ಬೆಂಗಳೂರು: ರಾಜ್ಯ ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷ ನಾಯಕರು ಹಾಗೂ ಪಕ್ಷದ ರಾಜ್ಯಾಧ್ಯಕ್ಷರ ಆಯ್ಕೆಯಲ್ಲಿ ನಾವು ಎಡವಿದ್ದೇವೆ ಎಂದು ಕೇಂದ್ರ ಸಾಮಾಜಿಕ ನ್ಯಾಯ, ಸಬಲೀಕರಣ ರಾಜ್ಯ ಸಚಿವ ಎ. ನಾರಾಯಣಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ವಿಕಾಸಸೌಧದಲ್ಲಿ ಇಂದು ಇಲಾಖೆಗೆ ಸಂಬಂಧಿಸಿದಂತೆ ನಡೆದ ಸಭೆಗೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಿಳಂಬದಿಂದ ರಾಜ್ಯದಲ್ಲಿ ಪಕ್ಷಕ್ಕೆ ಹಿನ್ನಡೆಯಾಗುವುದು ಸಹಜ. ಪಂಚರಾಜ್ಯಗಳ ಚುನಾವಣೆ ನಂತರ ಪಕ್ಷದ ವರಿಷ್ಠರು ಈ ವಿಚಾರದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
ಪ್ರತಿಯೊಂದು ರಾಜಕೀಯ ಪಕ್ಷಕ್ಕೆ ಹೈಕಮಾಂಡ್ ಇರುತ್ತದೆ. ಪಕ್ಷದ ಒಳಿತು, ಜನಹಿತ ಸಾಧನೆಗೆ ಯೋಗ್ಯವಾದ ತೀರ್ಮಾನ ಕಾಲಕಾಲಕ್ಕೆ ತೆಗೆದುಕೊಳ್ಳುತ್ತಾರೆ. ಜೆಡಿಎಸ್ ಪಕ್ಷವನ್ನು ಎನ್ಡಿಎಗೆ ಸೇರಿಸಿಕೊಂಡಿದ್ದು, ರಾಜ್ಯದಲ್ಲಿ ಮೈತ್ರಿ ಮಾಡಿಕೊಳ್ಳುವ ತೀರ್ಮಾನವೆಲ್ಲ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಂತದಲ್ಲೇ ಆಗಿದೆ ಎಂದು ಸ್ಪಷ್ಟಪಡಿಸಿದರು.
ಜಾತಿ ರಾಜಕಾರಣ ಇಷ್ಟಪಡುವುದಿಲ್ಲ, ಆ ಬಗ್ಗೆ ಹೆಚ್ಚು ಮಾತನಾಡಲು ಬಯಸುವುದಿಲ್ಲ. 3-4 ರಾಜ್ಯಗಳು ಬಿಟ್ಟರೆ ಬೇರೆಲ್ಲೂ ದಲಿತರು ಮುಖ್ಯಮಂತ್ರಿಯಾದದ್ದಿಲ್ಲ. ಈಗಲೂ ದಲಿತರು ಹಾಗೂ ಹಿಂದುಳಿದವರು ಚುನಾವಣೆಯಲ್ಲಿ ಸ್ಪರ್ಧಿಸಲು ರಾಜಕೀಯ ಪಕ್ಷಗಳ ನಾಯಕರ ಮನೆ ಬಾಗಿಲು ಕಾಯುವುದು ತಪ್ಪಿಲ್ಲ. ದಲಿತ ಸಿಎಂ ಚರ್ಚೆಗಿಂತ ಸಮುದಾಯಗಳ ಏಳಿಗೆಗೆ ಏನೆಲ್ಲ ಮಾಡಿದ್ದೇವೆ ಎಂದು ಆಯಾ ಇಲಾಖೆ ಸಚಿವರು ಆತ್ಮವಿಮರ್ಶೆ ಮಾಡಿಕೊಂಡರೆ ಸಾಕು. ದಲಿತರ ಸಬಲೀಕರಣ ಸಾಧ್ಯವಾಗಲಿದೆ ಎಂದು ಕಾಂಗ್ರೆಸ್ ನಾಯಕರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ಜಾತಿ ಗಣತಿ ಅಗತ್ಯವಿದೆ: ಜಾತಿ ಗಣತಿ ಆಗಲೇಬೇಕು. ರಾಜ್ಯವಾರು ಮಾತ್ರವಲ್ಲ, ಇಡೀ ದೇಶದಲ್ಲಿ ಈ ಗಣತಿ ನಡೆಯುವ ಅಗತ್ಯವಿದೆ. ಜಾತಿವಾರು ಜನಸಂಖ್ಯೆ ಗಣಿಸಿದರೆ ಸಾಲದು. ಕಳೆದ 75 ವರ್ಷಗಳಲ್ಲಿ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಏನೆಲ್ಲ ಪ್ರಗತಿಯಾಗಿದೆ. ಯಾವೆಲ್ಲ ಯೋಜನೆಗಳ ಫಲ ಅರ್ಹರಿಗೆ ತಲುಪಿದೆ. ಜಿಲ್ಲಾವಾರು ಬಳಕೆ ಪ್ರಯೋಜನ, ಉತ್ತಮ ಬದುಕು ಕಟ್ಟಿಕೊಡಲು ಪ್ರಯತ್ನಿಸಿದ ಪರಿ ಬಗ್ಗೆ ಅಧ್ಯಯನ ಮಾಡಿ ಸ್ಥೂಲ ವರದಿ ಸಿದ್ಧಪಡಿಸಿದರೆ, ಮುಂದಿನ ದಿನಗಳಲ್ಲಿ ಯಾವ ಯೋಜನೆಗಳು ಯಾವ ಜಿಲ್ಲೆ, ಸಮುದಾಯಗಳಿಗೆ ಆದ್ಯತೆ ನೀಡಬೇಕೆಂದು ಗೊತ್ತಾಗುತ್ತದೆ ಎಂದು ಹೇಳಿದರು.
