ಕರ್ನಾಟಕ

karnataka

ETV Bharat / state

ಯತ್ನಾಳ್ ಬಿಟ್ಟು ಎಲ್ಲರಿಂದಲೂ ಬೆಂಬಲ, ಸಿಎಂ ಕಾರ್ಯಕ್ಕೆ ತೃಪ್ತಿ: ಗೋವಿಂದ ಕಾರಜೋಳ - ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್

2019-20ರ ಅನಾಹುತ, 2020-21ರ ಪ್ರವಾಹ ಅನಾಹುತದ ಬಗ್ಗೆ ಸಂಪೂರ್ಣ ಚರ್ಚೆ ನಡೆಸಿದ್ದೇವೆ. ಸರ್ಕಾರದ ಕೊರೊನಾ ನಿರ್ವಹಣೆ ಇಡೀ ದೇಶದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಯಡಿಯೂರಪ್ಪ ನಾಯಕತ್ವದಲ್ಲಿ ಕೊರೊನಾ ಉತ್ತಮ ನಿರ್ವಹಣೆಗೆ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.

dcm-jarajola-talk-about-legislative-negotiation-meeting-news
ಡಿಸಿಎಂ ಗೋವಿಂದ ಕಾರಜೋಳ

By

Published : Jan 5, 2021, 7:16 PM IST

ಬೆಂಗಳೂರು: ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಹೊರತುಪಡಿಸಿ ಉಳಿದ 118 ಶಾಸಕರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಯಕತ್ವ ಬೆಂಬಲವಿದ್ದು, ಸಿಎಂ ಕಾರ್ಯಕ್ಕೆ ತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಎರಡು ದಿನಗಳ ಶಾಸಕರ ಸಮಾಲೋಚನಾ ಸಭೆ ನಂತರ ಜಂಟಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ನಿನ್ನೆ ಸಭೆಯಲ್ಲಿ ಒಬ್ಬರಿಂದ ಮಾತ್ರ ಸ್ವಲ್ಪ ಗೊಂದಲ ಆಯಿತು. ಉಳಿದಂತೆ ಎಲ್ಲರೂ ಸಿಎಂ ನಾಯಕತ್ವದ ಬಗ್ಗೆ ಅಚಲ ನಿಷ್ಠೆ, ಬೆಂಬಲ ವ್ಯಕ್ತಪಡಿಸಿದ್ದಾರೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೆಸರು ಪ್ರಸ್ತಾಪ ಮಾಡದೆ ಅವರ ನಡೆಯ ಉಲ್ಲೇಖ ಮಾತ್ರ ಮಾಡಿ ಸಿಎಂ ನಾಯಕತ್ವದ ಬಗ್ಗೆ ಎಲ್ಲರಲ್ಲೂ ಒಮ್ಮತವಿರುವ ಹೇಳಿಕೆ ನೀಡಿದರು.

118 ಜನ ಶಾಸಕರು ಸಿಎಂ ಉತ್ತಮ‌ ಕೆಲಸ‌ ಮಾಡುತ್ತಿದ್ದಾರೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿ ಅವರ ನಾಯಕತ್ವಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸಿಎಂ ಕೆಲಸಕ್ಕೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಕೊರೊನಾ ಸಂಕಷ್ಟದಲ್ಲಿ ಆದಾಯ ಮುಕ್ಕಾಲು ಪಾಲು ಬರದಿದ್ದರೂ ಕೊರೊನಾ ನಿಯಂತ್ರಣವನ್ನು ದೇಶಕ್ಕೆ ಮಾದರಿಯಾಗಿ ನಿರ್ವಹಣೆ ಮಾಡಿದ್ದಾರೆ. ನರೆಹಾನಿ ನಡುವೆ ಕೂಡ ಉತ್ತಮ ಕೆಲಸ ಮಾಡಿದ್ದಾರೆ ಎಂದರು.

ಓದಿ: ಪುರಸಭೆ ಸದಸ್ಯೆಯರ ತಳ್ಳಾಟ-ನೂಕಾಟ ಪ್ರಕರಣ: 31 ಜನರ ವಿರುದ್ಧ ಕೇಸ್ ದಾಖಲು

ಎರಡು ದಿನ ವಿಭಾಗಾವಾರು ಶಾಸಕರ ಸಭೆ ನಡೆಸಿ ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಇಲ್ಲಿಯವರೆಗೂ ನಡೆಸಿದ ಪ್ರವಾಹ ಹಾನಿ, ಬೆಳೆ ನಷ್ಟ ಕುರಿತು ಎಲ್ಲಾ ಚರ್ಚೆ ನಡೆಸಿದ್ದೇವೆ. 2019-20ರ ಅನಾಹುತ, 2020-21ರ ಪ್ರವಾಹ ಅನಾಹುತದ ಬಗ್ಗೆ ಸಂಪೂರ್ಣ ಚರ್ಚೆ ನಡೆಸಿದ್ದೇವೆ. ಸರ್ಕಾರದ ಕೊರೊನಾ ನಿರ್ವಹಣೆ ಇಡೀ ದೇಶದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಯಡಿಯೂರಪ್ಪ ನಾಯಕತ್ವದಲ್ಲಿ ಕೊರೊನಾ ಉತ್ತಮ ನಿರ್ವಹಣೆಗೆ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು ಎಂದರು.

