ಕರ್ನಾಟಕ

karnataka

ETV Bharat / state

ಧಾರ್ಮಿಕ ಪರಿಷತ್ ಪ್ರಥಮ ಸಭೆ: ಚಾಮುಂಡಿ ಬೆಟ್ಟ ಪ್ರಾಧಿಕಾರ ರಚನೆ ಸೇರಿ ಹಲವು ನಿರ್ಧಾರಗಳು

ಸಚಿವ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಧಾರ್ಮಿಕ ಪರಿಷತ್ತಿನ ಪ್ರಥಮ ಸಭೆಯಲ್ಲಿ 20 ಪ್ರಮುಖ ನಿರ್ಧಾರಗಳನ್ನು ಅಂಗೀಕರಿಸಲಾಗಿದೆ.

By ETV Bharat Karnataka Team

Published : Oct 13, 2023, 9:28 PM IST

Etv Bharat
Etv Bharat

ಬೆಂಗಳೂರು: ಚಾಮುಂಡಿ ಬೆಟ್ಟ ಪ್ರಾಧಿಕಾರ ರಚನೆ, ಕಾಶಿಯಾತ್ರೆಗೆ ಗಯಾ ಸೇರ್ಪಡೆ, ದೇವಾಲಯಗಳ ಮಾಹಿತಿಗೆ ಕಾಲ್‌ಸೆಂಟರ್ ಆರಂಭ, ಹಿರಿಯ ನಾಗರಿಕರಿಗೆ ನೇರ ದರ್ಶನ ಸೇರಿದಂತೆ 20 ಪ್ರಮುಖ ನಿರ್ಧಾರಗಳನ್ನು 4ನೇ ರಾಜ್ಯ ಧಾರ್ಮಿಕ ಪರಿಷತ್ತಿನ ಪ್ರಥಮ ಸಭೆಯಲ್ಲಿ ಕೈಗೊಳ್ಳಲಾಯಿತು.

ಶಾಂತಿನಗರದಲ್ಲಿರುವ ಕೆಎಸ್​ಆರ್​ಟಿಸಿ ಕೇಂದ್ರ ಕಚೇರಿಯಲ್ಲಿ ಇಂದು ಸಾರಿಗೆ ಮತ್ತು ಹಿಂದೂ ಧಾರ್ಮಿಕ ದತ್ತಿ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿ 4ನೇ ರಾಜ್ಯ ಧಾರ್ಮಿಕ ಪರಿಷತ್ತಿನ ಪ್ರಥಮ ಸಭೆ ನಡೆಯಿತು. ಸಭೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯಡಿ ಬರುವ ದೇವಾಲಯಗಳ ಸ್ಥಿತಿಗತಿಗಳ ಕುರಿತು ವಿಸ್ತೃತವಾದ ಚರ್ಚೆ ನಡೆಯಿತು. ಧಾರ್ಮಿಕ ಕ್ಷೇತ್ರದ ಅಭಿವೃದ್ಧಿ, ಭಕ್ತರಿಗೆ ಅನುಕೂಲ, ದೇವಾಲಯ ನೌಕರರಿಗೆ ನೆರವು ಸೇರಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು.

ರಾಜ್ಯ ಬಜೆಟ್‌ನಲ್ಲಿ ಚಾಮುಂಡಿ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸುವ ಪ್ರಸ್ತಾವನೆಯನ್ನು ಪ್ರಕಟಿಸಲಾಗಿತ್ತು. ಬೆಟ್ಟದ ಸುಸ್ಥಿರ ಅಭಿವೃದ್ಧಿಗೆ ಅನುಕೂಲ ಕಲ್ಪಿಸುವ ಗುರಿ ಹೊಂದಿದ ಚಾಮುಂಡಿ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರವು ಮೈಸೂರಿನಲ್ಲಿರುವ ಬೆಟ್ಟದ ದೇವಾಲಯದ ಹಲವಾರು ಭಕ್ತರಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವತ್ತ ಗಮನ ಹರಿಸುತ್ತದೆ ಎಂದು ಸಿದ್ಧರಾಮಯ್ಯ ಹೇಳಿದ್ದರು. ಅದರಂತೆ ಇಂದಿನ ಧಾರ್ಮಿಕ ಪರಿಷತ್ ಸಭೆಯಲ್ಲಿ ಚರ್ಚಿಸಿ ಚಾಮುಂಡಿ ಬೆಟ್ಟ ಪ್ರಾಧಿಕಾರ ರಚಿಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.

