ಕರ್ನಾಟಕ

karnataka

By

Published : Feb 3, 2021, 10:33 PM IST

ETV Bharat / state

ಪೌರಕಾರ್ಮಿಕರ ವೇತನ ಬಿಡುಗಡೆ ವಿಳಂಬ: ಒಂದು ತಿಂಗಳಲ್ಲಿ ಸರಿಪಡಿಸುವ ಭರವಸೆ

ಕೆಲಸಕ್ಕೆ ಸೇರಿದ ಒಂದು ವರ್ಷದೊಳಗಿನ 3 ಸಾವಿರ ಪೌರಕಾರ್ಮಿಕರ ಹೆಸರನ್ನು ಹೆಚ್​​ಆರ್​ಎಂಎಸ್​​​ನಲ್ಲಿ ಸೇರಿಸದ ಕಾರಣ ಮೂರು ತಿಂಗಳಿಂದ ವೇತನ ಬಿಡುಗಡೆ ಬಾಕಿ ಉಳಿದಿದೆ. ಫೆ. 15ರೊಳಗೆ ಪಾವತಿ ಮಾಡಲಾಗುತ್ತದೆ ಎಂದು ಘನತ್ಯಾಜ್ಯ ವಿಶೇಷ ಆಯುಕ್ತ ರಂದೀಪ್ ತಿಳಿಸಿದರು.

Delay in the payment release of civilian workers
ಪೌರಕಾರ್ಮಿಕರ ವೇತನ

ಬೆಂಗಳೂರು: ಕೋವಿಡ್ ಅವಧಿಯಲ್ಲೇ ಸ್ವಚ್ಛತಾ ಪರಿಕರಗಳನ್ನು ಹಿಡಿದು ನಗರವನ್ನು ಸ್ವಚ್ಛಗೊಳಿಸಲು ರಸ್ತೆಗಿಳಿಯುತ್ತಿದ್ದ 17 ಸಾವಿರ ಪೌರಕಾರ್ಮಿಕರಿಗೆ ಯಾವುದೇ ಅಡೆತಡೆ ನೀಡದೆ ವೇತನ ಪಾವತಿಸಿದ್ದ ಪಾಲಿಕೆ, ನಂತರ ಕೈಗೊಂಡ ನಿರ್ಧಾರದಿಂದಾಗಿ ಎರಡು ಮೂರು ತಿಂಗಳಿಂದ ಸಂಬಳ ನೀಡದೆ ಅವರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

ಕೆಲವೊಂದು ಕಡೆ ಹೆಚ್ಚುವರಿ ಪೌರಕಾರ್ಮಿಕರಿದ್ದು, ಹೊರವಲಯಗಳಲ್ಲಿ ಪೌರಕಾರ್ಮಿಕರ ಕೊರತೆ ಎದುರಾಗಿತ್ತು. ಹೀಗಾಗಿ ಕೇಂದ್ರ ವಲಯದಿಂದ ಪೌರಕಾರ್ಮಿಕರನ್ನು ನಗರದ ಹೊರವಲಯಕ್ಕೆ ನಿಗದಿಗೊಳಿಸಿ, ಬಿಬಿಎಂಪಿ ಬಯೋಮೆಟ್ರಿಕ್​​ನಲ್ಲಿ ಹೆಸರು ಬದಲಾವಣೆ ಮಾಡಿತು. ಅನೇಕ ಪೌರಕಾರ್ಮಿಕರು ಅದಕ್ಕೆ ವಿರೋಧ ವ್ಯಕ್ತಪಡಿಸಿದರು. ತಮ್ಮ ವಾಸ ಸ್ಥಳದಿಂದ ದೂರ ಹೋಗಿ ಕೆಲಸ ಮಾಡಲು ಅಸಾಧ್ಯ ಎಂದು ಪ್ರತಿಭಟನೆ ನಡೆಸಿ, ಇದ್ದಲ್ಲಿಯೇ ಕೆಲಸ ಮುಂದುವರೆಸಿದರು. ನಂತರ ಪಾಲಿಕೆ ಪೌರಕಾರ್ಮಿಕರು ಕೆಲಸ ಮಾಡುವ ಪಕ್ಕದ ವಾರ್ಡ್​ಗಳಲ್ಲೇ ಕೆಲಸ ಹಂಚಿಕೆ ಮಾಡಲಾಯಿತು.

ಇದನ್ನೂ ಓದಿ...ಕಲ್ಲು ಕ್ವಾರಿಗಳಲ್ಲಿ ಸುರಕ್ಷತಾ ಕ್ರಮ ಪಾಲಿಸುತ್ತಿರುವ ಬಗ್ಗೆ ಸರ್ವೇ ನಡೆಸಿ: ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