ಶಾಸಕರ ಕ್ಷೇತ್ರಕ್ಕೆ 25 ಕೋಟಿ ಅನುದಾನ:

ಶಾಸಕರು ಸಭೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಉಳಿದ ಅವಧಿಯಲ್ಲಿ ಆಗಬೇಕಾದ ಕೆಲಸ ಕಾರ್ಯಗಳ ಬಗ್ಗೆ ವಿವರಣೆಯನ್ನು ಸಿಎಂಗೆ ನೀಡಿದರು. ‌ಶಾಸಕರು ತಮಗೆ ಕೊಟ್ಟಿರುವ ಅನುದಾನದಲ್ಲಿ ಇನ್ನೂ ಹೆಚ್ಚು ಅಭಿವೃದ್ಧಿ ಮಾಡುವ ಭರವಸೆ ಕೊಟ್ಟಿದ್ದಾರೆ. ಮಳೆ, ಪ್ರವಾಹದಿಂದ ಕೊಚ್ಚಿ ಹೋದ ರಸ್ತೆ, ಕೆರೆ ಕಟ್ಟೆ, ಮನೆಗೆ ಹೆಚ್ಚುವರಿ ಅನುದಾನ ಬೇಕು ಎನ್ನುವ ಬೇಡಿಕೆ ಇಟ್ಟಿದ್ದಾರೆ. 25 ಕೋಟಿ ಅನುದಾನ ಪ್ರತಿ ಕ್ಷೇತ್ರಕ್ಕೆ ಕೊಡುವ ಭರವಸೆ ಸಿಎಂ ನೀಡಿದ್ದಾರೆ ಎಂದರು.

ಆರ್ಥಿಕ‌ ಸ್ಥಿತಿ‌ ಸುಧಾರಣೆ ನಿರೀಕ್ಷೆಯಲ್ಲಿ ಹೆಚ್ಚಿನ ಅನುದಾನ ನೀಡುವ ಆಶ್ವಾಸನೆ ಕೊಡಲಾಗಿದೆ. ಈ ಬಾರಿ ಅಭಿವೃದ್ಧಿಗೆ ಒತ್ತು ಕೊಡುವ ಬಜೆಟ್ ನೀಡುವ ಭರವಸೆಯನ್ನು ಸಿಎಂ ಕೊಟ್ಟಿದ್ದಾರೆ ಎಂದರು.

ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿ, ನಮ್ಮ ಪಕ್ಷದ ಎಲ್ಲಾ ಶಾಸಕರ‌ ಜೊತೆ ಎರಡು ದಿನ ಸಮಾಲೋಚನೆ ನಡೆಸಲಾಯಿತು. ಅಪೂರ್ಣ ಕಾರ್ಯಗಳನ್ನು ಪೂರ್ಣಗೊಳಿಸುವ ಸಲಹೆ, ಬೇಡಿಕೆ ಬಂದಿದೆ. ನಾವು ಅಧಿಕಾರಕ್ಕೆ ಬಂದ ಕೂಡಲೇ ನೆರೆ, ಉಪಚುನಾವಣೆ, ಕೊರೊನಾ ಎದುರಾಯಿತು. ಹೀಗಾಗಿ ಹಣಕಾಸು ಇಲಾಖೆಗೆ ಬರಬೇಕಾದ ಆದಾಯ ಕೊರತೆಯಾಯಿತು. ಅಭಿವೃದ್ಧಿ ಕಾರ್ಯ ಕುಂಠಿತವಾಯಿತು. ಇದನ್ನು ಶಾಸಕರು ನಮ್ಮ‌ ಗಮನಕ್ಕೆ ತಂದಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಬಂದಿದೆ. ಹಣಕಾಸು ಸ್ಥಿತಿ ಸುಧಾರಿಸುತ್ತಿದೆ. ಹಾಗಾಗಿ ಶಾಸಕರ ಸಭೆ ಕರೆದು ಅಪೂರ್ಣ ಕಾಮಗಾರಿ ಮುಗಿಸಲು ಮತ್ತು ಮುಂದಿನ ಯೋಜನೆಗಳ ಕುರಿತು ಒಟ್ಟಿಗೆ ಸೇರಿ ಅಭಿವೃದ್ಧಿ ದೃಷ್ಟಿಯಲ್ಲಿ‌ ರಾಜ್ಯವನ್ನು ಯಾವ ರೀತಿ ಕೊಂಡೊಯ್ಯಬೇಕು ಎಂದು ಚರ್ಚೆ ನಡೆಸಲಾಯಿತು ಎಂದರು.

