ಬೆಂಗಳೂರು: ಪಕ್ಷಾಂತರ ನಿಷೇಧ ಸಂಬಂಧಿ ನಿಯಮವಳಿ ಪರಿಶೀಲನೆಗೆ ರಚನೆಯಾಗಿರುವ ಸಮಿತಿ, ಪರಿಶೀಲನಾ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತಿದೆ. ಈ ದಿಸೆಯಲ್ಲಿ ಕಾನೂನು ತಜ್ಞರಿಂದ, ಮೇಲಿನ ವಿಷಯದಲ್ಲಿ ಆಸಕ್ತಿಯುಳ್ಳ ಸಾರ್ವಜನಿಕರಿಂದ ಅಭಿಪ್ರಾಯ ಆಹ್ವಾನಿಸಲಾಗಿದೆ.
ರಾಜ್ಯ ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದು, ಇತ್ತೀಚಿನ ದಿನಗಳಲ್ಲಿ ಪಕ್ಷಾಂತರ ನಿಷೇಧಕ್ಕೆ ಸಂಬಂಧಿಸಿದಂತೆ ಸಂವಿಧಾನದ ಹತ್ತನೇ ಅನುಸೂಚಿ ಅಡಿಯಲ್ಲಿ ರಚಿಸಲಾಗಿರುವ ನಿಯಮಾವಳಿಗಳಲ್ಲಿ ಇರುವ ಕಾನೂನಿನ ಅಂಶಗಳು ಚರ್ಚೆಯ ವಿಷಯವಾಗಿರುವುದರಿಂದ ಸದರಿ ಅನುಸೂಚಿ ಹಾಗೂ ನಿಯಮಾವಳಿಗಳನ್ನು ಪರಿಶೀಲಿಸಲು ಲೋಕಸಭಾಧ್ಯಕ್ಷರಾದ ಓಂ. ಬಿರ್ಲಾ ಅವರು ರಾಜಸ್ಥಾನ ವಿಧಾನ ಸಭಾಧ್ಯಕ್ಷ ಡಾ. ಸಿ.ಪಿ. ಜೋಷಿ ಅವರ ಅಧ್ಯಕ್ಷತೆಯಲ್ಲಿ, ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಒಡಿಶಾ ವಿಧಾನಸಭೆ ಸಭಾಧ್ಯಕ್ಷ ಡಾ. ಸೂರ್ಯ ನಾರಾಯಣ ಪಾತ್ತೊ ಅವರುಗಳನ್ನೊಳಗೊಂಡಂತೆ ಒಂದು ಸಮಿತಿಯನ್ನು ರಚಿಸಿರುತ್ತಾರೆ.