ಕರ್ನಾಟಕ

karnataka

ಸಾರಿಗೆ ಇಲಾಖೆಗೆ 7,100 ಕೋಟಿ ರೂ. ರಾಜಸ್ವ ಸಂಗ್ರಹ ಗುರಿ: ಸಚಿವ ಸವದಿ

ಕೋವಿಡ್ -19ರ ಸಾಂಕ್ರಾಮಿಕ ರೋಗದ ಮಾರ್ಗಸೂಚಿ ಸಡಿಲಿಕೆಯಾದ ನಂತರ ಮಾತೃಪೂರ್ಣ ಫಲಾನುಭವಿಗಳಿಗೆ ಅಂಗನವಾಡಿ ಕೇಂದ್ರಗಳಲ್ಲಿಯೇ ಬಿಸಿಯೂಟ ತಯಾರಿಸಿ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ವಿಧಾನಸಭೆಯಲ್ಲಿ ತಿಳಿಸಿದರು.

By

Published : Mar 17, 2021, 4:48 PM IST

Published : Mar 17, 2021, 4:48 PM IST

dcm-laxman-savadi-talk
ಸಚಿವ ಸವದಿ

ಬೆಂಗಳೂರು: ಸಾರಿಗೆ ಇಲಾಖೆಗೆ 2019-20 ನೇ ಸಾಲಿನಲ್ಲಿ ನಿಗದಿಪಡಿಸಿರುವ 7,100 ಕೋಟಿ ರೂ. ರಾಜಸ್ವ ಸಂಗ್ರಹದ ಗುರಿಯನ್ನು ತಲುಪುವ ಉದ್ದೇಶವಿದೆ ಎಂದು ಸಾರಿಗೆ ಸಚಿವರೂ ಆದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ವಿಧಾನಸಭೆಯಲ್ಲಿ ತಿಳಿಸಿದರು.

ಇದನ್ನೂ ಓದಿ: ಕೈಮಗ್ಗದಿಂದ ತಯಾರಿಸಿದ ಶಾಲಾ ಸಮವಸ್ತ್ರಗಳನ್ನು ಖರೀದಿಸಲು ಸರ್ಕಾರ ಚಿಂತನೆ: ಸಚಿವ ಶ್ರೀಮಂತ ಪಾಟೀಲ

ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಶಾಸಕ ಅಬ್ಬಯ್ಯ ಪ್ರಸಾದ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ 6,683.51 ಕೋಟಿ ರೂ. ಸಂಗ್ರಹಿಸಲಾಗಿದೆ. ಕೊರೊನಾದಿಂದಾಗಿ ಹೊಸ ವಾಹನ ಖರೀದಿ ಕಡಿಮೆಯಾಗಿದೆ. ರಸ್ತೆ ಸೆಸ್ ಸಂಗ್ರಹ 26 ಕೋಟಿ ರೂ. ಆಗಲಿದ್ದು, ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಮುನ್ನೆಚ್ಚರಿಕೆ ಕ್ರಮಗಳ ಪ್ರಸಾರಕ್ಕಾಗಿ ಈ ಸೆಸ್ ಬಳಸಲಾಗುವುದು ಎಂದು ಹೇಳಿದರು.

2019-20ನೇ ಸಾಲಿನಲ್ಲಿ ವಿವಿಧ ಮಾದರಿಯ ವಾಹನಗಳಿಂದ 206.14 ಕೋಟಿ ರೂ.ನೋಂದಣಿ ಶುಲ್ಕ, 3856 ಕೋಟಿ ರೂ. ತೆರಿಗೆಯಿಂದ ಸಂಗ್ರಹಿಸಲಾಗಿದೆ. ರಾಜ್ಯದಲ್ಲಿ 67 ಜಿಲ್ಲಾ ಕೇಂದ್ರ, ತಾಲ್ಲೂಕು ನಗರ ಕೇಂದ್ರಗಳಲ್ಲಿ ಉಪ ಸಾರಿಗೆ ಆಯುಕ್ತರು, ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಹಾಗೂ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿಸಿದರು.