ಉಚಿತ ಯೋಜನೆಗಳನ್ನು ವಿರೋಧಿಸುವುದಿಲ್ಲ. ಅಗತ್ಯ ಇದ್ದವರಿಗೆ ಈ ಸೌಲಭ್ಯ ಒದಗಿಸಿದರೆ ಸಬಲೀಕರಣ ಸಾಧ್ಯವಾಗಲಿದೆ. ಆದರೆ ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ತಮ್ಮ ಆರ್ಥಿಕ ಶಕ್ತಿಗೆ ಅನುಗುಣವಾಗಿ ಕೊಡುವುದು ಅಷ್ಟೇ ಮುಖ್ಯ. ಇಲ್ಲದಿದ್ದರೆ ಸಮಗ್ರ ಅಭಿವೃದ್ಧಿಗೆ ಹೊಡೆತ ಬೀಳುತ್ತದೆ. ಮುಂದಿನ ಐದು ವರ್ಷಗಳ ಕಾಲ ಬಡವರಿಗೆ ಉಚಿತ ಆಹಾರ ಧಾನ್ಯ ವಿತರಣೆ ಮುಂದುವರಿಯಲಿದೆ ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ. ಕೇಂದ್ರ ಸರ್ಕಾರಕ್ಕೆ ಆ ವೆಚ್ಚ ಭರಿಸುವ ಶಕ್ತಿಯಿದೆ ಹಾಗಾಗಿ, ಕೊಡುತ್ತಿದ್ದಾರೆ. ಬಡ ಜನರಿಗೆ ಅದರ ಅಗತ್ಯವೂ ಇದೆ ಎಂದರು.
ಗ್ಯಾರಂಟಿ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ: ರಾಜ್ಯ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಆರ್ಥಿಕ ಸಮಸ್ಯೆ ಕಾರಣಕ್ಕೆ ಅಭಿವೃದ್ಧಿ ಕುಂಠಿತವಾಗಿದೆ. ಇದೇ ಪರಿಸ್ಥಿತಿ ಉಚಿತ ಸೌಲಭ್ಯ ಘೋಷಿಸಿದ ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೆಲವು ರಾಜ್ಯಗಳಲ್ಲಿ ಇರುವುದು ಗಮನಿಸಿದ್ದೇನೆ. ಇಲಾಖೆ ಸಚಿವನಾಗಿ ರಾಜ್ಯವಾರು ಪ್ರವಾಸ ಕೈಗೊಂಡು ಪ್ರಗತಿ ಪರಿಶೀಲಿಸಿದಾಗ ಅಭಿವೃದ್ಧಿಗೆ ಹೊಡೆತ ಬಿದ್ದಿರುವುದು ನಿಚ್ಚಳವಾಗಿ ಗೋಚರಿಸಿದೆ ಎಂದು ಸಚಿವರು ಆತಂಕ ವ್ಯಕ್ತಪಡಿಸಿದರು.
ಇದನ್ನೂ ಓದಿ:ಬೆಂಗಳೂರಿಗೆ ಪ್ರತ್ಯೇಕ ಚಿರತೆ ಕಾರ್ಯಪಡೆ ರಚನೆಗೆ ಸೂಚನೆ: ಸಚಿವ ಈಶ್ವರ್ ಖಂಡ್ರೆ