ವಾರದಲ್ಲಿ ಎರಡು ದಿನ ಸಚಿವರು ಶಾಸಕರಿಗೆ ಸಿಗಬೇಕು ಎನ್ನುವ ಸಲಹೆ ಬಂದಿದೆ. ಪ್ರತಿ ಬುಧವಾರ, ಗುರುವಾರ ಕಚೇರಿಯಲ್ಲಿ ಸಚಿವರು ಲಭ್ಯವಿದ್ದರೆ ನಮ್ಮ ಕಷ್ಟ ಹೇಳಿಕೊಳ್ಳಲು ಸಹಕಾರಿಯಾಗಲಿದೆ ಎನ್ನುವ ಬೇಡಿಕೆ ಇಟ್ಟರು. ಇದಕ್ಕೆ ಸಹಮತ ವ್ಯಕ್ತಪಡಿಸಲಾಯಿತು ಎಂದರು.

ಸಿಎಂ ಎಲ್ಲಾ ಶಾಸಕರ ಭಾವನೆ ಹಂಚಿಕೊಳ್ಳಲು, ಕಷ್ಟ ಹಂಚಿಕೊಳ್ಳಲು ಅನುವು ಮಾಡಿಕೊಟ್ಟಿದ್ದರು. 2023ಕ್ಕೆ ಅಧಿಕಾರಕ್ಕೆ ಬರಲು ಯಾವ ಯಾವ ಕಾರ್ಯಸೂಚಿ‌ ರೂಪಿಸಬೇಕು‌ ಎಂದು ಶಾಸಕರು ಸಲಹೆ ಕೊಟ್ಟಿದ್ದಾರೆ. ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಹೊರಗಡೆ ಸಾರ್ವಜನಿಕ ಹೇಳಿಕೆ ನೀಡಬಾರದು. ಟೀಕೆ‌ ಮಾಡಬಾರದು ಎನ್ನುವ ಭಾವನೆಯನ್ನು ಶಾಸಕರು ವ್ಯಕ್ತಪಡಿಸಿದ್ದಾರೆ. ಅದೆಲ್ಲವನ್ನೂ ಗಮನದಲ್ಲಿರಿಸಿ ನಾವೆಲ್ಲಾ ಒಗ್ಗಟ್ಟಾಗಿ ಒಂದಾಗಿ ಕೆಲಸ ಮಾಡಲಿದ್ದೇವೆ ಎಂದರು.

ಜನವರಿ 11, 12, 13 ಮೂರು‌ ದಿನ ಗ್ರಾಪಂ‌ ಸದಸ್ಯರಿಗೆ ಅಭಿನಂದನೆ ಸಲ್ಲಿಸಲು ಐದು ತಂಡದಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದೇವೆ. ಜನವರಿ 16, 17ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಬರಲಿದ್ದು, ಭದ್ರಾವತಿಯಲ್ಲಿ ಕಾರ್ಯಕ್ರಮ ಇದೆ. ಬೆಳಗಾವಿಯಲ್ಲಿ ಒಂದು ಕಾರ್ಯಕ್ರಮಕ್ಕೆ ಚಿಂತನೆ ಇದ್ದು, ಅಲ್ಲಿಗೆ‌ ಕರೆಸುವ ಪ್ರಯತ್ನ ನಡೆಸುವುದಾಗಿ ತಿಳಿಸಿದರು.

ನಮ್ಮ‌ ಸರ್ಕಾರ ಸುಭದ್ರವಾಗಿದೆ:

ಸಚಿವ ಸೋಮಣ್ಣ ಮಾತನಾಡಿ, ‌ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ಈಗಾಗಲೇ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ. ಪಕ್ಷಕ್ಕೆ ಅಧ್ಯಕ್ಷರು ದೊಡ್ಡವರು, ಸರ್ಕಾರಕ್ಕೆ‌ ಸಿಎಂ ದೊಡ್ಡವರು. ಸರ್ಕಾರ ಎಂದರೆ ಸರ್ಕಾರವೇ, ಸರ್ಕಾರದ ಮುಖ್ಯಸ್ಥರಿಗೆ ಮುಜುಗರವಾದಾಗ ಅದನ್ನು ಸಹೋದ್ಯೋಗಿಯಾಗಿ ನಾನು ಖಂಡಿಸುತ್ತೇನೆ. ಯತ್ನಾಳ್ ವಿರುದ್ಧ ಕ್ರಮದ ವಿಚಾರದಲ್ಲಿ ಯಾವಾಗ ಏನಾಗಬೇಕೋ ಆಗಲಿದೆ. ನಮ್ಮ ಸರ್ಕಾರ ಸುಭದ್ರವಾಗಿದೆ, ಒಳ್ಳೆಯ ಕೆಲಸ ಮಾಡುತ್ತಿದೆ. ಹೊಸ ವರ್ಷ ಬಂದಿದೆ, ಎಲ್ಲಾ ಒಳ್ಳೆಯದಾಗಲಿದೆ ಎಂದರು.

ABOUT THE AUTHOR

...view details