ಆದರೆ, ಅಲ್ಲಿಯೂ ಹೋಗದ ಕಾರಣ, ಹಳೆ ವಾರ್ಡ್​ನಲ್ಲೂ ಬಯೋಮೆಟ್ರಿಕ್​ನಿಂದ ಹೆಸರು ತೆಗೆದು ಹಾಕಿದ ಕಾರಣ ವೇತನ ಬಿಡುಗಡೆ ಸಮಸ್ಯೆಯಾಗಿದೆ. ಸದ್ಯ ಹಾಜರಾತಿ ಪುಸ್ತಕದ ಮುಖಾಂತರವೇ ಹಾಜರಾತಿ ಪಡೆಯಲಾಗುತ್ತಿದ್ದು, ಒಂದು ತಿಂಗಳಲ್ಲೇ ವೇತನ ಸಮಸ್ಯೆ ಪರಿಹಾರವಾಗಲಿದೆ. ಕೆಲಸಕ್ಕೆ ಸೇರಿದ ಒಂದು ವರ್ಷದೊಳಗಿನ 3 ಸಾವಿರ ಪೌರಕಾರ್ಮಿಕರ ಹೆಸರನ್ನು ಹೆಚ್​​ಆರ್​ಎಂಎಸ್​​​ನಲ್ಲಿ ಸೇರಿಸದ ಕಾರಣ ಮೂರು ತಿಂಗಳಿಂದ ವೇತನ ಬಿಡುಗಡೆ ಬಾಕಿ ಉಳಿದಿದೆ. ಫೆ. 15ರೊಳಗೆ ಪಾವತಿ ಮಾಡಲಾಗುತ್ತದೆ ಎಂದು ಘನತ್ಯಾಜ್ಯ ವಿಶೇಷ ಆಯುಕ್ತ ರಂದೀಪ್ ಭರವಸೆ ನೀಡಿದರು.

ಪೌರಕಾರ್ಮಿಕರ ಪ್ರತಿಭಟನೆ

ಯಲಹಂಕ ವಲಯದ 160 ಸ್ವೀಪಿಂಗ್ ಮಷಿನ್ ಕಾರ್ಮಿಕರು ಪಾಲಿಕೆ ಕೇಂದ್ರ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದ್ದರು. ನಗರದ ಯಲಹಂಕ ವಲಯದ ಘನತ್ಯಾಜ್ಯ ವಿಭಾಗದ 165 ಕಾರ್ಮಿಕರಿಗೆ ಕಳೆದ ಐದಾರು ತಿಂಗಳಿಂದ ವೇತನವಾಗಿಲ್ಲ. ಮೆಕ್ಯಾನಿಕಲ್ ಸ್ವೀಪರ್ಸ್ ಗುತ್ತಿಗೆದಾರರ ಜೊತೆಗೆ ಕೆಲಸ ಮಾಡುವ ಕಾರ್ಮಿಕರಿಗೆ ನಾಲ್ಕೈದು ತಿಂಗಳಿಂದಲೂ ವೇತನ ಪಾವತಿಯಾಗಿಲ್ಲ. ಗುತ್ತಿಗೆದಾರ ಸತ್ತು ಹೋದ ಬಳಿಕ ಆ ಗುತ್ತಿಗೆಯನ್ನೂ ಪಾಲಿಕೆ ಮುಂದುವರೆಸಿಲ್ಲ. ತಿಂಗಳಿಂದ ಬಿಬಿಎಂಪಿಯೇ ಹಾಜರಾತಿ ಸಹಿ ತೆಗೆದುಕೊಳ್ಳುತ್ತಿದೆ.

ಐಪಿಡಿ ಸಾಲಪ್ಪ ವರದಿ ಅನುಸಾರ, ನೇರ ವೇತನದಡಿ ಪೌರಕಾರ್ಮಿಕರನ್ನು ತನ್ನಿ ಎಂದು ಮನವಿ ಕೊಡಲಾಗಿತ್ತು. ಅದಕ್ಕೆ ಸಂಬಂಧಿಸಿದ ದಾಖಲಾತಿಗಳನ್ನೂ ಕೊಡಲಾಗಿದೆ. ಈ ಕುರಿತು ಯಲಹಂಕ ವಲಯದ ಜಂಟಿ ನಿರ್ದೇಶಕರನ್ನು ಕೇಳಿದರೆ, ನಮ್ಮ ಬಳಿ ಹಣ ಇಲ್ಲ. ಕೇಂದ್ರ ಕಚೇರಿಯಿಂದ ಹಣ ಬರಬೇಕು ಎನ್ನುತ್ತಾರೆ. ಇಲ್ಲಿ ಕೇಂದ್ರ ಕಚೇರಿ ಮನವಿ ಸ್ವೀಕರಿಸುವ ಅಧಿಕಾರಿಗಳೂ ಇಲ್ಲ. ಐದು ತಿಂಗಳಿಂದ ಮನೆ ಬಾಡಿಗೆಯನ್ನೂ ಕಟ್ಟಲಾಗದ ಸ್ಥಿತಿಯಲ್ಲಿ ಕಾರ್ಮಿಕರಿದ್ದಾರೆ ಎಂದು ಸಂಘಟನೆ ಮುಖಂಡರು ಹೇಳಿದ್ದಾರೆ.

ಕಾರ್ಮಿಕರಾದ ಮಲ್ಲಮ್ಮ ಹಾಗೂ ವಿನೋದಮ್ಮ ಮಾತನಾಡಿ, ಮಕ್ಕಳ ಶಿಕ್ಷಣ, ಮನೆ ಬಾಡಿಗೆಯೂ ಕಟ್ಟಲಾಗದೆ ಬೀದಿಗೆ ಬರುವ ಸ್ಥಿತಿ ಉಂಟಾಗಿದೆ. ಕೆಲಸ ಮಾಡಿಯೂ ಕೆಲಸದ ಹಣ ಸಿಕ್ಕಿಲ್ಲ ಎಂದು ನೋವು ತೋಡಿಕೊಂಡರು. ಸದ್ಯ ಒಂದು ತಿಂಗಳಲ್ಲಿ ವೇತನ ಸಮಸ್ಯೆ ಸರಿಪಡಿಸುವ ಭರವಸೆಯನ್ನು ವಿಶೇಷ ಆಯುಕ್ತರು ನೀಡಿದ್ದು, ಕಾದು ನೋಡಬೇಕಿದೆ.

ABOUT THE AUTHOR

...view details