ಇಂದಿನ ಸಭೆಯ ನಿರ್ಧಾರಗಳು:

1.ಮೈಸೂರು ಚಾಮುಂಡಿ ಬೆಟ್ಟಕ್ಕೆ ಪ್ರಾಧಿಕಾರ ರಚನೆ.

2.ಅರ್ಚಕರು ಜಿಲ್ಲಾಧಿಕಾರಿ ಕಛೇರಿ/ ತಹಶೀಲ್ದಾರ್ ಕಚೇರಿಗಳಿಗೆ ಅನಗತ್ಯವಾಗಿ ಓಡಾಡುವುದನ್ನು ನಿವಾರಿಸಲು ತಸ್ತಿಕ್ ಹಣವನ್ನು ನೇರವಾಗಿ ಅರ್ಚಕರುಗಳ ಖಾತೆಗೆ ಡಿಬಿಟಿ ವರ್ಗಾಯಿಸಲು ಕ್ರಮ.

3.ಶಿವಾರಪಟ್ಟಣ, ಕೋಲಾರದಲ್ಲಿ ಶಿಲ್ಪಕಲಾ ತರಬೇತಿ ಕೇಂದ್ರ ಪ್ರಾರಂಭಿಸಲಾಗುವುದು.

4.65 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ದೇವಸ್ಥಾನಗಳಲ್ಲಿ ಸರತಿಯಲ್ಲಿ ನಿಲ್ಲದ ನೇರವಾಗಿ ದರ್ಶನಕ್ಕೆ ಅವಕಾಶ.

5.ದೇವಾಲಯಗಳಲ್ಲಿ ಈಗಾಗಲೇ ಮೊಬೈಲ್ ಪೋನ್ ಬಳಕೆಯನ್ನು ನಿಷೇದಿಸಲಾಗಿದ್ದು, ಸಂಪೂರ್ಣ ನಿಷೇಧಕ್ಕೆ ಕಟ್ಟುನಿಟ್ಟಿನ ಕ್ರಮ.

6.ಕಾಶಿ ಯಾತ್ರೆಯಲ್ಲಿ ಗಯಾ ಕ್ಷೇತ್ರ ಸೇರ್ಪಡೆ, ಪ್ರಸ್ತುತ ರೂ.5,000/- ಇದ್ದ ಸಹಾಯ ಧನವನ್ನು ರೂ.7,500/-ಕ್ಕೆ ಹೆಚ್ಚಿಸಲಾಗಿದೆ. ಊಟ ತಿಂಡಿಗಾಗಿ ಪ್ರತ್ಯೇಕ ವ್ಯವಸ್ಥೆ, ವೈದ್ಯರ ಸೇವೆಗಾಗಿ ಪ್ರತ್ಯೇಕ ಭೋಗಿಯನ್ನು ವ್ಯವಸ್ಥೆ.

7.ಕಾಶಿ ಯಾತ್ರೆ, ಚಾರ್‌ದಾಮ್ ಯಾತ್ರೆ ಮತ್ತು ಮಾನಸ ಸರೋವರ ಯಾತ್ರೆಗೆ ತೆರಳುವ ಕರ್ನಾಟಕದ ಯಾತ್ರಾತ್ರಿಗಳಿಗೆ ಹೊಸದಾಗಿ ಮೊಬೈಲ್ ಆಪ್, ಜಿಪಿಎಸ್‌ ಮೂಲಕ ಯಾತ್ರಾತ್ರಿಗಳು ತಮ್ಮ ಫೋಟೋ ಅಪ್‌ಲೋಡ್ ಮಾಡಿದರೆ ಸದರಿಯವರ ಖಾತೆಗೆ ಕ್ರಮವಾಗಿ ಕಾಶಿಯಾತ್ರೆಗೆ ರೂ.5,000/-, ಚಾರ್‌ಧಾಮ್ ಯಾತ್ರೆಗೆ ರೂ. 20,000/- ಹಾಗೂ ಮಾನಸ ಸರೋವರ ಯಾತ್ರೆಗೆ ರೂ.30,000/- ಗಳನ್ನು ನೇರವಾಗಿ ಖಾತೆಗೆ ಡಿಬಿಟಿ ಮೂಲಕ ಸಂದಾಯ ಮಾಡುವುದು.

8.ರಾಜ್ಯದಲ್ಲಿ ದೇವಸ್ಥಾನಗಳ ಸಮಗ್ರ ಅಭಿವೃದ್ಧಿಗೆ ಸಮಾಜದ ಹಲವು ಕ್ಷೇತ್ರಗಳ ಮುಖಂಡರುಗಳನ್ನು ಒಳಗೊಂಡ ತಂಡ ವಿಜನ್ ಗ್ರೂಪ್ ರಚನೆ.