ಮಾತೃಪೂರ್ಣ ಯೋಜನೆ ಸ್ಥಗಿತವಿಲ್ಲ:

ಕೋವಿಡ್ -19ರ ಸಾಂಕ್ರಾಮಿಕ ರೋಗದ ಮಾರ್ಗಸೂಚಿ ಸಡಿಲಿಕೆಯಾದ ನಂತರ ಮಾತೃಪೂರ್ಣ ಫಲಾನುಭವಿಗಳಿಗೆ ಅಂಗನವಾಡಿ ಕೇಂದ್ರಗಳಲ್ಲಿಯೇ ಬಿಸಿಯೂಟ ತಯಾರಿಸಿ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ವಿಧಾನಸಭೆಯಲ್ಲಿ ತಿಳಿಸಿದರು. ಕಾಂಗ್ರೆಸ್ ಶಾಸಕ ಇ.ತುಕಾರಾಂ ಅವರ ಪ್ರಶ್ನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರ ಪರವಾಗಿ ಉತ್ತರಿಸಿದ ಅವರು, ಅಂಗನವಾಡಿ ಕೇಂದ್ರದಲ್ಲಿ ದಾಖಲಾಗಿರುವ ಗರ್ಭಿಣಿ ಮತ್ತು ಬಾಣಂತಿಯರಿಗೆ ಮಧ್ಯಾಹ್ನದ ಒಂದು ಸಂಪೂರ್ಣ ಬಿಸಿಯೂಟ ನೀಡುವ ಮಾತೃಪೂರ್ಣ ಯೋಜನೆ ಸ್ಥಗಿತವಿಲ್ಲ.

ಕೋವಿಡ್‍ನಿಂದಾಗಿ ಈ ಯೋಜನೆಯಡಿ ಅಂಗನವಾಡಿ ಕೇಂದ್ರಗಳಲ್ಲಿ ಫಲಾನುಭವಿಗಳಿಗೆ ಬಿಸಿಯೂಟದ ಬದಲಾಗಿ ಅಕ್ಕಿ, ತೊಗರಿಬೇಳೆ, ಕಡ್ಲೆಬೀಜ, ಹೆಸರುಕಾಳು, ಹಾಲಿನಪುಡಿ, ಬೆಲ್ಲ, ಸಕ್ಕರೆ, ಮೊಟ್ಟೆ ಸೇರಿದಂತೆ ಆಹಾರ ಸಾಮಗ್ರಿಗಳನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ ಎಂದು ಹೇಳಿದರು. ಕೇಂದ್ರ ಸರ್ಕಾರದ ಮಾತೃವಂದನಾ ಮತ್ತು ಮುಖ್ಯಮಂತ್ರಿಗಳ ಮಾತೃಶ್ರೀ ಯೋಜನೆ ಉದ್ದೇಶ ಒಂದೇ ಆಗಿರುವುದರಿಂದ ಮಾತೃಶ್ರೀ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಟೆಕ್ಸ್ ಟೈಲ್ ಪಾರ್ಕ್ ಮುಂದುವರೆಸುವಂತೆ ಪತ್ರ:

ಕಲಬುರಗಿಯಲ್ಲಿ ಟೆಕ್ಸ್ ಟೈಲ್ ಪಾರ್ಕ್ ಮುಂದುವರೆಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಸಚಿವ ಶ್ರೀಮಂತ ಪಾಟೀಲ್ ವಿಧಾನಸಭೆಯಲ್ಲಿ ಇಂದು ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರ ಪ್ರಶ್ನೆಗೆ ಉತ್ತರಿಸಿದರು.

2019-24ರ ಹೊಸ ಜವಳಿ ನೀತಿಯಲ್ಲಿ ರಾಜ್ಯ ಸರ್ಕಾರ ಹೂಡಿಕೆದಾರರಿಗೆ ಎಲ್ಲಾ ರೀತಿಯ ಸಹಕಾರ ಕೊಡಲಿದೆ. ಕಲಬುರಗಿಯ ಟೆಕ್ಸ್ ಟೈಲ್ ಪಾರ್ಕ್ ಪ್ರಾರಂಭವಾಗಿ 19 ವರ್ಷವಾದರೂ ಹೂಡಿಕೆದಾರರು ಆಸಕ್ತಿ ತೋರಲಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಮೂಲಭೂತ ಸೌಕರ್ಯಾಭಿವೃದ್ಧಿಗೆ ನೀಡಲಾಗಿದ್ದ 1.85 ಕೋಟಿ ರೂ.ವನ್ನು ಹಿಂದಿರುಗಿಸುತೆ ಕೋರಿದೆ. ತಾವು ಕೇಂದ್ರ ಜವಳಿ ಸಚಿವರಾದ ಸ್ಮೃತಿ ಇರಾನಿ ಅವರನ್ನು ಭೇಟಿ ಮಾಡಿ ಟೆಕ್ಸ್ ಟೈಲ್ಸ್ ಪಾರ್ಕ್ ಮುಂದುವರೆಸುವುದಾಗಿ ಮನವಿ ಮಾಡಲಾಗಿದೆ ಎಂದು ಹೇಳಿದರು.

