ಬೆಂಗಳೂರು: ರಾಜ್ಯದ ಪರಿಸ್ಥಿತಿ ನೋಡಿಕೊಂಡು ಸೂಕ್ತ ಬದಲಾವಣೆಗಳನ್ನು ಮಾಡಿಕೊಳ್ಳುವುದಕ್ಕೆ ಆಯಾ ರಾಜ್ಯ ಸರ್ಕಾರಗಳಿಗೆ ಕೇಂದ್ರ ಅನುಮತಿ ನೀಡಿದೆ. ತಮಿಳುನಾಡಿನಲ್ಲಿ ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ಹಾಜರಾತಿಗೆ ಅನುಮತಿ ನೀಡಿದ್ದು, ಕರ್ನಾಟಕದಲ್ಲಿ ಯಾವಾಗ ಎಂಬ ಪ್ರಶ್ನೆ ಉದ್ಭವಿಸಿದೆ.
ಚಿತ್ರಮಂದಿರಗಳಿಗೆ ನೀಡಿದ ಸೂಚನೆ ಕಳೆದ ವಾರವಷ್ಟೇ ತಮಿಳು ನಟ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರನ್ನು ಭೇಟಿ ಮಾಡಿ, ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ವೀಕ್ಷಕರನ್ನು ಭರ್ತಿ ಮಾಡುವುದಕ್ಕೆ ಅನುಮತಿ ಕೊಡಬೇಕು ಎಂದು ಮನವಿ ಮಾಡಿದ್ದರು. ಅದಾಗಿ ಎರಡು ದಿನಗಳಲ್ಲೇ ತಮ್ಮ ಮಾಸ್ಟರ್ ಚಿತ್ರವನ್ನು ಸಂಕ್ರಾಂತಿ ಹಬ್ಬದ ನಿಮಿತ್ತ ಜನವರಿ 13ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು. ಈಗ ತಮಿಳುನಾಡು ಸರ್ಕಾರವು, ತಕ್ಷಣಕ್ಕೆ ಜಾರಿಗೆ ಬರುವಂತೆ ಶೇ. 100ರಷ್ಟು ಹಾಜರಾತಿಗೆ ಅನುಮತಿ ನೀಡಿದೆ.
ಈ ಸುದ್ದಿಯನ್ನೂ ಓದಿ:ಅತಿಥಿ ಉಪನ್ಯಾಸಕರಿಗೆ ವೇತನ ಬಿಡುಗಡೆ ಮಾಡುವಂತೆ ಬಿಎಸ್ವೈಗೆ ಪ್ರಿಯಾಂಕ ಖರ್ಗೆ ಒತ್ತಾಯ
ಸಾಮಾನ್ಯವಾಗಿ ಈವರೆಗೂ ಇಂತಹ ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದುದು ಕೇಂದ್ರ ಸರ್ಕಾರ. ಆದರೆ, ರಾಜ್ಯದ ಪರಿಸ್ಥಿತಿ ನೋಡಿಕೊಂಡು ಸೂಕ್ತ ಬದಲಾವಣೆಗಳನ್ನು ಮಾಡಿಕೊಳ್ಳುವುದಕ್ಕೆ ಆಯಾ ರಾಜ್ಯ ಸರ್ಕಾರಗಳಿಗೆ ಕೇಂದ್ರ ಅನುಮತಿ ನೀಡಿದೆ. ಕೊರೊನಾ ಪ್ರಕರಣಗಳು ಇಳಿಮುಖವಾಗಿರುವ ಹಿನ್ನೆಲೆ, ತಮಿಳುನಾಡು ಸರ್ಕಾರವು ಇದೀಗ ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ವೀಕ್ಷಕರ ಹಾಜರಾತಿಗೆ ಅನುಮತಿ ಕೊಟ್ಟಿದೆ. ಇದರಿಂದ ಕೇವಲ`ಮಾಸ್ಟರ್ ಚಿತ್ರವೊಂದಕ್ಕೆ ಅಲ್ಲ, ಹಲವು ಬಿಗ್ ಬಜೆಟ್ ಚಿತ್ರಗಳಿಗೂ ಅನುಕೂಲ ಮಾಡಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಸಾಲುಸಾಲು ಬಿಗ್ ಬಜೆಟ್ ಚಿತ್ರಗಳು ಬಿಡುಗಡೆಯಾಗಲಿವೆ.
ತಮಿಳುನಾಡು ಸರ್ಕಾರ ಈ ರೀತಿಯ ಅನುಮತಿ ಮಾಡಿ ಕೊಡುತ್ತಿದ್ದಂತೆಯೇ, ಬೇರೆ ರಾಜ್ಯಗಳಲ್ಲೂ ಆಯಾ ಸರ್ಕಾರಗಳ ಮೇಲೆ ಚಿತ್ರರಂಗಗಳು ಒತ್ತಡ ಹಾಕುವುದಕ್ಕೆ ಪ್ರಾರಂಭಿಸಿವೆ. ಈ ಹಿನ್ನೆಲೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸದಸ್ಯರು ಸಹ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಆದಷ್ಟು ಬೇಗ ರಾಜ್ಯದ ಚಿತ್ರಮಂದಿರಗಳಲ್ಲೂ ಶೇ. 100ರಷ್ಟು ಹಾಜರಾತಿಗೆ ಅನುಮತಿ ಕೊಡುವಂತೆ ಮನವಿ ಸಲ್ಲಿಸಲು ಉದ್ದೇಶಿಸಿದೆ.