9.ಪ್ರಮುಖ ದೇವಸ್ಥಾನಗಳಲ್ಲಿ ಮಕ್ಕಳಿಗೆ ಹಾಲುಣಿಸಲು ಪ್ರತ್ಯೇಕ ಕೊಠಡಿ ನಿರ್ಮಾಣ.

10.ಸಾಮಾಜಿಕ ಜಾಲತಾಣಗಳಲ್ಲಿ ದೇವಸ್ಥಾನಕ್ಕೆ ಬರುತ್ತಿರುವ ದೇಣಿಗೆ ಹಣವನ್ನು ಬೇರೆ ಧಾರ್ಮಿಕ ಕಾರ್ಯಗಳಿಗೆ ಬಳಸಲಾಗುತ್ತಿದೆ ಎಂದು ಅಪಪುಚಾರ ನಡೆಯುತ್ತಿದ್ದು, 2003 ರಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರವಿದ್ದಾಗಲೇ ಆಯಾ ದೇವಸ್ಥಾನಗಳಿಂದ ಬರುವ ಆದಾಯವನ್ನು ಆ ದೇವಸ್ಥಾನ ಅಭಿವೃದ್ಧಿಗಾಗಿ ಮೀಸಲಿರಿಸಲಾಗಿದೆ. ಶೇ 10 ರಷ್ಟು (Common Pool Grant) ಮೀಸಲಿಟ್ಟ ಹಣವನ್ನು ಮುಜರಾಯಿ ಇಲಾಖೆಯಿಂದ ಸಿ ದರ್ಜೆ ದೇವಸ್ಥಾನವನ್ನು ಅಭಿವೃದ್ಧಿಗಾಗಿ ಹಾಗೂ ಸಿ ದರ್ಜೆ ದೇವಸ್ಥಾನದ ಅರ್ಚಕರು/ ನೌಕರರು/ಆಗಮಿಕರ ಶ್ರೇಯೋಭಿವೃದ್ಧಿಗಾಗಿ ಬಳಕೆಗೆ ನಿರ್ಧಾರ.

11.2003 ರಲ್ಲಿ ಕಾಂಗ್ರೆಸ್‌ ಸರ್ಕಾರ ಇದ್ದಾಗ Architectural Committee ಯನ್ನು ರಚಿಸಿ ಪುರಾತನ ದೇವಾಲಯಗಳನ್ನು ಅಭಿವೃದ್ಧಿಪಡಿಸಲು ರೂಪಿಸಲಾಗಿದ್ದು, ಆದರೆ ಈ ಸಮಿತಿಯು ಯಾವುದೇ ಧನಾತ್ಮಕ ಕಾರ್ಯವನ್ನು ಮಾಡದ ಕಾರಣ, ಈ ಸಮಿತಿಯನ್ನು ಹೊಸದಾಗಿ ರಚಿಸುವ ಮೂಲಕ ಸಕ್ರಿಯಗೊಳಿಸಿ, ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಲು ಯೋಜನೆ ರೂಪಿಸಲು ನಿರ್ಧಾರ.

12.ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಿಸಿದ ದೇವಾಲಯಗಳ ಮಾಹಿತಿಗಳನ್ನು ಭಕ್ತಾಧಿಗಳಿಗೆ/ ಸಾರ್ವಜನಿಕರಿಗೆ ಒದಗಿಸಲು ಕಾಲ್ ಸೆಂಟರ್ (Call Centre) ಅನ್ನು ತೆರೆಯಲು ಇಂದಿನ ಸಭೆಯಲ್ಲಿ ಅನುಮೋದಿಸಲಾಗಿದೆ. ಇದರಿಂದ ಭಕ್ತಾಧಿಗಳಿಗೆ ದೇವಸ್ಥಾನಗಳಲ್ಲಿ ಸೇವೆಗಳನ್ನು/ ತಂಗುವ ಕೊಠಡಿಗಳನ್ನು ಕಾಯ್ದಿರಿಸಲು ಹಾಗೂ ದರ್ಶನದ ಸಮಯದ ಕುರಿತು ಮಾಹಿತಿ ಪಡೆಯಲು ಅನುಕೂಲವಾಗಲಿದೆ.

13.ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಸ್ಥಾನಗಳಲ್ಲಿ ಡಿಸೆಂಬರ್-2023 ರವರೆಗೆ ಕೊನೆಗೊಳ್ಳುವ ಎಲ್ಲಾ ದೇವಾಲಯದ ವ್ಯವಸ್ಥಾಪನ ಸಮಿತಿಗಳಿಗೆ ಈ ಕೂಡಲೇ ಅಧಿಸೂಚನೆ ಹೊರಡಿಸಿ ಸದಸ್ಯರುಗಳನ್ನು ನೇಮಕ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು.

