ಬೆಂಗಳೂರು: ನ್ಯಾಯಾಲಯ ಆದೇಶ ನೀಡಿದ ನಂತರವೂ ವ್ಯಕ್ತಿಯೊಬ್ಬರಿಗೆ ಜಮೀನಿನ ಖಾತೆ ಮಾಡಿಕೊಡದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ಕೇಳಿಬಂದಿದೆ.
ಹೈಕೋರ್ಟ್ ಏಕಸದಸ್ಯ ಪೀಠ ಆದೇಶಿಸಿದ್ದರೂ ಭೂಮಿಯ ಖಾತೆ ಮಾಡಿಕೊಟ್ಟಿಲ್ಲ ಎಂದು ಆರೋಪಿಸಿ ಮೈಸೂರಿನ ಎಚ್.ಬಿ. ಅಶೋಕ್ ಸೇರಿ 5 ಮಂದಿ ದಾಖಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಆರೋಪಿತ ಅಧಿಕಾರಿ ರೋಹಿಣಿ ಸಿಂಧೂರಿ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿ, ಜಮೀನು ಖಾತೆ ಮಾಡಿಕೊಡಲು ಹಲವು ಸಮಸ್ಯೆಗಳಿವೆ. ಭೂಮಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ, ವಿವಾದಿತ ಭೂಮಿಗೆ ಹಲವರು ಹಕ್ಕು ಸಾಧನೆ ಮಾಡಲು ಮುಂದಾಗಿದ್ದಾರೆ. ಹೀಗಾಗಿ ಈ ಸಂಬಂಧ ದಾಖಲೆಗಳನ್ನು ಸಲ್ಲಿಸಲು ಹಾಗೂ ನ್ಯಾಯಾಲಯದ ಆದೇಶ ಪಾಲಿಸಲು 3 ತಿಂಗಳ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಇದೀಗ ನೀವು ದಾಖಲೆಗಳನ್ನು ಏಕೆ ಸಲ್ಲಿಸುತ್ತೀರಿ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಆದೇಶ ನೀಡಿದೆ. ಈ ಹಂತದಲ್ಲಿ ನೀವು ದಾಖಲೆಗಳನ್ನು ಪರಿಶೀಲಿಸುವುದು, ಸಲ್ಲಿಸುವುದು ಎಂದರೆ ಏನರ್ಥ. ಇಂತಹ ಅಧಿಕಾರ ನಿಮಗೆ ಹೇಗೆ ಲಭ್ಯವಿದೆ. ನಿಮಗೆ ನ್ಯಾಯಾಲಯದ ಆದೇಶ ಪಾಲಿಸಬೇಕೆಂಬ ಇಚ್ಛೆಯೇ ಇದ್ದಂತಿಲ್ಲ ಎಂದಿತು.
ಅಲ್ಲದೇ, ಸರ್ಕಾರಿ ವಕೀಲರನ್ನು ಉದ್ದೇಶಿಸಿ, ಅಧಿಕಾರಿಗಳಿಗೆ ನ್ಯಾಯಾಲಯದ ಪ್ರಕ್ರಿಯೆಯಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಹೇಳಿಕೊಡಿ. ನ್ಯಾಯಾಲಯ ಈ ಹಿಂದೆ ಆದೇಶ ಹೊರಡಿಸುವ ಮುನ್ನ ಹೇಳಬೇಕಿದ್ದ ವಿಚಾರಗಳನ್ನು ಈಗ ಹೇಳಲು ಬರುತ್ತಿದ್ದಾರೆ. ಅಧಿಕಾರಿಗಳಿಗೆ ನ್ಯಾಯಾಲಯದ ಆದೇಶಗಳ ಬಗ್ಗೆ ತಿಳಿದಂತೆ ಕಾಣುವುದಿಲ್ಲ. ಜತೆಗೆ ತಾವು ಅಂದುಕೊಂಡದ್ದು ಹಾಗೂ ನಡೆದುಕೊಂಡದ್ದೇ ಸರಿ ಎಂದು ಭಾವಿಸಿದ್ದಾರೆ. ಅಧಿಕಾರಿಗಳು ನ್ಯಾಯಾಲಯದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ತಿಳಿಸಿಕೊಡಿ ಎಂದು ಪೀಠ ಬೇಸರ ವ್ಯಕ್ತಪಡಿಸಿತು.