ಕೊಳವೆಬಾವಿಗಳನ್ನು ಕೊರೆಯಲು ನಿರ್ಬಂಧವಿಲ್ಲ:

ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಕೊಳವೆಬಾವಿಗಳನ್ನು ಕೊರೆಯಲು ನಿರ್ಬಂಧವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ವಿಧಾನಸಭೆಯಲ್ಲಿ ಇಂದು ತಿಳಿಸಿದರು.

ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಶಾಸಕ ಟಿ.ವೆಂಕಟರಮಣಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ದೊಡ್ಡಬಳ್ಳಾಪುರ ತಾಲೂಕಿನ 95 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾಗುವುದನ್ನು ಗುರುತಿಸಿ ಕ್ರಿಯಾ ಯೋಜನೆ ಸಿದ್ಧಪಡಿಸಿ ಅನುಮೋದನೆಗೆ ಸಲ್ಲಿಸಲಾಗಿದೆ. ಅದು ಸರ್ಕಾರದ ಪರಿಶೀಲನೆಯಲ್ಲಿದೆ. ಕಳೆದ ವರ್ಷ ಟ್ಯಾಂಕರ್ ನಲ್ಲಿ ಪೂರೈಸಲಾದ ಕುಡಿಯುವ ನೀರಿನ ವ್ಯವಸ್ಥೆಗೆ 82,59,000 ರೂ. ಬಿಡುಗಡೆ ಮಾಡಬೇಕಾಗಿತ್ತು. 29 ಲಕ್ಷ ರೂ. ಬಿಡುಗಡೆ ಮಾಡಿದ್ದು, ಇನ್ನು 53 ಲಕ್ಷ ರೂ. ಬಿಡುಗಡೆ ಮಾಡಬೇಕಿದೆ ಎಂದು ಹೇಳಿದರು.

ಹೊಸದಾಗಿ ರಚಿಸಲಾದ ತಾಲೂಕುಗಳಿಗೆ ಪಂಚಾಯತ್ ಇಂಜನಿಯರಿಂಗ್ ಉಪವಿಭಾಗ ಕಚೇರಿ ಪ್ರಾರಂಭಿಸುವುದನ್ನು ಮುಂದಿನ ನಾಲ್ಕು ವರ್ಷಗಳ ಕಾಲ ಮುಂದೂಡುವಂತೆ ಆರ್ಥಿಕ ಇಲಾಖೆ ತಿಳಿಸಿದೆ ಎಂದು ಶಾಸಕ ಬಿ.ಎನ್.ಸುಕುಮಾರ ಶೆಟ್ಟಿ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ರಾಜ್ಯದಲ್ಲಿ 2019-20ನೇ ಸಾಲಿನಲ್ಲಿ ಮಳೆ ಹಾನಿಯಿಂದ ರಸ್ತೆ, ಸೇತುವೆಗಳ ಪುನಾರಚನೆ ಕಾಮಗಾರಿಗೆ 1582 ಕೋಟಿ ರೂ. ಮಂಜೂರಾಗಿದ್ದು, 896 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಬಾಕಿ ಉಳಿದ ಹಣವನ್ನು ಶೀಘ್ರ ಬಿಡುಗಡೆ ಮಾಡುವುದಾಗಿ ಶಾಸಕ ಅಮೃತ್ ಅಯ್ಯಪ್ಪ ದೇಸಾಯಿ ಅವರ ಪ್ರಶ್ನೆಗೆ ಸಚಿವ ಈಶ್ವರಪ್ಪ ಉತ್ತರಿಸಿದರು.

ABOUT THE AUTHOR

...view details