14.ರಾಜ್ಯ ಧಾರ್ಮಿಕ ಪರಿಷತ್ತಿನ ಎಲ್ಲಾ ಸದಸ್ಯರುಗಳಿಗೆ ಐಡಿ ಕಾರ್ಡ್ ನೀಡಲು ನಿರ್ಧರಿಸಲಾಯಿತು.

15.ಮೃತರ ಅರ್ಚಕರ ಕುಟುಂಬಕ್ಕೆ ಪರಿಹಾರ ಬಗ್ಗೆ. ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯಲ್ಲಿ ಬರುವ ಅಧಿಸೂಚಿತ ದೇವಾಲಯ/ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು/ನೌಕರರು ಮೃತಪಟ್ಟಲ್ಲಿ ರೂ.2.00 ಲಕ್ಷ ಪರಿಹಾರವನ್ನು ಅವರ ಕುಟುಂಬದವರಿಗೆ ನೀಡಲು ನಿರ್ಧಾರ.

16. ಗುರುತಿನ ಚೀಟಿ ನೀಡುವುದು:ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯಲ್ಲಿ ಬರುವ ದೇವಾಲಯ/ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು/ ನೌಕರರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುವ ದೃಷ್ಟಿಯಿಂದ ಏಕರೂಪದ ಗುರುತಿನ ಚೀಟಿಯನ್ನು ನೀಡಲು, ಇದಕ್ಕೆ ತಗಲುವ ವೆಚ್ಚವನ್ನು ಸಾಮಾನ್ಯ ಸಂಗ್ರಹಣಾ ನಿಧಿಯಿಂದ ಭರಿಸಲಾಗುವುದು.

17. ಆಯುಷ್ಮಾನ್ ಭಾರತ್ ಯೋಜನಗೆ:ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯಲ್ಲಿ ಬರುವ ದೇವಾಲಯ/ ಸಂಸ್ಥೆಗಳಲ್ಲಿ ನಿರ್ವಹಿಸುತ್ತಿರುವ ಅರ್ಚಕರು/ನೌಕರರಿಗೆ ಆಯುಷ್ಮಾನ್‌ ಭಾರತ್‌ ಯೋಜನೆಯಡಿಯಲ್ಲಿ ಆರೋಗ್ಯ ಕಾರ್ಡ್ ಅನ್ನು ಜಿಲ್ಲಾ ಕೇಂದ್ರಗಳಲ್ಲಿ ವಿತರಿಸಲು ಹಾಗೂ ಇದಕ್ಕೆ ಅಗತ್ಯವಿರುವ ನೋಂದಣಿ ಶುಲ್ಕವನ್ನು ಸಾಮಾನ್ಯ ಸಂಗ್ರಹಣಾ ನಿಧಿಯಿಂದ ಭರಿಸಲಾಗುವುದು.

18. ಉಚಿತವಾಗಿ ಕಾಶಿ ಯಾತ್ರೆಗೆ ಕಳುಹಿಸುವುದು:ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯಲ್ಲಿ ಬರುವ ಪುವರ್ಗ 'ಬಿ' ಮತ್ತು 'ಸಿ' ಅಧಿಸೂಚಿತ ದೇವಾಲಯ/ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಒಟ್ಟು 1200 ಜನ (ವಾರ್ಷಿಕವಾಗಿ) ಅರ್ಚಕ/ನೌಕರರನ್ನು ಕರ್ನಾಟಕ ಭಾರತ್ ಗೌರವ್ ಕಾಶಿ-ಗಯಾ ದರ್ಶನ್ ಯೋಜನೆಯಡಿ ಯಾತ್ರೆಗೆ ಪ್ರತಿ ವರ್ಷ ಉಚಿತವಾಗಿ ಕಳುಹಿಸುವುದು. ಇದಕ್ಕೆ ತಗಲುವ ವೆಚ್ಚವನ್ನು ಸಾಮಾನ್ಯ ಸಂಗ್ರಹಣಾ ನಿಧಿಯಿಂದ ಭರಿಸುವುದು.

