ಬೆಂಗಳೂರು:ಬೆಳ್ತಂಗಡಿಯಲ್ಲಿ ಕೊಲೆಯಾದ ದಲಿತ ಸಮುದಾಯದ ವ್ಯಕ್ತಿ ದಿನೇಶ್ ಒಂದು ವೇಳೆ ಅನ್ಯಧರ್ಮಿಯರಿಂದ ಕೊಲೆಯಾಗಿದ್ದರೆ ಬಿಜೆಪಿಯವರು ಸುಮ್ಮನಿರುತ್ತಿದ್ದರೆ? ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಬಜರಂಗದಳದ ಮುಖಂಡನೊಬ್ಬನ ಸಹೋದರನಿಂದ ಧರ್ಮಸ್ಥಳದಲ್ಲಿ ದಲಿತ ಯುವಕ ದಿನೇಶ್ ಎಂಬಾತನ ಹತ್ಯೆಯಾಗಿದೆ. ದಿನೇಶ್ ಸಾವಿನ ವಿಚಾರದಲ್ಲಿ ಎಲ್ಲಿ ಹೋಯಿತು ಬಿಜೆಪಿ ನಾಯಕರ ಪೌರುಷ, ವೀರಾವೇಶ ಮತ್ತು ಅಟ್ಟಹಾಸ? ಈಗ ಯಾಕೆ ಒಬ್ಬರೇ ಒಬ್ಬ ಬಿಜೆಪಿ ನಾಯಕರೂ ಕೂಡ ದಲಿತ ದಿನೇಶ್ ಸಾವಿನ ಬಗ್ಗೆ ಧ್ವನಿಯೆತ್ತುತ್ತಿಲ್ಲ? ದಲಿತ ದಿನೇಶ್ ಹಿಂದೂ ಅಲ್ಲವೇ? ಎಂದು ಕಿಡಿಕಾರಿದ್ದಾರೆ.
ಧರ್ಮಸ್ಥಳದಲ್ಲಿ ಕೊಲೆಯಾದ ದಲಿತ ಯುವಕ ದಿನೇಶ್ ಒಂದು ವೇಳೆ ಅನ್ಯಧರ್ಮಿಯರಿಂದ ಕೊಲೆಯಾಗಿದ್ದರೆ ಬಿಜೆಪಿ ಯವರು ಸುಮ್ಮನಿರುತ್ತಿದ್ದರೆ? ಹೆಣದ ರಾಜಕೀಯದಲ್ಲಿ ಪಿಹೆಚ್ಡಿ ಮಾಡಿರುವ ಈಶ್ವರಪ್ಪ, ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹರ ಧ್ವನಿ ಈಗ ಎಲ್ಲಿ ಅಡಗಿ ಹೋಯಿತು? ಕೊಂದವನು ತಮ್ಮವ, ಸತ್ತವನು ದಲಿತ ಎಂಬುದು ಬಿಜೆಪಿ ನಾಯಕರ ಈ ಮೌನಕ್ಕೆ ಕಾರಣವೇ? ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಕಾರ್ಯಕರ್ತನ ಕೊಲೆ ಪ್ರಕರಣ : ಆರೋಪಿ ಕೃಷ್ಣ ಪೊಲೀಸ್ ವಶಕ್ಕೆ
ಧರ್ಮಸ್ಥಳದಲ್ಲಿ ದಲಿತ ಯುವಕನ ಕೊಲೆ ಆರೋಪಿ ಸ್ಥಳೀಯ ಬಿಜೆಪಿ ಮುಖಂಡ ಕೃಷ್ಣ ಎಂಬಾತನಿಗೆ ಶಾಸಕ ಹರೀಶ್ ಪೂಂಜಾರ ರಕ್ಷಣೆಯಿದೆ. ಧರ್ಮದ ಹೆಸರಲ್ಲಿ ಸಮಾಜದಲ್ಲಿ ಕೊಳ್ಳಿ ಇಡುವ ಬಿಜೆಪಿಯವರು ಕೊಲೆಗಡುಕರ ರಕ್ಷಕರು ಎಂಬುದಕ್ಕೆ ಇದು ಸಾಕ್ಷಿ. ದಿನೇಶ್ ಹತ್ಯೆಯನ್ನು ಈ ಸರ್ಕಾರ ಗಂಭೀರವಾಗಿ ಪರಿಗಣಿಸಿ ಕೊಲೆಗಡುಕರ ವಿರುದ್ಧ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳಲಿ ಎಂದು ಗುಂಡೂರಾವ್ ಆಗ್ರಹಿಸಿದ್ದಾರೆ.