್​ಗೆ ಇಡಲಾಗಿದ್ದು, ಐತಿಹಾಸಿಕ ಮಾರುತಿ ಮಂದಿರ ಇದೆ, ಮೆಟ್ರೋ ಮಾರ್ಗವಿದೆ. ಉತ್ತಮ ವಸತಿ ಪ್ರದೇಶಗಳು ಇವೆ. ಆದರೂ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪ್ರತಿ ಬಾರಿಯೂ ಕಾಣಿಸಿಕೊಳ್ಳುತ್ತಿದೆ. ಕ್ಷೇತ್ರದ ಹಲವು ಭಾಗಗಳಾದ ಕಾವೇರಿಪುರ, ಗಂಗೊಂಡನಹಳ್ಳಿ ಸೇರಿ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಇದೆ. ಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲದಿರುವುದೂ ಸಮಸ್ಯೆಯಾಗಿದೆ. ಮಾಗಡಿ ರಸ್ತೆ ಹೌಸಿಂಗ್ ಬೋರ್ಡ್ ಸಮೀಪದಲ್ಲಿ ನಡೆಯುತ್ತಿರುವ ಗ್ರೇಡ್ ಸಪರೇಟರ್ ಕಾಮಗಾರಿ ವಿಳಂಬವಾಗುತ್ತಿರುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗಿ ಕ್ಷೇತ್ರದಲ್ಲಿ ಸಮಸ್ಯೆಯಾಗುತ್ತಿದೆ. ಪಾರ್ಕಿಂಗ್ ಸಮಸ್ಯೆಯೂ ಕ್ಷೇತ್ರದಲ್ಲಿದೆ. ಆದರೆ ಅಬ್ಬರದ ಪ್ರಚಾರ, ಭರಾಟೆಯ ಮತಬೇಟೆಯಲ್ಲಿ ಈಸಮಸ್ಯೆಗಳು ಕಾಣೆಯಾಗಿವೆ. ಚುನಾವಣೆ ಬರುತ್ತಿದ್ದಂತೆ ರಸ್ತೆಗಳಿಗೆಲ್ಲ ಟಾರು ಬಿದ್ದಿದೆ. ನೀರು ಪೂರೈಕೆಯಲ್ಲಿನ ವ್ಯತ್ಯಯ ಸರಿಯಾಗಿದೆ. ಹೀಗಾಗಿ ಕ್ಯಾಂಪೇನ್ ನಡುವೆ ಕ್ಷೇತ್ರದ ಸಮಸ್ಯೆಗಳು ಕಾಣದಂತಾಗಿವೆ.

ಮೋದಿ ರೋಡ್ ಶೋ:ಟಿಕೆಟ್ ಘೋಷಣೆವರೆಗೂ ಕ್ಷೇತ್ರದಲ್ಲೇ ಬೀಡುಬಿಟ್ಟು ದಿನನಿತ್ಯ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಇತ್ಯಾದಿಗಳಲ್ಲಿ ಬಿಡುವಿಲ್ಲದೆ ತೊಡಗಿಕೊಂಡು ಕ್ಷೇತ್ರವನ್ನು ಸಂಪೂರ್ಣವಾಗಿ ಸಜ್ಜು ಮಾಡಿಕೊಂಡಿದ್ದ ಸೋಮಣ್ಣ ಅಂತಿಮವಾಗಿ ಆಪ್ತನಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ. ಅಖಾಡಕ್ಕೆ ಸಿದ್ಧವಾಗಿದ್ದ ಕ್ಷೇತ್ರದಲ್ಲಿ ಉಮೇದುವಾರಿಕೆ ಸಲ್ಲಿಸಿರುವ ಉಮೇಶ್ ಶೆಟ್ಟಿಗೆ ಈಗ ಮೋದಿ ಪ್ರಚಾರದ ಬಲ ಸಿಗಲಿದೆ. ಮೇ 6ರಂದು ಗೋವಿಂದರಾಜನಗರ ಕ್ಷೇತ್ರದಲ್ಲಿ ಮೋದಿ ರೋಡ್ ಶೋ ನಡೆಸಲಿದ್ದಾರೆ. ಉಮೆಶ್ ಶೆಟ್ಟಿ ಪರ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ಕಾಂಗ್ರೆಸ್ ಪರ ರಾಜ್ಯ ನಾಯಕರು ಮಾತ್ರ ಪ್ರಚಾರ ನಡೆಸಿದ್ದು, ತಂದೆಯ ಶ್ರಮವನ್ನೇ ಹೆಚ್ಚಾಗಿ ನೆಚ್ಚಿಕೊಳ್ಳುವಂತಾಗಿದೆ. ಜೆಡಿಎಸ್​ಗೆ ದಳಪತಿಗಳ ಪ್ರಚಾರದ ಸಾತ್ ಸಿಕ್ಕಿದೆ.

ಒಟ್ಟಿನಲ್ಲಿ ಪ್ರಚಾರದ ಕಣ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ಮೇ 10ರಂದು 14 ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಲಿದ್ದು, ಮೇ 13ರಂದು ಗೋವಿಂದರಾಜನಗರದ ಸರದಾರ ಯಾರಾಗಲಿದ್ದಾರೆ ಎನ್ನುವುದು ಗೊತ್ತಾಗಲಿದೆ.

ಇದನ್ನೂ ಓದಿ:ತಿಪಟೂರಿನಲ್ಲಿ ಯಡಿಯೂರಪ್ಪ ಭರ್ಜರಿ ರೋಡ್ ಶೋ : ಸಚಿವ ನಾಗೇಶ್​ ಪರ ಮತಯಾಚನೆ

ABOUT THE AUTHOR

...view details