19. ಮಕ್ಕಳಿಗೆ ಶಿಕ್ಷಣಕ್ಕೆ ಸಹಾಯಧನವನ್ನು ವಿತರಿಸುವುದು:ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯಲ್ಲಿ ಬರುವ ಪ್ರವರ್ಗ 'ಬಿ' ಮತ್ತು 'ಸಿ' ಅಧಿಸೂಚಿತ ದೇವಾಲಯ/ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು/ನೌಕರರ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ವಾರ್ಷಿಕ ಪ್ರೋತ್ಸಾಹ ಧನವನ್ನು ವಿತರಿಸಲು ಹಾಗೂ ಇದಕ್ಕೆ ತಗಲುವ ವೆಚ್ಚವನ್ನು ಸಾಮಾನ್ಯ ಸಂಗ್ರಹಣಾ ನಿಧಿಯಿಂದ ಭರಿಸಲು ನಿರ್ಧಾರ.

  • ಪದವಿ ಪೂರ್ವ ಶಿಕ್ಷಣ (ಪಿ.ಯು.ಸಿ) : 5000
  • ಐ.ಟಿ.ಐ/ಜೆ ಒಸಿ/ಡಿಪ್ಲೋಮ :5000
  • ಪದವಿ ಶಿಕ್ಷಣ :7000
  • ಸ್ನಾತಕೋತ್ತರ ಪದವಿ ಶಿಕ್ಷಣ :15000
  • ಆರ್ಯುವೇದಿಕ್ ಹೋಮಿಯೋ ಪತಿ ಪದವಿ ಶಿಕ್ಷಣ :25000
  • ತಾಂತ್ರಿಕ ಶಿಕ್ಷಣ-ಇಂಜಿನಿಯರಿಂಗ್ : 25000
  • ವೈದ್ಯಕೀಯ / ಡೆಂಟಲ್ ಶಿಕ್ಷಣ :50000
  • ವಿದೇಶ ವ್ಯಾಸಂಗ: 100000( ಒಂದು ಬಾರಿ ಮಾತ್ರ

20. ವಿದ್ಯುತ್/ ಕುಡಿಯುವ ನೀರಿನ ಸೌಲಭ್ಯವನ್ನು ಉಚಿತವಾಗಿ ಒದಗಿಸುವುದು: ಧಾರ್ಮಿಕ ದಕ್ಷಿ ಇಲಾಖಾ ವ್ಯಾಪ್ತಿಯಲ್ಲಿ ಬರುವ ಪ್ರವರ್ಗ ಸಿ ಅಧಿಸೂಚಿತ ದೇವಾಲಯ/ಸಂಸ್ಥೆಗಳಿಗೆ ವಿದ್ಯುತ್/ಕುಡಿಯುವ ನೀರಿನ ಸೌಲಭ್ಯವನ್ನು ಉಚಿತವಾಗಿ ಒದಗಿಸುವ ಬಗ್ಗೆ ಸಂಬಂಧಪಟ್ಟ ಇಲಾಖೆ ಯೊಂದಿಗೆ ವ್ಯವಹರಿಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳ ಆಯುಕ್ತ ಮತ್ತು ಧರ್ಮದಾಯ ದತ್ತಿಗಳ ಇಲಾಖೆ ಸದಸ್ಯ ಕಾರ್ಯದರ್ಶಿ ಹೆಚ್. ಬಸವರಾಜೇಂದ್ರ, ನ್ಯಾಯಿಕ ಸದಸ್ಯ ನಿವೃತ್ತ ಜಿಲ್ಲಾ ನ್ಯಾಯಾಧೀಶ ಎನ್.ಶ್ರೀವತ್ಸ ಕೇದಿಲಾಯ, ಶಿವಮೊಗ್ಗ ವೀರಾಪುರ ಹಿರೇಮಠದ ಡಾ. ಮರಳು ಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯರು, ವೇದ ವಿದ್ಯಾಂಸಕ ಡಾ.ಬಿ.ಎಸ್.ದ್ವಾರಕನಾಥ್, ಡಾ.ಎ.ರಾಧಾಕೃಷ್ಣ ರಾಜು, ಕೆ.ಎಂ.ನಾಗರಾಜು, ಡಾ.ಮಹಂತೇಶ ಶಾಸ್ತ್ರಿಗಳು, ಮಲ್ಲಿಕಾ ಪ್ರಶಾಂತ ಪಕ್ಷಲಾ, ಮಾಜಿ ಮೇಯರ್ ಚಂದ್ರಶೇಖರ್ ಇದ್ದರು.

ಇದನ್ನೂ ಓದಿ:ಚಾಮುಂಡಿ ಬೆಟ್ಟ ಪ್ರದೇಶದಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಸಿದರೆ ದಂಡ: ಅರಣ್ಯ ಇಲಾಖೆ ಆದೇಶ

ABOUT THE AUTHOR

...view details